Exclusive : ಪುಲ್ವಾಮಾದ ಸದ್ಯದ ಸ್ಥಿತಿಯ ಬಗ್ಗೆ ರವಿ ಬೆಳಗೆರೆ ಸಂದರ್ಶನ
Recommended Video

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 17: "ಕಾಶ್ಮೀರಿಗಳಿಗೆ ಹುಟ್ಟಿನಿಂದಲೇ ವಕ್ರತೆ ಇದೆ. ಅವರಿಗೆ ಕಾಶ್ಮೀರಕ್ಕೆ ಪ್ರತ್ಯೇಕತೆ ಬೇಕು. ಮನಸಿನಲ್ಲಿ ಪಾಕಿಸ್ತಾನ ಬೇಕು, ಮದುವೆಗೆ ಹಣಕ್ಕೆ ಭಾರತ ಬೇಕು. ಹಾಗಂತ ಸ್ವಾಯತ್ತತೆ ಸಿಕ್ಕಿತು ಅಂದುಕೊಳ್ಳೋಣ. ಅದರ ಮಾರನೇ ದಿನದಿಂದ ಏನು ಮಾಡಬೇಕು ಅಂದರೆ, ತಿನ್ನೋದಕ್ಕೆ ಅನ್ನ ಕೂಡ ಇರುವುದಿಲ್ಲ. ನಾಳೆ ನಮ್ಮ ಮಕ್ಕಳ ಗತಿ ಏನು ಎಂಬ ಆಲೋಚನೆಯೂ ಇವರಿಗಿಲ್ಲ".
ಪುಲ್ವಾಮಾ ಉಗ್ರ ದಾಳಿ ನಂತರ ಪರಿಸ್ಥಿತಿ ಹೇಗಿದೆ ಎಂದು ವರದಿ ಮಾಡಲು ಜಮ್ಮು-ಕಾಶ್ಮೀರಕ್ಕೆ ತೆರಳಿರುವ ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರ್ ವಾರಪತ್ರಿಕೆ ಸಂಪಾದಕರಾದ ರವಿ ಬೆಳಗೆರೆ ಅವರು ಒನ್ ಇಂಡಿಯಾ ಕನ್ನಡದ ಮಾತನಾಡಲು ಆರಂಭಿಸಿದ್ದು ಹೀಗೆ.
ಆದರೆ, ಇಲ್ಲಿನ ಜನರಿಗೆ ಲಷ್ಕರ್ ಇ ತೈಬಾ, ಜೈಶ್ ಇ ಮೊಹ್ಮದ್ ಇವ್ಯಾವೂ ಬೇಡ. ಇವುಗಳಿಂದೆಲ್ಲ ಪಡಬಾರದ ಕಷ್ಟವನ್ನೂ ಪಟ್ಟಿದ್ದಾರೆ. ಒಂದು ಕಾಲದಲ್ಲಿ ಅವಿದ್ಯಾವಂತರಷ್ಟೆ ಉಗ್ರರಾಗುತ್ತಿದ್ದರು. ಇತ್ತೀಚೆಗೆ ಏನಾಗಿದೆ ಅಂದರೆ ಡಾಕ್ಟರ್ ಗಳು, ಎಂಜಿನಿಯರ್ ಗಳು ಕೂಡ ಉಗ್ರವಾದದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಅಂಥ ಹತಾಶ ಸ್ಥಿತಿಗೆ ದೂಡಿದೆ. ಹಾಗಾಗಿ ಈ ರೀತಿಯ ಬೆಳವಣಿಗೆಗಳು ಆಗಿವೆ ಎಂದು ಅವರು ಹೇಳಿದರು.
ಆ ನಂತರ ಮಾತು ಪುಲ್ವಾಮಾ ದಾಳಿ ಸ್ಥಿತಿ, ಸದ್ಯಕ್ಕೆ ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ತಿರುಗಿತು.

ಗಂಧಕದ ವಾಸನೆ ಹಾಗೇ ಇದೆ
ಪುಲ್ವಾಮಾದ ಅವಂತಿಪುರದ ಹಾದಿ ಬದಿಯಲ್ಲಿ ಸ್ಫೋಟವಾದ ಜಾಗದಲ್ಲಿ ದೊಡ್ಡ ಹಳ್ಳವಾಗಿದೆ. ರಾಷ್ಟ್ರೀಯ ತನಿಖಾ ದಳದವರು (ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ತನಿಖೆ ನಡೆಸುತ್ತಿದ್ದಾರೆ. ಬಾಂಬ್ ಸ್ಫೋಟದ ಜಾಗದಲ್ಲಿ ಈಗಲೂ ಗಂಧಕದ ವಾಸನೆ ಹಾಗೇ ಮೂಗಿಗೆ ರಾಚುತ್ತದೆ. ನಾನು ಶ್ರೀನಗರ್ ನಿಂದ ಪುಲ್ವಾಮಾಕ್ಕೆ ತೆರಳಿ, ಅಲ್ಲಿಂದ ವಾಪಸ್ ಶ್ರೀನಗರ್ ಗೆ ಬಂದಿದ್ದೇನೆ. ಇಲ್ಲಿ ಯಾರಿಗೂ ಇನ್ನೊಬ್ಬರ ಮೇಲೆ ನಂಬಿಕೆ ಇಲ್ಲ. ಅಂಥ ಸನ್ನಿವೇಶ ಇದೆ. ಕುಡಿಯುವುದಕ್ಕೆ ನೀರು ಸಿಗುವುದು ಸಹ ಕಷ್ಟ ಇದೆ. ಆದರೆ ಇಂಥ ಸನ್ನಿವೇಶಗಳು ನನಗೆ ಹೊಸದಲ್ಲ. ಇಪ್ಪತ್ತು ವರ್ಷದ ಹಿಂದೆ ಕಾರ್ಗಿಲ್ ಯುದ್ಧದ ಬಗ್ಗೆ ವರದಿ ಮಾಡಲು ಬಂದಿದ್ದೆ. ಆದರೆ ಈಗ ಬದಲಾವಣೆ ನೋಡುತ್ತಿದ್ದೇನೆ. ಶ್ರೀನಗರ್ ನಲ್ಲಿ ನಗರ ಪ್ರದೇಶಗಳಲ್ಲಿ ಬದಲಾವಣೆ ನೋಡಬಹುದು ಬಿಟ್ಟರೆ ಹಳ್ಳಿಗಾಡಿನ ಪ್ರದೇಶಗಳು ಮಾತ್ರ ಈಗಲೂ ಹಾಗೇ ಇವೆ.

ಬಂದೂಕು ತೋರಿಸಿದ ಬಂಗಾಲಿ ಯೋಧ
ಪುಲ್ವಾಮಾದಲ್ಲಿ ಚಿತ್ರೀಕರಣಕ್ಕಾಗಿ ತೆರಳಿದವನಿಗೆ ಕಾರಿನಿಂದ ಇಳಿಯುತ್ತಿದ್ದ ಹಾಗೇ ಯೋಧನೊಬ್ಬ ಬಂದೂಕು ತೋರಿಸಿ, ಯಾರು ನೀವು? ಏನು ಬೇಕು? ಅಂತಲೇ ಮಾತಿಗಾರಂಭಿಸಿದ. ಆತ ಬಂಗಾಲಿ. ಒಬ್ಬನೇ ಒಬ್ಬ ಇದ್ದ. ಒಬ್ಬನೇ ನಿಂತಿದೆಯಲ್ಲಾ, ಭಯವಾಗಲ್ಲವಾ ಅಂತ ಕೇಳಿದೆ. ನಾನು ಭಯ ಪಟ್ಟರೆ ಈ ದೇಶವನ್ನು ಕಾಯುವವರು ಯಾರು ಅನ್ನೋದು ಅವನ ಉತ್ತರವಾಗಿತ್ತು. ಇವರ ದೇಶಭಕ್ತಿ, ಕರ್ತವ್ಯ ಪ್ರಜ್ಞೆ ಇವುಗಳ ಬಗ್ಗೆ ಯಾರಾದರೂ ಮಾತನಾಡಿದರೆ ಅವರು ಮೂರ್ಖರು ಅಷ್ಟೇ. ಪುಲ್ವಾಮಾದಲ್ಲಿ ಹಾಲು, ಕೇಸರಿ, ಅಕ್ಕಿ... ಈ ಮೂರು ಸಿಗುತ್ತದೆ. ಉಳಿದಂತೆ ಒಂದು ಬೆಂಕಿಪೊಟ್ಟಣದ ಕಾರ್ಖಾನೆ ಕೂಡ ಇಲ್ಲ. ಕಾಶ್ಮೀರಿಗಳನ್ನು ಮಾತನಾಡಿಸಿದರೆ, ಭಾರತವಾಗಲೀ ಪಾಕಿಸ್ತಾನವಾಗಲೀ ನಮಗೆ ಏನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗೊಂದು ವೇಳೆ ಅನುಕೂಲ ಮಾಡಿದರೆ ಆ ಅಲ್ಲಾನೇ ಮಾಡಬೇಕು ಅಂತಾರೆ. ಇದು ಅವರು ಯೋಚನೆ ಮಾಡುವ ವಿಧಾನ. ಇಂಥ ವಕ್ರವಾದ ಆಲೋಚನೆಯೇ ಕಾಶ್ಮೀರಿಗಳನ್ನು ಹಾಳು ಮಾಡಿದೆ.

ಪ್ರವಾಸೋದ್ಯಮ ಬಿಟ್ಟರೆ ಮತ್ತೊಂದು ಆದಾಯ ಮೂಲವಿಲ್ಲ
ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬಿಟ್ಟರೆ ಇನ್ನೊಂದು ಆದಾಯ ಮೂಲ ಇಲ್ಲ. ಜಯನಗರ ಒಂದರಲ್ಲಿ ಆಗುವಷ್ಟು ವ್ಯಾಪಾರ ಇಡೀ ಜಮ್ಮು-ಕಾಶ್ಮೀರದಲ್ಲಿ ಆಗಲ್ಲ. ದಕ್ಷಿಣ ಕಾಶ್ಮೀರದಲ್ಲೇ ಸಮಸ್ಯೆ ಹೆಚ್ಚಾಗಿದೆ. ಗಡಿಗಳು ಹೇಗಿರುತ್ತವೆ ಅಂದರೆ, ಉದಾಹರಣೆಗೆ ಚಾಮರಾಜ ಪೇಟೆಯನ್ನು ಭಾರತ ಅಂದುಕೊಂಡರೆ, ಅಲ್ಲಿಂದ ಬನಶಂಕರಿಗೆ ಎಷ್ಟು ದೂರವೋ ಅಷ್ಟು ದೂರಕ್ಕೆ ಪಾಕಿಸ್ತಾನ ಇದೆ. ನಡೆದುಕೊಂಡು ಬಂದು, ಬಾಂಬ್ ಹಾಕಿಬಿಡಬಹುದು. ಈಗ ಮಾಧ್ಯಮಗಳಲ್ಲಿ ತೋರಿಸುತ್ತಿರುವ ಹಾಗೆ ಮುನ್ನೂರು- ಮುನ್ನೂರಾ ಐವತ್ತು ಕೇಜಿ ಸ್ಫೋಟಕವನ್ನು ಬಳಸಿಲ್ಲ. ಆ ಸ್ಥಳವನ್ನು ನೋಡಿ, ಅಲ್ಲೇ ಇರುವ ಯೋಧನೊಬ್ಬನನ್ನು ಮಾತನಾಡಿಸಿಯೇ ಈ ಮಾತನ್ನು ಹೇಳುತ್ತಾ ಇದ್ದೇನೆ. ಆದರೆ ಕನಿಷ್ಠ ಐವತ್ತರಿಂದ ನೂರು ಕೇಜಿಯಷ್ಟು ಬಳಸಿರಬಹುದು. ಹಾಗಂತ ಇದು ಕಡಿಮೆ ಅಪಾಯಕಾರಿ ಏನಲ್ಲ. ಆದರೆ ವಾಸ್ತವ ಚಿತ್ರಣ ಹಾಗೂ ಸಂಗತಿ ಗೊತ್ತಿರಬೇಕು ಅನ್ನೋ ಕಾರಣಕ್ಕೆ ಹೇಳುತ್ತಿದ್ದೇನೆ.

ಇಲ್ಲಿಂದ ಯಾವಾಗ ಬರುತ್ತೇನೋ ಅಥವಾ ಬರುತ್ತೇನೋ ಇಲ್ಲವೋ?
ದಿಗ್ವಿಜಯ ಟೀವಿ ಚಾನಲ್ ಗೆ ವರದಿ ಮಾಡಿಕೊಡುವುದಕ್ಕೆ ಅಂತ ಇಲ್ಲಿಗೆ ಬಂದಿದ್ದೇನೆ. ನನ್ನ ಆರೋಗ್ಯ, ಪರಿಸ್ಥಿತಿ ಬಗ್ಗೆ ಬಹಳ ಮಂದಿ ವಿಚಾರಿಸುತ್ತಿದ್ದಾರೆ. ಪತ್ರಕರ್ತನಾಗಿ ನನ್ನ ತಿಕ್ಕಲುಗಳು ಏನು ಅನ್ನೋದು ನನ್ನ ಓದುಗರಿಗೆ ಗೊತ್ತು. ಇಂಥ ಸನ್ನಿವೇಶದಲ್ಲೂ ನಾವು ಪ್ರತ್ಯಕ್ಷ ವರದಿಗಾಗಿ ಬಾರದೆ ಹೋದರೆ ಪತ್ರಕರ್ತರು ಅಂತ ಯಾಕಾಗಬೇಕು? ಇಲ್ಲಿಗೆ ಬರುವ ಮುಂಚೆಯೇ ಬೆಂಗಳೂರಿನಿಂದಲೇ ಟ್ಯಾಕ್ಸಿ, ಹೋಟೆಲ್ ಎಲ್ಲ ಬುಕ್ ಮಾಡಿಕೊಂಡು ಬಂದಿದ್ದೇವೆ. ಚಳಿಯನ್ನು ಹೇಗೆ ವಿವರಿಸಬೇಕು ಅಂದರೆ, ಆರು ಪದರದ (ಲೇಯರ್) ಕೋಟ್ ಹಾಕಿಕೊಂಡು ಅಡ್ಡಾಡುತ್ತಿದ್ದೇನೆ. ದಿಗ್ವಿಜಯ ಚಾನಲ್ ನ ಮಾಲೀಕರಾದ, ನನ್ನ ಹಿರಿಯ ಸಹೋದರರಂತಿರುವ ವಿಜಯ ಸಂಕೇಶ್ವರ ಅವರು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಲ್ಲಿಂದ ಯಾವಾಗ ಬರುತ್ತೇನೋ ಅಥವಾ ಬರುತ್ತೇನೋ ಇಲ್ಲವೋ? ಆ ಬಗ್ಗೆ ಕೂಡ ನನಗೆ ಯಾವುದೇ ಚಿಂತೆ ಇಲ್ಲ. ಅತಿ ಮುಖ್ಯವಾದ ಸಂಗತಿ ಇದ್ದರೆ ಮತ್ತೆ ಹಂಚಿಕೊಳ್ಳುತ್ತೇನೆ ಎಂದು ಮಾತು ಮುಗಿಸಿದರು ರವಿ ಬೆಳಗೆರೆ.











Click it and Unblock the Notifications