ರಾಜ್ಯ ಸಭೆ ಚುನಾವಣೆ : ದಳಪತಿಗಳನ್ನು ಒಂದೂವರೆ ತಾಸು ಕಟ್ಟಿ ಹಾಕಿದ್ದ 'ರಾಹು'
ಬೆಂಗಳೂರು, ಜೂ. 10: 'ರಾಹು'ಕಾಲ ಎದುರಾಗಿದ್ದರಿಂದ ಜೆಡಿಎಸ್ ಬಹುತೇಕ ಶಾಸಕರು ಮತನಾದ ಅರಂಭವಾಗಿ ಎರಡೂವರೆ ತಾಸು ಮುಗಿಯುವ ವರೆಗೂ ಮತ ಚಲಾವಣೆ ಮಾಡಲಿಲ್ಲ! ದೈವಭಕ್ತ ನಾಯಕ ಎಚ್.ಡಿ. ರೇವಣ್ಣ ಅವರ ಸಲಹೆ ಮೇರೆಗೆ ಮಧ್ಹಾಹ್ನ 12 ಗಂಟೆ 1 ನಿಮಿಷ ಮುಗಿದ ಬಳಿಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮೇತ ಘನಾನುಘಟಿ ನಾಯಕರು ಮತ ಚಲಾವಣೆ ಮಾಡಿದರು.
ಶುಕ್ರವಾರ ಬೆಳಗ್ಗೆ 10.30 ರಿಂದ 12 ಗಂಟೆ ವರೆಗೂ ರಾಹುಕಾಲವಿತ್ತು. ರಾಜ್ಯಸಭೆ ಚುನಾವಣೆ ಮತದಾನ ಪ್ರಕ್ರಿಯೆ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿತ್ತು. ಜೆಡಿಎಸ್ ನ ಏಳೆಂಟು ಶಾಸಕರು ರಾಹುಕಾಲ ಆರಂಭಕ್ಕೂ ಮೊದಲೇ ತಮ್ಮ ಅಭ್ಯರ್ಥಿ ಕುಪೇಂದ್ರರೆಡ್ಡಿ ಪರ ಮತ ಚಲಾವಣೆ ಮಾಡಿದ್ದರು. ಅದರಲ್ಲೂ ದೈವ ಭಕ್ತ ಎಚ್.ಡಿ.ರೇವಣ್ಣ ಅವರು ರಾಹುಕಾಲಕ್ಕೆ ಮೊದಲೇ ಮತ ಚಲಾವಣೆ ಮಾಡಿದ್ದರು. ರೇವಣ್ಣ ಜತೆಗೆ ಹಲವು ಶಾಸಕರು ಸಹ ಮತದಾನ ಪ್ರಕ್ರಿಯೆ ಮುಗಿಸಿ ಹೊರ ಬಂದಿದ್ದರು. ಬಹುತೇಕ ಶಾಸಕರು ವಿಧನಸೌಧದಲ್ಲಿ ಕೂತಿದ್ದರು.
12 ಗಂಟೆ ಬಳಿಕ ಮತದಾನ:
ಮಧ್ಯಾಹ್ನ 12 ಗಂಟೆ ಆಗುತ್ತಿದ್ದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಶಾಸಕ ಬಂಡೆಪ್ಪ ಕಾಶಂಪೂರ್, ಎಂ.ಪಿ. ನಾಡಗೌಡ, ರಾಜಾ ವೆಂಕಟಪ್ಪ ನಾಯಕ ಸಹಿತ ಜೆಡಿಎಸ್ ಶಾಸಕರ ದಂಡೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾವಣೆ ಮಾಡಿ ರಾಜ್ಯದ ಗಮನ ಸೆಳೆದರು.

ದೈವ ಭಕ್ತ ಕುಟುಂಬ:
ಮಾಜಿ ಪ್ರಧಾನಿ ದೇವೇಗೌಡರು ದಿನ ನಿತ್ಯದ ಪೂಜೆ ಮಾಡಿ ಗಾಯಿತ್ರಿ ಮಂತ್ರ ಪಠಣೆ ಮಾಡದೇ ಹೊರ ಬರುವುದಿಲ್ಲ. ಅದರಲ್ಲೂ ಮಾಜಿ ಸಚಿವ ರೇವಣ್ಣ ಭಕ್ತಿ ವಿಚಾರದಲ್ಲಿ ದೇವೇಗೌಡರನ್ನೇ ಮೀರಿಸುತ್ತಾರೆ. ದುಷ್ಟ ಕೂಟಗಳಿಂದ ದೃಷ್ಠಿಯಾಗಬಾರದು ಎಂದು ರೇವಣ್ಣ ವಿಧಾಸೌಧಕ್ಕೆ ಬರುವಾಗಲು ನಿಂಬೆ ಹಣ್ಣು ತಂದು ಅನೇಕ ಸಲ ಸುದ್ದಿಯಾಗಿದ್ದಾರೆ. ಪೂಜಿಸಿದ ನಿಂಬೆ ಹಣ್ಣನ್ನು ಜೇಬಿನಲ್ಲಿ ಇಟ್ಟುಕೊಂಡೇ ಇರುತ್ತಾರೆ. ಇನ್ನೂ ಅವರ ಕೈ ತುಂಬಾ ಸಕಲ ದೇವರ ದಾರಗಳನ್ನು ಕಟ್ಟಿಕೊಂಡಿದ್ದಾರೆ. ರೇವಣ್ಣ ಅವರ ದೈವಭಕ್ತ ವಿಧಾನಸೌಧದಲ್ಲಿ ನಗೆ ಪಾಟಲಿಗೆ ಗುರಿಯಾಗಿದ್ದರು. ಇನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ದೈವ ಭಕ್ತರೇ. ಯಾವುದೇ ಹೊಸ ಕೆಲಸ ಆರಂಭಿಸಬೇಕಾದರೆ ಮೊದಲು ಅವರು ಕಾಲ, ಗಳಿಗೆ ನೋಡಿಯೇ ಆರಂಭಿಸುತ್ತಾರೆ.

ರಾಹುಕಾಲ ಅಡ್ಡಿ ಅಂತ ಕಾದು ಕಾದು ಮತ:
ಪೂರ್ಣ ಪಂಚಾಗದ ಪ್ರಕಾರ ಬೆಂಗಳೂರು ಹಾಗೂ ದೆಹಲಿಯಲ್ಲಿ ರಾಹುಕಾಲದ ಸಮಯ ಬೆಳಗ್ಗೆ 10.48 ರಿಂದ ಮಧ್ಯಾಹ್ನ 12.18ರ ವರೆಗೂ ರಾಹುಕಾಲವಿದೆ. ಆದರೆ, ಮಧ್ಯಾಹ್ನ 12 ಗಂಟೆ ಆಗುತ್ತಿದ್ದಂತೆ ಜೆಡಿಎಸ್ ನ ಶಾಸಕರು ತಮ್ಮ ಅಭ್ಯರ್ಥಿ ಪರ ಮತ ಚಲಾವಣೆ ಮಾಡಿದರು. ರಾಹುಕಾಲ ಹೊರತು ಪಡಿಸಿ ಮತ ಚಲಾವಣೆ ಮಾಡಲು ಹೋಗಿ ರಾಹುಕಾಲದಲ್ಲೇ ಕೆಲವು ಶಾಸಕರು ಮತ ಹಾಕಿದ್ದಾರೆ.












Click it and Unblock the Notifications