India Vs Pak: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಸುದ್ದಿಗಳು ನಿಜವೇ? ಇಲ್ಲಿದೆ ಕ್ಲಾರಿಟಿ
ಭಾರತ ಹಾಗೂ ಪಾಕಿಸ್ತಾನದ ನಡುವೆ ಕೆಲ ದಿನಗಳಿಂದ ಉದ್ವಿಗ್ನತೆ ಹೆಚ್ಚಾಗಿದೆ. ದಾಳಿಗೆ ಪ್ರತಿದಾಳಿಯೂ ನಡೆಯುತ್ತಿದೆ. ಮತ್ತೊಂದೆಡೆ ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವಿಡಿಯೋ ಹಾಗೂ ಫೋಟೋಗಳು ಕೂಡ ವೈರಲ್ ಆಗಿವೆ. ಜನ ಕೂಡ ಇವುಗಳನ್ನು ಪರಿಶೀಲಿಸದೆ ನಿಜವೆಂದೇ ನಂಬಿ ಮತ್ತಷ್ಟು ಮಂದಿಗೆ ಶೇರ್ ಮಾಡುತ್ತಿದ್ದಾರೆ. ಪಾಕಿಸ್ತಾನ ಕೂಡ ಭಾರತದ ಮೇಲೆ ಸಾಲು ಸಾಲು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಇದರ ಅಸಲಿಯತ್ತನ್ನ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಬಿಚ್ಚಿಟ್ಟಿದೆ.
ಪಾಕಿಸ್ತಾನ ಹಾಗೂ ಅಲ್ಲಿನ ಮಾಧ್ಯಮಗಳು ಭಾರತದ ಮೇಲೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿವೆ. ಇದೆಲ್ಲವೂ ಸುಳ್ಳು ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳ ಬಗ್ಗೆ ಪಿಐಬಿ ಫ್ಯಾಕ್ಟ್ಚೆಕ್ ವರದಿ ನೀಡಿದೆ.

* ಭಾರತೀಯ ಪೈಲೆಟ್ ಪಿಒಕೆ ಮೇಲೆ ಬಿದ್ದಿಲ್ಲ
ಭಾರತೀಯ ಪೈಲೆಟ್ ಯುದ್ಧ ವಿಮಾನದಿಂದ ಹೊರಗೆ ಹಾರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಬಿದ್ದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಸುಳ್ಳು ಸುದ್ದಿ, ಸುಳ್ಳು ಮಾಹಿತಿಗಳನ್ನು ನಂಬದಿರಿ. ಶೇರ್ ಮಾಡುವ ಮೊದಲು ವಿವೇಚಿಸಿ ಎಂದು ತಿಳಿಸಿದೆ.
* ದೆಹಲಿ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ಆಗಿಲ್ಲ
ಹಳೆಯ ವಿಡಿಯೋ ಹಂಚಿಕೊಳ್ಳುವ ಮೂಲಕ ದೆಹಲಿ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿಯಾಗಿದೆ ಎಂದು ತಪ್ಪಾದ ಮಾಹಿತಿ ಹರಡಲಾಗುತ್ತಿದೆ. ಅಸಲಿಗೆ ಇದು 2014ರ ಆಗಸ್ಟ್ನಲ್ಲಿ ಯೆಮೆನ್ನ ಎಡನ್ನ ಗ್ಯಾಸ್ ಸ್ಟೇಷನ್ ಸ್ಫೋಟಗೊಂಡಿದ್ದರ ದೃಶ್ಯವಾಗಿದೆ. ಈ ವಿಡಿಯೋಗೂ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

* ಪಂಜಾಬ್ನ ಬತಿಂಡಾ ವಾಯುನೆಲೆ ನಾಶವಾಗಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಪಂಜಾಬ್ ಬತಿಂಡಾ ವಾಯುನೆಲೆ ಧ್ವಂಸವಾಗಿರುವುದಾಗಿ ವೈರಲ್ ಪೋಸ್ಟ್ನಲ್ಲಿ ಹೇಳಲಾಗಿದೆ. ಬತಿಂಡಾ ವಾಯುನೆಲೆಯು ಸಂಪೂರ್ಣವಾಗಿ ಕಾರ್ಯಾಚರಿಸುತ್ತಿದೆ ಮತ್ತು ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಇದು ಕೂಡ ಸುಳ್ಳು ಸುದ್ದಿ. ಇದನ್ನು ನಂಬಬೇಡಿ. ಅಧಿಕೃತ ಮಾಹಿತಿ ಪಡೆಯಿರಿ ಎಂದು ಹೇಳಿದೆ.
* ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಅನ್ನು ಸೆರೆಹಿಡಿದಿಲ್ಲ
ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್, ಸ್ಕ್ವಾಡ್ರನ್ ನಾಯಕಿ ಶಿವಾನಿ ಸಿಂಗ್ ಅವರನ್ನು ಪಾಕಿಸ್ತಾನದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಕೂಡ ಸುಳ್ಳು ಸುದ್ದಿ ಎಂದು ಪಿಐಬಿ ಸ್ಪಷ್ಟಪಡಿಸಿದೆ.
* ಉಧಮ್ಪುರ ವಾಯುನೆಲೆ ಕಾರ್ಯನಿರ್ವಹಿಸುತ್ತಿದೆ
ನೇರ ಪ್ರಸಾರ ಮಾಡಿದ ವೀಡಿಯೊದಲ್ಲಿ ಪಾಕಿಸ್ತಾನವು ಉಧಮ್ಪುರ ವಾಯುನೆಲೆಯನ್ನು ನಾಶಪಡಿಸಿದೆ ಎಂದು ಹೇಳಲಾಗಿದೆ. ಈ ವೀಡಿಯೊ ರಾಜಸ್ಥಾನದ ಹನುಮಾನ್ಗಢದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡವನ್ನು ತೋರಿಸುತ್ತದೆ. ಇದು ಪ್ರಸ್ತುತ ಭಾರತ-ಪಾಕಿಸ್ತಾನ ಪರಿಸ್ಥಿತಿಗೆ ಸಂಬಂಧಿಸಿಲ್ಲ ಎಂದು ಹೇಳಿದೆ.
* ಪಾಕಿಸ್ತಾನದಿಂದ ಭಾರತದ S-400 ನಾಶವಾಗಿಲ್ಲ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಪಾಕಿಸ್ತಾನವು ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಹೇಳಿಕೊಳ್ಳುತ್ತಿವೆ. ಇದು ಕೂಡ ಸುಳ್ಳು, S-400 ವ್ಯವಸ್ಥೆಗೆ ನಾಶ ಅಥವಾ ಯಾವುದೇ ಹಾನಿಯ ವರದಿಗಳು ಆಧಾರರಹಿತ ಎಂದು ಹೇಳಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ ಎಂದು ಕಿವಿಮಾತು ಹೇಳಿದೆ.
* ನಗರೋಟ ವಾಯುನೆಲೆ ಮೇಲೆ ದಾಳಿಯಾದ ಸದ್ದು ಕೇಳಿಸಿಲ್ಲ
ಹಳೆಯದಾದ ಮತ್ತು ತಿರುಚಲಾದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಪಾಕಿಸ್ತಾನವು ಭಾರತದ ನಗರೋಟ ವಾಯುನೆಲೆ ಮೇಲೆ ದಾಳಿ ಮಾಡಿದ್ದಾಗಿ ತಪ್ಪಾದ ಮಾಹಿತಿ ಹರಡಲಾಗುತ್ತಿದೆ. ಇದು 2024ರ ಅಕ್ಟೋಬರ್ನಲ್ಲಿ ಈ ವಿಡಿಯೋದ ನಿಜವಾದ ದೃಶ್ಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಹ ಸುಳ್ಳು ಸುಳ್ಳು ಸುದ್ದಿ ಎಂದು ಹೇಳಿದೆ.
* ಉಧಮ್ಪುರ ವಾಯುನೆಲೆ ಧ್ವಂಸವಾಗಿಲ್ಲ
ಸುದ್ದಿ ವಾಹಿನಿಯೊಂದರಲ್ಲಿ ಈ ವಿಡಿಯೋವನ್ನು ಲೈವ್ ಪ್ರಸಾರ ಮಾಡಲಾಗಿದ್ದು, ಪಾಕಿಸ್ತಾನವು ಭಾರತದ ಉಧಮ್ಪುರ ವಾಯುನೆಲೆಯನ್ನು ಧ್ವಂಸಗೊಳಿಸಿರುವುದಾಗಿ ಹೇಳಲಾಗಿದೆ. ವಿಡಿಯೋದಲ್ಲಿರುವುದು ರಾಜಸ್ಥಾನದ ಹನುಮಾನ್ಗಢದಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡ ದೃಶ್ಯ. ಈ ದೃಶ್ಯಕ್ಕೂ ಭಾರತ-ಪಾಕಿಸ್ತಾನ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
* ಐಎಎಫ್ ವಿಮಾನ ಪತನ ಸುಳ್ಳು
ಐಎಎಫ್ ವಿಮಾನ ಪತನದ ಹಳೆಯ ವಿಡಿಯೋವನ್ನು ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಐಎಎಫ್ ವಿಮಾನ ಪತನದ ದೃಶ್ಯವನ್ನು ಪ್ರಸಕ್ತ ಭಾರತ-ಪಾಕಿಸ್ತಾನ ಸಂಘರ್ಷದ ವಿಡಿಯೋ ಎಂದು ತಪ್ಪಾದ ಮಾಹಿತಿಯನ್ನು ಹರಡಲಾಗುತ್ತಿದೆ. ಇದು ಮಾರ್ಚ್ 2025ರಲ್ಲಿ ಅಂಬಾಲದಲ್ಲಿ ನಿಯಮಿತ ತರಬೇತಿ ವೇಳೆ ಐಎಎಫ್ನ ಜಾಗ್ವಾರ್ ವಿಮಾನವು ಪತನಗೊಂಡ ದೃಶ್ಯವಾಗಿದೆ.
* ನಕಲಿ ಎಐ ವಿಡಿಯೋ
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾದ ಎಸ್.ಜೈಶಂಕರ್ ಅವರು ಕ್ಷಮೆಯಾಚಿಸುತ್ತಿರುವಂತೆ ಬಿಂಬಿಸಲಾದ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಲಾಗಿದೆ ಮತ್ತು ತಪ್ಪಾದ ಮಾಹಿತಿ ಹರಡಲು ಬಳಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದೆ.
ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳು ದುರುದ್ದೇಶಪೂರಿತವಾಗಿರಬಹುದು. ಭಾರತ ಸೇನೆಯ ಕಾರ್ಯಾಚರಣೆಗೆ ಸಂಬಂಧಿಸಿದ ಬಗ್ಗೆ ಅಥವಾ ಪ್ರಸಕ್ತ ಸನ್ನಿವೇಶದ ಬಗ್ಗೆ ಹರಿದಾಡುತ್ತಿರುವ ಅನುಮಾನಸ್ಪದ ವಿಡಿಯೋಗಳ ಬಗ್ಗೆ ಎಚ್ಚರಿಕೆಯಿಂದಿರಿ. ಅವುಗಳು ದುರುದ್ದೇಶ ಪೂರಿತವಾಗಿದ್ದು ದಿಕ್ಕು ತಪ್ಪಿಸುತ್ತವೆ ಎಂದು ಹೇಳಿದೆ.
* ಸುಳ್ಳು ಸುದ್ದಿ ಹರಡಿದರೆ ಕ್ರಮ
ಭಾರತದ ಆಪರೇಷನ್ ಸಿಂಧೂರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ದಾಳಿಯ ಸಂಬಂಧ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಭಾರತದ ಗಡಿ ಪ್ರದೇಶದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈ ಬಗ್ಗೆ ರಕ್ಷಣಾ ಇಲಾಖೆ ಅಧಿಕಾರಿಗಳೇ ಅಧಿಕೃತವಾಗಿ ಮಾಹಿತಿ ನೀಡುತ್ತಿದ್ದಾರೆ. ಸಾರ್ವಜನಿಕರು ಸಮಾಜಕ್ಕೆ ತಪ್ಪು ಮಾಹಿತಿ ನೀಡಬಾರದು ಎಂದು ಸಲಹೆ ನೀಡಿದ್ದಾರೆ.












Click it and Unblock the Notifications