ನೆರೆ ಬಂದು ಹೋದ ಮೇಲೆ ಶಬರಿಮಲೆಗೆ ಭೇಟಿ ನೀಡಿದ ನನ್ನ ಮೊದಲ ಅನುಭವ
ಮಳೆ, ಪ್ರವಾಹ ನಿಂತ ಮೇಲಿನ ಕೇರಳ ಹೇಗಿದೆ ಎಂಬ ಕುತೂಹಲ ನಿಮ್ಮ ಮನಸ್ಸಿನಲ್ಲಿ ಇರಬಹುದು ಅಂದುಕೊಂಡು ಈ ಅನುಭವ ತೆರೆದಿಡುತ್ತಿದ್ದೇನೆ. ಪ್ರತಿ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಅಯ್ಯಪ್ಪನ ಮಾಲೆ ಹಾಕಿ ಶಬರಿಮಲೆಗೆ ಪ್ರತಿ ವರ್ಷ ಹೋಗುತ್ತಿದ್ದೇನೆ. ಈ ಸಲ ಸೆಪ್ಟೆಂಬರ್ 17ನೇ ತಾರೀಕು ಬೆಂಗಳೂರಿನಿಂದ ರೈಲಿನಲ್ಲಿ ಹೊರಟು 18ನೇ ತಾರೀಕಿಗೆ ಕೇರಳದ ಕೊಟ್ಟಾಯಂಗೆ ಹೋದೆವು.
ಕೇರಳದಲ್ಲಿ ಇಲಿ ಜ್ವರ ಇದೆಯಂತೆ. ಯಾಕೆ ಸುಮ್ಮನೆ ಶ್ರಮ ತೆಗೆದುಕೊಳ್ತೀರಿ? ಏನಾದರೂ ಹೆಚ್ಚು-ಕಡಿಮೆ ಆದರೆ ಎಂದು ಹೆದರಿಸಿದವರೇ ಹೆಚ್ಚು. ನಮಗೂ ಆತಂಕ ಇತ್ತು. ಕೆಲವು ಟ್ರಾವೆಲ್ಸ್ ಅವರ ಹತ್ತಿರ ವಿಚಾರಿಸಿದೆವು. ಪರವಾಗಿಲ್ಲ, ಹೋಗಬಹುದು ಎಂಬ ಧೈರ್ಯ ಕೊಟ್ಟ ನಂತರವೇ ನಾವು ಇರುಮುಡಿ ಕಟ್ಟಿ, ಹೊರಟಿದ್ದು.
ನಮ್ಮದು ಆರು ಜನರಿದ್ದ ಸಣ್ಣ ಗುಂಪು. ಕೊಟ್ಟಾಯಂನಿಂದ ಶಬರಿಮಲೆಗೆ (ಅಲ್ಲಿಗೆ ಸ್ವಲ್ಪ ಹಿಂದಿನವರೆಗೆ ಮಾತ್ರ ಖಾಸಗಿ ವಾಹನಗಳಿಗೆ ಪ್ರವೇಶ) ಟೊಯೋಟಾ ಇನೋವಾದಲ್ಲಿ ಹೊರಟೆವು. ರಸ್ತೆಗಳೆಲ್ಲ ಚೆನ್ನಾಗಿಯೇ ಇವೆ. ಪ್ರಾಯಶಃ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಇರುವ ಪ್ರದೇಶದಲ್ಲಿ ಬಹಳ ಬೇಗ ರಸ್ತೆಗಳನ್ನು ಸರಿಪಡಿಸಿದ್ದಾರೆ ಅನ್ನಿಸಿತು.

ಹೂಳು-ಮರಳಿನಿಂದ ತುಂಬಿಹೋಗಿದೆ
ಪಂಬ ನದಿ (ಸ್ಥಳೀಯವಾಗಿ ಹೀಗೇ ಕರೆಯುತ್ತಾರೆ) ಇತ್ತಾ ಎನ್ನುವ ಮಟ್ಟಿಗೆ ಅದರ ಸ್ಥಿತಿ ಇದೆ. ಹೂಳು-ಮರಳಿನಿಂದ ತುಂಬಿರುವ ನದಿಯಲ್ಲಿ ಕಾಲು ತೋಯುವಷ್ಟು ಕೂಡ ನೀರಿಲ್ಲ. ಕೇರಳ ರಾಜ್ಯ ಸರಕಾರ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ಕೊಟ್ಟಿದೆ ಎಂದು ನಮ್ಮ ಕಾರು ಚಾಲಕ ಹೇಳಿದಾಗ, ಅದೇನು ಘೋಷಣೆ ಮಾಡಿದ್ದೋ ಅಥವಾ ನಿಜಕ್ಕೂ ಕೈಗೆ ತಲುಪಿದ್ದೋ ಅಂತ ಆಶ್ಚರ್ಯದಿಂದಲೇ ಕೇಳಿದೆವು.

ನೀರು ಕಲುಷಿತವಾಗಿದೆ ಬಳಸಲು ಯೋಗ್ಯವಲ್ಲ
ಈಗಾಗಲೇ ನಮಗೆ ದುಡ್ಡು ತಲುಪಿದೆ ಅಂತಲೇ ಆತ ಉತ್ತರಿಸಿದ. ಶಬರಿಮಲೆ ಹೋಗುವ ದಾರಿಯಲ್ಲಿ ಸಿಗುವ ನದಿಯ ಬಳಿ ಒಂದು ಬೋರ್ಡ್ ನನ್ನ ಗಮನ ಸೆಳೆಯಿತು: ಇಲ್ಲಿನ ನೀರು ಕಲುಷಿತವಾಗಿದೆ. ಯಾವುದೇ ಕಾರಣಕ್ಕೂ ಬಳಸಬೇಡಿ ಎಂದು ಅದರ ಒಕ್ಕಣೆ ಆಗಿತ್ತು. ಓಹ್, ವರ್ಷದ ಹಿಂದೆ ಬಂದ ಕೇರಳ ಇದಲ್ಲ ಎಂದು ಮೊದಲ ಸಲಕ್ಕೆ ಅನಿಸಿದ್ದು ಆಗಲೇ.

ಅಯ್ಯಪ್ಪನ ದರ್ಶನ ಆರಾಮವಾಗಿ ಆಯಿತು
ಆ ನಂತರ ಶಬರಿ ಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಹೋದಾಗ ಮತ್ತೂ ಅಚ್ಚರಿಯ ಅನುಭವ ಕಾದಿತ್ತು. ಪ್ರತಿ ತಿಂಗಳು ನಾಲ್ಕು ದಿನ ದೇಗುಲದ ಬಾಗಿಲು ತೆರೆದು ಪೂಜೆ ಮಾಡಲಾಗುತ್ತದೆ. ಆಗ ಕಿಕ್ಕಿರಿದು ತುಂಬಿದ ಜನ ಸಂದಣಿ ಇರುತ್ತದೆ. ಆದರೆ ಈ ಸಲ ಬಹಳ ಖಾಲಿ ಖಾಲಿ. ತುಂಬ ಆರಾಮವಾಗಿ ದರ್ಶನ ಆಯಿತು. ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಗಳು ಸಹ ಯಾವಾಗಲಿನಂತೆ ಬೇಗ ಹೊರಡಿ ಎಂದು ಅವಸರಿಸಲಿಲ್ಲ.

ಮೈ ಕೊಡವಿ ಎದ್ದುನಿಂತಿದೆ ದೇವರ ನಾಡು
ದರ್ಶನ ಮುಗಿದ ನಂತರ ವಾಪಸ್ ಕಾರಿನಲ್ಲಿ ಕೊಚ್ಚಿಗೆ ಬಂದು, ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದೆವು. ಹಾಗೆ ಬರುವ ದಾರಿ ಮಧ್ಯೆ ಒಂದಿಷ್ಟು ದೇವಾಲಯಗಳ ದರ್ಶನವಾಯಿತು. ಕೇರಳಕ್ಕೆ ಮಳೆ ಹಾನಿ ಆಗಿತ್ತು ಎಂಬುದು ನಿಜ. ಆದರೆ ಮತ್ತೆ ಮೈ ಕೊಡವಿ ಎದ್ದು ನಿಂತಿದೆ ದೇವರ ನಾಡು. ತಿಂಗಳಲ್ಲಿ ನಾಲ್ಕು ದಿನ ಶಬರಿಮಲೆ ದೇವಸ್ಥಾನ ತೆಗೆಯುತ್ತದೆ. ಅಲ್ಲಿಗೆ ಹೋಗುವ ಇಚ್ಛೆ ಇದ್ದರೆ ಈ ಅನುಭವದಿಂದ ಸಹಾಯ ಆಗಬಹುದು. ಶುಭ ಪ್ರಯಾಣ, ಕ್ಷೇಮವಾಗಿರಲಿ.












Click it and Unblock the Notifications