ರೆಸ್ಟೋರೆಂಟ್ ಗಳ ಕಿಚನ್ ತಲುಪುತ್ತಿವೆ ಕೊಡಗಿನ ಪರಿಹಾರ ಸಾಮಗ್ರಿಗಳು!
ಮೈಸೂರು, ಆಗಸ್ಟ್ 22 : ಕೊಡಗು ಹಿಂದೆಂದೂ ಕಂಡು ಕೇಳರಿಯದ ಪರಿಸ್ಥಿತಿಗೆ ತಲುಪಿದೆ. ಭಾರಿ ಪ್ರಮಾಣದಲ್ಲಿ ಗಾಳಿ- ಮಳೆಯ ಆರ್ಭಟವಾಗಿ ಪ್ರವಾಸೋದ್ಯಮ ಜಿಲ್ಲೆ ಅಕ್ಷರಶಃ ನರಕ ದರ್ಶನ ಕಂಡಿದೆ. ಮಹಾಮಳೆಗೆ ಅದೆಷ್ಟೋ ಮನೆಗಳು ಕುಸಿದು ನೆಲಸಮಗೊಂಡಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಕೆಲವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ನಾಪತ್ತೆಯಾದ ಕೆಲವರು ಇನ್ನೂ ಪತ್ತೆಯಾಗಿಲ್ಲ.ಕೊಡಗು ಜಿಲ್ಲೆಗೆ ಹಾಗೂ ನಿರಾಶ್ರಿತರಾಗಿರುವ ಕೊಡಗಿನ ಜನರಿಗೆ ರಾಜ್ಯ ಸೇರಿದಂತೆ ಅಂತಾರಾಜ್ಯಗಳಿಂದ ಅಗತ್ಯ ಸಾಮಗ್ರಿಗಳು ನೆರವಿನ ರೂಪದಲ್ಲಿ ಹೊಳೆಯಂತೆ ಹರಿದುಬರುತ್ತಿದೆ.
ಆದರೆ, ಅದು ಸಂಪೂರ್ಣವಾಗಿ ನಿರಾಶ್ರಿತರಿಗೆ ತಲುಪುತ್ತಿಲ್ಲ ಎಂಬುದೇ ವಿಪರ್ಯಾಸ. ಹೌದು, ಕಷ್ಟಗಳು ಪ್ರಾರಂಭವಾದೊಡನೆ ರಾಜ್ಯದ ಜನತೆ ಸ್ಪಂದಿಸಿದ್ದು, ದೈನಂದಿನ ಬಳಕೆಗೆ ಬೇಕಾದ ಆಹಾರ ಸಾಮಗ್ರಿಗಳು, ಬಟ್ಟೆ ಇನ್ನಿತರ ಸಾಮಗ್ರಿಗಳು ಅವಶ್ಯಕತೆಗೂ ಹೆಚ್ಚು ಬಂದಿವೆ.
ದೇವಸ್ಥಾನಗಳ ಹುಂಡಿಯ 12 ಕೋಟಿ ಹಣ ಪ್ರವಾಹ ಸಂತ್ರಸ್ತರ ನಿಧಿಗೆ
ಪ್ರತೀ ದಿನ ಹಲವು ವಾಹನಗಳಲ್ಲಿ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಂದ ಸಂಘ- ಸಂಸ್ಥೆಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳು ನಗರ ಪ್ರದೇಶಗಳಲ್ಲಿ ಸಂಗ್ರಹಿಸಿ ವಸ್ತುಗಳನ್ನು ಕಳುಹಿಸುತ್ತಿವೆ. ಆದರೆ ಇದನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಸಂತ್ರಸ್ತ ಕೇಂದ್ರಕ್ಕೆ ತಲುಪಿಸುವ ಕಾರ್ಯ ಮಾಡಬೇಕಾದ ತಹಶೀಲ್ದಾರರು ಮಾತ್ರ ಸ್ಥಳಕ್ಕೆ ಬಾರದಿರುವುದು ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ.
ದಿಕ್ಕನ್ನೇ ಬದಲಿಸಿ ಸ್ವಂತಕ್ಕೆ ವಸ್ತುಗಳ ಬಳಕೆ
ನಿರಾಶ್ರಿತರ ಪಾಲಿಗೆ ಸಿಗಬೇಕಾದ ಅಗತ್ಯ ವಸ್ತುಗಳನ್ನು ಕೆಲವರು ತಮ್ಮ ಸ್ವಂತ ದಾಸ್ತಾನುಗಳಲ್ಲಿ ಸಂಗ್ರಹಿಸಿಕೊಂಡು, ಅನ್ಯಾಯ ಎಸಗುತ್ತಿದ್ದಾರೆ. ಅಲ್ಲದೇ, ನೆರವಿನ ಸಾಮಗ್ರಿಗಳಲ್ಲೂ ದಲ್ಲಾಳಿಗಳು ಕಾರ್ಯಪ್ರವೃತ್ತರಾಗಿದ್ದು, ದಾನಿಗಳಿಂದ ಬಂದ ಸಾಮಗ್ರಿಗಳು ಸಂತ್ರಸ್ತರಿಗೆ ನೇರವಾಗಿ ಲಭ್ಯವಾಗುತ್ತಿಲ್ಲ. ನೆರೆ ಸಂತ್ರಸ್ತರಿಗಾಗಿ ಹೊಳೆಯಂತೆ ದಾನಿಗಳು ಅಗತ್ಯ ವಸ್ತುಗಳನ್ನು ರವಾನಿಸುತ್ತಿದ್ದಾರೆ. ಆದರೆ ಜಿಲ್ಲೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಕೆಲವರು, ದಾನಿಗಳು ವಾಹನದ ಮೂಲಕ ಸಾಮಗ್ರಿಗಳನ್ನು ತಂದರೆ ಅವರ ದಿಕ್ಕನ್ನೇ ಬದಲಾಯಿಸಿ, ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಲಾರಿಗಳನ್ನು ತಡೆಯುವ ಕಿಡಿಗೇಡಿಗಳು
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಬರುವ ಲಾರಿಗಳನ್ನು ತಡೆಯುವ ಕೆಲವು ಕಿಡಿಗೇಡಿಗಳು, ಸಂತ್ರಸ್ತರು ಇಲ್ಲಿಲ್ಲ. ನಾವು ಸಂತ್ರಸ್ತರಿಗೆ ನೆರವು ನೀಡಲು ಬಂದವರು. ನೀವು ಈ ಗೋದಾಮುಗಳಲ್ಲಿ ಸಾಮಗ್ರಿಗಳನ್ನು ಇಳಿಸಿ. ನಾವು ಹಂಚುತ್ತೇವೆ ಎಂದು ಹೇಳಿ ಲಕ್ಷಾಂತರ ರುಪಾಯಿ ಮೌಲ್ಯದ ಅಗತ್ಯ ವಸ್ತುಗಳನ್ನು ದೋಚುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ತಮ್ಮ ಸ್ವಂತದ ಗೋದಾಮುಗಳಲ್ಲಿ ಸಂತ್ರಸ್ತರ ಪಾಲಿನ ವಸ್ತುಗಳನ್ನು ಶೇಖರಿಸಿಟ್ಟು, ದಂಧೆ ನಡೆಸುತ್ತಿದ್ದಾರೆ.
ನಿರಾಶ್ರಿತರ ಪಾಲನ್ನು ಪಡೆಯುತ್ತಿರುವ ಉಳ್ಳವರು
ಕುಶಾಲನಗರದಿಂದ ಮಡಿಕೇರಿ ನಗರದವರೆಗೂ ಈ ದಂಧೆ ನಡೆಯುತ್ತಿದ್ದು, ನಿರಾಶ್ರಿತರ ಪಾಲನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದಾರೆ. ಸಂತ್ರಸ್ತರಿಗಾಗಿ ಹರಿದು ಬರುತ್ತಿರುವ ಸಾಮಗ್ರಿಗಳು ಮಧ್ಯವರ್ತಿಗಳ ಪಾಲಾಗುತ್ತಿರುವ ಬಗೆಗಿನ ದೂರುಗಳು ನಿರಂತರವಾಗಿ ಕೇಳಿಬರುತ್ತಿವೆ. ಕೊಡಗಿಗೆ ವಿವಿಧೆಡೆಯಿಂದ ಹರಿದು ಬರುತ್ತಿರುವ ಸಾಮಗ್ರಿಗಳನ್ನು ಕಳವು ಮಾಡಿ, ಅಂಗಡಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಸಂತ್ರಸ್ತರಿಗೆ ಹಳಸಲು ಅನ್ನ ನೀಡಲಾಗುತ್ತಿದೆ
ಕೊಡಗು ಜಿಲ್ಲೆಯ ವಿವಿಧ ಪರಿಹಾರ ಕೇಂದ್ರಗಳಿಗೆ ತರಕಾರಿ, ಹಾಲಿನ ಪುಡಿ, ಅಕ್ಕಿ, ಗೋಧಿಹಿಟ್ಟು, ನೀರಿನ ಬಾಟಲಿ, ಹೊದಿಕೆ ಸೇರಿದಂತೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಸಂಘ- ಸಂಸ್ಥೆಗಳು ನಡೆಸುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಮಾತ್ರ ಈ ವಸ್ತುಗಳಿಗೆ ಸ್ವಯಂಸೇವಕರ ರಕ್ಷಣೆ ಇದ್ದು, ಜಿಲ್ಲಾಡಳಿತ ನಡೆಸುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಸಾರ್ವಜನಿಕರು ನೀಡುತ್ತಿರುವ ವಸ್ತುಗಳು ಮಧ್ಯವರ್ತಿಗಳ ಪಾಲಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಮನೆ ಕಳೆದುಕೊಂಡು, ಸಂಕಷ್ಟದಲ್ಲಿರುವ ತಮಗೆ ಹಳಸಲು ಅನ್ನ ನೀಡಲಾಗುತ್ತಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.