ಅಂದು ಹಾಲಿನ ವ್ಯಾಪಾರಿ, ಇಂದು ಕೋಲಾರದ ಬಿಜೆಪಿ ಸಂಸದ!
Recommended Video
ಕೋಲಾರ, ಮೇ 27 : 2019ರ ಲೋಕಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಹಲವು ಅಚ್ಚರಿಗೆ ಕಾರಣವಾಗಿದೆ. ಕೋಲಾರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ ಅವರು 6 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರಿಗೆ ಸೋಲಿನ ತೋರಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ ಅವರು 709165 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಬಿಎಂಪಿ ಸದಸ್ಯರಾಗಿದ್ದ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕಾಡುಗೋಡಿ ವಾರ್ಡ್ ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿ ಅವರನ್ನು ಕೋಲಾರದ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. 6 ಬಾರಿಯ ಸಂಸದ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮುನಿಸ್ವಾಮಿ ಎದುರಾಳಿಯೇ? ಎಂದು ಹಲವರು ಅಚ್ಚರಿಪಟ್ಟಿದ್ದರು.
ಕೋಲಾರದ ಜನರ ತೀರ್ಮಾನ ಮೇ 23ರಂದು ಪ್ರಕಟವಾದಾಗ ಮೂಗಿನ ಮೇಲೆ ಬೆರಳಿಟ್ಟವರೇ ಹೆಚ್ಚು. ಎಸ್.ಮುನಿಸ್ವಾಮಿ ಅವರು 210021 ಮತಗಳ ಅಂತರದಿಂದ ಮುನಿಸ್ವಾಮಿ ಗೆಲುವು ಕಂಡಿದ್ದರು. ಸಂಸತ್ ಭವನದ ಮೆಟ್ಟಿಲಿಗೆ ನಮಸ್ಕಾರ ಮಾಡಿ ಮುನಿಸ್ವಾಮಿ ತಮ್ಮ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ.... ಮುನಿಸ್ವಾಮಿ ಅವರ ಪರಿಚಯ ಇಲ್ಲಿದೆ......

ಅಂದು ಹಾಲಿನ ವ್ಯಾಪಾರಿ
ಎಸ್.ಮುನಿಸ್ವಾಮಿ ಅವರು ಮೂಲತಃ ಮಾಲೂರು ತಾಲೂಕಿನ ಟೇಕಲ್ನ ಯಲುವಗುಳಿ ಗ್ರಾಮದವರು. ಪಿಯುಸಿ ವ್ಯಾಸಂಗ ಮಾಡಿದ ಬಳಿಕ ಅವರು ಊರನ್ನು ಬಿಟ್ಟು ಬೆಂಗಳೂರಿಗೆ ಬಂದರು. ಮೊದಲು ಮನೆ-ಮನೆಗೆ ಹಾಲು ಹಾಕುತ್ತಿದ್ದು, ಬಳಿಕ ಆ ವ್ಯಾಪಾರವನ್ನು ಮತ್ತಷ್ಟು ವಿಸ್ತರಣೆ ಮಾಡಿದ್ದರು.

ರಾಜಕೀಯ ಜೀವನ ಆರಂಭ
ಎಸ್.ಮುನಿಸ್ವಾಮಿ ಅವರು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಶಿಷ್ಯರಾಗಿದ್ದರು. ಕಾಡುಗೋಡಿ ವ್ಯಾಪ್ತಿಯ ಸೀಗೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದರು.

ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತ
ಮಲ್ಲಿಕಾರ್ಜುನ ಖರ್ಗೆ ಶಿಷ್ಯರಾಗಿದ್ದ ಮುನಿಸ್ವಾಮಿ ಅವರು ನಂತರ ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತರಾದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಬೆಂಬಲಿಗರಾದರು. ಕಾಡುಗೋಡಿ ವಾರ್ಡ್ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಹಿಂದೊಮ್ಮೆ ಬಿಬಿಎಂಪಿ ಮೇಯರ್ ಸ್ಥಾನದ ಚುನಾವಣೆಗೂ ನಾಮಪತ್ರ ಸಲ್ಲಿಸಿದ್ದರು.

ಮುನಿಯಪ್ಪಗೆ ಸೋಲುಣಿಸಿದರು
2019ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕೋಲಾರ ಕ್ಷೇತ್ರದಲ್ಲಿ ಕಣಕ್ಕಿಳಿದ ಎಸ್.ಮುನಿಸ್ವಾಮಿ ಅವರು 709165 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು 210021 ಮತಗಳಿಂದ ಸೋಲಿಸಿದ್ದಾರೆ.












Click it and Unblock the Notifications