ಪ್ರಜ್ವಲ್ ಧರ್ಮಸ್ಥಳಕ್ಕೆ, ನಿಖಿಲ್ ಮಾದೇಶ್ವರ ಬೆಟ್ಟಕ್ಕೆ: ಶಿವರಾತ್ರಿ ಪಾಲಿಟಿಕ್ಸ್ ಅಲ್ಲ ಅಂತಾರೆ!
ಇದು ಕಾಕತಾಳೀಯವೋ, ಉದ್ದೇಶಪೂರ್ವಕವೋ ಅಥವಾ ಪೂರ್ವ ನಿಗದಿತವೋ? ಜೆಡಿಎಸ್ ಯುವ ಮುಖಂಡರ ಪ್ರಕಾರ ಈ ಪಾದಯಾತ್ರೆಯಲ್ಲಿ ಯಾವ ರಾಜಕೀಯ ಉದ್ದೇಶವೂ ಇಲ್ಲ, ದುರುದ್ದೇಶವೂ ಇಲ್ಲ. ಎಲ್ಲವೂ ಶಿವನಿಗಾಗಿ..
ಭಾನುವಾರದಿಂದ (ಫೆ 27) ಕೆಪಿಸಿಸಿಯ ಹೈವೋಲ್ಟೇಜ್ ಮೇಕೆದಾಟು ಪಾದಯಾತ್ರೆ ಆರಂಭವಾಗಿದೆ. ಅಂದೇ, ಜೆಡಿಎಸ್ ಮುಖಂಡ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆಯೂ ಆರಂಭವಾಗಿದೆ.
ಕಾಂಗ್ರೆಸ್ಗೆ ಕೆಟ್ಟ ಕಾಲ ಶುರು; ಆರ್. ಅಶೋಕ್ ಭವಿಷ್ಯ!
ಮೇಕೆದಾಟು ಪಾದಯಾತ್ರೆಯ ಎರಡನೇ ಚರಣದ ಎರಡನೇ ದಿನ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಪಾದಯಾತ್ರೆಯೂ ಏಳು ಮಲೆ ಮಾದೇಶ, ಮಲೆ ಮಹದೇಶ್ವರನ ಬೆಟ್ಟದ ಕಡೆಗೆ ಬಂದಿದೆ.
ಹಾಗಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ಮೂರು ಪಾದಯಾತ್ರೆ ಚಾಲ್ತಿಯಲ್ಲಿ ಇದ್ದಂಗಾಯಿತು. ದಳಪತಿಗಳ ಈಗಿನ ಪೀಳಿಗೆಯ ಪಾದಯಾತ್ರೆಯಲ್ಲಿ ರಾಜಕೀಯವಿಲ್ಲ, ಬರೀ ಧಾರ್ಮಿಕ ಕೆಲಸ ಎಂದು ಸಾರಿಸಾರಿ ಹೇಳುತ್ತಿದ್ದರೂ, ರಾಜಕೀಯದ ವಾಸನೆ ಬಡಿಯಲಾರಂಭಿಸಿದೆ. ಅದಕ್ಕಾಗಿ ಇಬ್ಬರೂ ಸ್ಪಷ್ಟನೆಯನ್ನು ನೀಡಿದ್ದಾಗಿದೆ.
ಶಿವರಾತ್ರಿ ನಿಮಿತ್ತವಲ್ಲ: ಪ್ರಜ್ವಲ್ ರೇವಣ್ಣ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ
ಕೆಪಿಸಿಸಿಯ ಮೇಕೆದಾಟು ಪಾದಯಾತ್ರೆ ಬೆಂಗಳೂರು ನಗರವನ್ನು ಪ್ರವೇಶಿಸಿದೆ
ಕೆಪಿಸಿಸಿಯ ಮೇಕೆದಾಟು ಪಾದಯಾತ್ರೆ ರಾಮನಗರ ಜಿಲ್ಲೆಯಿಂದ ಆರಂಭವಾಗಿ, ಬೆಂಗಳೂರು ನಗರವನ್ನು ಪ್ರವೇಶಿಸಿದೆ. ಎರಡನೇ ಚರಣದ ಪಾದಯಾತ್ರೆ ಇದುವರೆಗೆ ಸಾಗಿಬಂದಿದ್ದು ಜೆಡಿಎಸ್ ಪ್ರಾಭಲ್ಯವಿರುವ ಕ್ಷೇತ್ರಗಳಲ್ಲಿ, ಇನ್ನು ಬಿಜೆಪಿ ಶಕ್ತಿಯುತವಾದ ಕ್ಷೇತ್ರಗಳಲ್ಲಿ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರೂ ಈ ಪಾದಯಾತ್ರೆಯ ಬಗ್ಗೆ ವ್ಯಂಗ್ಯ/ಟೀಕೆಯನ್ನು ಮಾಡಿದರೂ, ಸಾರ್ವಜನಿಕರ ಸ್ಪಂದನೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿದೆ ಎನ್ನುವುದನ್ನು ಎರಡೂ ಪಕ್ಷಗಳು ಒಪ್ಪಿಕೊಳ್ಳಬೇಕಾದ ವಿಚಾರ.
ಪ್ರಜ್ವಲ್ ರೇವಣ್ಣ ಅವರು ಭಾನುವಾರದಂದು ಧರ್ಮಸ್ಥಳಕ್ಕೆ ಪಾದಯಾತ್ರೆ
ಪ್ರಜ್ವಲ್ ರೇವಣ್ಣ ಅವರು ಭಾನುವಾರದಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. "ನಾವೆಲ್ಲಾ ಮಂಜುನಾಥಸ್ವಾಮಿಯ ಭಕ್ತರು, ಬಹಳ ಹಿಂದಿನಿಂದಲೂ ಕ್ಷೇತ್ರದ ಮುಖಂಡರು, ಅಭಿಮಾನಿಗಳು ಪಾದಯಾತ್ರೆ ಮಾಡಬೇಕೆಂದು ಬಯಸಿದ್ದರು. ಕಳೆದ ಎರಡು ವರ್ಷದಲ್ಲಿ ಕೊರೊನಾದಿಂದ ಜನರು ಮತ್ತು ರೈತರು ಸಂಕಷ್ಟದಲ್ಲಿದ್ದಾರೆ. ನನ್ನ ರಾಜಕಾರಣದ ಮೊದಲನೇ ಪಾದಯಾತ್ರೆ ಧರ್ಮಸ್ಥಳಕ್ಕೇ ನಡೆಯಬೇಕೆನ್ನುವುದು ನನ್ನ ಆಸೆ. ಹೋರಾಟಕ್ಕಾಗಿ ಇದು ಪಾದಯಾತ್ರೆಯಲ್ಲ, ಆದರೆ ದೇವರ ಆಶೀರ್ವಾದ ಪಡೆಯಬೇಕಲ್ಲ" ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿಯವರು ತಾಳುಬೆಟ್ಟದಿಂದ ಮಲೆ ಮಹದೇಶ್ವರನ ಬೆಟ್ಟಕ್ಕೆ
ಇನ್ನೊಂದು ಕಡೆ, ಫೆಬ್ರವರಿ 28 ಮಧ್ಯಾಹ್ನ ಮೂರು ಗಂಟೆಯಿಂದ ನಿಖಿಲ್ ಕುಮಾರಸ್ವಾಮಿಯವರು ತಾಳುಬೆಟ್ಟದಿಂದ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್, " ನಮ್ಮ ಇಡೀ ಕುಟುಂಬ ಶಿವನ ಭಕ್ತರು, ಪಾದಯಾತ್ರೆ ಮೂಲಕ ಮಹದೇಶ್ವರನ ದರ್ಶನ ಮಾಡಬೇಕೆಂದು ಮನಸ್ಸಿಗೆ ಬಂತು. ಮೇಕೆದಾಟು ಪಾದಯಾತ್ರೆಗೂ ನನ್ನ ಪಾದಯಾತ್ರೆಗೂ ಸಂಬಂಧವಿಲ್ಲ. ನಮಗೆ ಶಿವನ ಮೇಲೆ ಅಪಾರವಾದ ನಂಬಿಕೆಯಿದೆ. ಯಾರಿಗೂ ಠಕ್ಕರ್ ಕೊಡುವಂತಹ ಉದ್ದೇಶ ನಮಗಿಲ್ಲ, ಇದು ರಾಜಕೀಯಕ್ಕೆ ಸಂಬಂಧಿಸಿದ ಪಾದಯಾತ್ರೆಯಲ್ಲ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಜ್ವಲ್ ಮತ್ತು ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ
ಪ್ರಜ್ವಲ್ ಮತ್ತು ನಿಖಿಲ್ ಕುಮಾರಸ್ವಾಮಿ ತಮ್ಮ ಪಾದಯಾತ್ರೆಯ ವೇಳೆ ಎಲ್ಲೂ ಸಭೆಯನ್ನು ನಡೆಸಲಿಲ್ಲ. ಆದರೆ, ಪಾದಯಾತ್ರೆಯ ವೇಳೆ ಅಭಿಮಾನಿಗಳ ಜೈಕಾರ ಜೋರಾಗಿಯೇ ಇತ್ತು. 'ರಾಮನಗರದ ಮುಂದಿನ ಅಭ್ಯರ್ಥಿ ನಿಖಿಲ್ ಅಣ್ಣನಿಗೆ ಜೈ' ಎಂದು ಅಭಿಮಾನಿಗಳು ಕೂಗುತ್ತಿದ್ದರು. ಧಾರ್ಮಿಕ ಪಾದಯಾತ್ರೆ ಎನ್ನುವುದು ಜೆಡಿಎಸ್ ಯುವ ಮುಖಂಡರಿಬ್ಬರು ಹೇಳುತ್ತಿದ್ದರೂ, ಇದಕ್ಕೆ ರಾಜಕೀಯ ವಾಸನೆ ಬಡಿಯುತ್ತಿದೆ. ಮೇಕೆದಾಟು ಪಾದಯಾತ್ರೆಯ ಸಮಯದಲ್ಲೇ ಇವರಿಬ್ಬರು ಯಾಕೆ ಪಾದಯಾತ್ರೆ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಶಿವರಾತ್ರಿಯೂ ಕಾರಣವಿರಬಹುದು.