ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!
ಸಂಸತ್ತಿನಲ್ಲಿ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಹಾಗೂ ಮೇಲ್ಮನೆ ಉಪಾಧ್ಯಕ್ಷರ ಆಯ್ಕೆ ಕಸರತ್ತು ಎಲ್ಲರ ಗಮನ ಸೆಳೆಯಲಿದೆ. ರಾಜ್ಯಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಹರಿವಂಶ್ ಅವರು ನಾಮಪತ್ರ ಸಲ್ಲಿಸಿದ್ದು, ಪುನಾರಾಯ್ಕೆ ಬಯಸಿದ್ದಾರೆ. ಆದರೆ, ಲೋಕಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಬಗ್ಗೆ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ವಿಳಂಬ ತಂತ್ರ ಅನುಸರಿಸಿ, ಕಾಂಗ್ರೆಸ್ಸಿಗೆ ಸ್ಥಾನ ದೊರೆಯದಂತೆ ಮಾಡುತ್ತಿದೆ.
ಎನ್ಡಿಎಗೆ ರಾಜ್ಯಸಭೆಯಲ್ಲಿ ಇನ್ನೂ ಪೂರ್ಣ ಬಹುಮತವಿರದಿದ್ದರೂ ಬಿಜೆಪಿ ನೇತೃತ್ವದ ಎನ್ಡಿಎ ಈ ಬಾರಿಯೂ ಹರಿವಂಶ್ ಉಪಸಭಾಪತಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಇನ್ನೊಂದೆಡೆ ಕಾಂಗ್ರೆಸ್ಸೇತರ ಉಪಾಧ್ಯಕ್ಷರ ಆಯ್ಕೆ ಯಾವುದೇ ಕಾರಣಕ್ಕೂ ಸಾಧ್ಯವಾಗದಂತೆ ನೋಡಿಕೊಳ್ಳುವ ಸ್ಥಿತಿ ತಂದುಕೊಂಡಿದೆ.
ಲೋಕಸಭೆ ಉಪಾಧ್ಯಕ್ಷರ ಹುದ್ದೆ ಕುರಿತಂತೆ ಗುರುವಾರ(ಸೆ. 10)ದಂದು ಪ್ರತಿಕ್ರಿಯಿಸಿರುವ ಹಾಲಿ ಸ್ಪೀಕರ್ ಓಂ ಬಿರ್ಲಾ ಅವರು, ''ಉಪಾಧ್ಯಕ್ಷರ ನೇಮಕ ಮಾಡುವುದು ಸ್ಪೀಕರ್ ಕೆಲಸವಲ್ಲ, ಸಂಸತ್ತಿನ ಸದಸ್ಯರಿಂದ ಆಯ್ಕೆಯಾಗುವ ಪ್ರಕ್ರಿಯೆಗೆ ನಾನು ಬದ್ಧ'' ಎಂದಿದ್ದಾರೆ.
ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣ
ಸರಿ ಸುಮಾರು 15 ತಿಂಗಳುಗಳಿಂದ ಉಪಾಧ್ಯಕ್ಷ ಸ್ಥಾನ ಖಾಲಿಯಿದೆ. ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರು ಸ್ಪೀಕರ್ ಬಳಿ ಈ ಬಗ್ಗೆ ಪ್ರಶ್ನಿಸಿದಾಗ, ಮೇಲ್ಕಂಡ ಉತ್ತರ ಸಿಕ್ಕಿದೆ. ಹೀಗಾಗಿ ಇದು ಸ್ಪಷ್ಟವಾಗಿ ಮೋದಿ ಸರ್ಕಾರದ ವಿಳಂಬ ನೀತಿ ಎಂದು ಹೇಳಬಹುದು. ಸ್ಪೀಕರ್ ಬಿರ್ಲಾ ಕೂಡಾ ಚೌಧರಿಯ ಅಧಿಕೃತ ಪತ್ರಕ್ಕೆ ಇದೇ ರೀತಿ ಉತ್ತರಿಸಿ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಉಪಾಧ್ಯಕ್ಷರ ಚುನಾವಣೆ ವಿಳಂಬ ನೀತಿ
ಉಪಾಧ್ಯಕ್ಷರ ಚುನಾವಣೆ ವಿಳಂಬ ನೀತಿ: ಕಾಂಗ್ರೆಸ್ ಪಕ್ಷಕ್ಕೆ ಉಪ ಸಭಾಪತಿ ಸ್ಥಾನ ಸಿಗದಂತೆ ಮಾಡಲು ಆಡಳಿತ ಪಕ್ಷ ವಿಳಂಬ ನೀತಿ ಅನುಸರಿಸಿತೇ? ಸಂವಿಧಾನದ ಆರ್ಟಿಕಲ್ 93ರಂತೆ ಲೋಕಸಭೆ ಹಾಗೂ ರಾಜ್ಯಸಭೆ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಆಯ್ಕೆಯಾಗಬೇಕಿದೆ ಎಂದು ವಿಪಕ್ಷಗಳು ಆಗ್ರಹಿಸಿವೆ. ಆದರೆ ಸೂಕ್ತ ಅಭ್ಯರ್ಥಿ ಕೊರತೆ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಒಂದು ವರ್ಷದಿಂದ ಚುನಾವಣಾ ಪ್ರಕ್ರಿಯೆ ಮುನ್ನೆಲೆಗೆ ಬರದಂತೆ ನೋಡಿಕೊಳ್ಳುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ.
ಕಾಂಗ್ರೆಸ್ ಗೇಮ್ ಪ್ಲ್ಯಾನ್ ಏನು?
ಕಾಂಗ್ರೆಸ್ಸಿನಿಂದ ಹಿರಿಯ ಸಂಸದ ಕೆ ಸುರೇಶ್ ಹಾಗೂ ಡಿಎಂಕೆ ತಿರುಚ್ಚಿ ಶಿವ ಅವರನ್ನು ಅಧಿಕೃತ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಮುಂದಾಗಿದೆ. ಈ ನಡುವೆ ರಾಜ್ಯಸಭೆಗೆ ವಿಪಕ್ಷಗಳಿಂದ ಒಕ್ಕೊರಲ ಅಭ್ಯರ್ಥಿ ಆಯ್ಕೆ ಕೂಡಾ ಈ ನಿಟ್ಟಿನಲ್ಲಿ ಮುನ್ನೆಲೆಗೆ ಬಂದಿದೆ. ಲೋಕಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಕೆ ಸುರೇಶ್ ಆಯ್ಕೆಗೂ ಕೂಡಾ ಇದೇ ರೀತಿ ಸಂಯುಕ್ತ ವಿಪಕ್ಷಗಳ ಬೆಂಬಲ ಸಿಗುವ ನಿರೀಕ್ಷೆಯಿದೆ. ಏಳು ಬಾರಿ ಸಂಸದ, ದಲಿತ ಮುಖಂಡ, ಗುರುತಿಕೊಂಡಿರುವ ಸುರೇಶ್ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ.
ಸಂಸತ್ ಪ್ರಶ್ನಾವಳಿ ರದ್ದುಗೊಳಿಸಿದ ಹಿನ್ನೆಲೆ ಸರ್ಕಾರಕ್ಕೆ 'ಟ್ವೀಟ್' ಏಟು!
ಬೆಂಗಾಳ ಅಧ್ಯಕ್ಷರಾಗಿ ಅಧೀರ್ ರಂಜನ್
ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಬೆಂಗಾಳ ಕಾಂಗ್ರೆಸ್ ಪ್ರದೇಶ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬೆಂಗಾಳದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸಮರ್ಥವಾಗಿ ಎದುರಿಸಲು ಅಧೀರ್ ರನ್ನು ಕಳಿಸಿದೆ. ಆದರೆ, ಸಂಸತ್ತಿನಲ್ಲಿ ಕಾಂಗ್ರೆಸ್ಸಿಗೆ ತೃಣಮೂಲ ಕಾಂಗ್ರೆಸ್ಸಿನ ಬೆಂಬಲವೂ ಅತ್ಯಗತ್ಯ. ಹೀಗಾಗಿ, ಅಧೀರ್ ನೇಮಕ, ಎಡಪಕ್ಷಗಳ ಬೆಂಬಲ ಎಲ್ಲವನ್ನು ಗಮನಿಸಿ ಮಮತಾ ತಿರುಗಿ ಬಿದ್ದರೆ ಕಾಂಗ್ರೆಸ್ಸಿಗೆ ಭಾರಿ ಹೊಡೆತ ಬೀಳಲಿದೆ. ಜೊತೆಗೆ ಟಿಎಂಸಿ ಬೆಂಬಲಿತ ಅಭ್ಯರ್ಥಿ ಸಾಧ್ಯತೆಯೂ ಇಲ್ಲವಾಗುತ್ತದೆ.
ಮೋದಿ ಸರ್ಕಾರದ ತಂತ್ರವೇನು?
ಸಂಸತ್ತಿನಲ್ಲಿ ಯಾವುದೇ ಉನ್ನತ ಹುದ್ದೆಗಳು ಕಾಂಗ್ರೆಸ್ ಪಕ್ಷದ ಕೈ ಸೇರದಂತೆ ಮಾಡುವಲ್ಲಿ ಮೋದಿ ಸರ್ಕಾರ ಇಲ್ಲಿ ತನಕ ಯಶಸ್ವಿಯಾಗಿದೆ. ಸತತವಾಗಿ ಎರಡು ಬಾರಿ ಅಧಿಕೃತ ವಿರೋಧ ಪಕ್ಷ ಸ್ಥಾನವನ್ನು ನೀಡಿಲ್ಲ. ಶೇ 10 ರಷ್ಟು ಸ್ಥಾನವನ್ನು ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂಬ ಕಾರಣ ನೀಡಬಹುದಾದರೂ, ವಿಪಕ್ಷ ಸ್ಥಾನ ನೀಡುವ ಅವಕಾಶ ಮೋದಿ ಸರ್ಕಾರಕ್ಕಿತ್ತು. 2019ರಲ್ಲೂ ಇದೇ ಪರಿಸ್ಥಿತಿ ಎದುರಾಯಿತು ಹಾಗೂ ಕಾಂಗ್ರೆಸ್ಸಿಗೆ ಮತ್ತೊಮ್ಮೆ ವಿಪಕ್ಷ ಸ್ಥಾನ ಸಿಗದಂತೆ ಮೋದಿ ಸರ್ಕಾರ ನೋಡಿಕೊಂಡಿತು. 545 ಸದಸ್ಯ ಬಲದ ಲೋಕಸಭೆಯಲ್ಲಿ ಕಾಂಗ್ರೆಸ್ 54 ಸದಸ್ಯರನ್ನು ಮಾತ್ರ ಹೊಂದಲು ಸಾಧ್ಯವಾಯಿತು.
ಸಂಪ್ರದಾಯ ಪಾಲಿಸುತ್ತಾ ಬಂದಿರುವ ಎನ್ಡಿಎ
ಲೋಕಸಭೆಯಲ್ಲಿ ಬಿಜೆಪಿ ಸಂಪ್ರದಾಯ/ರೂಢಿಗತವಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ವಿಪಕ್ಷಗಳಿಗೆ ನೀಡುತ್ತಾ ಬಂದಿದೆ. ಆದರೆ, ಕಾಂಗ್ರೆಸ್ಸೇತರ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದು, ಎನ್ಡಿಎ ಭಾಗವಾದ ಎಐಎಡಿಎಂಕೆಯ ಎಮ್ ತಂಬಿದೊರೈ ಅವರಿಗೆ ಸ್ಥಾನ ನೀಡಿತ್ತು. ಸದ್ಯ 2019ರಲ್ಲಿ ತಂಬಿದೊರೈ ಅವರ ಅವಧಿ ಮುಕ್ತಾಯವಾಗಿದೆ.
ಯುಪಿಯೇತರ, ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನು ಹುಡುಕಿ ಉಪ ಸಭಾಪತಿಯನ್ನಾಗಿಸಲು ಮೋದಿ ಸರ್ಕಾರ ಬಯಸಿದರೂ ಸೂಕ್ತ ಅಭ್ಯರ್ಥಿ ಆಯ್ಕೆಯಾಗದ ಕಾರಣ ವಿಳಂಬ ನೀತಿಗೆ ಶರಣಾಗಬೇಕಾಯಿತು. ಈ ನಿಟ್ಟಿನಲ್ಲಿ ಬಿಜೆಡಿಯ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ನೆರವು ಕೋರಿದರು ನಕರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು.
ಗೌರವ್ ಗೊಗೋಯ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕನ ಪಟ್ಟ
Recommended Video
ಕಾಂಗ್ರೆಸ್ಸಿಗೆ ಯಾವುದೇ ಉನ್ನತ ಹುದ್ದೆ ಸಿಗಬಾರದು
ಇದೇ ರೀತಿ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡಾ ಕೇಂದ್ರದ ರಾಜಕೀಯದಲ್ಲಿ ತಲೆ ಹಾಕುವುದಿಲ್ಲ ಎಂದು ಬಿಟ್ಟರು. ತ್ರಿವಳಿ ತಲಾಕ್ ಸಂದರ್ಭದಲ್ಲಿ ಮೋದಿ ಸರ್ಕಾರದ ಬೆಂಬಲಕ್ಕೆ ನಿಲ್ಲಲು ವೈಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಕಾರಣಗಳಿದ್ದವು. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಓಲೈಕೆ ಮುಖ್ಯ ಕಾರಣವಾಗಿತ್ತು.
ಹೀಗಾಗಿ, ಸೂಕ್ತ ಅಭ್ಯರ್ಥಿ ಹಾಗೂ ಉಭಯ ಸದನಗಳಲ್ಲಿ ಮಿತ್ರಪಕ್ಷಗಳ ಜೊತೆಗಿನ ಒಡನಾಟ, ಬೆಂಬಲ ಕಾಯ್ದುಕೊಳ್ಳುವುದು ಜೊತೆಗೆ ಕಾಂಗ್ರೆಸ್ಸಿಗೆ ಯಾವುದೇ ಹುದ್ದೆ ಸಿಗದಂತೆ ನೋಡಿಕೊಳ್ಳುವುದು ಮೋದಿ ಸರ್ಕಾರದ ಗುರಿಯಾಗಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಬೆಂಬಲಿತ ಸಂಸದರೊಬ್ಬರನ್ನು ಉಪ ಸಭಾಪತಿಯಾಗಿ ಕಾಣಲು ಬಿಜೆಪಿ ಸಿದ್ಧವಿಲ್ಲ.