ಮಗನಿಗೆ ಅರವತ್ತು ಅಂಕ ಬಂದಿದೆಯೆಂದು ಸಂಭ್ರಮಿಸಿದ ಅಮ್ಮ!
ಬೆಂಗಳೂರು, ಮೇ 08 : ತಮ್ಮ ಮಗ ಅಥವಾ ಮಗಳು ಕನಿಷ್ಠಪಕ್ಷ ತೊಂಬತ್ತರ ಮೇಲಾದರೂ ಎಸ್ಸೆಸ್ಸೆಲ್ಸಿಯಲ್ಲಿ ಅಂಕ ತೆಗೆದುಕೊಳ್ಳಲಿ ಎಂದು ಕನಸು ಇಟ್ಟುಕೊಂಡಿರುವ ಪೋಷಕರೆಷ್ಟೋ? ಕನಸು ಕಾಣುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಕನಸು ಕಾಣಲಿ ಅನ್ನುವುದಷ್ಟೇ ಉದ್ದೇಶ.
ತೊಂಬತ್ತಕ್ಕೆ ಒಂದೇ ಒಂದು ಅಂಕ ಕಡಿಮೆ ಬಂದರೂ ಬೇಸರಿಸಿಕೊಳ್ಳುವವರಿದ್ದಾರೆ, ಮಕ್ಕಳೊಂದಿಗೆ ಮಾತನ್ನೇ ಆಡದವರಿದ್ದಾರೆ, ಸಂಬಂಧಿಕರಿಗೆ ಹೇಗೆ ಹೇಳಲಿ ಎಂದು ಅವರನ್ನೂ ದೂರ ಇಡುವವರಿಗೂ ಕಡಿಮೆಯಿರುವುದಿಲ್ಲ. ವಿಚಿತ್ರಗಳಿಗೆ ಇಲ್ಲಿ ಕೊರತೆಯಿಲ್ಲ.
ಆದರೆ, ತಾಯಿಯೊಬ್ಬರು ಮಗನಿಗೆ ಬರೊಬ್ಬರಿ 60 ಅಂಕ ಬಂದಿದೆಯೆಂದು ಸಂಭ್ರಮಿಸಿ, ಕುಣಿದು ಕುಪ್ಪಳಿಸಿದ್ದಾರೆ. ಏಕೆಂದರೆ, ಅವರಿಗೆ ಅವರ ಮಗನ ಓದುವ ಸಾಮರ್ಥ್ಯ ಎಷ್ಟೆಂದು ಗೊತ್ತಿತ್ತು ಮತ್ತು ಆತನ ಮೇಲೆ ಯಾವುದೇ ಒತ್ತಡವನ್ನೂ ಹೇರಿರಲಿಲ್ಲ. ಇಷ್ಟು ಸಾಲದೆಂಬಂತೆ, ಜೀವನ ದೊಡ್ಡದಿದೆ ನಿನ್ನ ಕನಸನ್ನು ನೀನೇ ಕಂಡುಕೋ ಎಂದು ಪ್ರೋತ್ಸಾಹವನ್ನೂ ನೀಡಿದ್ದಾರೆ.

ಫೇಸ್ ಬುಕ್ ನಲ್ಲಿ ವಂದನಾ ಸೂಫಿಯಾ ಕಟೋಚ್ ಎಂಬುವವರು ಹಾಕಿರುವ ಈ ಪೋಸ್ಟ್ ಎಲ್ಲೆಲ್ಲೂ ವೈರಲ್ ಆಗಿದ್ದು, ತಮ್ಮ ಮಗನೊಂದಿಗೆ ಪ್ರಜ್ಞಾವಂತಿಕೆಯಿಂದ ವರ್ತಿಸಿದ್ದಕ್ಕೆ ಎಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದು, ತಮ್ಮ ಮಗ ಓದುವುದಿಲ್ಲ, ಹೆಚ್ಚ ಮಾರ್ಕ್ಸ್ ಪಡೆದಿಲ್ಲ, ಅವನ ಭವಿಷ್ಯ ಹೇಗೋ ಏನೋ ಎಂದು ತಲೆಕೆಡಿಸಿಕೊಳ್ಳುವ ಪೋಷಕರಿಗೆ ಮತ್ತು ಮಕ್ಕಳಿಗೂ ಒಂದು ಪಾಠವಾಗಿದೆ.
"ಎಸ್ಸೆಸ್ಸೆಲ್ಸಿ ಬೋರ್ಡ್ ಪರೀಕ್ಷೆಯಲ್ಲಿ 60 ಅಂಕ ಪಡೆದ ನನ್ನ ಮಗನ ಬಗ್ಗೆ ನನಗೆ ಭಾರೀ ಹೆಮ್ಮೆಯಿದೆ. ಅಂಕ 90 ಅಲ್ಲ, ಆದರೆ, ಇದರಿಂದ ನನ್ನ ಭಾವನೆಗಳೇನೂ ಬದಲಾಗುವುದಿಲ್ಲ. ಏಕೆಂದರೆ, ಆತ ಕೆಲವೊಂದು ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟಪಟ್ಟಿದ್ದನ್ನು ನಾನು ನೋಡಿದ್ದೇನೆ. ಓದನ್ನು ಬಿಟ್ಟೇಬಿಡುವ ಹಂತಕ್ಕೂ ಹೋಗಿದ್ದ. ಆದರೆ, ಕಡೆಯ ಒಂದು ಒಂದೂವರೆ ತಿಂಗಳಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದಾನೆ. ಮುಂದಿನ ಜೀವನದ ಕನಸನ್ನು ನೀನೇ ರೂಪಿಸಿಕೊ, ಸಮುದ್ರ ಅಗಲವಾಗಿದೆ, ನನ್ನ ಪ್ರೀತಿ ಎಂದಿಗೂ ನಿನಗಾಗಿ ಇದ್ದೇ ಇರುತ್ತದೆ. ನಿಮ್ಮ ಆಂತರ್ಯದಲ್ಲಿರುವ ಒಳ್ಳೆಯತನ, ಕುತೂಹಲ, ವಿವೇಕವನ್ನು ಎಂದಿಗೂ ಎಂದಿಗೂ ಜಾಗೃತವಾಗಿಡು. ಅಷ್ಟೇ ಅಲ್ಲ, ನಿನ್ನಲ್ಲಿರುವ ಆ ಕೆಟ್ಟ ಹಾಸ್ಯಪ್ರಜ್ಞೆಯನ್ನು ಕೂಡ" ಎಂದು ಆ ತಾಯಿ ಪ್ರೀತಿಯನ್ನು ಧಾರೆಯೆರೆದಿದ್ದಾರೆ, ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ, ಹಾಸ್ಯಪ್ರಜ್ಞೆಯನ್ನು ಮೆರೆದಿದ್ದಾರೆ, ಇಡೀ ಜಗತ್ತಿಗೆ ಸಂದೇಶವನ್ನೂ ಸಾರಿದ್ದಾರೆ.
ನಿಮ್ಮಂಥ ತಾಯಿಗೆ ನನ್ನ ಸಲಾಂ. ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವಂಥ ಗುರಿಗಳನ್ನು ನೀಡಿ, ಅವರ ಮೇಲೆ ಸಲ್ಲದ ಒತ್ತಡ ಹೇರುವ ಬದಲು, ಮಕ್ಕಳನ್ನು ಇರುವ ಹಾಗೆಯೇ ಒಪ್ಪಿಕೊಳ್ಳುವ ಪೋಷಕರು ಹೆಚ್ಚಾಗಿ ಬೇಕಿದ್ದಾರೆ. ಮಕ್ಕಳಿಗೆ ಕಡಿಮೆ ಅಂಕ ಬಂದರೆ, ತಲೆಮರೆಸಿಕೊಳ್ಳದಿರುವಂತೆ ನಿಮ್ಮಿಂದ ಇತರ ಪೋಷಕರು ಕಲಿಯಬೇಕು ಎಂದು ಸುನಿತಾ ಎಂಬುವವರು ವಂದನಾ ಸೂಫಿಯಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ.
ಅತ್ಯಂತ ಸಹಜವಾಗಿಯೇ ಬರೆದಿರುವಂಥ ಈ ಪೋಸ್ಟ್ ಇಷ್ಟು ವೈರಲ್ ಆಗುತ್ತದೆ, ಇಷ್ಟು ಮೆಚ್ಚುಗೆಗಳನ್ನು ಪಡೆಯುತ್ತದೆ ನಾನು ಎಣಿಸಿರಲೇ ಇಲ್ಲ. ಇದು ಜನರ ಹೃದಯವನ್ನು ತಟ್ಟಿದ್ದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಬಗ್ಗೆ ಪ್ರೀತಿ ತೋರಿಸಿದ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ವಂದನಾ ಸೂಫಿಯಾ ಅವರು ವಂದನಾರ್ಪಣೆ ಮಾಡಿದ್ದಾರೆ. ಮಕ್ಕಳ ಬದುಕು ಉಜ್ವಲವಾಗಲಿ ಅವರು ಹಿಡಿದ ಹಾದಿ ಮಾತ್ರ ಕಾಣವಾಗುವುದಿಲ್ಲ, ಪೋಷಕರ ಪಾತ್ರವೂ ಸಾಕಷ್ಟು ಇರುತ್ತದೆ.
ಇದು ಯಾವುದೇ ಊರಿನಲ್ಲಿ ಆಗಿರಲಿ, ಯಾವುದೇ ಭಾಷೆಯ ತಾಯಿ ತನ್ನ ಮಗನಿಗೆ ಪ್ರೋತ್ಸಾಹದ ಮಾತುಗಳಾಡಿರಲಿ, ತಮ್ಮ ಮಕ್ಕಳ ಅಂಕಗಳ ಬಗ್ಗೆ ಸಿಕ್ಕಾಪಟ್ಟೆ ಚಿಂತಿತರಾಗುವ, ಆಕಾಶವೇ ಕಳಚಿ ಬಿದ್ದಂತೆ ಆಡುವ ಕನ್ನಡ ನಾಡಿನ ತಂದೆ ತಾಯಿಯರಿಗೆ ಅರಿವು ಮೂಡಿದರೆ ಅಷ್ಟೇ ಸಾಕು. ನೂರಕ್ಕೆ ನೂರು ಅಂಕ ಪಡೆದವರೇನೂ ಕೋಟ್ಯಧಿಪತಿಗಳಾವುದಿಲ್ಲ, ಅರವತ್ತು ಪಡೆದವರೇನು ಜೀವನದಲ್ಲಿ ಹಿಂದೆ ಬೀಳುವುದಿಲ್ಲ. ಪರೀಕ್ಷೆಗಳಲ್ಲಿ ಡುಮ್ಮಿ ಹೊಡೆದವರೆಷ್ಟು ಸಾಧಕರಾಗಿಲ್ಲ? ಮಕ್ಕಳನ್ನು ಸನ್ನಡತೆಯಲ್ಲಿ ತರುವುದು, ಮಾರ್ಗದರ್ಶನ ನೀಡುವುದು, ಅವರ ಆಸಕ್ತಿಗೆ ಸೂಕ್ತವಾದ ಓದಿಗೆ ಪ್ರೋತ್ಸಾಹಿಸುವುದು ಪ್ರತಿ ಪೋಷಕರ ಕರ್ತವ್ಯ.
ಅಂದ ಹಾಗೆ, ಮೇ 12ರಂದು ಅಮ್ಮನ ದಿನ. ಪ್ರೀತಿಯ ಸೌರಭವನ್ನೇ ಹರಿಸುವ ಅಮ್ಮನಿಗೆ ಹಾರೈಸುವುದನ್ನು ಮರೆಯಬೇಡಿ. ಮನೆಯಲ್ಲಿ ಮತ್ತು ಕಚೇರಿಗಳಲ್ಲಿ ಕಷ್ಟಪಟ್ಟು ದುಡಿಯುವ, ಮಕ್ಕಳ ಏಳಿಗೆಗಾಗಿ ಸದಾ ಕನವರಿಸುವ ಅಮ್ಮಂದಿರಿಗೆ ಇದೇ ರೀತಿ ಪ್ರೋತ್ಸಾಹಿಸುವ ಅಗತ್ಯವಿದೆ. ಅವರಲ್ಲಿಯೂ ಆಸೆ ಆಕಾಂಕ್ಷೆಗಳಿರುತ್ತವೆ, ಸಣ್ಣ ಸಣ್ಣ ಕನಸುಗಳಿರುತ್ತವೆ. ಅಡುಗೆ ರುಚಿ ಕೆಟ್ಟಾಗ ಬೈಯದೆ, ಬೇಸರಿಸಿಕೊಳ್ಳದೆ, ಅವರ ಕನಸನ್ನು ಪೂರೈಸುವ ಜವಾಬ್ದಾರಿಯೂ ಮಕ್ಕಳ ಮೇಲಿರುತ್ತದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications