ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?
ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ಐತಿಹಾಸಿಕ, ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದ ಕ್ಷೇತ್ರ.
ಒಂದು ಕಾಲದಲ್ಲಿ ಬಿದಿರು ಬೆಳೆಗೆ ಪ್ರಸಿದ್ಧವಾಗಿದ್ದರಿಂದ ಈ ಜಿಲ್ಲೆಗೆ ಬೀದರ್ ಎಂಬ ಹೆಸರು ಬಂದಿದೆ ಎಂದು ಇತಿಹಾಸಗಳು ಹೇಳುತ್ತವೆ. ಹವಾಮಾನದಲ್ಲಿ ಶೀಘ್ರ ವೈಪರೀತ್ಯ ಕಾಣುವ ಬೀದರ್, ಕರಕುಶಲ ಕಲೆಗೆ ಹೇಳಿ ಮಾಡಿಸಿದ ಸ್ಥಳ.
ಭಾರತದ ಪೌರಾಣಿಕ ಕತೆಗಳಲ್ಲಿ ಬೀದರಿನ ಉಲ್ಲೇಖ ಸಿಗುತ್ತದೆ. ವಿದುರ ಬೀದರಿನಲ್ಲಿ ವಾಸವಾಗಿದ್ದಾನೆಂದು ಕೆಲವು ಉಲ್ಲೇಖಗಳು ಹೇಳುತ್ತವೆ. ಆದ್ದರಿಂದಲೇ ಬೀದರ್ ಅನ್ನು ಹಿಂದೆ ವಿದುರ ನಗರ ಎಂದೂ ಕರೆಯಲಾಗುತ್ತಿತ್ತು. ನಳ ಮತ್ತು ದಮಯಂತಿಯರೂ ಇದೇ ಸ್ಥಳದಲ್ಲಿ ಭೇಟಿಯಾದರು ಎಂದೂ ಪುರಾಣ ಕತೆಗಳು ಹೇಳುತ್ತವೆ. ಇಲ್ಲಿನ ಬಸವ ಕಲ್ಯಾಣ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದೆ.
ಹಲವು ಪ್ರಸಿದ್ಧ ಪ್ರವಾಸೀ ತಾಣಗಳನ್ನೂ ಹೊಂದಿರುವ ಬೀದರ್ ನಲ್ಲಿ, ಹೆಚ್ಚಾಗಿ ಮೊಘಲ್ ಸಂಸ್ಕೃತಿಯ ಪ್ರಭಾವವನ್ನು ಕಾಣಬಹುದು. ಮೊದಲು ಹೈದರಾಬಾದ್ ಪ್ರಾಂತ್ಯದ ಭಾಗವಾಗಿದ್ದ ಬೀದರ್ ನಂತರ ಕರ್ನಾಟಕದ ಭಾಗವಾಯಿತು. ಪ್ರಮುಖ ಲೋಕಸಭಾ ಕ್ಷೆತ್ರವಾಗಿಯೂ ಹೆಸರು ಪಡೆದ ಈ ಕ್ಷೇತ್ರದಿಂದಲೇ ಮಾಜಿ ಮುಖ್ಯಮಂತ್ರಿ ದಿ. ಧರಂ ಸಿಂಗ್ ಅವರು ಸಹ ಕಾಂಗ್ರೆಸ್ ನಿಂದ 2009 ರಲ್ಲಿ ಸ್ಪರ್ಧಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಬೀದರ್ ಜಿಲ್ಲೆಯ ಲೋಕಸಭಾ ಚುನಾವಣೆಯ ಇತಿಹಾಸ ಕೆಣಕಿದರೆ 1962 ರಲ್ಲಿ ಮೈಸೂರು ರಾಜ್ಯದ ಅಡಿಯಲ್ಲಿದ್ದಾಗ ಕಾಂಗ್ರೆಸ್ ಆಧಿಪತ್ಯದಲ್ಲಿ ಈ ಕ್ಷೇತ್ರವಿತ್ತು.
1962 ಮತ್ತು 1967 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ರಾಮಚಂದ್ರ ವೀರಪ್ಪ ರಾಮಚಂದ್ರ ವೀರಪ್ಪ ಅವರು ಗೆಲುವು ಸಾಧಿಸಿದರೆ, 1971 ಕಾಂಗ್ರೆಸ್ ನ ಶಂಕರ್ ದೇವ್ ಬಾಲಾಜಿ ರಾವ್ ಗೆದ್ದಿದ್ದರು.
ನಂತರ ಮೈಸೂರು ರಾಜ್ಯ ಕರ್ನಾಟಕವಾಗಿ ಬದಲಾದ ಮೇಲೆ 1977 ರಲ್ಲೂ ಸಹ ಶಂಕರದೇವ್ ಬಾಲಾಜಿ ರಾವ್ ಗೆಲುವು ಸಾಧಿಸಿದ್ದರು. ನಂತರ 1980, 1984 ಮತ್ತು 1989 ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ನರಸಿಂಗರಾವ್ ಸೂರ್ಯವಂಶಿ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರಾಮಚಂದ್ರಪ್ಪ ವೀರಪ್ಪ 1991 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವಲುವ ಮೂಲಕ ಪ್ರಪ್ರಥಮ ಬಾರಿಗೆ ಬೀದರ್ ನಲ್ಲಿ ಬಿಜೆಪಿ ಪತಾಕೆ ಹಾರಿಸಿದರು. ನಂತರ 1996, 1998, 1999, 2004 ರಲ್ಲಿ ಬಿಜೆಪಿಯಿಂದ ಗೆದ್ದು ದಾಖಲೆ ಬರೆದರು. ಆದರೆ 2004 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ನರಸಿಂಗರಾವ್ ಸೂರ್ಯವಂಶಿ ಅವರು ಗೆಲುವು ಸಾಧಿಸಿದರು. ಆ ನಂತರ ಮಾಜಿ ಮುಖ್ಯಮಂತ್ರಿ ದಿ.ಧರಂ ಸಿಂಗ್ ಅವರು 2009ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು.
ಬೀದರ್ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗದಂತೆ ತಡೆದು ಬಿಜೆಪಿಗೆ ಮತ್ತೊಮ್ಮೆ ಗೆಲುವು ತಂದು ಕೊಟ್ಟಿದ್ದು 2014 ರ ಚುನಾವಣೆಯಲ್ಲಿ ಭಗವಂತ್ ಖುಬಾ. ಈ ಬಾರಿಯೂ ಬಿಜೆಪಿಯಿಂದ ಅವರೇ ಸ್ಪರ್ಧಿಸುವ ನಿರೀಕ್ಷೆಯಿಂದು, ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಮತ್ತು ಮತ್ತೊಮ್ಮೆ ಬೀದರ್ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.
ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ್ ಖುಬಾ ಅವರು 459,290 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದಿ. ಧರಂ ಸಿಂಗ್ ಅವರನ್ನು 92,222 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಧರಂ ಸಿಂಗ್ ಪಡೆದ ಒಟ್ಟು ಮತಗಳು 367,068. 2017 ರ ಜುಲೈ 27 ರಂದು ಧರಂ ಸಿಂಗ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದೀಗ ಈ ಕ್ಷೇತ್ರದಿಂದ ಧರಂ ಸಿಂಗ್ ಅವರ ಬದಲಾಗಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಕುತೂಹಲದ ವಿಷಯವಾಗಿದೆ.
2014 ರಲ್ಲಿ ಈ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 1,600,962, ಅವುಗಳಲ್ಲಿ 839,154 ಪುರುಷ ಮತದಾರರು ಮತ್ತು 761,808 ಮಹಿಳಾ ಮತದಾರರು.
ಬೀದರ್ ಕ್ಷೇತ್ರದ ಸಮಸ್ಯೆಗಳೇನು?
ಉತ್ತರ ಕರ್ನಾಟಕದ ತುತ್ತತುದಿಯ ಜಿಲ್ಲೆಯಾದ ಬೀದರ್ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ಉತ್ತಮ ರಸ್ತೆಗಳಿಲ್ಲ. ರಾಜ್ಯ ಸರ್ಕಾರವೂ ಈ ಜಿಲ್ಲೆಯನ್ನು ಕಡೆಗಣಿಸುತ್ತಿದೆ ಎಂಬ ಮಾತು ಎಂದಿನಿಂದಲೋ ಕೇಳಿಬರುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉತ್ತಮ ಕಾಲೇಜುಗಳ ಕೊರತೆಯಿದೆ. ಐತಿಹಾಸಿಕ ಪ್ರಸಿದ್ಧ ನಗರವಾದರೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿಲ್ಲ. ಒಟ್ಟಿನಲ್ಲಿ ಮೂಲಸೌಕರ್ಯದ ಸಮಸ್ಯೆಯಿಂದ ಈ ಕ್ಷೇತ್ರ ಬಳಲುತ್ತಿದ್ದು, ಕ್ಷೇತ್ರದ ಪ್ರತಿನಿಧಿಯಾಗಿ ಬರುವವರು ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಈ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನ 20 ಕೋಟಿ ರೂ. ಅವುಗಳಲ್ಲಿ 17.22 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, 3.08 ಕೋಟಿ ರೂ. ಉಳಿದಿದೆ.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು: ಚಿಂಚೊಳಿ(ಮೀಸಲು), ಆಲಂದ, ಬಸವಕಲ್ಯಾಣ, ಹೊಮ್ನಾಬಾದ್, ಬೀದರ್(ದಕ್ಷಿಣ), ಬೀದರ್, ಭಾಲ್ಕಿ, ಔರದ್(ಮೀಸಲು)