ಮೈಸೂರು: ಕೆರೆ ನೀರು ಸಂರಕ್ಷಣೆಗೆ ಮೊಸಂಬಾಯನಹಳ್ಳಿ ಜನ ಮಾಡಿದ್ದೇನು?

ಮೈಸೂರು, ಫೆಬ್ರವರಿ 28: ಕಳೆದ ಕೆಲವು ವರ್ಷಗಳಿಂದ ಮುಂಗಾರು ಉತ್ತಮವಾಗಿರುವುದರಿಂದ ಬಹುತೇಕ ಕೆರೆಕಟ್ಟೆಗಳು ತುಂಬಿವೆ. ಆದರೆ ದಶಕದ ಹಿಂದಿನ ಬರಗಾಲದ ಬವಣೆಯ ಆ ದಿನಗಳು ಪ್ರತಿಯೊಬ್ಬ ಗ್ರಾಮೀಣ ಪ್ರದೇಶದ ಜನರ ಮನದಲ್ಲಿ ಅಚ್ಚೊತ್ತಿದಂತೆ ಉಳಿದು ಬಿಟ್ಟಿದೆ. ಹೀಗಾಗಿಯೇ ಜನ ಎಚ್ಚೆತ್ತುಕೊಂಡು ಕೆರೆಗಳ ಸಂರಕ್ಷಣೆಯತ್ತ ಗಮನಹರಿಸಿರುವುದು ಒಂದೊಳ್ಳೆಯ ಬೆಳವಣಿಗೆಯಾಗಿದೆ.

ಎಂಟತ್ತು ವರ್ಷಗಳ ಹಿಂದೆ ಬರಗಾಲ ತಾಂಡವವಾಡಿತ್ತು. ಆ ವೇಳೆ ಮನುಷ್ಯನಿಗಿಂತ ಹೆಚ್ಚಾಗಿ ನೀರಿನ ಸಂಕಷ್ಟ ಅನುಭವಿಸಿದ್ದು ಜಾನುವಾರುಗಳು ಸೇರಿದಂತೆ ಪ್ರಾಣಿ ಪಕ್ಷಿ ಸಂಕುಲಗಳು. ಬಹಳಷ್ಟು ರೈತರು ತಾವು ಸಾಕಿದ ಜಾನುವಾರುಗಳಿಗೆ ನೀರು, ಮೇವು ಒದಗಿಸಲಾಗದೆ ಅವುಗಳನ್ನು ಮಾರಾಟ ಮಾಡಿ ಕಣ್ಣೀರಿಟ್ಟರು. ಇನ್ನು ಕೆಲವರು ಸಾಲಸೋಲ ಮಾಡಿ ನೀರು, ಮೇವು ತಂದು ಜಾನುವಾರುಗಳನ್ನು ರಕ್ಷಿಸಿಕೊಂಡರು. ಆದರೆ ಬಹುತೇಕ ಗ್ರಾಮಗಳಲ್ಲಿ ರೈತರು ಒಣಗಿದ ತಮ್ಮೂರ ಕೆರೆಯನ್ನು ನೋಡಿ ಇನ್ನು ಇಲ್ಲಿ ಬದುಕುವುದು ಅಸಾಧ್ಯವೆಂದು ನಗರಗಳತ್ತ ಮುಖ ಮಾಡಿದರು.

 ಕೆರೆ ನೀರು ಜಾನುವಾರುಗೆ ಮಾತ್ರ

ಕೆರೆ ನೀರು ಜಾನುವಾರುಗೆ ಮಾತ್ರ

ಇದೆಲ್ಲದರ ನಡುವೆ 2017ರಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯಿತು ನಂತರದ ವರ್ಷಗಳಲ್ಲಿ ಮುಂಗಾರು ಉತ್ತಮವಾಯಿತು. ಜತೆಗೆ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿತು. ಇದೆಲ್ಲದರ ಪರಿಣಾಮ ಮೈಸೂರು ಜಿಲ್ಲೆ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಲ್ಲದೆ ಒಣಗಿದ ಕೆರೆಗಳಿಗೆ ಜೀವ ಕಳೆ ಬರಲಾರಂಭಿಸಿತು. ಎಲ್ಲೆಡೆ ಹಸಿರು ಕಾಣಿಸಿತು. ಗ್ರಾಮದ ಜಾನುವಾರುಗಳು ಸೇರಿದಂತೆ ಪ್ರಾಣಿಪಕ್ಷಿಗಳು ನೆಮ್ಮದಿಯಿಂದ ಬದುಕಲು ಅನುವಾಯಿತು.

 ನೀರಿನ ಬಳಕೆಗೆ ಕೆಲವೊಂದು ನಿರ್ಬಂಧ

ನೀರಿನ ಬಳಕೆಗೆ ಕೆಲವೊಂದು ನಿರ್ಬಂಧ

ಇದೆಲ್ಲದರ ನಡುವೆ ಕಾಲ ಹೀಗೆಯೇ ಇರುತ್ತದೆ ಎನ್ನಲಾಗದು. ನಾಳೆ ಮತ್ತೆ ನೀರಿಗೆ ಸಮಸ್ಯೆ ಬರಬಹುದು. ಹೀಗಾಗಿ ಈಗಿನಿಂದಲೇ ನೀರಿನ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಗ್ರಾಮದ ಜಾನುವಾರು ಮತ್ತು ಸುತ್ತಮುತ್ತಲ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ನೀರನ್ನು ಉಳಿಸುವ ಕಾರ್ಯಕ್ಕೆ ಮೈಸೂರಿನ ಮೊಸಂಬಾಯನಹಳ್ಳಿ ಗ್ರಾಮದ ಜನ ಮುಂದಾಗಿದ್ದಾರೆ. ಗ್ರಾಮದ ಹೃದಯ ಭಾಗದಲ್ಲಿ ಕೆರೆಯಿದ್ದು, ಕೆರೆ ತುಂಬಾ ನೀರಿದ್ದರೂ ಈ ನೀರಿನ ಬಳಕೆಗೆ ಕೆಲವೊಂದು ನಿರ್ಬಂಧ ಹೇರಿದ್ದಾರೆ. ಕೆರೆಯ ನೀರನ್ನು ಜಾನುವಾರುಗಳ ಉಪಯೋಗಕ್ಕೆ ಹೊರತು ಪಡಿಸಿ ಅನ್ಯ ಉದ್ದೇಶಕ್ಕೆ ಬಳಸದಂತೆ ಗ್ರಾಮಸ್ಥರು ತಮಗೆ ತಾವೇ ತೀರ್ಮಾನ ಮಾಡಿಕೊಂಡಿದ್ದಾರೆ.

 ಪೊಲೀಸ್ ಮೊಕದ್ದಮೆಯ ಎಚ್ಚರಿಕೆ

ಪೊಲೀಸ್ ಮೊಕದ್ದಮೆಯ ಎಚ್ಚರಿಕೆ

ಸಾಮಾನ್ಯವಾಗಿ ಕೆರೆಗಳಿಂದ ಅನ್ಯ ಉದ್ದೇಶಕ್ಕೆ ಟ್ಯಾಂಕರ್‌ಗಳ ಮೂಲಕ ನೀರನ್ನು ಕೊಂಡೊಯ್ಯುವುದು ಕಂಡು ಬರುತ್ತದೆ. ಆದರೆ ಮೊಸಂಬಾಯನಹಳ್ಳಿಯಲ್ಲಿ ಅದಕ್ಕೆ ಆಸ್ಪದವಿಲ್ಲ. ಈ ಕೆರೆಯ ನೀರನ್ನು ಜಾನುವಾರುಗಳ ಉದ್ದೇಶಕ್ಕೆ ಮಾತ್ರ ಬಳಸಲು ಗ್ರಾಮಸ್ಥರೆಲ್ಲರೂ ಒಟ್ಟಾಗಿ ತೀರ್ಮಾನ ಕೈಗೊಂಡಿರುವುದರಿಂದ ಕೆರೆಯಲ್ಲಿ ನೀರು ತುಂಬಿ ಅಲೆಯಾಡುತ್ತಿದ್ದು, ಗ್ರಾಮದ ಜಾನುವಾರುಗಳು ನೀರು ಕುಡಿದು ನೆಮ್ಮದಿಯಾಗಿದ್ದರೆ, ಕೆರೆಯ ಸುತ್ತಲೂ ಪ್ರಾಣಿ-ಪಕ್ಷಿಗಳು ಬೀಡು ಬಿಟ್ಟು ಖುಷಿಯಾಗಿ ವಿಹರಿಸುತ್ತಿವೆ.

 ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗುವ ಸಾಧ್ಯತೆ ಹೆಚ್ಚು

ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗುವ ಸಾಧ್ಯತೆ ಹೆಚ್ಚು

ಸಾಮಾನ್ಯವಾಗಿ ಬೇಸಿಗೆ ಬರುತ್ತಿದ್ದಂತೆಯೇ ಕೆರೆಗಳಲ್ಲಿನ ನೀರು ಬರಿದಾಗುತ್ತದೆ. ಅದರಲ್ಲೂ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದೇ ಆದರೆ, ನಡು ಬೇಸಿಗೆ ಹೊತ್ತಿಗೆ ಕೆರೆ ಬರಿದಾಗಿ ಜಾನುವಾರುಗಳು ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗುವ ಸಾಧ್ಯತೆ ಹೆಚ್ಚು. ಇದೆಲ್ಲವನ್ನು ಹತ್ತಿರದಿಂದ ನೋಡಿದ ಮತ್ತು ಹಿಂದೆ ಬರ ಬಂದ ಕಾಲದ ಸಂಕಷ್ಟ ಅನುಭವಿಸಿದ ಮೊಸಂಬಾಯನಹಳ್ಳಿ ಜನರು, ಒಟ್ಟಾಗಿ ಸೇರಿ ಈ ತೀರ್ಮಾನ ಕೈಗೊಂಡು ತಮ್ಮೂರಿನ ಕೆರೆ ನೀರನ್ನು ಜಾನುವಾರುಗಳಿಗಷ್ಟೆ ಮೀಸಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕರ ತಿಳುವಳಿಕೆಗಾಗಿ ಕೆರೆಯ ಮುಂಭಾಗದ ದಡದಲ್ಲಿ ನಾಮಫಲಕ ಅಳವಡಿಸಿ ಅದರಲ್ಲಿ ಕೆರೆಯ ನೀರನ್ನು ಜಾನುವಾರಗಳ ಉಪಯೋಗಕ್ಕೆ ಬಿಟ್ಟು ಅನ್ಯ ಕಾರಣಗಳಿಗೆ ಬಳಸಿದರೆ ಪೊಲೀಸ್ ಮೊಕದ್ದಮೆ ಹಾಕಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

 ಜಾಣತನ ಅಂದ್ರೆ ಇದೇ ತಾನೆ?

ಜಾಣತನ ಅಂದ್ರೆ ಇದೇ ತಾನೆ?

ಕೆರೆ ನೀರಿನ ಸಂರಕ್ಷಣೆಗಾಗಿ ಮೊಸಂಬಾಯನಹಳ್ಳಿ ಗ್ರಾಮದ ಜನ ಕೈಗೊಂಡ ಈ ತೀರ್ಮಾನದಿಂದ ಗ್ರಾಮದಲ್ಲಿ ಹಲವು ರೀತಿಯ ಪ್ರಯೋಜನವಾಗಿದ್ದು, ಮೊದಲಿಗೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ಎದುರಾಗಬಹುದಾದ ನೀರಿನ ಸಮಸ್ಯೆ ತಪ್ಪಿದೆ, ಸುತ್ತಮುತ್ತಲ ಪ್ರಾಣಿಪಕ್ಷಿಗಳ ದಾಹವೂ ತೀರಿದೆ, ಕೆರೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವೂ ವೃದ್ಧಿಸಿದೆ, ಒಟ್ಟಾರೆಯಾಗಿ ಹೇಳಬೇಕೆಂದರೆ ಹಿಂದಿನ ಸಂಕಷ್ಟದಿಂದ ಪಾಠ ಕಲಿತ ಮೊಸಂಬಾಯನಹಳ್ಳಿ ಜನರು ಈಗಿನಿಂದಲೇ ಪರಿಹಾರೋಪಾಯಗಳನ್ನು ಮಾಡಿಕೊಳ್ಳುವ ಮೂಲಕ ಮುಂದೆ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜಾಣತನ ಅಂದರೆ ಇದೇ ತಾನೇ?.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+