ಕಾಮಪಿಪಾಸುಗಳಾ, ಪ್ಲೀಸ್ ನಮ್ಮನ್ನು ಬದುಕಲು ಬಿಡಿ!

ಕಾಮುಕರ ಕ್ರೂರ ಕಣ್ಣುಗಳು ಎಳಸು ಮಗುವನ್ನೂ ಬಿಟ್ಟಿಲ್ಲ, ಯುವತಿಯರು, ಮಾತೃಸ್ವರೂಪಿ ಹಣ್ಣು ಹಣ್ಣು ಅಜ್ಜಿಯನ್ನೂ ಬಿಟ್ಟಿಲ್ಲ. ಕಾಮತೃಷೆಯ ಮುಂದೆ ಯಾವುದೇ ಜೀವವನ್ನೂ ಹೊಸಕಿ ಕೊಂದು ಬಿಡೋದು ಸಲೀಸು ಈ ಮನುಷ್ಯ ರೂಪದ ಮೃಗಗಳಿಗೆ...

ಅರಳಿ ಸಮಾಜದ ಮೌಲ್ಯಯುತ ಸೊತ್ತಾಗಬೇಕಾಗಿದ್ದ ಅದೆಷ್ಟೋ ಎಳಸು ಜೀವಗಳು ಕಾಮಪಿಪಾಸುಗಳ ಕಬಂಧ ಬಾಹುಗಳಲ್ಲಿ ಕಮರಿ ಹೋಗಿವೆ. ಹಿಂದೊಮ್ಮೆ ರಾಜದಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಷ್ಟ್ರಾದ್ಯಂತ ಅತ್ಯಾಚಾರ ವಿರುದ್ಧದ ವ್ಯಾಪಕ ಹೋರಾಟಕ್ಕೆ ಕಾರಣವಾಗಿತ್ತು. ನಂತರ ಧರ್ಮಸ್ಥಳದ ಸೌಜನ್ಯಳನ್ನು ಅಪಹರಣಗೈದು ಅಮಾನವೀಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಯ್ತು. ಬಂಟ್ವಾಳದ ಅಕ್ಷತಾ ಸುಂದರ ನಾಳೆಗಳನ್ನು ನೊಡುವ ಮೊದಲೇ ಅತ್ಯಾಚಾರಕ್ಕೆ ಒಳಗಾಗಿ ಇಹಲೋಕದ ಯಾತ್ರೆ ಮುಗಿಸಿದ್ದಳು. ಬೆಂಗಳೂರಿನ ಕಾಡುಗೊಂಡನಹಳ್ಳಿಯಲ್ಲಿ ಮೂತ್ರ ವಿಸರ್ಜನೆಗೆ ಹೊರಬಂದ 5ರ ಪ್ರಾಯದ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಲಾಯ್ತು. ಕುಂದಾಪುರ ರತ್ನಾ ಕೊಠಾರಿ, ಶಿವಮೊಗ್ಗದ ನಂದಿತಾ, ಅತ್ಯಾಚಾರದ ಪೈಶಾಚಿಕ ಕೃತ್ಯಕ್ಕೆ ಬಲಿಯಾದವರೇ...

ಇಂತಹಾ ಅಸ್ವಸ್ಥ ಮನೋಸ್ಥಿತಿಯ ಮೃಗೀಯ ದೌರ್ಜನ್ಯಕ್ಕೆ ಮತ್ತೊಂದು ಮೊಗ್ಗು ಬಲಿಯಾಗಿದೆ. ಅವಳು 8ರ ಹರೆಯದ ಚೆಂಗುಲಾಬಿಯ ಮೊಗ್ಗು.. ಪ್ರಪಂಚವನ್ನು ಪಿಳಿಪಿಳಿ ಕಣ್ಣಿಂದ ನೊಡುವ ವಯಸ್ಸದು.. ಆಡ್ತಾ ಹಾಡ್ತಾ ಆಟವಾಡ್ತಾ ಆಡು ಮೇಯಿಸ್ತಾ ಕಾಡುಗಳಲ್ಲಿ ತನ್ನದೇ ಮುಗ್ಧ ಪ್ರಪಂಚದಲ್ಲಿ ವಿಹರಿಸ್ತಾ ಇದ್ದವಳು ಆ ಬಾಲಕಿ. ಅಂತಹ ಹಸುಗೂಸಿಗೆ ಮತ್ತುಬರುವ ಔಷಧಿ ನೀಡಿ ಹಲವು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು.

Perpetrators, please allow us to live peacefully

ತನಗೆ ಏನಾಗ್ತಿದೆ ಅಂತ ತಿಳಿಯುವ ಮೊದಲೇ ಧಗಧಗಿಸಿ ಉರಿದ ಕಾಮತೃಷೆಗೆ ಆಹುತಿಯಾದಳು ಬಾಲೆ. ತನ್ನ ಮೇಲೆ ಏನು ನಡೆದಿದೆ ಅನ್ನೋದನ್ನು ಹೇಳಲಾಗದ ವಯಸ್ಸದು. ಪ್ರಪಂಚವೇ ಅರಿಯದ ಮೊಗ್ಗನ್ನು ಅರಳುವುದಕ್ಕೆ ಬಿಡದೇ, ಕನಿಷ್ಠ ಮಾನವಿಯತೆಯೂ ಇಲ್ಲದೆ ಮೇಲಿಂದ ಮೇಲೆ ಅತ್ಯಾಚಾರ ಎಸಗಿದ್ದರು ನರರೂಪಿ ರಾಕ್ಷಸರು. ದೇವಸ್ಥಾನ(?)ದಲ್ಲೇ ಈ ಕೃತ್ಯ ನಡೆಸಿರುವ ಈ ಪಾಪಿಗಳಿಗೆ ಯಾವುದೇ ಕಾನೂನು ಧರ್ಮ ನೀತಿ ನೈತಿಕತೆಯ ಭೀತಿಯಿಲ್ಲದೆ ತಮ್ಮ ಅಟ್ಟಹಾಸ ಮೆರೆದಿದ್ದರು.

ಇದು ಜಮ್ಮು ಕಾಶ್ಮೀರದ ಕತುವಾದಲ್ಲಿ 8ರ ಪ್ರಾಯದ ಬಾಲಕಿಯ ಮಲೆ ನಾಲ್ಕು ಮನುಷ್ಯ ಮೃಗಗಳು ಬರ್ಬರವಾಗಿ ಅತ್ಯಾಚಾರಗೈದು ಹತ್ಯೆ ಮಾಡಿದ ದುರಂತ ಕಥೆ. ಈ ದುರಂತದ ಶಾಕ್ ಅರಗಿಸಿಕೊಳ್ಳುವ ಮೊದಲೇ ಉತ್ತರ ಪ್ರದೇಶದ ಉನ್ನಾವ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ವಿರುದ್ಧ ಧ್ವನಿಎತ್ತಿದ್ದಕ್ಕೆ ಯುವತಿಯ ತಂದೆಯನ್ನು ಕೊಲೆ ಮಾಡಲಾಗಿದೆ.

ಕತುವಾ ದುರಂತದ ಬೆನ್ನಲ್ಲೆ ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 18 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬಸ್ಥರ ಜೊತೆ ಮದುವೆ ಕಾರ್ಯಕ್ರಮವೊಂದಕ್ಕೆ ಬಾಲಕಿ ತೆರಳಿದ್ದಳು. ಬಾಲಕಿ ಹೊರಗಡೆ ಆಟವಾಡ್ತಾ ಇದ್ದಾಗ ಯುವಕನೊಬ್ಬ ಆಕೆಯನ್ನು ಪಕ್ಕದ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದುಕೊಂಡು ಹೋಗಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಾಲಕಿಯನ್ನು ಕೊಲೆಮಾಡಿದ್ದಾನೆ.

ಈ ಅತ್ಯಾಚಾರ ಸರಣಿ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿಬೀಳಿಸುವ ಮತ್ತೊಂದು ಹೇಯ ಕೃತ್ಯ ನಡೆದಿದೆ. ಪಶ್ಚಿಮ ದೆಹಲಿಯ ಮಂಗೋಲಪುರ್‌ ಕಾಲೋನಿಯಲ್ಲಿ ಮಾನಸಿಕ ಅಸ್ವಸ್ಥ ಬಾಲಕಿಯನ್ನು ಪಕ್ಕದ ಮನೆಯ ಬಂಟಿ ಎಂಬಾತ ಪುಸಲಾಯಿಸಿ ಸಮುದಾಯ ಭವನಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಈ ಭೀಭತ್ಸ ಕೃತ್ಯ ಹೆಣ್ಣಿನ ಹೃದಯಗಳಲ್ಲಿ ನಡುಕ ಮೂಡಿಸಿದೆ. ಮಹಿಳೆಯನ್ನು ಪ್ರೀತಿಸುವ ಅಪ್ಪಂದಿರಲ್ಲಿ, ಗಂಡಂದಿರಲ್ಲಿ, ಸ್ನೇಹಿತರಲ್ಲಿ ಕರುಳು ಕಿವುಚುವಂತೆ ಮಾಡಿದೆ. ಸುಸಂಸ್ಕೃತ ಸಮಾಜದಲ್ಲಿ ದುಃಖ ಹೆಪ್ಪುಗಟ್ಟಿದೆ. ಆಕ್ರೋಶ ಕಟ್ಟೆಯೊಡೆದಿದೆ.

ಇಂತಹಾ ಅತ್ಯಾಚಾರಗಳು ಹಿಂದೆಯೂ ನಡೆದಿವೆ. ಕಾಮುಕರ ಅಟ್ಟಹಾಸಕ್ಕೆ ಅದೆಷ್ಟೋ ಹೆಣ್ಣು ಜೀವಗಳು ಬಲಿಪಶುವಾಗಿದ್ದಾರೆ. ಪಾಪಿಗಳಿವೆ ಆಹಾರವಾಗಿ ಬದುಕು ಮುಗಿಸಿದವರ ಹೆತ್ತಕರುಳ ನಿಟ್ಟುಸಿರು ಹಿಡಿಶಾಪ ಹಾಕ್ತಾನೇ ಇದೆ. ಅಪರಾಧಿಗಳು ಮಾತ್ರ ಕಾನೂನಿಗೇ ಚಳ್ಳೇ ಹಣ್ಣು ತಿನ್ನಿಸ್ತಾ ಬದುಕ್ತಾ ಇದ್ದಾರೆ. ಇದು ಸಮಾಜದ ದುರಂತವೆನೋ...

ಸಮಾಜಕ್ಕೊಂದು ಹೆಣ್ಣಿನ ಪ್ರಶ್ನೆ.. ಇಲ್ಲಿ ನಾವು ಎಷ್ಟು ಸೇಫ್? ಈ ದೌರ್ಜನ್ಯಗಳಿಗೆ ಕೊನೆ ಎಂದು? ಹೆಣ್ಣಿಗೆ ಪುರುಷ ಸಮಾಜದ ಮೇಲಿರುವ ಅಪನಂಬಿಕೆ, ನೆಮ್ಮದಿಯ ನಿದ್ದೆಯನ್ನೇ ಕಸಿದುಕೊಂಡಿದೆ. ಗಂಡೊಬ್ಬ ಹತ್ತಿರ ಬಂದ್ರೆ ದಿಗಿಲಿನಿಂದ ತತ್ತರಿಸುವಂತೆ ಆಗಿದೆ. ಆತಂಕ ಮನೆಮಾಡಿರುವ ಮನಸುಗಳ ರೋದನೆಯೊಂದೇ... ಪ್ಲೀಸ್ ನಮ್ಮನ್ನು ಬದುಕಲು ಬಿಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+