ಬಿಜೆಪಿ, ಕಾಂಗ್ರೆಸ್ ಪಾಲಿಗೆ ಏನಾದೀತು ಐದು ರಾಜ್ಯಗಳ ಚುನಾವಣೆ? ಇಲ್ಲಿದೆ ವಿಶ್ಲೇಷಣೆ
Recommended Video

ಚುನಾವಣೆಗಳು ಅಂದರೆ ಮೋದಿ- ಅಮಿತ್ ಶಾ ಜೋಡಿ ಪಾಲಿಗೆ ವೀರರು ಇಷ್ಟಪಡುವ ಯುದ್ಧಗಳಂತೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅದೇ ರೀತಿ ರಾಹುಲ್ ಗಾಂಧಿ ಅವರು ಪ್ರಚಾರ ಮಾಡಿದಲ್ಲಿ ಎಲ್ಲ ಕಾಂಗ್ರೆಸ್ ಸೋಲನುಭವಿಸಿದೆ ಎಂದು ಬಿಜೆಪಿಯ ಹಿರಿ-ಕಿರಿ-ಮರಿ ನಾಯಕರೂ ಛೇಡಿಸುತ್ತಿದ್ದರು. ಬಹಳ ಸಮಯದ ನಂತರ ಗಡಿಯಾರದ ಮುಳ್ಳು ಉಲ್ಟಾ ತಿರುಗಿದೆ.
ಡಿಸೆಂಬರ್ ಹನ್ನೊಂದರಂದು ಪ್ರಕಟ ಆಗುವ ಚುನಾವಣೆ ಫಲಿತಾಂಶದ ಬಗ್ಗೆ ಬಿಜೆಪಿಯವರು ಉಸಿರು ಬಿಗಿ ಹಿಡಿದು ಕಾಯುವಂತಾಗಿದೆ. ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಬಲ್ಲದು ಎನ್ನುವ ಈ ರಾಜ್ಯಗಳ ಚುನಾವಣೆ ಫಲಿತಾಂಶವು ಬಿಜೆಪಿಗೆ ಸಿಹಿ ಆಗಲಿಕ್ಕಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಏಕೆಂದರೆ ಐದು ರಾಜ್ಯಗಳ ಪೈಕಿ ಮೂರರಲ್ಲಿ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಇನ್ನು ಮಿಜೋರಾಂನಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಟಿಆರ್ ಎಸ್ ಆಡಳಿತ ಇತ್ತು. ಸಮೀಕ್ಷೆಗಳೇ ನಂಬುವುದಾದರೆ ಈಗ ಅಧಿಕಾರದಲ್ಲಿರುವ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಢ ಮೂರನ್ನೂ ಬಿಜೆಪಿ ಕಳೆದುಕೊಳ್ಳುತ್ತದೆ. ಹೇಗೋ ಪವಾಡ ನಡೆದರೆ ಮಾತ್ರ ಸಮ್ಮಿಶ್ರ ಸರಕಾರ ರಚಿಸುವ ಸಾಧ್ಯತೆ ಇದೆ.

ಬೇರೊಬ್ಬರಿಗೆ ಸ್ಟೇರಿಂಗ್ ಕೊಟ್ಟು ಪಕ್ಕಕ್ಕೆ ನಿಲ್ಲಬೇಕಾಗುತ್ತದೆ ಬಿಜೆಪಿ
ಛತ್ತೀಸ್ ಗಢದಲ್ಲಿ ಒಂದು ಸಾಧ್ಯತೆಯನ್ನು ಊಹಿಸಲಾಗುತ್ತಿದೆ. ಅದು ಬೇರೊಂದು ಪಕ್ಷಕ್ಕೆ ಬೆಂಬಲ ನೀಡಿ, ನೀವೇ ಮುಖ್ಯಮಂತ್ರಿ ಆಗಿ ಎಂದು ಬಿಜೆಪಿಯು ದೂರ ನಿಂತು ನೋಡಬೇಕಷ್ಟೇ. ಕರ್ನಾಟಕದಲ್ಲಿ ಕಾಂಗ್ರೆಸ್ ಹೇಗೆ ಮಾಡಿದೆಯಲ್ಲಾ ಹಾಗೆ. ದೋಣಿಯ ನಾವಿಕರು ನೀವಾಗಿ ಎಂದು ಹೇಳುವ ಪರಿಸ್ಥಿತಿ ಎದುರಾಗಬಹುದು. ಛತ್ತೀಸ್ ಗಢದಲ್ಲಿ ಅಂಥ ಸನ್ನಿವೇಶ ಉದ್ಭವಿಸಬಹುದು ಎಂಬುದು ರಾಜಕೀಯ ತಜ್ಞರ ಅಭಿಮತ. ಅದೃಷ್ಟ ಕೈಕೊಟ್ಟರೆ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುತ್ತದೆ. ಮಧ್ಯಪ್ರದೇಶ, ರಾಜಸ್ತಾನದಲ್ಲೂ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರುವ ಸಾಧ್ಯತೆ ಇದೆ.

ಒಂದೇಟಿಗೆ ಮೂರು ರಾಜ್ಯಗಳು ಕಾಂಗ್ರೆಸ್ ತೆಕ್ಕೆಗೆ
ಈ ಮೇಲಿನ ಮೂರೂ ಸಾಧ್ಯತೆ ಸತ್ಯವಾಗಿಬಿಟ್ಟರೆ ಒಂದೇ ಏಟಿಗೆ ಮೂರು ರಾಜ್ಯಗಳನ್ನು ಕೇಸರಿ ಪಕ್ಷದಿಂದ ಕಾಂಗ್ರೆಸ್ ಕಸಿದುಕೊಂಡಂತಾಗಿದೆ. ಲೋಕಸಭೆ ಚುನಾವಣೆ ಹೊತ್ತಿಗೆ ಆ ಪಕ್ಷದ ರಟ್ಟೆ ಬಲವಾದಂತಾಗುತ್ತದೆ. ಹೀಗೇ ಆಗಬಹುದು ಎಂಬ ನಿರೀಕ್ಷೆಯಲ್ಲಿ ವಿಪಕ್ಷಗಳಿವೆ. ಇನ್ನು ಪುಟ್ಟ ರಾಜ್ಯ ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬಹುದು ಅಥವಾ ಬೇರೊಬ್ಬರ ಸಹಾಯ ಇಲ್ಲದೆ ಸರಕಾರ ಮಾಡಲಾಗದ ಸ್ಥಿತಿ ಬರಬಹುದು. ಆದರೆ ತೆಲಂಗಾಣದಲ್ಲಿ ಟಿಆರ್ ಎಸ್ ನ ಅಲುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿವೆ ಸಮೀಕ್ಷೆಗಳು.

ಕಾಂಗ್ರೆಸ್ ಪಾಲಿಗೆ ಉಳಿವು-ಅಳಿವಿನ ಪ್ರಶ್ನೆ ಆಗಲಿದೆ
ಒಂದು ವೇಳೆ ಮಿಜೋರಾಂನಲ್ಲಿ ಕಾಂಗ್ರೆಸ್ ಸೋತು, ತೆಲಂಗಾಣದಲ್ಲಿ ಅಂದುಕೊಂಡ ಫಲಿತಾಂಶ ಬಾರದೆ, ರಾಜಸ್ತಾನ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶಗಳಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಗೆ ಸಾಧ್ಯವಾಗದಿದ್ದಲ್ಲಿ ಆ ಪಕ್ಷದೊಳಗೆ ಏನಾಗಾಬಹುದು ಹಾಗೂ ಕೈ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಏನಾಗಬಹುದು ಎಂದು ಊಹಿಸುವುದು ಕೂಡ ಕಷ್ಟ. ಫಲಿತಾಂಶ ಈ ರೀತಿ ಬಂದರಂತೂ ಬಿಜೆಪಿ ಪಾಲಿಗೆ ಅಪಾರವಾದ ಆತ್ಮವಿಶ್ವಾಸ ತುಂಬುವುದಂತೂ ನಿಜ. ಕೇಂದ್ರ ಸರಕಾರದ ಬಗ್ಗೆ ಆಕ್ಷೇಪದ ಧ್ವನಿ ಕೇಳಿಬರುತ್ತಿರುವ ವೇಳೆಯಲ್ಲಿ, ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ಸನ್ನಿವೇಶವನ್ನು ಸಂಭಾಳಿಸಲು ಬಿಜೆಪಿಗೆ ಇನ್ನೂ ಕೆಲ ತಿಂಗಳು ಸಮಯ ಸಿಕ್ಕಂತೆ. ಹಾಗೂ ವಿಪಕ್ಷಗಳು ಸಂಘಟಿತ ಹೋರಾಟವನ್ನು ಬಡಿದು ಹಾಕಿದಂತೆಯೇ ಲೆಕ್ಕ.

ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ
ಲೋಕಸಭೆ ಚುನಾವಣೆ ಹೊತ್ತಿಗೆ ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಝಂಡಾ ಹಾರಿದರೆ ಬಿಜೆಪಿ ಕೋಟೆಯೊಳಗೆ ಬಿರುಕು ಬಿಟ್ಟಿತು ಅಂತಲೇ ಅರ್ಥ. ಮಧ್ಯಪ್ರದೇಶದಲ್ಲಿ ನಾಲ್ಕನೇ ಅವಧಿಗೆ, ಛತ್ತೀಸ್ ಗಢದಲ್ಲಿ ಮೂರನೇ ಬಾರಿಗೆ ಹಾಗೂ ಸತತ ಎರಡನೇ ಬಾರಿಗೆ ಅಧಿಕಾರಕ್ಕಾಗಿ ಜನರ ಮುಂದೆ ನಿಂತಿರುವ ಬಿಜೆಪಿಗೆ ಕೇಂದ್ರ ಸರಕಾರದ ಸಾಧನೆಯೂ ಒಂದು ಮಾನದಂಡ. ಆದರೆ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಕೆಲಸ ಮಾಡುತ್ತದೆ. ಈ ಎಲ್ಲ ಸವಾಲುಗಳೆಂಬ ಬೆಟ್ಟ ದಾಟಿದರೆ ಲೋಕಸಭೆ ಎಂಬ ಮಹಾನ್ ಮೌಂಟ್ ಎವರೆಸ್ಟ್ ಏರಿ ನಿಲ್ಲಲು ಚೈತನ್ಯ ದೊರೆಯುತ್ತದೆ. ಹಾಗಿದ್ದರೆ ಇನ್ನು ಕೆಲವು ಗಂಟೆಗಳ ತನಕ ಮಾತ್ರ ಈ ಎಲ್ಲ ನಿರೀಕ್ಷೆ, ಕುತೂಹಲ. ಮಂಗಳವಾರ ಮಧ್ಯಾಹ್ನ ಕಳೆಯುವ ಹೊತ್ತಿಗೆ ಎಲ್ಲವೂ ನಿಚ್ಚಳ ಆಗಿಬಿಟ್ಟಿರುತ್ತದೆ.












Click it and Unblock the Notifications