ಕನಗನವಾಡಿಯ ಬಸ್ಸಿನ ಸಂಖ್ಯೆಯೂ 24, ಅಪಘಾತವಾದ ದಿನಾಂಕವೂ 24
ಮಂಡ್ಯ ಜಿಲ್ಲೆಯ ಕನಗನವಾಡಿಯಲ್ಲಿ ಮೂವತ್ತು ಮಂದಿಯ ಪ್ರಾಣಕ್ಕೆ ಎರವಾದ ಬಸ್ಸಿನ ಬಗ್ಗೆ ನಾನಾ ಬಗೆಯ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಸ್ಟೇರಿಂಗ್ ಲಾಕ್ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂಬುದರಿಂದ ಮೊದಲುಗೊಂಡು ಚಾಲಕನ ನಿರ್ಲಕ್ಷ್ಯ ಎಂಬ ಆರೋಪದ ತನಕ ಅವು ನಾನಾ ನಮೂನೆಯಲ್ಲಿವೆ. ಆದರೆ ಪೂರ್ಣವಾದ ತನಿಖೆ ಆದ ಮೇಲೆ ಸತ್ಯ ಗೊತ್ತಾಗಬಹುದು.
ಮಂಡ್ಯ ದುರಂತದ ಬಸ್ ಗೆ ಒಂಬತ್ತನೇ ಮಾಲೀಕರು ಶ್ರೀನಿವಾಸ್
ಸದ್ಯಕ್ಕೆ ತಲೆ ಮರೆಸಿಕೊಂಡಿರುವ ಬಸ್ ನ ಚಾಲಕನೇ ಸಿಕ್ಕು, ನಿಜವಾಗಲೂ ಏನು ನಡೆಯಿತು ಎಂಬುದನ್ನು ವಿವರಿಸಬೇಕು. ಅದೂ ಪ್ರಾಮಾಣಿಕತೆಯಿಂದ ವಿವರಿಸಿದರಷ್ಟೇ ಸತ್ಯ ಏನು ಎಂದು ಗೊತ್ತಾಗುತ್ತದೆ. ಈ ಮಧ್ಯೆ ವಿಚಿತ್ರವಾದ ವಿಷಯವೊಂದು ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಅದೇನೆಂದರೆ ಸಂಖ್ಯೆ. ಹೌದು ಬಸ್ ನ ಸಂಖ್ಯೆಯ ಬಗ್ಗೆಯೇ ಆ ಚರ್ಚೆ.
ಬಸ್ ನ ಸಂಖ್ಯೆ ಕೆ.ಎ 19- ಎ 5676. 5+6+7+6=24 ಆಗುತ್ತದೆ. ಇನ್ನು ಅಪಘಾತ ನಡೆದಿರುವುದು ನವೆಂಬರ್ 24ನೇ ತಾರೀಕು. ಆದ್ದರಿಂದ ಆ ಸಂಖ್ಯೆ ಕೂಡ ಅಪಘಾತ ಸಂಭವಿಸುವುದಕ್ಕೆ ಕಾರಣವಾ ಎಂದು ಮಾತುಕತೆ ಆಗುತ್ತದೆ. ಈ ಬಗ್ಗೆ ನಂಬಿಕೆ ಇಲ್ಲದವರು ಅದೇ ಬಸ್ ಇಷ್ಟು ವರ್ಷಗಳಲ್ಲಿ, ಅದೆಷ್ಟು ತಿಂಗಳಲ್ಲಿ 24ನೇ ತಾರೀಕು ಸಂಚಾರ ಮಾಡಿರುತ್ತದೆ. ಆಗೆಲ್ಲ ಏನೂ ಆಗಿಲ್ಲವಲ್ಲ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಂಖ್ಯೆ 24ರ ಬಗ್ಗೆ ಮಾತ್ರ ಚರ್ಚೆ ಆಗುವಂತಾಗಿದೆ.
ಮಂಡ್ಯ ಬಸ್ ಅಪಘಾತ: ಬದುಕಿ ಬಂದವರು ಘಟನೆ ಬಗ್ಗೆ ಹೇಳಿದ್ದು ಹೀಗೆ
ಸಂಖ್ಯಾಶಾಸ್ತ್ರಜ್ಞರನ್ನು ಈ ಬಗ್ಗೆ ಕೇಳಿದರೆ 2 ಅಂದರೆ ಚಂದ್ರ, 4 ಅಂದರೆ ರಾಹು. ಅವೆರಡನ್ನು ಒಟ್ಟಾಗಿ ಮಾಡಿದರೆ ಬರುವ ಸಂಖ್ಯೆ 6. ಅದು ಶುಕ್ರ. ಮಾಲೀಕರ ಜನ್ಮ ದಿನಾಂಕದ ವಿವರವೂ ಸಿಕ್ಕರೆ ಸ್ಪಷ್ಟವಾಗಿ ಹೇಳಬಹುದು ಎನ್ನುತ್ತಾರೆ. ಆದರೆ ಈಗ ಆಗಿರುವ ಜೀವ ಹಾನಿಯ ಮಧ್ಯೆ ಇಂಥ ಎಲ್ಲ ಚರ್ಚೆಯಲ್ಲಿ ಏನು ಅರ್ಥವಿದೆ?