ಡಿ.ಕೆ.ಶಿವಕುಮಾರ್ ತೋರಿದ ರಾಜಕೀಯ ವೈಶಾಲ್ಯತೆ: ಬಿಜೆಪಿ ಪಾಠ ಕಲಿವುದು ಯಾವಾಗ?
ಉಪ ಚುನಾವಣೆಯ ಹೊಸ್ತಿಲಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಟ್ವೀಟ್ ಸಮರವೇ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಸಂಘರ್ಷದಲ್ಲಿ ಬಳಸಲಾಗುತ್ತಿರುವ ಪದಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಆ ಮೂಲಕ, ರಾಜಕೀಯ ಪ್ರಬುದ್ದತೆಯನ್ನು ಅವರು ತೋರಿದ್ದಾರೆ.
ಕೆಪಿಸಿಸಿಯ ಇಬ್ಬರು ನಾಯಕರು ಖುದ್ದು ಅಧ್ಯಕ್ಷರ ಬಗ್ಗೆ ಪರ್ಸಂಟೇಜ್ ಬಗ್ಗೆ ಮಾತನಾಡಿದ್ದು ಮನೆಮಾತಾದ ನಂತರ, ಬಿಜೆಪಿಯ ಕರ್ನಾಟಕ ಘಟಕದ ಸಾಮಾಜಿಕ ಜಾಲತಾಣ, ಕಾಂಗ್ರೆಸ್ ಮತ್ತು ಡಿಕೆಶಿಯವರನ್ನು ಒಂದೇ ಸಮನೆ ಟಾರ್ಗೆಟ್ ಮಾಡುತ್ತಿತ್ತು.
ಇದಕ್ಕೆ ಕೌಂಟರ್ ಕೊಡುತ್ತಾ ಕೆಪಿಸಿಸಿಯ ಐಟಿ ಸೆಲ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಅನ್ನು ಮಾಡಿತ್ತು. ಇದು, ವ್ಯಾಪಕ ವಿರೋಧಕ್ಕೆ ಕಾರಣವಾದ ನಂತರ, ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿ, ಟ್ವೀಟ್ ಅನ್ನು ಡಿಲಿಟ್ ಮಾಡಿಸಿದ್ದಾರೆ.
ಆದರೆ, ಬಿಜೆಪಿಯ ರಾಜ್ಯ ಘಟಕ ಇದಕ್ಕಿಂತಲೂ ಅಸಂವಿಧಾನಿಕ ಪದಗಳನ್ನು ಬಳಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಯವರ ಬಗ್ಗೆ ಟ್ವೀಟ್ ಮಾಡಿತ್ತು. ಆದರೆ, ಬಿಜೆಪಿಯ ಐಟಿ ಸೆಲ್ ಇದಕ್ಕೆ ಕ್ಷಮೆಯಾಚಿಸುವುದು ಹಾಗಿರಲಿ, ಕನಿಷ್ಟ ಅದನ್ನು ಡಿಲಿಟ್ ಕೂಡಾ ಮಾಡಿಸಿರಲಿಲ್ಲ. ಡಿಕೆಶಿ ಸಿಟ್ಟಿಗೆ ಕಾರಣವಾದ, ಕಾಂಗ್ರೆಸ್ ಐಟಿ ಘಟಕದ ಟ್ವೀಟ್ನಲ್ಲಿ ಏನಿತ್ತು?

#ಹೆಬ್ಬೆಟ್ಟುಗಿರಾಕಿಮೋದಿ ಯಿಂದ ದೇಶ ನರಳುತ್ತಿದೆ
"ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ @narendramodi ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ. #ಹೆಬ್ಬೆಟ್ಟುಗಿರಾಕಿಮೋದಿ ಯಿಂದ ದೇಶ ನರಳುತ್ತಿದೆ. ಬೆಲೆ ಏರಿಕೆ, ಕಾಶ್ಮೀರ ದಳ್ಳುರಿ, ಚೀನಾ ಅತಿಕ್ರಮಣ, ರೈತರ ಹತ್ಯೆ" ಹೀಗೆ ಎಲ್ಲದರಲ್ಲೂ ಮೌನ ಎಂದು ಕೆಪಿಸಿಸಿ ಟ್ವೀಟ್ ಮಾಡಿ, ಪ್ರಧಾನಿಯವರನ್ನು ಹೆಬ್ಬೆಟ್ಟು ಎಂದು ಹೀಯಾಳಿಸಿತ್ತು.
|
ಕರ್ನಾಟಕ ಕಾಂಗ್ರೆಸ್ ಅಧಿತ ಟ್ವಿಟರ್ ಹ್ಯಾಂಡಲ್ ಮೂಲಕ ಮಾಡಿದ ಟ್ವೀಟ್ ವಿಷಾದನೀಯ
"ನಾನು ಯಾವಾಗಲೂ ನಾಗರೀಕ ಮತ್ತು ಸಂಸದೀಯ ಭಾಷೆಯೊಂದಿಗೆ ರಾಜಕೀಯ ಚರ್ಚೆ ನಡೆಯಬೇಕೆಂದು ಎಂದು ನಂಬುವವನು. ಅನನುಭವಿ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಮಾಡಿದ ಟ್ವೀಟ್ ವಿಷಾದನೀಯ ಮತ್ತು ಹಿಂತೆಗೆದುಕೊಳ್ಳಲಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರನ್ನು 'ಬಾರ್ ಡಾನ್ಸರ್' ಎಂದಿದ್ದ ಬಿಜೆಪಿ
ಈ ಹಿಂದೆ ಬಹಳಷ್ಟು ಬಾರಿ ಬಿಜೆಪಿಯ ನಾಯಕರು, ಕಾಂಗ್ರೆಸ್ ಮುಖಂಡರ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಟೀಕಿಸಿದ್ದರು. ಇಂದು (ಅ 19) ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರನ್ನೂ 'ಬಾರ್ ಡಾನ್ಸರ್' ಎಂದು, ರಾಹುಲ್ ಗಾಂಧಿ ಅವರನ್ನು 'ಪಪ್ಪು ಎಂದು, ಸಿದ್ದರಾಮಯ್ಯನವರನ್ನು ನಿದ್ದೆರಾಮಯ್ಯ, ಬುರುಡೆ ರಾಮಯ್ಯ ಎಂದು ನೂರಾರು ಬಾರಿ ಬಿಜೆಪಿಯವರು ಲೇವಡಿ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಬಿಜೆಪಿಯವರು ಕ್ಷಮೆಯಾಚಿಸಿರಲಿಲ್ಲ.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಮಾತನ್ನು ಹೇಳಿದ ಕುಮಾರಸ್ವಾಮಿ
ನಳಿನ್ ಕಟೀಲ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ಬೇಸರ ವ್ಯಕ್ತ ಪಡಿಸಿದ್ದಾರೆ. "ನಾನು ಯಾವಾಗಲೂ ಇಂತಹ ಕೀಳು ಮಟ್ಟಕ್ಕೆ ಇಳಿಯಲ್ಲ. ಯಾರೂ ಅಂತಹ ಹೇಳಿಕೆಗಳನ್ನು ನೀಡಬಾರದು. ಯಾರೇ ಆಗಲಿ ಯಾರದ್ದೇ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬಾರದು" ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಮಾತನ್ನು ಹೇಳಿದ್ದಾರೆ.
ಕಟೀಲ್ ಹೇಳಿಕೆಗೆ ಡಿಕೆಶಿ ಅಸಮಾಧಾನ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದು ಹೀಗೆ, "ನಿನ್ನೆ ನಾನು ಮಾತನಾಡುವಾಗ ರಾಜಕೀಯ ವಿರೋಧಿಗಳೊಡನೆ ನಾಗರಿಕ ಮೌಲ್ಯದ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳೋದ್ರಲ್ಲಿ ನಂಬಿಕೆಯಿದೆ ಎಂದಿದ್ದೆ. ಬಿಜೆಪಿ ಇದನ್ನು ಒಪ್ಪುತ್ತದೆಂದು ಭಾವಿಸಿದ್ದೆ ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ಶ್ರೀ ರಾಹುಲ್ ಗಾಂಧಿಯವರನ್ನು ಅಸಂಸದೀಯ ಪದಗಳಿಂದ ನಿಂದಿಸಿದ್ದು, ಕ್ಷಮೆ ಯಾಚಿಸುತ್ತಾರೆಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications