ರಮಣೀಯ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಯಾರ ತೆಕ್ಕೆಗೆ?
Recommended Video

ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಕಾಡುಗಳನ್ನು, ಜಲಪಾತಗಳನ್ನು ಹೊಂದಿರುವ ಅತಿ ಸುಂದರ ಜಿಲ್ಲೆ ಉತ್ತರ ಕನ್ನಡ.
ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಿಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ... ಎಂಬ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಚುಟುಕು ಉತ್ತರ ಕನ್ನಡದ ಸೌಂದರ್ಯವನ್ನು ಅಕ್ಷರಗಳ ಮೂಲಕ ಸ್ಪಷ್ಟವಾಗಿ ವಿವರಿಸಿದೆ.
ಹಲವು ಐತಿಹಾಸಿಕ ಮಹತ್ವಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಒಟ್ಟು 11 ತಾಲೂಕುಗಳಿವೆ. ಕೃಷಿಯನ್ನೇ ಆದಾಯದ ಮೂಲವನ್ನಾಗಿ ನಂಬಿರುವ ಇಲ್ಲಿನ ಜನ ಅಡಿಕೆ ಮತ್ತು ಭತ್ತವನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಾರೆ.

ಹವ್ಯಕ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯದವರೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ವಿವಿಧ ಮತಗಳ ಜನರೂ ಸಹಬಾಳ್ವೆಯಲ್ಲೇ ಬದುಕು ನಡೆಸುತ್ತಿದ್ದಾರೆ.
ಈ ಜಿಲ್ಲೆಯ ರಾಜಕೀಯದ ಬಗ್ಗೆ ಯೋಚಿಸುವುದಾದರೆ 2004 ರಿಂದ ಸತತ ಮೂರು ಬಾರಿಗೆ ಅನಂತ ಕುಮಾರ್ ಹೆಗಡೆ ಅವರೇ ಸಂಸದರಾಗಿ ಆಯ್ಕೆಯಾಗಿದ್ದಾರೆ.
1957 ಮತ್ತು 1962 ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಜೆಪಿ ಆಳ್ವಾ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ನಂತರ 1967 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ ಡಿ ದತ್ತಾತ್ರೇಯ ಅವರು ಆಯ್ಕೆಯಾದರು. ನಂತರ 1971 ರಲ್ಲಿ ಬಾಲಕೃಷ್ಣ ವೆಂಕಣ್ಣ ನಾಯ್ಕ್, 1977 ಬಾಲ್ಸು ಪುರ್ಸು ಕದಮ್, 1980 ರಿಂದ 1991ರವರೆಗೆ ಜಿ ದೇವರಾಯ ನಾಯ್ಕ್ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಉತ್ತರ ಕನ್ನಡವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಳ್ಳುವಂತೆ ಮಾಡಿದರು. ಆದರೆ 1996 ಮತ್ತು 1998 ರಲ್ಲಿ ಬಿಜೆಪಿಯ ಅನಂತ ಕುಮಾರ್ ಹೆಗಡೆ ಅವರು ಜಯಶಾಲಿಯಾಗಿ, ಉತ್ತರ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಖಾತೆ ತೆರೆಯುವಂತೆ ಮಾಡಿದರು. 1999 ರಲ್ಲಿ ಕಾಂಗ್ರೆಸ್ಸಿನ ಮಾರ್ಗರೇಟ್ ಆಳ್ವಾ ಗೆಲುವು ಸಾಧಿಸಿದರು.

2014 ರಲ್ಲಿ ಗೆಲುವು ಸಾಧಿಸಿದ ಅನಂತ್ ಕುಮಾರ್ ಹೆಗಡೆ ಅವರು ಸದಾ ಒಂದಿಲ್ಲೊಮದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಾದವರು. ನರೇಂದ್ರ ಮೋದಿ ಸರ್ಕಾರದಲ್ಲಿ ಕೌಶಲಾಭಿವೃದ್ಧಿ ಸಚಿವ ಸ್ಥಾನ ಸಿಕ್ಕ ಮೇಲೆ ಹೆಗಡೆ ಅವರ ವರ್ಚಸ್ಸು ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಿದೆ.
ಆದರೆ ಸತತ ಮೂರು ಬಾರಿ ಗೆಲುವು ಸಾಧಿಸಿದರೂ ಹೆಗಡೆ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚು ಶ್ರಮಿಸಿಲ್ಲ ಎಂಬ ಮಾತು ಕೇಳಿಬರುತ್ತಿದ್ದು ಈ ಬಾರಿ ಕ್ಷೇತ್ರದ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಯೋಚಿಸುವುದಾದರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲದಿರುವುದು ತಿಳಿಯುತ್ತದೆ. ಜಿಲ್ಲೆಯಲ್ಲಿ ಸಾಕಷ್ಟು ಜಲಪಾತಗಳಿದ್ದರೂ, ಸುಂದರ ಪ್ರವಾಸೀ ತಾಣಗಳಿದ್ದರೂ ಅವುಗಳಿಗೆ ತಲುಪಲು ಸರಿಯಾದ ರಸ್ತೆಗಳಿಲ್ಲ, ಪ್ರವಾಸಿ ಮಂದಿರಗಳಿಲ್ಲ. ಅತಿಥಿ ಗೃಹಗಳೂ ಹೆಚ್ಚಿಲ್ಲ. ಈ ಎಲ್ಲ ಕಾರಣಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ವಿದ್ಯುತ್ ಗಾಗಿ ಪರದಾಟ ನಡೆಸುವ ಸಂಕಷ್ಟ ಇಲ್ಲಿನ ಜನರಿಗೆ ಎಂದಿಗೂ ತಪ್ಪಿಲ್ಲ. ಅಂತರ್ಜಲ ಬತ್ತುತ್ತಿರುವುದರಿಂದ ಈಗೀಗ ಬೇಸಿಗೆಯಲ್ಲಿ ನೀರಿನ ಸಮಸ್ಯೆಯೂ ಎದುರಾಗುತ್ತಿದೆ.
ಅಡಿಕೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಅಡಿಕೆ ಬೆಳೆಗೆ ಬೆಂಬಲ ಬೆಲೆ, ಕೊಳೆ ರೋಗದ ಸಮಸ್ಯೆಗೆ ಪರಿಹಾರ, ಸಾಲ ಸೌಲಭ್ಯ, ಮೀನುಗಾರರಿಗೆ ನೆರವು, ಜಿಲ್ಲೆಯ ಹಲವೆಡೆ ವಾಸವಿರುವ ಸಿದ್ಧಿ ಸೇರಿದಂತೆ ಬುಡಕಟ್ಟು ಜನರ ಜೀವನಮಟ್ಟ ಸುಧಾರಿಸಲು ಕ್ರಮ... ಇವೆಲ್ಲಸರ್ಕಾರದಿಂದ ಇಲ್ಲಿನ ಮತದಾರರ ನಿರೀಕ್ಷೆ.
2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳು ಇವು:
ಕಾರವಾರ, ಶಿರಸಿ, ಯಲ್ಲಾಪುರ, ಭಟ್ಕಳ, ಕುಮಟಾ, ಹಳಿಯಾಳ, ಖಾನಾಪುರ, ಕಿತ್ತೂರ್ ಇವುಗಳಲ್ಲಿ ಖಾನಾಪುರ ಮತ್ತು ಕಿತ್ತೂರು ಕ್ಷೇತ್ರಗಳು ಬೆಳಗಾವಿ ಜಿಲ್ಲೆಯಲ್ಲಿ ಬರುತ್ತವೆ.

2014 ರ ಚುನಾವಣೆಯ ಸಮಯದಲ್ಲಿ ಜಿಲ್ಲೆಯಲ್ಲಿ ಒಟ್ಟು ಮತದಾರರು 1,450,599
ಅವರಲ್ಲಿ 707,734 ಮಹಿಳಾ ಮತದಾರರಿದ್ದರೆ, 742,865 ರಷ್ಟು ಪುರುಷ ಮತದಾರರಿದ್ದರು.
ಕ್ಷೇತ್ರದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಇದುವರೆಗೂ ಲೋಕಸಭೆಯಲ್ಲಿ 245 ಪ್ರಶ್ನೆಗಳನ್ನು ಕೇಳಿದ್ದು, ಕೇವಲ 1 ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಲೋಕಸಭೆ ಹಾಜರಾತಿ ಶೇ. 96.

ಜಿಲ್ಲೆಯ ಒಟ್ಟು ಜನಸಂಖ್ಯೆ 19,38,268
ಗ್ರಾಮೀಣ ಪ್ರದೇಶದ ಜನಸಂಖ್ಯೆ 76.62%
ನಗರ ಪ್ರದೇಶದ ಜನಸಂಖ್ಯೆ 23.38%
ಪರಿಶಿಷ್ಟ ಜಾತಿ ಜನಸಂಖ್ಯೆ 7.88%
ಪರಿಶಿಷ್ಟ ಪಂಗಡ ಜನಸಂಖ್ಯೆ 3.77%
2014 ರ ಚುನಾವಣೆಯಲ್ಲಿ ಒಟ್ಟು ಮತಚಲಾಯಿಸಿದವರ ಸಂಖ್ಯೆ 10,01,038. ಅವರಲ್ಲಿ 521541 ಪುರುಷ ಮತದಾರರಿದ್ದರೆ, 479497 ಮಹಿಳಾ ಮತದಾರರು ಮತ ಚಲಾಯಿಸಿದ್ದರು.

2014 ರಲ್ಲಿ ಕಾಂಗ್ರೆಸ್ಸಿನ ಪ್ರಶಾಂತ್ ಆರ್ ದೇಶಪಾಂಡೆ ಅವರ ವಿರುದ್ಧ ಬಿಜೆಪಿಯ ಅನಂತ ಕುಮಾರ್ ಹೆಗಡೆ 546,939 ಮತಗಳನ್ನು ಪಡೆದು, 140700 ಮತಗಳ ಅಂತರದಲ್ಲಿ ಭಾರೀ ಜಯ ಸಾಧಿಸಿದ್ದರು. ಪ್ರಶಾಂತ್ ದೇಶಪಾಂಡೆ ಪಡೆದ ಒಟ್ಟು ಮತಗಳು 406,239.












Click it and Unblock the Notifications