'ಧರ್ಮಾಧಾರಿತ ದ್ವೇಷ, ನಮ್ಮ ವಿವೇಚನೆ ನಮ್ಮ ಕೈಯಲ್ಲಿರಲಿ'
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಮಾಜದ ಎಲ್ಲಾ ಧರ್ಮ ಜಾತಿಯ ಜನಾಂಗದವರೂ ಕೂಡಾ ಮನೆಯಿಂದ ಹೊರಗೆ ಬರಲಾರದೇ ಸಮರ್ಪಕ ಸರ್ಕಾರದ ನೆರವಿಲ್ಲದೇ ಎಷ್ಟು ಹೊತ್ತಿಗೆ ಲಾಕ್ ಡೌನ್ ಮುಗಿಯುತ್ತದೋ, ಯಾವಾಗ ನಾವು ದುಡಿದು ಸಹಜ ಬದುಕಿಗೆ ಮರಳುತ್ತೇವೆಯೋ ಎಂಬ ಚಿಂತೆಯಲ್ಲಿದ್ದರು.
ಇನ್ನು ಆನ್ ಲೈನ್ ತರಗತಿಗಳ ಮೂಲಕ ಪರಿಣಾಮಕಾರಿ ಕಲಿಕೆಯಿಲ್ಲದೇ ಕಂಗೆಟ್ಟಿದ್ದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೂ ಕೂಡಾ ಲಾಕ್ ಡೌನ್ ನಂತರದ ಸಹಜ ಸ್ಥಿತಿಗಾಗಿ ಪ್ರಾರ್ಥಿಸಿರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ.
ಹೀಗಿರುವಾಗ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇನ್ನೂ ಹೆಣಗುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಬಡ ಜನರಲ್ಲಿ ಧರ್ಮದ ಆಧಾರದಲ್ಲಿ ಕಲಹ ಹುಟ್ಟು ಹಾಕುತ್ತಿರುವುದು ಅಪಾಯಕಾರಿ ಸಂಗತಿ.
ಇತ್ತ ಶಾಲೆಗಳು ತೆರೆದ ನಂತರದಲ್ಲಿ ತರಗತಿಗಳು ನಡೆಯಬೇಕಾದ ಸ್ಥಳದಲ್ಲಿ ಹಿಜಾಬ್ ಗಲಾಟೆ ನಡೆಯುತ್ತಿರುವುದು ಅದಕ್ಕಿಂತಲೂ ಅಪಾಯಕಾರಿ ಸಂಗತಿ.

ನನ್ನ ಪ್ರಕಾರ ವಿಕೋಪಗಳಿಂದ ಯಾರೂ ಪಾಠವನ್ನು ಕಲಿತಿಲ್ಲ ಎನಿಸುತ್ತದೆ. ಇನ್ನು ಜಾತ್ರೆ, ಹಬ್ಬ ಮತ್ತು ಆಚರಣೆಗಳು ಎಂದಿಗೂ ಸರ್ವ ಧರ್ಮ ಮತ್ತು ಜಾತಿಯ ಭಾವೈಕ್ಯತೆಯ ಸಂಕೇತ. ಯುಗಾದಿಯ ಹೋಳಿಗೆಯ ಹೂರಣ ಮತ್ತು ರಂಜಾನ್ ಖೀರನ್ನು ವಿನಿಮಯ ಮಾಡಿಕೊಳ್ಳುವ ಎಷ್ಟೋ ಕುಟುಂಬಗಳನ್ನು ನಾನು ನೋಡಿದ್ದೇನೆ, ಹಲವು ಬಾರಿ ಭಾಗವಹಿಸಿದ್ದೇನೆ ಕೂಡಾ.
ಅಲ್ಲದೇ ಸೂಫಿಗಳು, ಸಾಧು ಸಂತರು, ಶರಣರು ಹುಟ್ಟಿದ ಈ ನಾಡಿನಲ್ಲಿ ಧಾರ್ಮಿಕ ಐಕ್ಯತೆ ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವು ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಗುಡಿ ಮತ್ತು ದರ್ಗಾಗಳು ಒಂದೆಡೆ ಇರುವ ಎಷ್ಟೋ ಸ್ಥಳಗಳು ಕರಾವಳಿಯಲ್ಲೂ ಇದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಜಾಸ್ತಿ ಇದೆ.
ಹೀಗಾಗಿ ಭಾವೈಕ್ಯತೆಯ ಗೂಡಾಗಿರುವ ಜಾತ್ರೆ, ಹಬ್ಬ ಆಚರಣೆಗಳಲ್ಲಿ ಧರ್ಮಾಧಾರಿತ ದ್ವೇಷ ಮೂಡಿಸುವ ದುಷ್ಟ ಶಕ್ತಿಗಳನ್ನು ಅರಿಯಬೇಕು. ಇಲ್ಲದೇ ಹೋದರೆ ಬದುಕು ನಡೆಸಲೂ ಕೂಡಾ ಕಠಿಣವಾದಂತಹ ದಿನಗಳು ನಮಗೆ ಎದುರಾಗಲಿವೆ.
ಚುನಾವಣಾ ಸಂದರ್ಭದ ಹುಚ್ಚಾಟಗಳ ಬಗ್ಗೆ ಎಚ್ಚರ ವಹಿಸುವುದು ಮತ್ತು ಜೀವನ ನಡೆಸಲು ತೊಡಕಾಗಿರುವ ಬೆಲೆ ಏರಿಕೆಯ ವಿರುದ್ಧ ಹೋರಾಟ ನಡೆಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿ ಆಗಿದೆ. ಯಾವುದಕ್ಕೂ ನಮ್ಮ ವಿವೇಚನೆ ನಮ್ಮ ಕೈಯಲ್ಲಿರಲಿ.












Click it and Unblock the Notifications