Dinesh Gundu Rao: ಗೆಲುವನ್ನೇ ಮೈಗೂಡಿಸಿಕೊಂಡಿರುವ ದಿನೇಶ್ ಗುಂಡೂರಾವ್ ವ್ಯಕ್ತಿಚಿತ್ರ
ಹದಿನಾರನೇ ಕರ್ನಾಟಕ ವಿಧಾನಸಭೆಗೆ ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ನಿಗದಿ ಪಡಿಸಲಿದೆ. ಕೆಪಿಸಿಸಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಹುತೇಕ ಹಾಲೀ ಶಾಸಕರಿಗೆ ಟಿಕೆಟ್ ಅನ್ನು ನೀಡಿದೆ. ಅದರಲ್ಲಿ ಗಾಂಧಿನಗರ (ಬಿಬಿಎಂಪಿ ವ್ಯಾಪ್ತಿ) ಕ್ಷೇತ್ರದಿಂದ ದಿನೇಶ್ ಗುಂಡೂರಾವ್ ಕೂಡಾ ಒಬ್ಬರು.
ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಹಾಗೂ ವರಲಕ್ಷ್ಮೀ ಗುಂಡೂರಾವ್ ದಂಪತಿಯ ಪುತ್ರನಾಗಿ 1969 ಅಕ್ಟೋಬರ್ 9ರಂದು ಕೊಡಗಿನ ಕುಶಾಲ ನಗರದಲ್ಲಿ ಜನಿಸಿದ ದಿನೇಶ್ ಇಂಜಿನಿಯರಿಂಗ್ ಪದವೀಧರರು. ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಇವರು, 1998ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದರು. ದಿನೇಶ್ ಅವರಿಗೆ ಇಬ್ಬರು ಪುತ್ರಿಯರು.

1999ರಲ್ಲಿ ಮೊದಲ ಮೊದಲ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ದಿನೇಶ್ ಗುಂಡೂರಾವ್ ಆನಂತರ ಹಿಂದಿರುಗಿ ನೋಡಲೇ ಇಲ್ಲ. 2013ರ ಚುನಾವಣೆಗೆ ಹೋಲಿಸಿದರೆ 2018ರಲ್ಲಿ ಅವರ ಗೆಲುವಿನ ಅಂತರ ಕಮ್ಮಿಯಾಯಿತಾದರೂ, ಅವರ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿಲ್ಲ. ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದೆ.
ಶಾಸಕರ ಕರ್ತವ್ಯದ ಜೊತೆಗೆ ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿದ್ದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಕೂಡಾ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದವರು ದಿನೇಶ್ ಗುಂಡೂರಾವ್. ಸಿದ್ದರಾಮಯ್ಯನವರ ಸರಕಾರಕ್ಕೆ ಉತ್ತಮ ಮೈಲೇಜ್ ಅನ್ನು ತಂದು ಕೊಟ್ಟ ಅನ್ನಭಾಗ್ಯ ಯೋಜನೆಯ ರೂವಾರಿ ಕೂಡಾ ಆಗಿದ್ದವರು ದಿನೇಶ್.
2020ರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಯ ಕರ್ತವ್ಯವನ್ನೂ ಇವರು ನಿರ್ವಹಿಸಿದ್ದಾರೆ. ಸದ್ಯ ಗೋವಾ, ತಮಿಳುನಾಡು ಮತ್ತು ಪುದುಚೇರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ವಹಿಸಿದ್ದಾರೆ. ಬಿಜೆಪಿ ಸರಕಾರದ ಲೋಪದೋಷವನ್ನು ಜನರ ಮುಂದಿಡುವಲ್ಲಿ ಮಂಚೂಣಿಯಲ್ಲಿರುವ ದಿನೇಶ್ ಗುಂಡೂರಾವ್ ಹೈಕಮಾಂಡ್ ಮಟ್ಟದಲ್ಲಿ ಆಪ್ತರು ಕೂಡಾ..

ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್
2008 ಮತ್ತು 2013ರಲ್ಲಿ ಹಾಲೀ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ವಿರುದ್ದ ಗಾಂಧಿನಗರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದ ದಿನೇಶ್ ಗುಂಡೂರಾವ್ ಅವರಿಗೆ ಬಿಜೆಪಿಯಿಂದ ಈ ಬಾರಿ ಯಾರು ಪೈಪೋಟಿ ನೀಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ, ಸದಾ ಜನಸಂದಣಿಯಿಂದ ಗಿಜಿಗುಡುವ ಈ ಕ್ಷೇತ್ರ ಇದುವರೆಗೂ ಕಾಂಗ್ರೆಸ್ಸಿನ ಭದ್ರಕೋಟೆ.
ಲಡ್ಡು, ಗಂಗಾಜಲ ಮೂಲಕ ಜನಪ್ರಿಯರಾಗಿರುವ ಶೆಟ್ರು
ಬಿಜೆಪಿಯಿಂದ ಮಾಜಿ ಸಚಿವ ರಾಮಚಂದ್ರೇಗೌಡರ ಪುತ್ರ ಸಪ್ತಗಿರಿ ಗೌಡ, ಮಾಜಿ ಕಾರ್ಪೋರೇಟರ್ ಶಿವಕುಮಾರ್, ಮಾಲೂರು ಕೃಷ್ಣಯ್ಯ ಶೆಟ್ಟಿ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ಕೃಷ್ಣಯ್ಯ ಶೆಟ್ರು ನಾನೇ ಕ್ಯಾಂಡಿಡೇಟ್ ಎಂದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಲಡ್ಡು, ಗಂಗಾಜಲ ಹಂಚಿಕೆಯ ಮೂಲಕ ಜನಪ್ರಿಯರಾಗಿರುವ ಶೆಟ್ರು, ಸದ್ಯ ಗಾಂಧಿನಗರ ಕ್ಷೇತ್ರದ ಜನತೆಯನ್ನು ಧಾರ್ಮಿಕ ಟ್ರಿಪ್ಪಿಗೆ ಕಳುಹಿಸುತ್ತಿದ್ದಾರೆ.
ತಮಿಳರ ಪ್ರಭಾವ ಹೆಚ್ಚಿರುವಂತಹ ಕ್ಷೇತ್ರ
ಜೆಡಿಎಸ್ ತನ್ಮ ಅಭ್ಯರ್ಥಿಯನ್ನಾಗಿ ವಿ.ನಾರಾಯಣಸ್ವಾಮಿ ಅವರ ಹೆಸರನ್ನು ಘೋಷಿಸಿದೆ. ಕಳೆದ ಬಾರಿ ಇವರು ಮೂರನೇ ಸ್ಥಾನದಲ್ಲಿದ್ದರೂ, ದಿನೇಶ್ ಗುಂಡೂರಾವ್ ಗೆಲುವಿಗೆ ಪ್ರಮುಖ ಕಾರಣರು ಎಂದೂ ಹೇಳಬಹುದಾಗಿದೆ. 2018ರಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಇವರ ಆಸ್ತಿ 22 ಕೋಟಿ, ಸಾಲ ಒಂದು ಕೋಟಿ. ಈ ಬಾರಿ ಮತ್ತೆ ದಿನೇಶ್ ಅವರು ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ತಮಿಳರ ಪ್ರಬಾವ ಹೆಚ್ಚಿರುವಂತಹ ಕ್ಷೇತ್ರ ಇದಾಗಿದೆ.












Click it and Unblock the Notifications