ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರು
ಬೆಂಗಳೂರು, ಅಕ್ಟೋಬರ್ 01: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಯಂ ಘೋಷಿತ ದೇವ ಮಾನವರ ಪಟ್ಟಿಗೆ ಡಾಟಿ ಮಹಾರಾಜ್ ಅವರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಭಾರತದಲ್ಲಿರುವ ನಕಲಿ ಬಾಬಾ, ಸ್ವಾಮೀಜಿಗಳ ಪಟ್ಟಿಯನ್ನು ಹಿಂದೂ ಸಾಧು ಸಂತರ ಪರಮೋಚ್ಚ ಮಂಡಳಿಯಾದ ಅಖಿಲ ಭಾರತೀಯ ಅಖಾರ ಪರಿಷತ್ 2017ರಲ್ಲಿ ಬಿಡುಗಡೆ ಮಾಡಿತ್ತು.
ಅಸಾರಾಮ್ ಬಾಪು, ಬಾಬಾ ರಾಮ್ ರಹೀಂ, ಬಾಬಾ ವೀರೇಂದ್ರ, ಪ್ರೇಮಾನಂದ ಹೀಗೆ ಪಟ್ಟಿ ಬೆಳೆಯುತ್ತದೆ. ಇಂಥ ಪ್ರಕರಣಗಳಲ್ಲಿ ಜೈಲುವಾಸಿಯಾಗಿದ್ದು, ನಂತರ ಜಾಮೀನು ಪಡೆದು ಹೊರಗೆ ಬಂದಿರುವವರನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಪ್ರೇಮಾನಂದ: ಸತ್ಯ ಸಾಯಿ ಬಾಬಾರ ಅಪರಾವತಾರ ಎಂದು ನಂಬಿಸಿದ್ದ ಸ್ವಾಮಿ ಪ್ರೇಮಾನಂದ ಅವರ ಮೇಲೆ 13 ಜನರ ಮೇಲೆ ಅತ್ಯಾಚಾರ, ಶ್ರೀಲಂಕಾ ಪ್ರಜೆ ಕೊಲೆ ಸೇರಿದಂತೆ ಅನೇಕ ಆರೋಪಗಳು ದಾಖಲಾಗಿದ್ದವು. ಪ್ರಕರಣದ ವಿಚಾರಣೆ ಮತ್ತು ವೈದ್ಯಕೀಯ ಪರೀಕ್ಷೆಗಳ ನಂತರ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2011 ರಲ್ಲಿ ತಮಿಳುನಾಡಿನ ಜೈಲಲ್ಲೇ ಸಾವನ್ನಪ್ಪಿದ.
ಲೈಂಗಿಕ ದೌರ್ಜನ್ಯ ಸೇರಿದಂತೆ ಮೈತುಂಬಾ ಹಗರಣಗಳನ್ನು ಹೊತ್ತುಕೊಂಡಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಪ್ರಕರಣದ ನಂತರ ಇಂಥ ನಕಲಿ ಬಾಬಾ, ದೇವಮಾನವರ ವಿರುದ್ಧ ಆರೋಪಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.

ಅಸಾರಾಮ್ ಬಾಪು
ವಾಮಾಚಾರ ಮಾಡಲು ಮಕ್ಕಳ ಕೊಲೆ ಮಾಡಿದ್ದು, ಭೂ ಕಬಳಿಕೆ, ಕೊಲೆ ಯತ್ನ, ದೆಹಲಿ ಅತ್ಯಾಚಾರ, ಮಾಧ್ಯಮ ಮತ್ತು ಮೋದಿ ಮೇಲೆ ಅವಹೇಳನಾಕಾರಿ ಹೇಳಿಕೆ ನೀಡಿದ ವಿವಾದಗಳು
ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯದಿಂದ ಅಸಾರಾಮ್ ಬಾಪು ದೋಷಿ ಎಂಬ ತೀರ್ಪು. ಅವರೊಂದಿಗೆ ಆರೋಪ ಎದುರಿಸುತ್ತಿದ್ದ ಐವರೂ ತಪ್ಪಿತಸ್ಥರೆಂದು ತೀರ್ಪು ನೀಡಿದ ನ್ಯಾಯಾಲಯವು, ಅಸಾರಾಮ್ ಗೆ ಜೀವಾವಧಿ ಶಿಕ್ಷೆ ನೀಡಿದೆ.

ಸ್ವಾಮಿ ಕುಶಲೇಂದ್ರ ಪ್ರಪನ್ನಾಚಾರಿ ಫಲಾಹಾರಿ
ಅತ್ಯಾಚಾರ ಆರೋಪದ ಮೇಲೆ ರಾಜಸ್ಥಾನದ ಸ್ವಯಂಘೋಷಿತ ದೇವಮಾನವ ಸ್ವಾಮಿ ಕುಶಲೇಂದ್ರ ಪ್ರಪನ್ನಾಚಾರಿ ಫಲಾಹಾರಿ ಮಹಾರಾಜ್ (70) ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಚತ್ತೀಸ್ ಗಢದ ಬಿಲಾಸ್ ಪುರ ಜಿಲ್ಲೆಯ 21 ವರ್ಷದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಈ ಕುರಿತಂತೆ ಸೆಪ್ಟೆಂಬರ್ 11ರಂದು ಫಲಹಾರಿ ಮಹಾರಾಜ್ ವಿರುದ್ಧ ದೂರು ನೀಡಲಾಗಿತ್ತು.

ಬಾಬಾ ಪರಮಾನಂದ
ವಿವಾದಿತ 'ದೇವ ಮಾನವ' ಬಾಬಾ ಪರಮಾನಂದ ಅವರನ್ನು ಬಂಧಿಸಲಾಗಿದೆ. ಬಾಬಾ ಪರಮಾನಂದ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರೆಸಲಾಗಿದೆ. ರಾಮ್ ಶಂಕರ್ ತಿವಾರಿ ಅಲಿಯಾಸ್ ಬಾಬಾ ಪರಮಾನಂದ್ ಅವರು ಮಹಿಳೆಯೊಬ್ಬರಿಗೆ ಮಗು ಕರುಣಿಸುವ ವಾಗ್ದಾನ ನೀಡಿ ಮಂಕುಬೂದಿ ಹಾಕಿದ್ದಾರೆ. ಬರಾಬಂಕಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಭೀಮಾನಂದ ಜೈ ಮಹಾರಾಜ್
ಚಿತ್ರಕೂಟದ ಸ್ವಾಮಿ ಭೀಮಾನಂದ ಜೈ ಮಹಾರಾಜ್ ತನ್ನನ್ನು ತಾನು ಶ್ರೀ ಸಾಯಿಬಾಬಾ ಅಪರಾವತಾರ ಎಂದು ಹೇಳಿಕೊಂಡು ತಿರುಗಾಡಿದವ. 1988 ರಲ್ಲಿ ನವದೆಹಲಿಗೆ ಬಂದ ಭೀಮಾನಂದ ಮೊದಲಿಗೆ ಸೆಕ್ಯೂರಿಟಿ ಗಾರ್ಡ್ ಆಗಿ ನಂತರ ಮಸಾಜ್ ಪಾರ್ಲರ್ ವೊಂದರಲ್ಲಿ ಕೆಲಸ ಮಾಡಿದ ದಾಖಲೆಗಳಿವೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜೈಲು ಸೇರಿದ ಸ್ವಾಮೀಜಿ ನಂತರ ಬಿಡುಗಡೆಗೊಂಡರು.

ವೀರೇಂದ್ರ ದೇವ್ ದೀಕ್ಷಿತ್
75 ವರ್ಷ ವಯಸ್ಸಿನ ವೀರೇಂದ್ರ ದೇವ್ ದೀಕ್ಷಿತ್ ಅವರು ದೇಶದ ಹಲವೆಡೆ ಆಶ್ರಮಗಳನ್ನು ಹೊಂದಿದ್ದು, 16 ಸಾವಿರಕ್ಕೂ ಅಧಿಕ ಯುವತಿಯರನ್ನು ಆಶ್ರಮದಲ್ಲಿರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದ. 1970ರಿಂದ ಆಶ್ರಮವನ್ನು ನಡೆಸುತ್ತಿದ್ದು, ದಿನವೊಂದಕ್ಕೆ 10 ಅಪ್ರಾಪ್ತರ ಮೇಲೆ ಬಲಾತ್ಕಾರ ಮಾಡುತ್ತಿದ್ದ ಎಂದು ಎನ್ ಜಿಒ ಆರೋಪಿಸಿದೆ.












Click it and Unblock the Notifications