NCP ಜೊತೆ ಮೈತ್ರಿ, ಮೊದಲೇ ಸೂಚನೆ ನೀಡಿದ್ದ ಮೋದಿ, ಪವಾರ್!
ಯಾವುದೇ ಮಹತ್ತರ ಬೆಳವಣಿಗೆ ಸಂಭವಿಸಿದ ನಂತರ ಕೆಲ ದಿನಗಳ ಹಿಂದಿನ ಘಟನೆಗಳನ್ನು ಅವಲೋಕಿಸಿದಾಗ ಆ ಘಟನೆಗೆ ಮೊದಲೇ ಸೂಚನೆ ಸಿಕ್ಕಿತ್ತಾ ಎಂಬ ಅನುಮಾನ ಆರಂಭವಾಗುತ್ತದೆ. ಅದಕ್ಕೆ ಪೂರಕ ಎಂಬಂಥ ಘಟನೆಗಳೂ ನೆನಪಾಗುತ್ತದೆ.
ಇದೀಗ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯ ನಂತರ ಬಿಜೆಪಿ ಮತ್ತು ಎನ್ ಸಿಪಿ ನಡುವೆ ಮೈತ್ರಿ ಉಂಟಾಗಬಹುದಾದ ಸಾಧ್ಯತೆಗಳಿಗೆ ಈ ಮೊದಲೇ ಸೂಚನೆ ಸಿಕ್ಕಿತ್ತೇ ಎಂದು ಯೋಚಿಸುವುದಕ್ಕೆ ತೊಡಗಿದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಈ ಮೊದಲೇ ಅದರ ಸೂಚನೆ ನೀಡಿದ್ದರೇನೋ ಎಂಬ ಅನುಮಾನ ಕಾಡುತ್ತದೆ.
ಕೆಲವು ಹೇಳಿಕೆಗಳು, ಘಟನೆಗಳು ಆ ಅನುಮಾನಗಳು ಸತ್ಯ ಎಂಬ ಭಾವನೆ ಮೂಡಿಸುತ್ತವೆ.

ಎನ್ ಸಿಪಿಯನ್ನು ಹೊಗಳಿದ್ದ ಪ್ರಧಾನಿ ಮೋದಿ
ಇತ್ತೀಚೆಗೆ ರಾಜ್ಯಸಭೆಯ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಎನ್ ಸಿಪಿ ಮತ್ತು ಬಿಜೆಡಿಯನ್ನು ಹೊಗಳಿದ್ದರು. ಈ ಎರಡು ಪಕ್ಷಗಳು ಸಂಸದೀಯ ನಿಯಮಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸುತ್ತಿವೆ. ಇದುವರೆಗೂ ಈ ಎರಡು ಪಕ್ಷಗಳ ಒಬ್ಬ ಸಂಸದರೂ ಸದನದ ಭಾವಿಗಿಳಿದು ಪ್ರತಿಭಟಿಸಿಲ್ಲ ಎಂದಿದ್ದರು. ಮಿಕ್ಕ ಪಕ್ಷಗಳು ಅವರನ್ನು ನೋಡಿ ಕಲಿಯಬೇಕು ಎಂದಿದ್ದರು. ಇದ್ದಕ್ಕಿದ್ದಂತೆ ಮೋದಿಯವರು ಎನ್ ಸಿಪಿ ಗುಣಗಾನ ಆರಂಭಿಸಿದ್ದೇಕೆ ಎಂಬ ಅನುಮಾನ ಅಂದು ಕಾಡಿರಲಿಲ್ಲ!

ಪವಾರ್-ಮೋದಿ ಭೇಟಿ
ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಎನ್ ಸಿಪಿ ಮುಖಂಡ ಶರದ್ ಪವಾರ್, ಮಹಾರಾಷ್ಟ್ರದ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಈ ಪರಿ ರಾಜಕೀಯ ಬೆಳವಣಿಗೆಯಾಗುತ್ತಿರುವ ಹೊತ್ತಲ್ಲಿ ಉಭಯ ನಾಯಕರ ಈ ಭೇಟಿ, ಮಿತ್ರಪಕ್ಷವಾಗಲು ಹೊರಟಿದ್ದ ಶಿವಸೇನೆ ಮತ್ತು ಕಾಂಗ್ರೆಸ್ ಗೂ ಇರಿಸುಮುರಿಸುಂಟು ಮಾಡಿತ್ತು.

ಶಿವಸೇನೆ ಮೇಲೆ ವಾಗ್ದಾಳಿ
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ್ದ ಶರದ್ ಪವಾರ್, "ಶಿವಸೇನೆ 170 ಶಾಸಕರ ಬಲ ಹೊಂದಿದೆ ಎಂದು ಹೇಳುತ್ತಿದೆ. ಅದು ಯಾವ ಆಧಾರದ ಮೇಲೆ ಹೀಗೆ ಹೇಳುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ" ಎಂದಿದ್ದರು.

ಶಿವಸೇನೆಗೆ ಬುದ್ಧಿವಾದ
ಅಷ್ಟೇ ಅಲ್ಲ, ಶಿವಸೇನೆಗೆ ಬುದ್ಧಿವಾದ ಹೇಳಿದ್ದ ಶರದ್ ಪವಾರ್, "ಬಿಜೆಪಿ-ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಿವೆ. ನಾವು ಕಾಂಗ್ರೆಸ್ ಜೊತೆ ಸೇರಿ ಚುನಾವಣೆ ಎದುರಿಸಿದ್ದೇವೆ. ಶಿವಸೇನೆ ತಮ್ಮ ದಾರಿಯನ್ನು ತಾವು ಹುಡುಕಿಕೂಳ್ಳಲಿ, ನಾವು ನಮ್ಮ ರಾಜಕೀಯ ಮಾಡುತ್ತೇವೆ" ಎಂದು ಪವಾರ್ ಹೇಳಿದ್ದರು.












Click it and Unblock the Notifications