ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಪುಲ್ವಾಮಾ ಹುತಾತ್ಮ ಯೋಧನ ತಂದೆ ತಾಯಿ
ಬೆಂಗಳೂರು, ಫೆಬ್ರವರಿ 14: ದೇಶವನ್ನೇ ನಡಗಿಸಿದ್ದ ಪುಲ್ವಾಮಾ ಉಗ್ರರ ದಾಳಿಗೆ ಈಗ ಒಂದು ವರ್ಷ. ದೇಶಾಭಿಮಾನಿಗಳು ಕಳೆದ ಒಂದು ವರ್ಷದ ಹಿಂದೆ ನಡೆದ ಈ ಘಟನೆಯನ್ನು ಸ್ಮರಿಸಿಕೊಂಡು ಹುತಾತ್ಮ ವೀರಯೋಧರಿಗೆ ನಮನಗಳನ್ನು ಸಲ್ಲಿಸುತ್ತಿದ್ದಾರೆ.
2019 ರ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾಕನೊಬ್ಬ ಸಿಆರ್ಪಿಎಸಫ್ ಯೋಧರಿದ್ದ ಟ್ರಕ್ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ. ಘಟನೆಯಲ್ಲಿ ಭಾರತದ ಹೆಮ್ಮೆಯ 43 ಸೈನಿಕರು ವೀರ ಮರಣವನ್ನಪ್ಪಿದ್ದರು.
ಘಟನೆಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಎಚ್ ಗುರು ಕೂಡ ಹುತಾತ್ಮರಾಗಿದ್ದರು. ಗುರು ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು. ವೀರಯೋಧ ಗುರು ನೀಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಆದರೆ, ಅವರ ತಂದೆ ತಾಯಿ ಮಾತ್ರ ಇನ್ನೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ...

2011 ರಲ್ಲಿ ಸಿಆರ್ಪಿಎಪ್ ಸೇರಿದ್ದರು
ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಎಚ್ ಗುರು 2011 ರಲ್ಲಿ ಸಿಆರ್ಪಿಎಪ್ ಸೇರಿದ್ದರು. 94 ನೇ ಸಿಆರ್ಪಿಎಪ್ ಬಟಾಲಿಯನ್ಗೆ ನಿಯುಕ್ತಿಗೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಫೆಬ್ರವರಿ 11, 2019 ರಂದು ಮದ್ದೂರಿಗೆ ಬಂದು ವಾಪಸ್ ಸೇವೆಗೆ ಹೋಗಿದ್ದರು. ಸಿಆರ್ಪಿಎಪ್ ಪೊಲೀಸರೊಡನೆ ಅನಂತನಾಗ್ಗೆ ತೆರಳುತ್ತಿದ್ದಾಗ ನಡೆದಿದ್ದ ಬಾಂಬ್ ದಾಳಿಯಲ್ಲಿ ಗುರು ಹುತಾತ್ಮರಾಗಿದ್ದರು.

ಗುರು ಪೋಷಕರು ಲಾಂಡ್ರಿ ನಡೆಸುತ್ತಿದ್ದಾರೆ
ಗುರು ನಿಧನನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು. ತಂದೆ ಹೊನ್ನಯ್ಯ ತಾಯಿ ಚಿಕ್ಕ ಹೊಳಮ್ಮ ಹಾಗೂ ಹೆಂಡತಿ ಕಲಾವತಿ ಅವನ್ನು ಗುರು ಅಗಲಿದ್ದರು. ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು, ಉದಾರಿಗಳು ಗುರು ಕುಟುಂಬಕ್ಕೆ ಸಹಾಯ ನೀಡಿದ್ದರು. ಆದರೆ, ಕುಟುಂಬದಲ್ಲಿ ಈ ವಿಷಯಕ್ಕಾಗಿ ಗುರು ಪತ್ನಿ ಹಾಗೂ ತಂದೆ ತಾಯಿ ಜೊತೆ ವೈಮನಸ್ಸು ಉಂಟಾಗಿತ್ತು. ಗುರು ತಂದೆ ತಾಯಿ ತೊರೆದು ಈಗ ಬೆಂಗಳೂರಿನಲ್ಲಿ ತಮ್ಮ ತಂದೆ ತಾಯಿ ಅವರೊಂದಿಗೆ ಕಲಾವತಿ ಇದ್ದಾರೆ. ಆದರೆ, ಗುರು ಪೋಷಕರು ಲಾಂಡ್ರಿ ನಡೆಸುತ್ತಾ, ಜೀವನ ಸಾಗಿಸುತ್ತಿದ್ದಾರೆ.

ಸ್ಮಾರಕ ನಿರ್ಮಿಸುವ ಭರವಸೆ ಹುಸಿ
ಮದ್ದೂರಿನ ಭಾರತಿ ನಗರದ ಸರ್ಕಾರಿ ಭೂಮಿಯಲ್ಲಿ ಗುರು ಅಂತ್ಯಕ್ರಿಯೆ ನಡೆದಿತ್ತು. ಇದೇ ಜಾಗದಲ್ಲಿ ಶುಕ್ರವಾರ ಗುರು ಸ್ನೇಹಿತರು ಹಾಗು ತಂದೆ ತಾಯಿಗಳು ಕಣ್ಣೀರು ಹಾಕಿ ಶೃದ್ದಾಂಜಲಿ ಸಲ್ಲಿಸಿದರು. ಇದೇ ಜಾಗದಲ್ಲಿ ಸರ್ಕಾರ ಹುತಾತ್ಮ ಯೋದನ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ಭರವಸೆ ಭರವಸೆಯಾಗಿಯೇ ಉಳಿದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್
ಪುಲ್ವಾಮಾ ದಾಳಿಯಾಗಿ ಒಂದು ವರ್ಷದ ಕಹಿ ನೆನಪು ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ನಲ್ಲಿದೆ. ಯುವಕ ಯುವತಿಯರು ಸೇರಿದಂತೆ ಅನೇಕರು ಪುಲ್ವಾಮಾ ದಾಳಿಗೆ ಕಂಬನಿ ಮಿಡಿಯುತ್ತಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರು ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದರು.











Click it and Unblock the Notifications