ಲೋಕಸಭಾ ಚುನಾವಣೆ : ಕಾಂಗ್ರೆಸ್ ಹಿನ್ನಡೆಗೆ ಮೈತ್ರಿಯೇ ಕಾರಣ!
ಬೆಂಗಳೂರು, ಮೇ 23 : 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದರೂ ಮೈತ್ರಿಕೂಟದ ತಂತ್ರಗಳು ನೆಲಕಚ್ಚಿವೆ.
ಗುರುವಾರ ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯಿತು. ಬಿಜೆಪಿ 23 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 3, ಜೆಡಿಎಸ್ 1 ಮತ್ತು ಇತರ ಅಭ್ಯರ್ಥಿಗಳು 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
2014ರ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ, ಈ ಬಾರಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಎರಡಂಕಿ ದಾಟಲು ವಿಫಲವಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯೇ ಪಕ್ಷಕ್ಕೆ ಮುಳುವಾಗಿದೆ.
ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದು ಮಾತ್ರವಲ್ಲ ಹಿರಿಯ ನಾಯಕರು ಸೋಲಿನತ್ತ ಮುಖ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಸಿ.ಎಚ್.ವಿಜಯಶಂಕರ್ ಅವರು ಭಾರಿ ಹಿನ್ನಡೆ ಕಂಡಿದ್ದಾರೆ.
ಸದ್ಯ ಕರ್ನಾಟಕದ ಮೈತ್ರಿ ಸರ್ಕಾರ ಮುಂದುವರೆಯಲಿದೆಯೇ? ಅಥವ ಪತನಗೊಳ್ಳಲಿದೆಯೇ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನದ ಮೇಲೆ ಎಲ್ಲರೂ ನಿಂತಿದೆ.
ಸೀಟು ಹಂಚಿಕೆ ಗೊಂದಲ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದವು. ಆದರೆ, ಸೀಟು ಹಂಚಿಕೆ ಪ್ರಕ್ರಿಯೆ ಎರಡೂ ಪಕ್ಷಗಳಿಗೆ ಕಗ್ಗಂಟಾಗಿತ್ತು. 12 ಸ್ಥಾನಗಳನ್ನು ಬಿಟ್ಟುಕೊಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೇಡಿಕೆ ಮುಂದಿಟ್ಟಿದ್ದರು. ಆದರೆ, ಕಾಂಗ್ರೆಸ್ ನಾಯಕರು ಇದಕ್ಕೆ ಒಪ್ಪಿರಲಿಲ್ಲ. ಅಂತಿಮವಾಗಿ ಜೆಡಿಎಸ್ಗೆ 8 ಸೀಟು ನೀಡಲಾಯಿತು. ಅದರಲ್ಲೂ ಒಂದು ಸೀಟನ್ನು ಪುನಃ ಕಾಂಗ್ರೆಸ್ಗೆ ನೀಡಲಾಯಿತು.
22, 7 ಕ್ಷೇತ್ರಗಳಲ್ಲಿ ಕಣಕ್ಕೆ
ರಾಜ್ಯದ 28 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್, 7 ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕಿಳಿದವು. ಆದರೆ, ಮೈತ್ರಿಗೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದರು. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದರು. ಇದು ಚುನಾವಣೆ ಮೇಲೆ ಭಾರಿ ಪರಿಣಾಮ ಬೀರಿತು.
ಮೈತ್ರಿ ಸರ್ಕಾರದ ಧೋರಣೆ
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಎರಡೂ ಪಕ್ಷದ ಸಾಮಾನ್ಯ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸುವುದಾಗಿ ಘೋಷಣೆ ಮಾಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಹಿನ್ನಡೆ ಉಂಟು ಮಾಡಿದೆ.
ಮೈತ್ರಿ ಮುಂದುವರಿಕೆಗೆ ವಿರೋಧ
ಮೈತ್ರಿಯನ್ನು ಮುಂದುವರೆಸುವುದು ಬೇಡ ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಹೈಕಮಾಂಡ್ ನಾಯಕರ ಸೂಚನೆಯಂತೆ ಚುನಾವಣೆಯಲ್ಲಿ ಮೈತ್ರಿಯನ್ನು ಮುಂದುವರೆಸಲಾಯಿತು. ಆದರೆ, ಚುನಾವಣೆಯಲ್ಲಿ ಇದು ಸಹಾಯಕವಾಗಲಿಲ್ಲ.