ಓಮಿಕ್ರಾನ್ ಭೀತಿ: ಆನ್ಲೈನ್ ತರಗತಿಯತ್ತ ಖಾಸಗಿ ಶೈಕ್ಷಣಿಕ ಸಂಸ್ಥೆಗಳು!
ಕೊರೊನಾ ಮೂರನೇ ಅಲೆ ರಾಜ್ಯಕ್ಕೆ ಪ್ರವೇಶಿಸಿರುವುದು ನಿಶ್ಚಿತ ಎನ್ನುವಂತೆ, ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಓಮ್ರಿಕಾನ್ ಪ್ರಕರಣಗಳು ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಜನವರಿ ಮೂರರ ವರದಿಯಂತೆ 77ಕ್ಕೆ ಏರಿಕೆಯಾಗಿದೆ. ಸತತವಾಗಿ ಬೆಂಗಳೂರಿನಲ್ಲಿ ದಿನವೊಂದರ ಪ್ರಕರಣ ಸಾವಿರದ ಗಡಿ ದಾಟುತ್ತಿದೆ.
ಸರಕಾರದ ಮುಂದೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಸಚಿವರುಗಳು ಆದಿಯಾಗಿ ಅಧಿಕಾರಿಗಳು ಹೇಳುತ್ತಿದ್ದರೂ, ಸರಕಾರ ಅಂತಿಮ ಅಸ್ತ್ರ ಅದೇ ಆಗಲಿದೆ ಎನ್ನುವುದು ನಿಶ್ಚಿತ. ಈ ನಡುವೆ, ಕೋವಿಡ್ ಮುಂಜಾಗೃತ ಸಂಬಂಧ ಕರೆಯಲಾಗಿರುವ ಸಭೆ ಇಂದೇ (ಜ 4) ನಡೆಯಲಿದೆ. ಜನವರಿ ಐದಕ್ಕೆ ಸರಕಾರದ ಮುಂದಿನ ಕ್ರಮ ಏನು ಎನ್ನುವುದು ಅಂತಿಮವಾಗಲಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಹರಡಲು ಶಿಕ್ಷಣ ಸಂಸ್ಥೆಗಳು ಪ್ರಮುಖ ಕಾರಣ ಎನ್ನುವ ನಿರ್ಧಾರಕ್ಕೆ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ ಎನ್ನುವ ಮಾಹಿತಿಯಿದೆ. ಈ ನಿಟ್ಟಿನಲ್ಲಿ, ಶಾಲಾ, ಕಾಲೇಜನ್ನು ಮತ್ತೆ ಬಂದ್ (ಆಫ್ಲೈನ್ ಕ್ಲಾಸ್) ಮಾಡುವ ಶಿಫಾರಸನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುವ ಸಾಧ್ಯತೆಯಿದೆ.
ಕೋವಿಡ್ ಸೋಂಕು ತೀವ್ರವಾಗಿ ಉಲ್ಬಣಗೊಳ್ಳುತ್ತಿರುವುದರಿಂದ, ಕೆಲವೊಂದು ಖಾಸಗಿ ಶಾಲೆಗಳು ಮತ್ತೆ ಆನ್ಲೈನ್ ತರಗತಿಯತ್ತ ಮುಖ ಮಾಡುತ್ತಿವೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಏರುತ್ತಿರುವುದರಿಂದ ಎಚ್ಚರಿಕೆಯ ಕ್ರಮವಾಗಿ ನಿಧಾನವಾಗಿ ಶಾಲೆಗಳು ಆಫ್ಲೈನ್ ತರಗತಿಯನ್ನು ಸದ್ಯಕ್ಕೆ ನಿಲ್ಲಿಸಲು ಮುಂದಾಗುತ್ತಿವೆ.

ಆರೋಗ್ಯ ಇಲಾಖೆ ಬೆಂಗಳೂರು ನಗರವನ್ನು ರೆಡ್ ಝೋನ್ ಪಟ್ಟಿಯಲ್ಲಿ ಸೇರಿಸಲು ಶಿಫಾರಸು
ಕೇಂದ್ರ ಆರೋಗ್ಯ ಇಲಾಖೆ ಬೆಂಗಳೂರು ನಗರವನ್ನು ರೆಡ್ ಝೋನ್ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿದೆ. ಒಂದು ವೇಳೆ ಕೆಂಪು ಪಟ್ಟಿಗೆ ಸರಕಾರದ ಮೇಲೆ ತೀವ್ರ ಒತ್ತಡ ಬೀಳಲಿದೆ. ಶಾಲಾ ಕಾಲೇಜು, ಚಲನಚಿತ್ರ ಮಂದಿರ, ಧಾರ್ಮಿಕ ಕೇಂದ್ರಗಳು, ಜಿಮ್, ಉದ್ಯಾನವನ ಬಂದ್ ಮಾಡದೇ ಬೇರೆ ದಾರಿ ಇರುವುದಿಲ್ಲ. ಇದು ಆರ್ಥಿಕ ಚಟುವಟಿಕೆಯ ಮೇಲೂ ಪರಿಣಾಮ ಬೀರಲಿದೆ. ಮಕ್ಕಳ ಹಿತಾದೃಷ್ಟಿಯಿಂದ ಸರಕಾರದ ನಿರ್ಧಾರ ಅಂತಿಮವಾಗುವ ಮುನ್ನವೇ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಆನ್ಲೈನ್ ಕ್ಲಾಸ್ ಎಂದು ಸರ್ಕ್ಯೂಲರ್ ಹೊರಡಿಸಿದೆ.

ಕೊನೆಯ ಅಸ್ತ್ರವಾಗಿ ಶಾಲೆ ಬಂದ್ ಮಾಡುವ ನಿರ್ಧಾರಕ್ಕೆ ಬರಬೇಕು
ಆದರೆ, ರಾಜ್ಯದ ಹೆಚ್ಚಿನ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಾಲೆ ಬಂದ್ ಮಾಡಬೇಡಿ ಎಂದು ಸರಕಾರಕ್ಕೆ ಮನವಿ ಮಾಡಿವೆ. ಸರಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಶಾಲಾ, ಕಾಲೇಜುಗಳಲ್ಲಿ ಚಾಚೂತಪ್ಪದೇ ಪಾಲಿಸಲಾಗುತ್ತಿದೆ. ಹೊಸ ನಿರ್ಬಂಧವನ್ನು ಹೇರುವುದಕ್ಕೆ ಸ್ವಾಗತವಿದೆ ಎಂದು ಹೇಳಿರುವ ಖಾಸಗಿ ಶಾಲೆಗಳು, ಕೊನೆಯ ಅಸ್ತ್ರವಾಗಿ ಶಾಲೆ ಬಂದ್ ಮಾಡುವ ನಿರ್ಧಾರಕ್ಕೆ ಬರಬೇಕು ಎಂದು ಖಾಸಗಿ ಶಾಲಾ ಮಂಡಳಿಯವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್
"ನಿರಂತರ ಕಲಿಕೆ ಎನ್ನುವುದು ಸಾಗುತ್ತಲೇ ಇರಬೇಕು, ಶಿಕ್ಷಣ ಸಂಸ್ಥೆಗಳಿಗೆ ರಜೆ ಕೊಡುವ ನಿರ್ಧಾರಕ್ಕೆ ಬರಬಾರದು. ಎಲ್ಲಾ ವಲಯಗಳಿಗೆ ಲಾಕ್ಡೌನ್ ಮಾಡಲೇ ಬೇಕಾದ ಅನಿವಾರ್ಯತೆ ಉಂಟಾದರೆ, ಅದಾದ ನಂತರ ಶಾಲೆ ಮುಚ್ಚುವ ಬಗ್ಗೆ ನಿರ್ಧಾರ ತೆಗೆದುಕೊಳ್ಲಬೇಕು. ವಿಶೇಷ ಮಾರ್ಗಸೂಚಿಯ ಮೂಲಕ ನಿರಂತರ ಕಲಿಕೆಗೆ ಅನ್ಯಾಯವಾಗದಂತೆ, ಮಕ್ಕಳ ಶಿಕ್ಷಣಕ್ಕೆ ಒತ್ತನ್ನು ಕೊಡಬೇಕಾಗುತ್ತದೆ. ಬೇರೆ ದೇಶಗಳಲ್ಲಿ ಮಕ್ಕಳು ಶೈಕ್ಷಣಿಕರಾಗಿ ವಂಚಿತರಾಗದಂತೆ ನೋಡಿಕೊಳ್ಳಲಾಗಿದೆ. ಶಿಕ್ಷಣ ಕೇಂದ್ರಗಳನ್ನು ಮಾತ್ರ ಮುಚ್ಚಿದರೆ ಕೋವಿಡ್ ಮಾನದಂಡ ಪಾಲನೆಯಾಗುವುದಿಲ್ಲ. ಹಾಗಾಗಿ ನಮ್ಮ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು"ಎಂದು ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಅವರು ಒನ್ ಇಂಡಿಯಾ ಮೂಲಕ ಮನವಿಯನ್ನು ಮಾಡಿದ್ದಾರೆ.

ಮಂಗಳವಾರದ (ಜ 4) ಮುಖ್ಯಮಂತ್ರಿಗಳ ಸಭೆಯಲ್ಲಿ ಅಂತಿಮ ನಿರ್ಧಾರ?
ಕೋವಿಡ್ ಮಾರ್ಗಸೂಚಿಯಲ್ಲಿ ಸರಕಾರ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಲಾಕ್ಡೌನ್ ಸರಕಾರದ ಅಂತಿಮ ಅಸ್ತ್ರವಾಗಬಹುದು. ಆದರೆ, ಶೈಕ್ಷಣಿಕ ಸಂಸ್ಥೆಗಳಿಗೆ ಆಫ್ಲೈನ್ ಮೂಲಕ ತರಗತಿ ನಡೆಸುವ ವಿಚಾರದಲ್ಲಿ ಮಂಗಳವಾರದ (ಜ 4) ಮುಖ್ಯಮಂತ್ರಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ಬರುವ ಸಾಧ್ಯತೆಯಿಲ್ಲದಿಲ್ಲ.











Click it and Unblock the Notifications