ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಒಂದು ವರ್ಷ; ಸಂತ್ರಸ್ತರ ಸ್ಥಿತಿ ಆ ದೇವರಿಗೇ ಪ್ರೀತಿ

Recommended Video

      ಒಂದು ವರ್ಷದಿಂದ ನಡೆದಿಲ್ಲ ಪೂಜೆ ಪುನಸ್ಕಾರ | CHAMARAJANAGAR | ONEINDIA KANNADA

      ಚಾಮರಾಜನಗರ, ಡಿಸೆಂಬರ್ 14: ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಹೊರವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಿ ಆ ಊರವರ ಇಷ್ಟದೈವ. ಆದರೆ ಆ ಒಂದು ದಿನ ದೇವಿಯ ಪ್ರಸಾದಕ್ಕೆ ಕಿಡಿಗೇಡಿಗಳು ವಿಷ ಬೆರೆಸಿ ಭಕ್ತರಿಗೆ ನೀಡಿದ್ದರಿಂದ ಆದ ಪ್ರಮಾದ ಇವತ್ತಿಗೂ ಯಾರೂ ಮರೆಯುವಂತಿಲ್ಲ. ಈ ಒಂದು ಭೀಕರ ಘಟನೆಗೆ ಇಂದು, ಅಂದರೆ ಡಿಸೆಂಬರ್ 14ಕ್ಕೆ ಒಂದು ವರ್ಷ.

      ದೇವಿಯ ದರ್ಶನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಪ್ರಾಣ ಬಿಟ್ಟವರ ಸಂಖ್ಯೆ 17. ಹಾಗೆಯೇ ಸಂತ್ರಸ್ತರಾದವರು 129 ಮಂದಿ. ಅಂದು ಸಂತ್ರಸ್ತರಾದವರ ಪರಿಸ್ಥಿತಿ ಇಂದಿಗೂ ನೆಟ್ಟಗಿಲ್ಲ. ಇವರ ಪೈಕಿ ಕೆಲವರು ಅಂಗವಿಕಲರಾಗಿದ್ದಾರೆ. ಮತ್ತೆ ಕೆಲವರಿಗೆ ಕೆಲಸ ಮಾಡಲಾಗುತ್ತಿಲ್ಲ. ಸ್ವಲ್ಪ ಓಡಾಡಿದರೂ ಅಲ್ಲಿಯೇ ಕುಸಿದು ಬೀಳುತ್ತಾರೆ. ದುಡಿದೇ ಬದುಕಬೇಕಾದ ಜನ ದುಡಿಯಲಾಗದೆ ಜೀವಂತವಾಗಿದ್ದರೂ ಶವದಂತೆ ಬದುಕಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.

      ದುರಂತದ ಕರಾಳ ನೆನಪು

      ದುರಂತದ ಕರಾಳ ನೆನಪು

      ಇವತ್ತಿಗೂ 2018ರ ಡಿಸೆಂಬರ್ 14ರ ಆ ದುರಂತದ ಕರಾಳ ನೆನಪು ಎಲ್ಲರ ಮನಃ ಪಟಲದಲ್ಲಿ ಕಹಿಯಾಗಿ ಉಳಿದಿದೆ. ಯಾರದೋ ಕಿಚ್ಚಿಗೆ ಬಲಿಯಾದ ಅಮಾಯಕ ಜೀವಗಳು ಕಣ್ಣ ಮುಂದೆ ಬರುತ್ತದೆ. ಕಾಡಂಚಿನಲ್ಲಿದ್ದ ದೇಗುಲವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳಲು ಮಾಡಿದ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ಕಿರಿಯ ಇಮ್ಮಡಿ ಮಹದೇವಸ್ವಾಮೀಜಿಯ ಕೃತ್ಯವನ್ನು ಯಾರೂ ಸಹಿಸಲಾರರು. ಶಕ್ತಿ ದೇವತೆಯ ದೇವಾಲಯದ ಟ್ರಸ್ಟಿಗಳ ನಡುವಿನ ದ್ವೇಷಾಗ್ನಿಯ ಕಿಚ್ಚು ಈ ಮಟ್ಟಕ್ಕೆ ಹೊತ್ತಿ ಉರಿಯಬಹುದೆಂದು ಯಾರೂ ಊಹಿಸಿರಲಿಲ್ಲ. ಅಷ್ಟೇ ಅಲ್ಲ ಒಬ್ಬ ಸ್ವಾಮೀಜಿ ದುರ್ಘಟನೆಯ ಸೂತ್ರಧಾರಿ ಎಂಬುದು ಊಹೆಗೂ ನಿಲುಕದ್ದಾಗಿತ್ತು.

       ನೋಡನೋಡುತ್ತಿದ್ದಂತೆ ಹೋಯಿತು ಪ್ರಾಣ

      ನೋಡನೋಡುತ್ತಿದ್ದಂತೆ ಹೋಯಿತು ಪ್ರಾಣ

      ಅಂದು ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಯಾರೂ ಕನಸಿನಲ್ಲಿಯೂ ನಿರೀಕ್ಷೆ ಮಾಡಿರದ ದುರ್ಘಟನೆಯೊಂದು ನಡೆದು ಹೋಯಿತು. ಅಂದು ಶುಕ್ರವಾರವಾದ ಕಾರಣ ಮಾರ್ಟಳ್ಳಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಶಕ್ತಿ ದೇವತೆ ಮಾರಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಹಾಗೆ ಬಂದ ಭಕ್ತರಿಗೆ ದೇವರಿಗೆ ಮಾಡಿದ್ದ ನೈವೇದ್ಯವನ್ನು ಪ್ರಸಾದವಾಗಿ ವಿತರಿಸಲಾಗಿತ್ತು. ಎಲ್ಲ ಭಕ್ತರು ಭಕ್ತಿಯಿಂದ ದೇವರ ಪ್ರಸಾದವನ್ನು ಕಣ್ಣಿಗೊತ್ತಿಕೊಂಡು ಸ್ವೀಕರಿಸಿದ್ದರು. ಆದರೆ ಪ್ರಸಾದ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಹೊಟ್ಟೆ ನೋವು, ವಾಂತಿಯಿಂದ ಜನ ನರಳಾಡತೊಡಗಿದ್ದರು. ಆ ತಕ್ಷಣಕ್ಕೆ ಯಾರಿಗೂ ದೇವಾಲಯದ ಆಸ್ತಿ ಅಧಿಕಾರ ಕಬಳಿಸುವ ಸಲುವಾಗಿ ದ್ವೇಷದ ಕಿಚ್ಚಿಗೆ ಪ್ರಸಾದ ವಿಷವಾಗಿದೆ ಎಂಬ ಚಿಕ್ಕ ಅನುಮಾನವೂ ಇರಲಿಲ್ಲ. ಆದರೆ ನೋಡನೋಡುತ್ತಿದ್ದಂತೆ ಕೆಲವರು ಪ್ರಾಣವನ್ನೇ ಕಳೆದುಕೊಂಡರು.

       ಪ್ರಸಾದಕ್ಕೆ ವಿಷ ಬೆರೆಸುವ ಹಿಂದಿನ ಉದ್ದೇಶವೇನಿತ್ತು?

      ಪ್ರಸಾದಕ್ಕೆ ವಿಷ ಬೆರೆಸುವ ಹಿಂದಿನ ಉದ್ದೇಶವೇನಿತ್ತು?

      ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟ್ರಸ್ಟ್ ರಚನೆಯಾಯಿತು. ಆ ಟ್ರಸ್ಟ್ ಗೆ ಅಧ್ಯಕ್ಷರಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ಕಿರಿಯ ಇಮ್ಮಡಿ ಮಹದೇವ ಸ್ವಾಮೀಜಿಯನ್ನು ನೇಮಕ ಮಾಡಲಾಗಿತ್ತು. ಏಳೆಂಟು ಮಂದಿ ಟ್ರಸ್ಟಿಗಳಿದ್ದರು. ಇದೆಲ್ಲದರ ನಡುವೆ ಟ್ರಸ್ಟ್‌ನ ಮ್ಯಾನೇಜರ್ ಪತ್ನಿ ಅಂಬಿಕಾಗೂ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿಗೂ ನಂಟು ಇದ್ದಿದ್ದರಿಂದಾಗಿ ಆಕೆಯೇ ಟ್ರಸ್ಟ್‌ನ ಅಧ್ಯಕ್ಷಳಂತೆ ವರ್ತಿಸಲು ಶುರು ಮಾಡಿದ್ದಳು. ದಿನಕಳೆದಂತೆ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಆಡಳಿತದ ಅಧಿಕಾರ ಹಿಡಿಯಲು ಹಾತೊರೆಯುತ್ತಿದ್ದಳು. ಇದಕ್ಕೆ ಬೆಂಗಾವಲಾಗಿ ನಿಂತಿದ್ದು ಬೃಹನ್ಮಠದ ಕಿರಿಯ ಇಮ್ಮಡಿ ಸ್ವಾಮೀಜಿ.

       ಮಾಸುವುದಿಲ್ಲ ಆ ದುರಂತದ ಕ್ಷಣ

      ಮಾಸುವುದಿಲ್ಲ ಆ ದುರಂತದ ಕ್ಷಣ

      ಪ್ರಸಾದಕ್ಕೆ ವಿಷ ಬೆರೆಸಿ ಒಂದಷ್ಟು ಮಂದಿಗೆ ಆರೋಗ್ಯ ಏರುಪೇರಾಗಿ ದೇವಸ್ಥಾನದ ಟ್ರಸ್ಟ್‌ಗೆ ಕೆಟ್ಟ ಹೆಸರು ತರಬೇಕೆಂಬುದು ಅವರ ಇರಾದೆಯಾಗಿತ್ತು. ಹೀಗಾಗಿಯೇ ಅವರು ಟೊಮೋಟೋ ಬಾತ್ ಮಾಡಿ ಅದರಲ್ಲಿ ಕ್ರಿಮಿನಾಶಕ ಬೆರೆಸಿ ಭಕ್ತರಿಗೆ ಹಂಚಿದ್ದರು. ಆದರೆ ಅಂದು ಆಗಿದ್ದೇ ಬೇರೆ. ವಿಷಕ್ಕೆ 17 ಮಂದಿ ಅಮಾಯಕರು ಪ್ರಾಣ ಬಿಟ್ಟರು. 129 ಮಂದಿ ಪ್ರಾಣಾಪಾಯದಿಂದ ಪಾರಾದರೂ ಒಂದಲ್ಲ ಒಂದು ತೊಂದರೆಯಿಂದ ಬಳಲುತ್ತಿದ್ದಾರೆ. ಇಂದಿಗೂ ಈ ದೇವಾಲಯದ ಸುತ್ತಲಿನ ಗ್ರಾಮಗಳಾದ ಬಿದರಳ್ಳಿ, ಮಾರ್ಟಳ್ಳಿ, ಸುಳ್ವಾಡಿ, ಎಂ.ಜಿ.ದೊಡ್ಡಿ ಹೀಗೆ ಹಲವು ಗ್ರಾಮಗಳ ಜನ ಆ ದುರಂತದ ಕ್ಷಣಗಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಿದ್ದಾರೆ.

      ನಾಲ್ವರ ಬಂಧಿಸಿದ ತನಿಖಾ ತಂಡ

      ನಾಲ್ವರ ಬಂಧಿಸಿದ ತನಿಖಾ ತಂಡ

      ಘಟನೆಗೆ ಸಂಬಂಧಿಸಿದಂತೆ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕೊಳ್ಳೇಗಾಲ ಪೊಲೀಸ್ ಇಲಾಖೆಯ ಡಿವೈಎಸ್ ‌ಪಿ ಪುಟ್ಟಮಾದಯ್ಯರವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಡಿಸೆಂಬರ್ 19ರಂದು ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ, ಟ್ರಸ್ಟ್‌ನ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಮತ್ತು ದೊಡ್ಡಯ್ಯ ತಂಬಡಿ ಎಂಬುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು.

      ಅಂದಿನ ಮುಖ್ಯಮಂತ್ರಿ ಕುಮಾರಸ್ಬಾಮಿರವರು ಕಳೆದ ವರ್ಷ ಡಿಸೆಂಬರ್ 25ರಂದು ಬಿದರಳ್ಳಿಗೆ ಆಗಮಿಸಿ ಸಾಂತ್ವನ ಹೇಳುವ ಮೂಲಕ ನೊಂದವರ ನೆರವಿಗೆ ಜಿಲ್ಲಾಡಳಿತ ಸಹಕರಿಸುವಂತೆ ಸೂಚನೆ ನೀಡಿದರು.

       ವರ್ಷದಿಂದ ನಡೆದಿಲ್ಲ ಪೂಜೆ ಪುನಸ್ಕಾರ

      ವರ್ಷದಿಂದ ನಡೆದಿಲ್ಲ ಪೂಜೆ ಪುನಸ್ಕಾರ

      ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ನಾಲ್ವರು ಆರೋಪಿಗಳು ಜೈಲಿನಿಂದ ಬಿಡುಗಡೆಗೆ ಸುಪ್ರೀಂ ಕೋರ್ಟ್ ತನಕ ಹೋಗಿ ವಿಫಲರಾಗಿ ಜೈಲು‌ವಾಸ ಕಾಯಂ ಮಾಡಿಕೊಂಡಿದ್ದಾರೆ. ವರ್ಷದಿಂದ ಪೂಜೆ ಕಾಣದ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಇದೀಗ ಮುಜರಾಯಿ ಇಲಾಖೆ ವಶಕ್ಕೆ ಬಂದಿದ್ದರೂ ಪೂಜೆ ಪುರಸ್ಕಾರ ಆರಂಭವಾಗಿಲ್ಲ. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ವಿಷ ಪ್ರಸಾದ ಘಟನೆಯಿಂದ ಸುಳ್ವಾಡಿ ಭಾಗದ ಜನರು ಇನ್ನೂ ಹೊರ ಬಂದಿಲ್ಲ. ಇವರಿಗೆ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಮುಂದಾಗಬೇಕಾಗಿದೆ. ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಬೇಕಾಗಿದೆ. ಬಡವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಅವರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+