ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಏಕನಾಥ ಯಾರು?
ಮುಂಬೈ, ಜೂನ್ 21: ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮೂಡಿದ್ದು, ಶಿವಸೇನಾ ಮುಖಂಡ ಏಕನಾಥ್ ಶಿಂಧೆ ಇಟ್ಟಿರುವ ನಡೆ ಈಗ ಸಿಎಂ ಉದ್ಧವ್ ಠಾಕ್ರೆ ಭವಿಷ್ಯಕ್ಕೆ ಮಾರಕವಾಗುವ ಲಕ್ಷಣಗಳು ಕಂಡು ಬಂದಿವೆ. ಸರಿ ಸುಮಾರು 13 ಶಾಸಕರನ್ನು ಕರೆದುಕೊಂಡು ಗುಜರಾತಿನ ಸೂರತ್ ಪಟ್ಟಣದ ಹೋಟೆಲ್ ವೊಂದರಲ್ಲಿ ಏಕನಾಥ್ ಶಿಂಧೆ ಸದ್ಯ ಬೀಡುಬಿಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಸರ್ಕಾರಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ. ಮಹಾರಾಷ್ಟ್ರ ಅಘಾಡಿಯ ಬುಡವನ್ನು ಅಲ್ಲಾಡಿಸುವಂಥ ಕೃತ್ಯಕ್ಕೆ ಏಕನಾಥ್ ಕೈ ಹಾಕಿದ್ದಾರೆ ಎಂಬ ಮಾಹಿತಿಯಿದೆ.
ಏಕನಾಥ್ ಶಿಂಧೆ ಯಾರು?: ಮಹಾರಾಷ್ಟ್ರದ ರಾಜಕೀಯ ಸಂಚಲನಕ್ಕೆ ಕಾರಣರಾದ ಏಕನಾಥ್ ಶಿಂಧೆ ಬಗ್ಗೆ ಗೂಗಲ್ ಸರ್ಚ್ ಇಂಜಿನ್ ನಲ್ಲೂ ಹುಡುಕಾಟ ಹೆಚ್ಚಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರ ಸಂಘಟನೆ ಮಾಡುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಮಾಸ್ ಲೀಡರ್ ಶಿಂಧೆ, ಠಾಕ್ರೆ ಕುಟುಂಬದ ದೊಡ್ಡ ದೊಡ್ಡ ಸಮಾವೇಶಗಳನ್ನು ಆಯೋಜಿಸಿದ್ದಾರೆ.
ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ, ಕಲ್ಯಾಣ್ ಕ್ಷೇತ್ರದ ಸಂಸದರಾಗಿದ್ದಾರೆ. ಏಕನಾಥ್ ಶಿಂಧೆ 2004, 2009, 2014 ಹಾಗೂ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
2014ರಲ್ಲಿ ಬಿಜೆಪಿ ಹಾಗೂ ಶಿವಸೇನಾ ಸಖ್ಯ ಮುರಿದ ಬಳಿಕ ಶಿವಸೇನಾದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಕಾರ್ಯನಿರ್ವಹಿದ್ದಾರೆ.

ಮಹಾ ವಿಕಾಸ್ ಅಘಾಡಿ ಆರಂಭಿಸಿ, ಹೊಸ ಸರ್ಕಾರ ಉದಯವಾದ ಬಳಿಕ ಶಿಂಧೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ದೊರೆಕಿದೆ. ನಗರಾಭಿವೃದ್ಧಿ ಹಾಗೂ ಮೂಲ ಸೌಕರ್ಯ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆಯೋಧ್ಯೆಗೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಭೇಟಿ ನೀಡಿದಾಗ ಜೊತೆಯಲ್ಲಿ ಏಕನಾಥ್ ಶಿಂಧೆ ಇದ್ದರು.
ಬಿಜೆಪಿ ವಿರುದ್ಧ ತಿರುಗಿಬಿದ್ದ ಶಾಸಕರು
ಇಷ್ಟೆಲ್ಲ ಘಟನೆ ನಡೆದ ಬಳಿಕ ಮಹಾರಾಷ್ಟ್ರದ ಅಘಾಡಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಶಿವಸೇನಾ ಶಾಸಕರು ತಿರುಗಿಬಿದ್ದಿದ್ದಾರೆ. ಮಧ್ಯಪ್ರದೇಶದಂತೆ ಮಹಾರಾಷ್ಟ್ರದಲ್ಲಿ ಸರ್ಕಾರ ಬೀಳಿಸುವ ಕನಸು ನನಸಾಗಲ್ಲ ಎಂದು ಸೇನಾ ಶಾಸಕರು ಗುಡುಗಿದ್ದಾರೆ.
Recommended Video
ಇಷ್ಟಕ್ಕೂ ಏಕನಾಥ್ ಶಿಂಧೆ ಅಸಮಾಧಾನಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ, ಮಾನ್ಯತೆ ಸಿಗುತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಯಿದೆ.












Click it and Unblock the Notifications