Get Updates
Get notified of breaking news, exclusive insights, and must-see stories!

ನಾಯಿಗಳ ಮದುವೆಗೆ 20 ಲಕ್ಷ ಖರ್ಚು ಮಾಡಿದ್ದ ನವಾಬ ಹಾಗೂ ಸರ್ದಾರ್ ಸಾಹಸ

ಗುಜರಾತ್ ನಲ್ಲಿ 182 ಮೀಟರ್ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲ್ ವಿಗ್ರಹ ಬುಧವಾರದಂದು ಗುಜರಾತ್ ನಲ್ಲಿ ಲೋಕಾರ್ಪಣೆ ಆಗಿದೆ. ಮಾಜಿ ಉಪ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವ ಪಟೇಲ್ ರ ವ್ಯಕ್ತಿತ್ವ ಕೂಡ ಇಷ್ಟೇ ಎತ್ತರದ್ದಾಗಿತ್ತು. ಹಾಗಿಲ್ಲದಿದ್ದರೆ ಜುನಾಗಢದ ನವಾಬನ ಜತೆಗೆ ವ್ಯವಹರಿಸುವುದು ಅಷ್ಟು ಸುಲಭವಿರಲಿಲ್ಲ. ಜತೆಗೆ ಭಾರತದಿಂದ ಜುನಾಗಢವನ್ನು ಕಳೆದುಕೊಳ್ಳಲು ತಪ್ಪಿಸುವುದು ಕೂಡ ಆಗುತ್ತಿರಲಿಲ್ಲ.

ಆ ನವಾಬ ಎಂಥ ವಿಚಿತ್ರ ವ್ಯಕ್ತಿ ಅಂದರೆ, ತನ್ನ ಬಳಿ ಇದ್ದ ಎರಡು ನಾಯಿಗಳ ಮದುವೆ ಸಲುವಾಗಿ 20 ಲಕ್ಷ ರುಪಾಯಿ ಖರ್ಚು ಮಾಡಿದ್ದ. ಇದು ಎಪ್ಪತ್ತು ವರ್ಷಕ್ಕೂ ಹಿಂದಿನ ಮಾತು. ಹಾಗಂತ ಅವನ ಬಳಿ ಇದ್ದದ್ದು ಎರಡೇ ನಾಯಿ ಅಂದುಕೊಳ್ಳಬೇಡಿ. ಏಕೆಂದರೆ ಅವನ ಹತ್ತಿರ ಇದ್ದದ್ದು ಒಟ್ಟು 800 ನಾಯಿಗಳು.

ಜುನಾಗಢದ ನವಾಬ್ ಮಹಬತ್ ಖಾನ್ ರಸೂಲ್ ಖಾನ್ ಜೀ III ಬಳಿಯಿದ್ದ 800 ನಾಯಿಗಳ ಮೇಲೆ ಆತನಿಗೆ ಹುಚ್ಚು ಪ್ರೀತಿ. ಅವುಗಳನ್ನು ನೋಡಿಕೊಳ್ಳುವ ಸಲುವಾಗಿಯೇ ಜನರ ನೇಮಕ ಮಾಡಿದ್ದ. ಅವುಗಳ ಪೈಕಿ ಒಂದು ಜೋಡಿಗೆ ಮದುವೆ ಮಾಡುವುದಕ್ಕೆ 20 ಲಕ್ಷ ರುಪಾಯಿ ಖರ್ಚು ಮಾಡಿದ್ದ. ಅಷ್ಟೇ ಅಲ್ಲ, ಆ ದಿನ ಸಾರ್ವಜನಿಕ ರಜಾ ಘೋಷಣೆ ಕೂಡ ಮಾಡಿದ್ದ.

ಆ ನವಾಬ್ ನ ದಿವಾನರಾಗಿದ್ದದ್ದು ಷಾನವಾಜ್ ಭುಟ್ಟೋ (ಕರಾಚಿ ಮೂಲದ, ಮುಸ್ಲಿಂ ಲೀಗ್ ನ ರಾಜಕಾರಣಿ ಹಾಗೂ ಝುಲ್ಫೀಕರ್ ಅಲಿ ಭುಟ್ಟೋನ ತಂದೆ). ಸರ್ದಾರ್ ವಲ್ಲಭ ಭಾಯ್ ಪಟೇಲ್ ಆಗಿನ ಸನ್ನಿವೇಶವನ್ನು ನಿಭಾಯಿಸಿದ ರೀತಿಯನ್ನೇ ಬಳಸಿಕೊಂಡ ಭುಟ್ಟೋ, ಆ ನಂತರ ಭಾರತದ ಜತೆಗೆ ಎಂದೂ ಮುಗಿಯದ ಯುದ್ಧವೊಂದಕ್ಕೆ ನಾಂದಿ ಹಾಡಿದ್ದು ಬೇರೆ ಮಾತು.

ಜುನಾಗಢ, ತಿರುವಾಂಕೂರ್, ಹೈದರಾಬಾದ್, ಕಾಶ್ಮೀರದ ಸಮಸ್ಯೆ

ಜುನಾಗಢ, ತಿರುವಾಂಕೂರ್, ಹೈದರಾಬಾದ್, ಕಾಶ್ಮೀರದ ಸಮಸ್ಯೆ

552 ರಾಜ್ಯಗಳನ್ನು ಭಾರತದೊಳಕ್ಕೆ ಸೇರಿಸುವ ಸವಾಲಿನ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದರು. ಆದರೆ ಜುನಾಗಢ, ತಿರುವಾಂಕೂರ್, ಹೈದರಾಬಾದ್ ಹಾಗೂ ಕಾಶ್ಮೀರದ ವಿಚಾರದಲ್ಲಿ ಬಹಳ ಸಮಸ್ಯೆಯಿತ್ತು. ಆ ಕಾರಣಕ್ಕೆ ಭಾರತೀಯರ ಹೃದಯದಲ್ಲಿ ಪಟೇಲ್ ರ ಸ್ಥಾನ ಹಾಗೇ ಉಳಿದಿದೆ. ಕಾಶ್ಮೀರದ ವಿಚಾರ ಹೇಗೆ ಗೊಂದಲ ಇತ್ತೋ, ಅದೇ ರೀತಿ ಜುನಾಗಢದ ಸಮಸ್ಯೆ ಇತ್ತು. ಏಕೆಂದರೆ ಅವರು ಅದೇ ಭಾಗದವರಾಗಿದ್ದರು. ಜುನಾಗಢ ಈಗ ಗುಜರಾತ್ ನ ಭಾಗ. ಪಟೇಲ್ ಅದೇ ರಾಜ್ಯದವರು. ಅಲ್ಲಿನ ಜನರ ಇಚ್ಛೆಗೆ ವಿರುದ್ಧವಾಗಿ ಹಾಗೂ ಹೊಸದಾಗಿ ನೇಮಿಸಿಕೊಡಿದ್ದ ದಿವಾನ್ ಷಾನವಾಜ್ ಸಲಹೆ ಮೇರೆಗೆ ಜುನಾಗಢವನ್ನು ಪಾಕಿಸ್ತಾನಕ್ಕೆ ಸೇರಿಸಬೇಕು ಎಂಬುದು ಅಲ್ಲಿನ ನವಾಬನ ಇರಾದೆಯಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಸಲಹೆಗೆ ವಿರುದ್ಧವಾಗಿಯೂ ನವಾಬ್ ಆಗಸ್ಟ್ 15, 1947ರಲ್ಲಿ ಪಾಕಿಸ್ತಾನವನ್ನು ಒಪ್ಪಿಕೊಂಡ. ಸಮುದ್ರದ ಮೂಲಕ ಜುನಾಗಢವು ಪಾಕಿಸ್ತಾನದ ಜತೆ ಸಂಪರ್ಕ ಹೊಂದಿದೆ ಎಂಬುದು ಅವನ ವಾದವಾಗಿತ್ತು. ಈ ವಿಚಾರವನ್ನು ಭಾರತ ಸರಕಾರಕ್ಕೂ ತಿಳಿಸಲಿಲ್ಲ.

ಮೌಂಟ್ ಬ್ಯಾಟನ್ ಮೂರು ಸೂತ್ರ

ಮೌಂಟ್ ಬ್ಯಾಟನ್ ಮೂರು ಸೂತ್ರ

ಈ ಒಪ್ಪಿಗೆಯನ್ನು ವಾಪಸ್ ಪಡೆಯುವಂತೆ ಪಟೇಲ್ ರು ಪಾಕಿಸ್ತಾನಕ್ಕೆ ಕೇಳಿದರು. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸೋಣ ಎಂದರು. ವಿ.ಪಿ.ಮೆನನ್ ನೆರವಿನಿಂದ ಈ ಸಮಸ್ಯೆ ನಿವಾರಿಸಲು ಅವರು ಯತ್ನಿಸಿದರು. ಜುನಾಗಢವು ಪಾಕಿಸ್ತಾನಕ್ಕೆ ಸೇರಿಬಿಟ್ಟರೆ ಭಾರತವು ಇನ್ನಷ್ಟು ಹೋಳಾಗುವ ಸೂಚನೆಗಳು ಕಂಡವು. ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದ್ದ ಜುನಾಗಢದ ವಿಷಯದಲ್ಲಿ ಮೌಂಟ್ ಬ್ಯಾಟನ್ ಮೂಗು ತೂರಿಸಲು ಯತ್ನಿಸುತ್ತಿದ್ದದ್ದು ಗೊತ್ತಾಯಿತು.ಮಹಮ್ಮದ್ ಅಲಿ ಜಿನ್ನಾ ನಿರ್ಧಾರದಲ್ಲಿ ಬ್ಯಾಟನ್ ಗೆ ಯಾವ ಹಿಡಿತ ಇಲ್ಲದಿದ್ದರೂ ತಾನು ಗವರ್ನರ್ ಜನರಲ್ ಎನ್ನುವ ಸ್ಥಾನ ಉಪಯೋಗಿಸಲು ತೀರ್ಮಾನಿಸಿದಂತಿತ್ತು. ಅದಕ್ಕಾಗಿ ಮೂರು ಸೂತ್ರ ಕೂಡ ಆತ ರೂಪಿಸಿದ್ದ. ಮೊದಲನೆಯದಾಗಿ ಜುನಾಗಢದ ವಿಚಾರವನ್ನು ವಿಶ್ವಸಂಸ್ಥೆಗೆ ಒಪ್ಪಿಸುವುದು, ಎರಡನೇದಾಗಿ ಭಾರತೀಯ ಸೇನೆ ಜುನಾಗಢವನ್ನು ಪ್ರವೇಶಿಸಬಾರದು. ಮೂರನೆಯದಾಗಿ ಜುನಾಗಢದಲ್ಲಿ ಜನಮತ ಸಂಗ್ರಹ.

ಪಾಕಿಸ್ತಾನದ ಜತೆ ನೆಲದ ಮೂಲಕ ಸಂಪರ್ಕ ಇರಲಿಲ್ಲ

ಪಾಕಿಸ್ತಾನದ ಜತೆ ನೆಲದ ಮೂಲಕ ಸಂಪರ್ಕ ಇರಲಿಲ್ಲ

ಆದರೆ, ಭಾರತದ ವಾದಕ್ಕೆ ಪುಷ್ಟಿ ನೀಡುವಂಥ ಅಂಶಗಳು ಜುನಾಗಢದ ವಿಚಾರದಲ್ಲಿ ಇದ್ದವು. ಜೋಧ್ ಪುರದ ರೀತಿಯಲ್ಲಿ ಜುನಾಗಢಕ್ಕೆ ಪಾಕಿಸ್ತಾನದ ಜತೆಗೆ ರಸ್ತೆ ಮೂಲಕ ಸಂಪರ್ಕ ಇರಲಿಲ್ಲ. ಕರಾಚಿ ಜತೆಗೆ ಸಂಪರ್ಕ ಕಲ್ಪಿಸಿಕೊಳ್ಳಲು ವೆರವಲ್ ಬಂದರಿನ ಮೂಲಕವೇ ಆಗಬೇಕಿತ್ತು. ಅದು ಮುನ್ನೂರು ಕಿ.ಮೀ. ದೂರದಲ್ಲಿತ್ತು. ಜುನಾಗಢವನ್ನು ಪಾಕಿಸ್ತಾನಕ್ಕೆ ಸೇರಿಸಬೇಕು ಎಂಬ ನಿರ್ಧಾರ ಗೊತ್ತಾದ ಕೂಡಲೇ ನವನಗರ್, ಭಾವ್ ನಗರ್, ಮೊರ್ವಿ, ಗೊಂಡಲ್, ಪೋರ್ ಬಂದರ್ ಹಾಗೂ ವಾಂಕನೇರ್ ನಲ್ಲಿ ಆಡಳಿತ ನಡೆಸುತ್ತಿದ್ದವರು ಸರ್ದಾರ್ ವಲ್ಲಭಭಾಯ್ ಪಟೇಲ್ ಪರ ನಿಂತರು. ಜುನಾಗಢವು ವಿವಾದಿತ ವಿಚಾರವಲ್ಲ, ಪಾಕಿಸ್ತಾನದ ಹಸ್ತಕ್ಷೇಪ ಅಷ್ಟೇ ಎಂದ ಪಟೇಲ್, ವಿಶ್ವಸಂಸ್ಥೆಗೆ ಹೋಗಿ ಎನ್ನುವ ಬ್ಯಾಟನ್ ಸಲಹೆಯನ್ನು ತಿರಸ್ಕರಿಸಿದರು. ಪ್ರಧಾನಿ ನೆಹರೂಗೆ ತಮ್ಮ ಸಲಹೆ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ಬ್ಯಾಟನ್ ಗೆ ಇತ್ತು. ಅದು ಈಡೇರಲಿಲ್ಲ.

ಅಭೂತಪೂರ್ವ ಸ್ವಾಗತ ದೊರೆಯಿತು

ಅಭೂತಪೂರ್ವ ಸ್ವಾಗತ ದೊರೆಯಿತು

ಸೈನ್ಯ ಬೇಡ ಕೇಂದ್ರೀಯ ಮೀಸಲು ಪಡೆಯ ಪೊಲೀಸರನ್ನು ಮಾತ್ರ ಬಳಸಿ ಎಂಬ ಬ್ಯಾಟನ್ ಸಲಹೆ ಕೂಡ ತಿರಸ್ಕರಿಸಲಾಯಿತು. ಬಾಬರಿಯವಾಡ್ ಹಾಗೂ ಮಂಗರೋಲ್ ಪ್ರವೇಶಕ್ಕೆ ಸೈನ್ಯಕ್ಕೆ ಅನುಮತಿ ನೀಡಬಾರದು ಎಂಬುದನ್ನು ಸಹ ಕೇಳಿಸಿಕೊಳ್ಳಲಿಲ್ಲ. ಈ ಎಲ್ಲ ಸಲಹೆಗಳು ಅನಗತ್ಯ ಅಪಾಯಗಳನ್ನೇ ಆಹ್ವಾನಿಸುವಂತಿತ್ತು. ಈ ಕಾರ್ಯಾಚರಣೆ ಸೈನ್ಯದಿಂದಲೇ ಆಗಬೇಕು ಎಂಬ ಬಗ್ಗೆ ಪಟೇಲ್ ಗೆ ಸ್ಪಷ್ಟತೆ ಇತ್ತು. ಆ ಕಾರಣಕ್ಕೆ ಮೌಂಟ್ ಬ್ಯಾಟನ್ ಗೆ ಯಾವುದೇ ಮಾಹಿತಿ ನೀಡದೆ ಭಾರತ ಸರಕಾರ ತನ್ನ ಕಾರ್ಯಾಚರಣೆ ನಡೆಸಿತು. ನವೆಂಬರ್ 9, 1947ರಂದು ಭಾರತ ಸರಕಾರವು ಜುನಾಗಢವನ್ನು ವಶಕ್ಕೆ ಪಡೆಯಿತು. 13ನೇ ತಾರೀಕು ಅಲ್ಲಿಗೆ ಭೇಟಿ ನೀಡಿದ ಸರ್ದಾರ್ ಪಟೇಲ್ ಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಅಲ್ಲಿನ ಬಹಾವುದ್ದೀನ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ನಿಮ್ಮ ಇಚ್ಛೆ ಪೂರೈಸಲು ಭಾರತ ಬದ್ಧವಾಗಿದೆ ಎಂದರು. ನೀವು ಭಾರತದ ಜತೆ ಇರಲು ಬಯಸುತ್ತೀರೋ ಅಥವಾ ಪಾಕಿಸ್ತಾನ ಸೇರಬಯಸುತ್ತೀರೋ ಎಂದು ಕೇಳಿದಾಗ, ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾರತದ ಜತೆ ಇರುವುದಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

ಸೋಮನಾಥ್ ದೇವಾಲಯ ಜೀರ್ಣೋದ್ಧಾರಕ್ಕೆ ಪ್ರಸ್ತಾವ ಸಲ್ಲಿಸಿದರು

ಸೋಮನಾಥ್ ದೇವಾಲಯ ಜೀರ್ಣೋದ್ಧಾರಕ್ಕೆ ಪ್ರಸ್ತಾವ ಸಲ್ಲಿಸಿದರು

ಆ ನಂತರ ಸೋಮನಾಥ್ ದೇವಾಲಯಕ್ಕೆ ಪಟೇಲ್ ಭೇಟಿ ನೀಡಿದರು. ದೇವಸ್ಥಾನ ಬಹಳ ಕೆಟ್ಟ ಸ್ಥಿತಿಯಲ್ಲಿತ್ತು. ಆ ತಕ್ಷಣವೇ ದೇವಾಲಯದ ಜೀರ್ಣೋದ್ಧಾರ ಮಾಡಲು ಪ್ರಸ್ತಾವ ಮಾಡಿದರು. ಇನ್ನು ಭಾರತದ ಸೈನಿಕರು ಜುನಾಗಢವನ್ನು ಪ್ರವೇಶಿದರು. ಅವರ ಜತೆಗೆ ಭಾವ್ ನಗರ್, ನವ್ ನಗರ್, ಪೋರ್ ಬಂದರ್ ನಲ್ಲಿನ ಸೈನ್ಯವೂ ಜತೆಯಾಯಿತು. ರಾತ್ರೋರಾತ್ರಿ ಭುಟ್ಟೋ ದೇಶ ಬಿಟ್ಟು ಹೋಗಿ, ಆ ರಾಜ್ಯದ ಖಜಾನೆಯೂ ಒಳಗೊಂಡಂತೆ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು. ಮುಖ್ಯ ಅಧಿಕಾರಿಗಳು ಸೈನ್ಯದ ಜತೆಗೆ ಜುನಾಗಢದ ಹಲವು ಪ್ರಮುಖ ಸ್ಥಳಗಳಿಗೆ ತೆರಳಿ, ಶಾಂತಿಯುತವಾಗಿ ಎಲ್ಲವನ್ನೂ ವಶಕ್ಕೆ ಪಡೆದರು. ಆ ವೇಳೆ ಜುನಾಗಢದ ಮುಖ್ಯ ಕಾರ್ಯದರ್ಶಿ ಆಗಿದ್ದವರು ಅಧಿಕೃತವಾಗಿ ರಾಜ್ಯದ ಜವಾಬ್ದಾರಿಯನ್ನು ಭಾರತ ಸರಕಾರಕ್ಕೆ ಹಸ್ತಾಂತರಿಸಿದರು. ಭಾರತವನ್ನು ಎದುರಿಸುವಷ್ಟು ಸಂಪನ್ಮೂಲ ಜುನಾಗಢದ ಬಳಿ ಇರಲಿಲ್ಲ. ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವಂತೆ ಸರಕಾರಕ್ಕೆ ಆಹ್ವಾನ ಬಂತು. ಜುನಾಗಢದಲ್ಲಿ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಹಿಂದೂ ಅಲ್ಲದ, ಮುಸ್ಲಿಂ ಅಲ್ಲದ ಐಸಿಎಸ್ ಹಿರಿಯ ನ್ಯಾಯಾಧಿಕಾರಿಯನ್ನು ಅಲ್ಲಿ ನಿಗಾ ಮಾಡುವುದಕ್ಕೆ ನೇಮಕ ಮಾಡಲಾಯಿತು. ಆ ನಂತರ ಎಲ್ಲವೂ ಭಾರತದ ಪರ ಸರಾಗವಾಗಿ ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+