ಗ್ರಾಮ ಪಂಚಾಯಿತಿ ಚುನಾವಣೆಗೆ ಮೈಲ್ಯಾಕ್ ನಿಂದ ಅಳಿಸಲಾಗದ ಶಾಯಿ
ಮೈಸೂರು, ಡಿಸೆಂಬರ್ 08: ಎಲ್ಲಿಯೇ ಚುನಾವಣೆ ನಡೆದರೂ ಮತದಾನ ಮಾಡುವ ಮತದಾರರಿಗೆ ಹಾಕುವ ಗುರುತಿನ ಶಾಯಿಯನ್ನು ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಸರಬರಾಜು ಮಾಡಲಾಗುತ್ತದೆ. ಇದೀಗ ರಾಜ್ಯದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ 99 ಸಾವಿರ ಅಳಿಸಲಾಗದ ಶಾಯಿ ಬಾಟಲ್ ಗಳಿಗೆ ಚುನಾವಣಾ ಆಯೋಗದಿಂದ ಬೇಡಿಕೆ ಬಂದಿದೆ.
ಈ ಕುರಿತಂತೆ ಎಂದು ಮೈಲ್ಯಾಕ್ ಅಧ್ಯಕ್ಷ ಎನ್.ಫಣೀಶ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಚುನಾವಣಾ ಆಯೋಗ 5 ಎಂಎಲ್ ನ 99 ಸಾವಿರ ಬಾಟಲ್ ಹಾಗೂ 6,580 ಪ್ಯಾಕೆಟ್ ಸೀಲಿಂಗ್ ವ್ಯಾಕ್ಸ್ ನೀಡುವಂತೆ ಬೇಡಿಕೆ ಸಲ್ಲಿಸಿದೆ. ಇದರಿಂದ ಸಂಸ್ಥೆಗೆ 1.15 ಕೋಟಿ ಹಣ ಬರಲಿದೆ ಎಂದಿದ್ದಾರೆ. ಮುಂದೆ ಓದಿ...

2019-20ರಲ್ಲಿ 21.52 ಕೋಟಿ ವಹಿವಾಟು
2019-20ರಲ್ಲಿ ಸಂಸ್ಥೆ ಒಟ್ಟು 21.52 ಕೋಟಿ ವಹಿವಾಟು ನಡೆಸಿದ್ದು, ಇದರಲ್ಲಿ 4.59 ಕೋಟಿ ಪೇಂಟ್ಸ್ ವಹಿವಾಟು ನಡೆದಿತ್ತು. ಈ ಸಾಲಿನ ಹಣಕಾಸು ವರ್ಷದಲ್ಲಿ ಸಂಸ್ಥೆಗೆ 4.70 ಕೋಟಿ ಲಾಭ ಬಂದಿದೆ. 2019-20ನೇ ಸಾಲಿಗೆ ಕಂಪನಿ ತನ್ನ ಷೇರುದಾರರಿಗೆ ಶೇ.25ರಷ್ಟು ಡಿವಿಡೆಂಟ್ ಘೋಷಿಸಿದೆ. ಈ ಪೈಕಿ ರಾಜ್ಯ ಸರ್ಕಾರದ ಪಾಲು 23.68 ಲಕ್ಷವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅಲ್ಲದೆ 2.17 ಕೋಟಿ ಅಳಿಸಲಾಗದ ಶಾಯಿ ರಫ್ತು ವಹಿವಾಟು ನಡೆದಿದೆ. ಸಿಎಸ್ಆರ್ ಅಡಿ 20.57 ಲಕ್ಷವನ್ನು ಕಂಪನಿ ಕಾಯ್ದೆ ಪ್ರಕಾರ ಸಮಾಜ ಮುಖಿ ಕಾರ್ಯಗಳಿಗೆ ನೀಡಿದೆ.

20 ಕೋಟಿ ವಹಿವಾಟಿನ ಗುರಿ ನಿರೀಕ್ಷೆ
2020-21ನೇ ಸಾಲಿನಲ್ಲಿ 20 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. ಈ ಪೈಕಿ ನವೆಂಬರ್ 2020ರ ಅಂತ್ಯಕ್ಕೆ 12.25 ಕೋಟಿ ವಹಿವಾಟು ನಡೆಸಲಾಗಿದೆ. 2020-21ನೇ ಸಾಲಿನಲ್ಲಿ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ರಾಷ್ಟ್ರದಾದ್ಯಂತ ನಡೆದ ಲೋಕಸಭೆ, ವಿಧಾನಸಭೆ ಉಪ ಚುನಾವಣೆಗೂ ಅಳಿಸಲಾಗದ ಶಾಯಿ ಒದಗಿಸಲಾಗಿದ್ದು, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ತೆಲಂಗಾಣ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳ ಮೇಲ್ಮನೆ ಚುನಾವಣೆಗೆ ಬಾಟಲ್ ಮಾರ್ಕಿಂಗ್ ಪೆನ್ ಪೂರೈಸಲಾಗಿದೆ. ಕಂಪನಿ ಶೇ.100ರಷ್ಟು ಔದ್ಯಮಿಕ ಬಣ್ಣಗಳ ತಯಾರಿಕೆ ಸಂಸ್ಥೆಯಾಗಿದ್ದು, ಯಾವುದೇ ಗೃಹೋಪಯೋಗಿ ಅಥವಾ ಅಲಂಕಾರಿಕ ಬಣ್ಣ ತಯಾರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕಾರ್ಖಾನೆ
ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯನ್ನು 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದು, ಅವತ್ತಿನ ದಿನಗಳಲ್ಲಿ ಈ ಕಾರ್ಖಾನೆ ವೈವಿಧ್ಯಮಯ ಬಣ್ಣಗಳ ತಯಾರಿಕೆಗಷ್ಟೆ ಸೀಮಿತವಾಗಿತ್ತು. ಸ್ವಾತಂತ್ರ್ಯಾನಂತರ ಇದು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿತಲ್ಲದೆ ಚುನಾವಣೆಗೆ ಶಾಯಿ ಒದಗಿಸುವ ಕಾರ್ಯಕ್ಕೆ ಕೈಹಾಕಿತು. ಇದಕ್ಕೆ ಕಾರಣವೂ ಇತ್ತು. 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತಾದರೂ ಇದರಲ್ಲಿ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.

ಕಾರ್ಖಾನೆಯ ಅದೃಷ್ಟದ ಬಾಗಿಲು ತೆರೆದ ನಿರ್ಧಾರ
ಈ ನಿರ್ಧಾರ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯ ಅದೃಷ್ಟದ ಬಾಗಿಲು ತಟ್ಟಿದಂತಾಯಿತು. ಈ ವೇಳೆ ಅಳಿಸಲಾಗದ ಶಾಯಿ ತಯಾರಿಸುವ ಜವಾಬ್ದಾರಿಯನ್ನು ಕಾರ್ಖಾನೆಗೆ ನೀಡಲಾಯಿತು. ಅದರಂತೆ 1962ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಶಾಯಿ ಪೂರೈಸಿ ಚುನಾವಣಾ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪಿಸಿತು. ಅಂದಿನಿಂದ ಚುನಾವಣಾ ಆಯೋಗ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಕಪ್ಪು ಶಾಯಿಯನ್ನು ತರಿಸಿಕೊಳ್ಳುವ ಪರಿಪಾಠ ಆರಂಭಿಸಿತು. ಉತ್ಪಾದನೆ ಆರಂಭಿಸಿದಂದಿನಿಂದ ಇಂದಿನವರೆಗೂ ಕಾರ್ಖಾನೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

ಉತ್ಕೃಷ್ಟ ಗುಣಮಟ್ಟದ ಶಾಯಿ ತಯಾರಿಕೆ
ಈಗಲೂ ಈ ಕಪ್ಪು ಶಾಯಿ ಉತ್ಕೃಷ್ಟ ಗುಣಮಟ್ಟದಲ್ಲಿ ತಯಾರಾಗುತ್ತಿದೆ. ಈ ಶಾಯಿ ಕನಿಷ್ಠ 48 ಗಂಟೆಗಳಿಂದ 30 ದಿನಗಳವರೆಗೆ ಅಚ್ಚಳಿಯದೇ ಉಳಿಯುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ದೃಢಪಡಿಸಿದೆ. ದೇಶ, ವಿದೇಶದಲ್ಲಿ ನಡೆಯುವ ಚುನಾವಣೆಗೆ ಬೇಡಿಕೆಗೆ ತಕ್ಕಷ್ಟು ಶಾಯಿ ಒದಗಿಸಲು ಮೈಲ್ಯಾಕ್ ಆಡಳಿತ ಸದಾ ಸಿದ್ಧವಾಗಿರುತ್ತದೆ. ಈ ಕಾರಣಕ್ಕಾಗಿಯೇ ಚುನಾವಣಾ ಆಯೋಗ ಪ್ರತಿ ಬಾರಿಯೂ ಈ ಕಾರ್ಖಾನೆಯಿಂದಲೇ ಶಾಯಿ ತರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.












Click it and Unblock the Notifications