ಕಣ್ಣು ಬಿಟ್ಟಿತು ಅನ್ನುವಷ್ಟರಲ್ಲಿ ಡಲ್ಲು ಹೊಡೆಯಿತೇ ಕಾಂಗ್ರೆಸ್? ಗಾದಿಯ ಹಾದಿಯಲ್ಲಿ ಮೈ ಮರೆವು ತರವೆ?
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಿತಲ್ಲಾ, ಆಗ ಮೂರು ರಾಜ್ಯಗಳಲ್ಲಿ ಸರಕಾರ ರಚನೆ ಮಾಡಿದ ಕಾಂಗ್ರೆಸ್, ಇನ್ನೇನು ಚಿಗಿತುಕೊಂಡೇ ಬಿಟ್ಟಿತು ಎನ್ನಿಸಿತ್ತು. ಆದರೆ ನಾಲ್ಕು ತಿಂಗಳ ಅಂತರದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ದುರ್ಬಲವಾದಂತೆ ಕಾಣುತ್ತಿದೆ ಎಂದು ಪಕ್ಷದೊಳಗೆ ಮಾತನಾಡುತ್ತಾರೆ.
ದುರ್ಬಲವಾದ ಚುನಾವಣೆ ಪ್ರಚಾರ, ಸಂವಹನ ಕೊರತೆ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಎದುರು ಕಾಂಗ್ರೆಸ್ ಕಳಾಹೀನವಾದಂತೆ ಕಾಣುತ್ತದೆ. ತಪ್ಪಾದ ಹೆಜ್ಜೆಗಳು ಹಾಗೂ ಸರಿಯಾದ ಅಥವಾ ಸೂಕ್ತ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ವಿಫಲವಾಗಿರುವುದು ಅತಿ ದೊಡ್ಡ ಹಿನ್ನಡೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.
'ಬೂಸಾ ಸುದ್ದಿ' ಹಂಚಿಕೊಳ್ಳುವುದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಯಾರೂ ಕಡಿಮೆ ಇಲ್ಲ
ಹಾಗಂತ ಇದೇನೋ ಎಲ್ಲ ಮುಗಿದು ಹೋಗಿದೆ ಅಂತಲ್ಲ. ಫಲಿತಾಂಶಕ್ಕೆ ಮೇ ಇಪ್ಪತ್ಮೂರನೇ ತಾರೀಕಿನ ತನಕ ಕಾಯಲೇಬೇಕು. ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರುತ್ತಾರಾ ಎಂಬ ಪ್ರಶ್ನೆಗೆ ತಜ್ಞರೇ ಹೇಳುವ ಉತ್ತರದ ಪ್ರಕಾರ, ಬಹುಮತಕ್ಕೆ ಹತ್ತಿರ ಬರುವ ಅವಕಾಶ ಅಂತೂ ಇದೆ. ಆದರೆ ಕಾಂಗ್ರೆಸ್ ಪಾಲಿಗೆ ಸಮಸ್ಯೆಯಾಗಿದ್ದು ಏನು?
ಎಲ್ಲೆಲ್ಲೂ ರಾರಾಜಿಸಿದ ಬಿಜೆಪಿ
ಭಾರತದ ಬಡವರಿಗೆ ವಾರ್ಷಿಕ ಎಪ್ಪತ್ತೆರಡು ಸಾವಿರ ರುಪಾಯಿ ಆದಾಯ ಖಾತ್ರಿ ನೀಡಿದ್ದು ನಿಜಕ್ಕೂ ಒಳ್ಳೆ ಯೋಜನೆ. ಆದರೆ ಅದನ್ನು ಬಹಳ ತಡವಾಗಿ ಘೋಷಣೆ ಮಾಡಲಾಯಿತು. ಮೊದಲ ಹಂತದ ಮತದಾನಕ್ಕೆ ಇನ್ನೇನು ಕೆಲವೇ ದಿನ ಇರುವಾಗ ಘೋಷಣೆ ಮಾಡಿದ ಯೋಜನೆ ಜನರನ್ನು ನಿರೀಕ್ಷಿತ ಪ್ರಮಾಣದಲ್ಲಿ ತಲುಪಲು ಆಗಿಲ್ಲ. ಆದರೆ ಮೋದಿ ಪ್ರಚಾರ ಭಾಷಣದಲ್ಲಿ ಏನೆಲ್ಲ ಹೇಳಬೇಕಿತ್ತು, ಅವೆಲ್ಲವನ್ನೂ ಪರಿಣಾಮಕಾರಿಯಾಗಿ ದಾಟಿಸಲಾಯಿತು. ಪತ್ರಿಕೆಗಳ ಮುಖ ಪುಟಗಳಲ್ಲಿ, ಟೀವಿ ಪರದೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ, ಪ್ರಚಾರ ಸಭೆ ಹಾಗೂ ಸಮಾರಂಭಗಳಲ್ಲಿ ಬಿಜೆಪಿಯೇ ರಾರಾಜಿಸಿತು. ಕಾಂಗ್ರೆಸ್ ನಿಂದ ಹೇಳುವ ಪ್ರಕಾರ, ಪ್ರತಿ ರಾಜ್ಯದಲ್ಲಿ ಮೋದಿ ವಿಚಾರವಾಗಿ ಒಂದೊಂದು ಬಗೆಯ ಆಕ್ರೋಶ ಇದೆ. ಆದರೆ ಅದು ಮೋದಿಯನ್ನು ಸೋಲಿಸಿ, ಕಾಂಗ್ರೆಸ್ ಅನ್ನು ಗೆಲ್ಲಿಸುವಷ್ಟು ಶಕ್ತವಾಗಿದ್ದವೇ ಎಂಬುದಕ್ಕೆ ಉತ್ತರ ಇಲ್ಲ.
ಮತದಾರರಿಗೆ ಭರವಸೆಗಳ ಬಗ್ಗೆ ಮಾಹಿತಿ ಇರಲಿಲ್ಲ
ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿಗೆ ಜನರನ್ನು ಮಾಧ್ಯಮಗಳ ಮೂಲಕ ತಲುಪಲು ದೊರೆತ ಅವಕಾಶ ಕಾಂಗ್ರೆಸ್ ನ ರಾಹುಲ್ ಗಾಂಧಿಗೆ ಖಂಡಿತ ಸಿಕ್ಕಿಲ್ಲ ಅಥವಾ ಆ ಅವಕಾಶ ಸೃಷ್ಟಿಸಿಕೊಳ್ಳುವಲ್ಲಿ ಅವರು ಸಫಲರಾಗಿಲ್ಲ. ಬಹಳ ಮುಖ್ಯವಾದ ಎರಡು ರಾಜ್ಯಗಳಲ್ಲಿ, ಅತಿ ಮುಖ್ಯವಾದ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಫಲ ಆಗಲಿಲ್ಲ. ತಳ ಮಟ್ಟದ ಸಂಘಟನೆಯನ್ನು ಪರಿಣಾಮಕಾರಿಯಾಗಿ ಬಲಪಡಿಸಲು ಆಗಲಿಲ್ಲ. ಪರಿಸ್ಥಿತಿ ಹೇಗಾಯಿತು ಅಂದರೆ, ಕಷ್ಟವಾಗಿ ಇದ್ದ ಸ್ಪರ್ಧೆಯು ಕಠಿಣವಾಗಿ ಪರಿಣಮಿಸಿತು. ಪ್ರಣಾಳಿಕೆ ಬಿಡುಗಡೆ ಮಾಡುವುದನ್ನು ಕಾಂಗ್ರೆಸ್ ತಡ ಮಾಡಿತು. ಇನ್ನು ಪ್ರಚಾರ ಸಾಮಗ್ರಿಗಳನ್ನು ತಡ ಮಾಡಿತು. ಪ್ರಚಾರವನ್ನು ಹೆಚ್ಚು ತೀಕ್ಷ್ಣಗೊಳಿಸಬೇಕಿದ್ದ ಜನರೇ ಹಿಂದಕ್ಕೆ ಉಳಿದುಕೊಂಡರು. ಎಷ್ಟೋ ಕಡೆ ಮತದಾರರಿರಲಿ ಕಾಂಗ್ರೆಸ್ ಕಾರ್ಯಕರ್ತರಿಗೇ ಪ್ರಚಾರ ಯಾವಾಗ, ಎಲ್ಲಿ ಆಯಿತು ಎಂಬ ಬಗ್ಗೆ ಗೊತ್ತೇ ಆಗಿಲ್ಲ. ಅತಿ ಹೆಚ್ಚಿನ ಸಂಸದರ ಆಯ್ಕೆ ಆಗುವ ಉತ್ತರಪ್ರದೇಶದ ಉತ್ತರ ಭಾಗದಲ್ಲಿ ಅದೆಷ್ಟೋ ಮತದಾರರಿಗೆ ಕಾಂಗ್ರೆಸ್ ನೀಡಿದ ಭರವಸೆಗಳ ಮಾಹಿತಿಯೇ ದೊರೆತಿಲ್ಲ.
ಪುಲ್ವಾಮಾ ದಾಳಿಯ ನಂತರ ಬದಲಾದ ಪರಿಸ್ಥಿತಿ
ಆದರೆ, ಇಲ್ಲಿ ಒಂದು ಅಂಶದ ಬಗ್ಗೆ ಗಮನ ಸೆಳೆಯಬೇಕು. ಭಾರತದಲ್ಲಿ ಚುನಾವಣೆಗಳ ಬಗ್ಗೆ ಭವಿಷ್ಯ ಹೇಳುವುದು ಅತ್ಯಂತ ಕಷ್ಟದ ಸಂಗತಿ. ಕೃಷಿ ವಲಯದ ಒತ್ತಡ, ಉದ್ಯೋಗ ಸೃಷ್ಟಿ ಆಗದಿರುವುದು ಈಗಲೂ ಬಿಜೆಪಿ ಪಾಲಿಗೆ ಹೊಡೆತವೇ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಅಂಥ ಎಚ್ಚರಿಕೆ ಗಂಟೆಯಾಗಿತ್ತು. ಯಾವುದೇ ಪ್ರಾದೇಶಿಕ ಅಥವಾ ಜಾತಿ ಆಧಾರಿತ ಪಕ್ಷಕ್ಕೆ ಮೋದಿ ವಿರೋಧಿ ಅಲೆಯಿಂದ ಕಾಂಗ್ರೆಸ್ ಗೆ ಆಗುವಂಥ ಲಾಭ ದೊರೆಯುವುದಿಲ್ಲ. ಹಾಗೆ ಒಂದು ವೇಳೆ ಲಾಭವಾದರೆ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿ ಕೂಟ ಮಾಡಿಕೊಂಡು ಸರಕಾರ ರಚಿಸುವ ಸಾಧ್ಯತೆಗಳಿವೆ. ಗೆಲ್ಲುವ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಇತ್ತು. ಆದರೆ ಪುಲ್ವಾಮಾ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ವಾಯು ದಾಳಿ ನಡೆಸಿದ ನಂತರ ಲೆಕ್ಕಾಚಾರ ಪೂರ್ತಿ ಬದಲಾಯಿತು. ಸರಕಾರದ ವಿರುದ್ಧ ಪ್ರಚಾರಕ್ಕೆ ವಿಷಯ ಇಲ್ಲದಂತಾಯಿತು ಎಂಬುದನ್ನು ಪಕ್ಷದೊಳಗಿನವರೇ ಒಪ್ಪುತ್ತಾರೆ.
ಮೇ ಇಪ್ಪತ್ಮೂರನೇ ತಾರೀಕಿನ ತನಕ ಕಾಯಬೇಕು
ಕಾಂಗ್ರೆಸ್ ನ ಹಿರಿಯ ನಾಯಕರಾದ ಪಿ.ಚಿದಂಬರಂ ಒಪ್ಪಿಕೊಳ್ಳುವ ಪ್ರಕಾರ, ಈ ವರೆಗೆ ಚುನಾವಣೆಯಲ್ಲಿ ಮೋದಿ ಮೇಲುಗೈ ಸಾಧಿಸಿದ್ದಾರೆ. ಆದರೆ ಕಾಂಗ್ರೆಸ್ ನಿಂದ ಪ್ರಚಾರ ಆರಂಭಿಸಿದ್ದು ತಡವಾಯಿತು ಎಂಬುದನ್ನು ಒಪ್ಪುವುದಿಲ್ಲ. ಈ ಚುನಾವಣೆಯಲ್ಲಿ ಯಾರಿಗಾದರೂ ಲಾಭವಾಗುವಂತೆ ಇದ್ದರೆ ಅದು ರಾಹುಲ್ ಗಾಂಧಿಗೆ. ಮತ್ತು ಯಾರಿಗಾದರೂ ನೆಲೆ ಕಳೆದುಕೊಳ್ಳುವಂತೆ ಇದ್ದರೆ ಅದು ನರೇಂದ್ರ ಮೋದಿಗೆ. ಬಿಜೆಪಿಯು ದೊಡ್ಡ ಮಟ್ಟದಲ್ಲಿ ನಷ್ಟ ಎದುರಿಸುತ್ತದೆ ಎಂದಿದ್ದಾರೆ. ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆಯಾ ಎಂದರೆ ಅದಕ್ಕೆ ಹಲವು ರಾಜಕೀಯ ತಜ್ಞರು 'ಹೌದು' ಎಂಬ ಉತ್ತರವನ್ನೇ ನೀಡುತ್ತಾರೆ. ಏನೇ ಆದರೂ ಮೇ ಇಪ್ಪತ್ಮೂರನೇ ತಾರೀಕಿನ ತನಕ ಕಾದರೆ ಉತ್ತರ ದೊರೆಯಲಿದೆ.