ರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯ
Recommended Video

ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ, ಅನ್ನದ ನಾಡು ಎಂದು ರಾಯಚೂರನ್ನು ಕರೆಯಲಾಗುತ್ತದೆ. ಉತ್ತರಕ್ಕೆ ಕೃಷ್ಣ ಮತ್ತು ದಕ್ಷಿಣಕ್ಕೆ ತುಂಗಭದ್ರ ನದಿಗಳನ್ನು ಒಳಗೊಂಡ ಕ್ಷೇತ್ರವಿದು. 'ರಾಯ' ಎಂದರೆ ರಾಜ ಎಂದರ್ಥ. ರಾಯಚೂರು ಎನ್ನುವುದು ರಾಜನ ಊರು ಎಂಬ ಅರ್ಥವನ್ನು ತಿಳಿಸುತ್ತದೆ.
ಬಾದಾಮಿ ಚಾಲುಕ್ಯರು, ಬಹುಮನಿ ಸುಲ್ತಾನರು ಇಲ್ಲಿ ಆಡಳಿತ ನಡೆಸಿದ್ದಾರೆ. ವಿಜಯನಗರ ಶ್ರೀಕೃಷ್ಣ ದೇವರಾಯನ ಆಳ್ವಿಕೆಯಲ್ಲಿ ರಾಯಚೂರನ್ನು ವಶಪಡಿಸಿಕೊಳ್ಳಲು ಎರಡು ಯುದ್ಧಗಳು ನಡೆದಿವೆ ಎನ್ನುತ್ತದೆ ಇತಿಹಾಸ.
ಜಿಲ್ಲೆಯ ಬಹುತೇಕ ಪ್ರದೇಶ ಗಿಡಮರಗಳಿಲ್ಲದೆ ಬಯಲು ಭೂಮಿಯಿಂದ ಕೂಡಿದೆ. ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಬಹಳ ತಂಪಾದ ವಾತಾವರಣವಿರುತ್ತದೆ. ಬೇಸಿಗೆಯಲ್ಲಿ ಇಡೀ ರಾಜ್ಯದಲ್ಲಿಯೇ ಅತ್ಯಧಿಕ ತಾಪಮಾನ ರಾಯಚೂರಿನಲ್ಲಿ ದಾಖಲಾಗುತ್ತದೆ.

ಬೆಂಕಿಯ ನಗರ ಎಂದು ಕರೆಯಲಾಗುವ ರಾಯಚೂರಿಗೆ ತುಂಗಭದ್ರಾ ಎಡದಂಡೆ ಕಾಲುವೆ ಆಸರೆಯಾಗಿದೆ. ತುಂಗಭದ್ರ ನೀರು ಹಲವು ಜೀವಗಳಿಗೆ ತುತ್ತು ಅನ್ನ ನೀಡಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.
ಕ್ಷೇತ್ರದ ಒಟ್ಟು ಜನಸಂಖ್ಯೆ 22,94,951. ಇವರಲ್ಲಿ ಶೇ 73.46ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ 26.54ರಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಾರೆ. ಶೇ 21.72 ರಷ್ಟು ಎಸ್ಸಿ ಮತ್ತು ಶೇ 18.19ರಷ್ಟು ಎಸ್ಸಿ ಸಮುದಾಯದವರು ಇದ್ದಾರೆ.

ತುಂಗಭದ್ರಾ ನದಿ ನೀರನ್ನು ಉಪಯೋಗಿಸಿಕೊಂಡು ಇಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಪ್ರದೇಶದ ರೈತರು ರಾಜ್ಯದ ಜನರಿಗೆ ಅನ್ನ ನೀಡುವ ಜೊತೆಗೆ ಅಕ್ಕ-ಪಕ್ಕದ ರಾಜ್ಯಗಳಿಗೆ ಸಹ ಭತ್ತವನ್ನು ರಫ್ತು ಮಾಡುತ್ತಾರೆ.
ನೀರಾವರಿ ಇಲ್ಲದ ಪ್ರದೇಶದಲ್ಲಿ ಜನರೂ ಇಂದಿಗೂ ಕೆಲಸಕ್ಕಾಗಿ ಗುಳೆ ಹೋಗುವುದು ತಪ್ಪಿಲ್ಲ.
1990ರ ದಶಕದಲ್ಲಿ ರಾಯಚೂರು ಕ್ಷೇತ್ರದಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರು ತಮ್ಮ ಹಕ್ಕು, ಇರುವ ಸಮಸ್ಯೆಗಳ ಬಗ್ಗೆ ಆರಂಭಿಸಿದ ಹೋರಾಟ ಕರ್ನಾಟಕದಲ್ಲಿ ನಕ್ಸಲ್ ಚಳವಳಿಗೆ ನಾಂದಿ ಆಯಿತು. ಈಗ ನಕ್ಸಲ್ ಚಟುವಟಿಕೆ ರಾಯಚೂರಿನಿಂದ ಮಲೆನಾಡು ಭಾಗದಲ್ಲಿ ಬಂದು ನೆಲೆ ಕಂಡಿದೆ.

ರಾಯಚೂರು ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ ಕ್ಷೇತ್ರದ ಹಾಲಿ ಸಂಸದರು ಬಿ.ವಿ.ನಾಯಕ್. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಎದುರಾಳಿಯಾಗಿದ್ದರು. 4,42,160 ಮತಗಳನ್ನು ಪಡೆದು ಅವರು ಸೋಲು ಕಂಡಿದ್ದರು.
ಬಿ.ವಿ.ನಾಯಕ್ ಅವರು 15 ಕೋಟಿ ಅನುದಾನಕ್ಕೆ ಮನವಿ ಮಾಡಿದ್ದರು. ಜಿಲ್ಲಾಡಳಿತ 14.67 ಕೋಟಿ ಅನುದಾವನ್ನು ಬಿಡುಗಡೆ ಮಾಡಿತ್ತು. 12.27 ಕೋಟಿ ಅನುದಾನವನ್ನು ವಿವಿಧ ಯೋಜನೆಗಳಿಗೆ ಖರ್ಚು ಮಾಡಲಾಗಿದೆ.
ಸಂಸತ್ತಿನಲ್ಲಿ ಬಿ.ವಿ.ನಾಯಕ್ ಅವರು ಶೇ 61ರಷ್ಟು ಹಾಜರಾತಿ ಹೊಂದಿದ್ದಾರೆ. 11 ಚರ್ಚೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. 643 ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳಲ್ಲಿ 350 ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿವೆ.

2014ರ ಚುನಾವಣೆ ಪ್ರಕಾರ 16,61,606 ಮತದಾರರು ಕ್ಷೇತ್ರದಲ್ಲಿದ್ದಾರೆ. ಇವರಲ್ಲಿ ಪುರುಷರು 8,35,969, ಮಹಿಳೆಯರು 8,25,637. ಕಳೆದ ಚುನಾವಣೆಯಲ್ಲಿ ಶೇ 58ರಷ್ಟು ಮತದಾನವಾಗಿತ್ತು.
ಬಿಸಿಲ ನಗರಿ ಎಂದು ರಾಯಚೂರನ್ನು ಕರೆಯಲಾಗುತ್ತದೆ. ಬಿಸಿಲಿನ ಝಳ ಹೆಚ್ಚು ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ತುಂಗಭದ್ರಾ ಅಣೆಕಟ್ಟು ತುಂಬಿದರೆ ವರ್ಷಪೂರ್ತಿ ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ.
ಕೃಷ್ಣ ಮತ್ತು ತುಂಗಭದ್ರ ನದಿ ಹರಿಯುತ್ತಿದ್ದರೂ ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆ ಇದೆ. ಆಯ್ಕೆಯಾದ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡೆಬೇಕು ಎಂಬುದು ಜನರ ಆಶಯವಾಗಿದೆ.
ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ರಾಯಚೂರನ್ನು ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಬಗ್ಗೆ ಚರ್ಚೆಗಳು ಆರಂಭವಾದಾಗ ರಾಯಚೂರಿನ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಐಐಟಿ ಧಾರವಾಡ ಜಿಲ್ಲೆಯ ಪಾಲಾಯಿತು.
ರಾಯಚೂರಿನ ಶಕ್ತಿ ನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಕರ್ನಾಟಕಕ್ಕೆ ಬೆಳಕು ನೀಡುತ್ತದೆ. ಆದರೆ, ಈ ಕೇಂದ್ರದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕಲ್ಲಿದ್ದಲು ಕೊರತೆ ವಿದ್ಯುತ್ ಸ್ಥಾವರವನ್ನು ಸದಾ ಕಾಡುತ್ತದೆ.
ಉದ್ಯೋಗ ಸೃಷ್ಟಿಯಾಗುವಂತಹ ಯಾವುದೇ ಕೈಗಾರಿಕೆಗಳನ್ನು ಕ್ಷೇತ್ರ ಒಳಗೊಂಡಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ಉದ್ಯೋಗವನ್ನು ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿಲ್ಲ. ಅದರಲ್ಲೂ ಮಳೆ ಕೈ ಕೊಟ್ಟಾಗ ರೈತರು ಉದ್ಯೋಗ ಹುಡುಕಿ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುತ್ತಾರೆ.












Click it and Unblock the Notifications