ಮರುಕಳಿಸಿದ ಮೇಲುಕೋಟೆ ಚೆಲುವರಾಯನ ವೈಭವ, ವೈರಮುಡಿಗಿದೆ ಪೌರಾಣಿಕ ನಂಟು!
ಮಂಡ್ಯ, ಮಾರ್ಚ್ 14: ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿಯ ವೈರಮುಡಿಯ ವೈಭವ ಮರುಕಳಿಸಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸರಳವಾಗಿ ನಡೆದಿದ್ದ ವೈರಮುಡಿ ಬ್ರಹ್ಮೋತ್ಸವ, ಈ ಬಾರಿ(ಮಾ.14) ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಹರಿದು ಬರುತ್ತಿದೆ.
ಮೇಲುಕೋಟೆ ಎಂದಾಗಲೇ ರೋಮಾಂಚನವಾಗುತ್ತದೆ. ಏಕೆಂದರೆ ಇದು ಪ್ರವಾಸಿಗರಿಗೆ ಪ್ರವಾಸಿ ತಾಣವಾದರೆ, ಯಾತ್ರಿಕರಿಗೆ ಪವಿತ್ರ ಕ್ಷೇತ್ರವಾಗಿದೆ. ಹೀಗಾಗಿ ಪ್ರತಿನಿತ್ಯವೂ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ವೈರಮುಡಿ ಬ್ರಹ್ಮೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.
ಮಾ.9 ರಿಂದ ಮೇಲುಕೋಟೆ ವೈರಮುಡಿ ಉತ್ಸವ: 10 ಲಕ್ಷ ಜನ ಸೇರುವ ನಿರೀಕ್ಷೆ
ವೈಷ್ಣವ ಕ್ಷೇತ್ರದಲ್ಲೊಂದಾದ ಮೇಲುಕೋಟೆ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಭಾರತದಲ್ಲಿರುವ ವೈಷ್ಣವ ಕ್ಷೇತ್ರಗಳಾದ ಶ್ರೀರಂಗ, ತಿರುಪತಿ, ಕಾಂಚೀಪುರ ಜತೆ ಒಂದಾಗಿ ಮೇಲುಕೋಟೆಯೂ ಸೇರಿರುವುದು ಇಲ್ಲಿನ ವಿಶೇಷತೆಗೆ ಸಾಕ್ಷಿಯಾಗಿದೆ. ಇನ್ನು ವೈರಮುಡಿ ಬ್ರಹ್ಮೋತ್ಸವದ ಸಮಯದಲ್ಲಿ ಚೆಲುವ ನಾರಾಯಣನಿಗೆ ತೊಡಿಸುವ ರತ್ನಖಚಿತ ಕಿರೀಟವು ಮನವೋಹಕವಾಗಿದ್ದು, ಎಲ್ಲರ ಗಮನ ಸೆಳೆಯುತ್ತದೆ.
ಈ ಕಿರೀಟದ ಬಗ್ಗೆ ತಿಳಿಯುತ್ತಾ ಹೋದರೆ, ಇದಕ್ಕೆ ಪೌರಾಣಿಕ ಮತ್ತು ಐತಿಹಾಸಿಕ ನಂಟಿರುವುದು ತಿಳಿದು ಬರುತ್ತದೆ. ಇದೊಂದು ವಜ್ರಖಚಿತ ಕಿರೀಟವಾಗಿದ್ದು, ಶ್ರೀಮನ್ ನಾರಾಯಣನ ಕಿರೀಟವೆಂದೂ ದ್ವಾಪರ ಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಹೇಳಲಾಗುತ್ತದೆ. ಪೌರಾಣಿಕವಾಗಿ ನೋಡಿದರೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬ ಮಾಹಿತಿಗಳು ದೊರೆಯುತ್ತದೆ.
ವೈರಮುಡಿಗೆ ತೇತ್ರಾಯುಗದ ನಂಟು
ಇನ್ನೊಂದೆಡೆ ವೈರಮುಡಿ ಕಿರೀಟಕ್ಕೆ ತೇತ್ರಾಯುಗದ ನಂಟಿರುವುದು ಗೋಚರಿಸುತ್ತದೆ. ಅಲ್ಲೊಂದು ಕಿರೀಟಕ್ಕೆ ಸಂಬಂಧಿಸಿದ ಕಥೆಯೂ ಇದೆ. ಅದು ಏನೆಂದರೆ ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಹಿರಿಯ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡುತ್ತಾನೆ.
ಆದರೆ, ದಶರಥ ಅಂದುಕೊಂಡಂತೆ ಶ್ರೀರಾಮನಿಗೆ ಪಟ್ಟಕಟ್ಟಲು ಕೈಕೇಯಿ ಬಿಡುವುದಿಲ್ಲ. ಆಕೆ ಕುತಂತ್ರ ಮಾಡಿ ತನ್ನ ಮಗ ಭರತನಿಗೆ ಪಟ್ಟ ಕಟ್ಟಲು ಹವಣಿಸುತ್ತಾಳೆ. ಇನ್ನೇನು ಶ್ರೀರಾಮನಿಗೆ ಪಟ್ಟಾಭಿಷೇಕ ನಡೆಯುತ್ತದೆ ಎಂದು ನಂಬಿದವರು ಕೊನೆಗಳಿಗೆಯಲ್ಲಾದ ಬೆಳವಣಿಗೆಯಿಂದ ಶ್ರೀರಾಮ ಪಟ್ಟವನ್ನೇರುವ ಬದಲಿಗೆ ವನವಾಸಕ್ಕೆ ತೆರಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸೋದರ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.
ರಾಮಾನುಜರಾಗಿ ಬಯಕೆ ತೀರಿಸಿದ ಲಕ್ಷ್ಮಣ
ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ವೈರಮುಡಿ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡ ಬೇರುಂಢ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14 ಆಭರಣಗಳನ್ನು ಧರಿಸಲಾಗುತ್ತದೆ.
ಸುಂದರ ಕ್ಷಣ ಕಣ್ತುಂಬಿಕೊಳ್ಳುವ ಭಕ್ತರು
ವೈರಮುಡಿ ಕಿರೀಟಧಾರಿಯಾಗಿ, ಸರ್ವಾಲಂಕೃತಗೊಂಡ ಚೆಲುವ ನಾರಾಯಣನನ್ನು ವೈರಮುಡಿ ಬ್ರಹ್ಮೋತ್ಸವದ ದಿನದಂದು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಈ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಎರಡು ವರ್ಷಗಳಿಂದ ವೈರಮುಡಿ ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರಿಂದ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ.