ವಿಶೇಷ: ಸಿಡಿಲಿನಿಂದ ವಿದ್ಯುತ್ ಉತ್ಪಾದನೆ...ಇದು ಹಳ್ಳಿ ಹುಡುಗನ ಸಂಶೋಧನೆ!
ಆಗಾಗ್ಗೆ ಅಲ್ಲಲ್ಲಿ ಸಿಡಿಲು ಬಡಿದು ಸಾವನ್ನಪ್ಪುವ ಸುದ್ದಿಗಳನ್ನು ಕೇಳಿರುತ್ತೇವೆ. ಜತೆಗೆ ಸಿಡಿಲಿನ ಶಬ್ದಕ್ಕೆ ಹೆದರಿರುತ್ತೇವೆ. ಆದರೆ ಇಂತಹ ಅನಾಹುತಕಾರಿ ಸಿಡಿಲಿನಿಂದ ವಿದ್ಯುತ್ ತಯಾರಿಸಿ ವಿದ್ಯುತ್ ಅಭಾವವನ್ನು ನೀಗಿಸಬಹುದು ಎಂಬ ಸಂಶೋಧನೆಯನ್ನು ಜಿಲ್ಲೆಯ ಕೃಷ್ಣರಾಜಪೇಟೆಯ ತಾಲೂಕಿನ ಹೊನ್ನೇನಹಳ್ಳಿಯ ಯುವಕ ಮಾಡಿದ್ದಾನೆ.
ಹೊನ್ನೇನಹಳ್ಳಿಯ ನಿವಾಸಿ ಎಚ್.ಡಿ.ಮನೋಜ್ ಎಂಬ ಯುವಕನೇ ಇಂತಹದೊಂದು ಸಂಶೋಧನೆಯನ್ನು ಮಾಡಿದ್ದು, ಆ ಮೂಲಕ ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನವಾದ ಸಿಡಿಲಿನಿಂದ ವಿದ್ಯುತ್ ಉತ್ಪತ್ತಿಯನ್ನು ಏಕೆ ಮಾಡಬಾರದು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾನೆ. ಇದೀಗ ಸಿಡಿಲಿನಿಂದ ವಿದ್ಯುತ್ ಉತ್ಪಾದಿಸಬಹುದಾದ ವಿನೂತನ ಈ ಯಂತ್ರ (Lightness Capture Project) ಎಲ್ಲರ ಗಮನಸೆಳೆಯುತ್ತಿದೆ.
ಮೈಸೂರು ದಸರಾ: ನೇರವಾಗಿ 15 ಲಕ್ಷ, ಆನ್ಲೈನ್ ಮೂಲಕ 6.5 ಲಕ್ಷ ಜನರಿಂದ ವೀಕ್ಷಣೆ
ಇವತ್ತು ಮನೋಜ್ ಮಾಡಿರುವ ಈ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಿದರೆ ಅದರಿಂದ ಲಾಭ ಬಹಳಷ್ಟು ಆಗಬಹುದು. ಮನೋಜ್ ಪ್ರಕಾರ ರೈತರು ಸೇರಿದಂತೆ ಎಲ್ಲರೂ ವಿದ್ಯುತ್ ಅಭಾವವನ್ನು ಅನುಭವಿಸುತ್ತಿದ್ದಾರೆ. ಹೀಗಿರುವಾಗ ಕೇವಲ ನೀರು, ಕಲ್ಲಿದ್ದಲು ಅಲ್ಲದೆ ಇನ್ನಿತರ ಮೂಲಗಳಿಂದಲೂ ವಿದ್ಯುತ್ ಉತ್ಪಾದಿಸುವುದು ಅಗತ್ಯವಾಗಿದೆ.
ಸಿಡಿಲಿನಿಂದ ವಿದ್ಯುತ್ ಉತ್ಪಾಧಿಸಿ ಸಂಗ್ರಹ
ಇನ್ನು ಸಿಡಿಲಿನಿಂದಾಗುವ ಅನಾಹುತಗಳನ್ನು ಗಮನಿಸಿದ್ದು ಸಿಡಿಲಿನಲ್ಲಿ ಭಾರೀ ಪ್ರಮಾಣದ ವಿದ್ಯುತ್ ಇದ್ದು ಅದನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದಲ್ಲವೆ? ಎಂಬ ಆಲೋಚನೆ ಬಂದಿತ್ತು. ಹೀಗಾಗಿ ಆ ಬಗ್ಗೆ ಸಂಶೋಧನೆಗೆ ಮುಂದಾಗಿರುವುದು ವಿಶೇಷವಾಗಿದೆ. ಒಂದು ಬಾರಿ ಸಿಡಿದ ಸಿಡಿಲಿನ ಶಬ್ದವು 100 ರಿಂದ 500 ಬಿಲಿಯನ್ ವೋಲ್ಟ್ಸ್ ಸಾಮರ್ಥ್ಯವಿರುತ್ತದೆ. ಈ ವಿದ್ಯುತ್ ಶಕ್ತಿಯನ್ನು ಲೇಸರ್ ಸಾಧನವು ರಿಸೀವ್ ಮಾಡಿಕೊಂಡು ಭೂಮಿಯೊಳಗೆ ಸುಮಾರು 200 ಅಡಿ ಆಳದಲ್ಲಿ ಒಂದು ಕ್ಯಾಪಾಸಿಟರ್ ಅಳವಡಿಸಿ ವಿದ್ಯುತ್ ಸಂಗ್ರಹಿಸಬಹುದು ಎಂಬುದು ಮನೋಜ್ ಅಭಿಪ್ರಾಯವಾಗಿದೆ.
ಮಕ್ಕಳಿಲ್ಲದ ದಂಪತಿಗಳ ಆಶಾಕಿರಣ ಈ ನಾಟಿ ವೈದ್ಯೆ ಚನ್ನಪಟ್ಟಣದ ಲಕ್ಷ್ಮಮ್ಮ
ಮೂರು ತಿಂಗಳ ನಿರಂತರ ಶ್ರಮ
ಮನೋಜ್ ತನ್ನ ಮನೆಯ ಕೊಠಡಿಯಲ್ಲಿ ಸಿಡಿಲಿನಿಂದ ವಿದ್ಯುತ್ ತಯಾರಿಸಬಹುದಾದ ಯಂತ್ರವನ್ನು ನಿರ್ಮಿಸಿದ್ದು, ಸುಮಾರು ಮೂರು ತಿಂಗಳ ನಿರಂತರ ಶ್ರಮವಹಿಸಿದ್ದಾರೆ. ಜತೆಗೆ ಇದಕ್ಕಾಗಿ ಸುಮಾರು ಒಂದು ಲಕ್ಷದಷ್ಟು ಹಣವನ್ನು ವ್ಯಯಿಸಿದ್ದಾರೆ. ಈ ಯಂತ್ರದ ಪಕ್ಕದಲ್ಲಿ ಸಿಡಿಲಿನ ಮಾದರಿಯ ಕೃತಕ ಶಬ್ದವನ್ನು ಉಂಟು ಮಾಡಿದರೆ ಯಂತ್ರದಲ್ಲಿ ಅಳವಡಿಸಿರುವ ಎಲ್.ಇ.ಡಿ ಪ್ರಾಜೆಕ್ಟ್ ಲೈಟ್ಗಳು ಸುಮಾರು 3ರಿಂದ 5 ನಿಮಿಷಗಳ ಕಾಲ ಉರಿಯುವುದು ಕಂಡು ಬರುತ್ತಿದೆ.
ಸಂಶೋಧನೆಗೆ ಬಳಿಸಿದ ಸಾಧನಗಳು
ಈ ಸಂಶೋಧನೆಗಾಗಿ ಮನೋಜ್ ಬಳಸಿಕೊಂಡಿರುವ ಸಾಧನಗಳೇನು ಎಂಬುದನ್ನು ನೋಡಿದ್ದೇ ಆದರೆ ಟಿ.ವಿ ಹಾಗೂ ರೇಡಿಯೋಗಳಲ್ಲಿ ಅಳವಡಿಸಿರುವ ಮದರ್ ಬೋರ್ಡ್, ಸಿಗ್ನಲ್ ಬೋರ್ಡ್, ಆರ್ಡುನೊ ಕಂಟ್ರೋಲರ್, ಲೇಜರ್, ಕಬ್ಬಿಣದ ಬಂಡಲ್, ಕೆಪಾಸಿಟರ್, ಆಯಸ್ಕಾಂತ, ಎರಡು ಡೈನೋಮೊ ಮೋಟಾರ್, ಅಲ್ಯೂಮಿನಿಯಂ ರಿಂಗ್, ವೇವ್ ಮೋಷನ್ ಸೆನ್ಸಾರ್, ಗಾಳಿಯ ವೇಗವನ್ನು ಗ್ರಹಿಸುವ ಸಾಧನ, ಸೌಂಡ್ ಸೆನ್ಸಾರ್, ರಿಲೇ ರೆಸಿಷ್ಟೆನ್ಸ್, ಟ್ರಾನ್ಸ್ ಫಾರ್ಮರ್, ಕೇಬಲ್ ವೈರ್, ಎಲ್.ಇ.ಡಿ ಬಲ್ಬ್, ಮೈಕ್ರೋ ಚಿಪ್ ಡಿಸ್ ಪ್ಲೇ ಮತ್ತಿತರರ ವಸ್ತುಗಳ ಬಳಕೆ ಮಾಡಿದ್ದಾರೆ.
ಸಿಡಿಲಿನ ಸಂದರ್ಭದಲ್ಲಿ ಸ್ವಯಂ ಚಾಲನೆ
ಸಿಡಿಲು ಬಂದಾಗ ಈ ಯಂತ್ರದಲ್ಲಿ ಅಳವಡಿಸಿರುವ ಸೆನ್ಸಾರ್ ಸಾಧನವು ತಂತಾನೆ ಚಾಲನೆಗೊಂಡು ಸಿಡಿಲಿನಿಂದ ಬರುವ ಬೆಳಕು ಹಾಗೂ ಭಾರಿ ಶಬ್ದದಿಂದ ಉಂಟಾಗುವ ವಿದ್ಯುತ್ ಶಕ್ತಿಯನ್ನು ಸೆಳೆದು ಕೆಪಾಸಿಟರ್ಗೆ ಕಳುಹಿಸುತ್ತದೆ. ಕೆಪಾಸಿಟರ್ನಲ್ಲಿ ಸಂಗ್ರಹವಾದ ವಿದ್ಯುತ್ ಸರ್ಕ್ಯೂಟ್ ಕಂಟ್ರೋಲರ್ ಮೂಲಕ ಎಲ್.ಇ.ಡಿ ಬಲ್ಬ್ ಗಳು ಉರಿಯುವಂತೆ ಮಾಡುತ್ತವೆ.
ಸಾಧನೆಗೆ ಪ್ರೋತ್ಸಾಹ ಅಗತ್ಯ
ಈ ಯಂತ್ರವನ್ನು ಕಂಡು ಹಿಡಿಯಲು ಪ್ರೇರಣೆಯಾಗಿದ್ದು ಹೇಗೆ ಎಂದರೆ ಮನೋಜ್ ಕೆ.ಆರ್.ಪೇಟೆಯ ಆಶೀರ್ವಾದ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಕೇಂದ್ರ ಸರ್ಕಾರ ಸಹಭಾಗಿತ್ವದ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯವರು ನಡೆಸುವ ಇನ್ಸ್ಪೈರ್ ಆವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಂತೆ, ಅಲ್ಲಿ ಮಳೆ ಬೀಳುವ ಬಗ್ಗೆ ಸೆಲ್ ಪೋನ್ಗೆ ಸಂದೇಶ ಬರುವ Rain (Sensor To Cell Phone) ಉಪಕರಣದ ಬಗ್ಗೆಯೂ ಪ್ರದರ್ಶನ ನೀಡಿದ್ದರಂತೆ.
ಇದು ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಂಸೆಗೆ ಒಳಗಾಗಿತ್ತು. ಇದರ ಪ್ರೇರಣೆಯಿಂದ ಈಗ ತನ್ನ ಮನೆಯಲ್ಲಿಯೇ ಸಿಡಿಲಿನಿಂದ ವಿದ್ಯುತ್ ತಯಾರಿಸಬಹುದಾದ ಸಂಶೋಧನೆಯನ್ನು ಮಾಡಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಮನೋಜ್ ಅನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ.