ರೈತ ಸ್ನೇಹಿ ಟಿಟ್ಟಿಬ ಪಕ್ಷಿ ಬಗ್ಗೆ ನಿಮಗೆಷ್ಟು ಗೊತ್ತು?
ಅಪಾಯದ ಮುನ್ಸೂಚನೆ ನೀಡುವ ಪಕ್ಷಿ ಲೋಕದ ಅಪರೂಪದ ಟಿಟ್ಟಿಬ ಪಕ್ಷಿ ಬಾನಾಡಿಗಳಲ್ಲಿ 'ಫಾರೆಸ್ಟ್ ಅಲಾರಾಂ' ಎಂದೇ ಕರೆಯಲ್ಪಡುತ್ತದೆ. ಈ ಪಕ್ಷಿ ರೈತ ಸ್ನೇಹಿ, ಪರಿಸರ ಸ್ನೇಹಿ ಅರಣ್ಯ ಇಲಾಖೆಯ ಗೆಳೆಯ ಎಂದೂ ಹೆಸರು ಪಡೆದಿದೆ.
ಟಿಟ್ಟಿಬ ಉದ್ದನೆಯ ಕಾಲುಗಳು, ಕಾಂತಿಯುತವಾಗಿ ಹೊಳೆಯುವ ಕಣ್ಣುಗಳನ್ನು ಹೊಂದಿದೆ. ಕುತ್ತಿಗೆ ಮತ್ತು ಎದೆಯ ಭಾಗ ಕಪ್ಪಾಗಿದ್ದು ಹೊಟ್ಟೆಯ ಭಾಗದಲ್ಲಿ ಅಚ್ಚು ಬಿಳುಪು ಹೊಂದಿದೆ. ಅರಣ್ಯ ಪ್ರದೇಶ, ಹೊಲ ಗದ್ದೆಗಳಲ್ಲಿ, ಕೆರೆ ಮತ್ತು ಜಲಾಶಯಗಳ ಸಮೀಪ ತನ್ನ ಸಂಕುಲವನ್ನು ಹರಿಡಿಕೊಂಡಿರುತ್ತದೆ.
ಹುಲ್ಲುಗಾವಲು, ಮೈದಾನ ಪ್ರದೇಶ, ಕೃಷಿ ಭೂಮಿ, ಕೆರೆ ಕೊಳಗಳ ದಂಡೆಯಲ್ಲಿ, ಬೆಟ್ಟ ಗುಡ್ಡ, ಅರಣ್ಯದ ಬಯಲು ಜಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನೀರು, ಕೆಸರು ಅರಣ್ಯದಲ್ಲಿ ವಿವಿಧ ಜಾತಿಯ ಹುಳುಗಳನ್ನು ಕೆದಕಿ ತಿನ್ನುವುದು, ನೀರಿನ ದಂಡೆಯಲ್ಲಿರುವ ಹುಳುಗಳನ್ನು ಹಿಡಿದು ತಿನ್ನುವುದು, ರಾಸುಗಳು ಹಾಕಿರುವ ಗೊಬ್ಬರದಲ್ಲಿನ ಬೀಜಗಳ ಸೇವನೆ ಈ ಪಕ್ಷಿಯ ಮುಖ್ಯ ಆಹಾರ ಕ್ರಮ.

ಮಾರ್ಚ್-ಆಗಸ್ಟ್ ಸಮಯದಲ್ಲಿ ಇದು ಸಣ್ಣ-ಸಣ್ಣ ಹರಳುಗಳ ನಡುವೆ ಗೂಡು ಮಾಡಿ 3-4 ಕಂದು ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ಮರಿಗಳಿಗೆ ಯಾವುದೆ ರೀತಿಯ ತೊಂದರೆಯಾಗಬಾರದೆಂದು ಈ ಪಕ್ಷಿ ಹವಾಮಾನದ ವೈಪರಿತ್ಯವನ್ನು ಕರಗತ ಮಾಡಿಕೊಂಡು ಸೂರು ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತದೆ.
"ಹವಾಮಾನದ ವೈಪರಿತ್ಯದ ಆಧಾರದ ಮೇಲೆ ಟಿಟ್ಟಿಬ ಪಕ್ಷಿಯೂ ನದಿ, ಜಲಾಶಯ, ಕೆರೆ ಕಟ್ಟೆಯ ದಡದ ಹತ್ತಿರವೇ ಸೂರು ಮಾಡಿದ್ದರೆ ಆ ವರ್ಷ ಮಳೆಯ ಪ್ರಮಾಣ ಕಡಿಮೆ, ಕೆರೆ-ಕಟ್ಟೆಗಳಿಂದ ದೂರ ಸೂರು ಕಟ್ಟಿದರೆ ಆ ವರ್ಷ ಮಳೆಯ ಪ್ರಮಾಣ ಹೆಚ್ಚಾಗುವ ಮೂನ್ಸೂಚನೆ" ಎಂದು ಬಳ್ಳಾರಿಯ ಪಕ್ಷಿ ತಜ್ಞ ಸಮದ್ ಕೊಟ್ಟೂರ ಹೇಳಿದ್ದಾರೆ.
ಟಿಟ್ಟಿಬದಲ್ಲಿ ಕೆಂಪು ಮತ್ತು ಹಳದಿ ಎಂಬ ಎರಡು ಪ್ರಬೇಧದ ಟಿಟ್ಟಿಬಾ ಕಾಣಬಹುದು. ಇದು ಸ್ಥಳೀಯ ವಲಸೆ ಪಕ್ಷಿಯಾಗಿದೆ. ಟಿಟ್ಟಿಬದ ಧ್ವನಿ ಅತ್ಯಂತ ಲಯಬದ್ಧವಾಗಿದೆ. ಇದರ ಕೂಗುವಿಕೆಯಿಂದ ಹಲವಾರು ಅಪಾಯದ ಮುನ್ಸೂಚನೆ ತಿಳಿಯಬಹುದು.

ಈ ಪಕ್ಷಿಗಳು ವಾಸಿಸುವ ಪ್ರದೇಶಕ್ಕೆ ಅಪರಿಚಿತ ಪ್ರಾಣಿಗಳು, ಸರಿಸೃಪಗಳು ಹಾಗೂ ಮನುಷ್ಯರು ಪ್ರವೇಶ ಮಾಡಿ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿದರೆ ಜೋರಾಗಿ ಕೂಗುವ ಮೂಲಕ ಗಮನ ಸೆಳೆಯುತ್ತವೆ. ಇವುಗಳು ಇರುವ ಜಾಗದಲ್ಲಿ ಸ್ವಲ್ಪ ತೊಂದರೆಯಾದರೂ ಮರಿಗಳಿಗೆ ಮೂನ್ಸೂಚನೆ ನೀಡುತ್ತದೆ.
ಈ ಪಕ್ಷಿಗಳ ಈ ನಡೆಯಿಂದ ಅರಣ್ಯ ಪ್ರದೇಶದಲ್ಲಿ ನಡೆಯುವ ಹಲವು ಅಕ್ರಮ ಚಟುವಟಿಕೆಗಳ ಪತ್ತೆಗೆ ಸಹಕಾರಿಯಾಗಿವೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಆದ್ದರಿಂದಲೇ ಇದಕ್ಕೆ 'ಫಾರೆಸ್ಟ್ ಅಲಾರಾಂ' ಎಂದು ಕರೆಯುತ್ತಾತೆ.
ವಿಶಿಷ್ಟ ಗುಣ ಸ್ವಭಾವ ಹೊಂದಿರುವ ಈ ಪಕ್ಷಿಯ ಸಂತತಿ ಉಳಿಯಬೇಕೆಂದರೆ ಅವುಗಳ ಸ್ವತಂತ್ರದ ಇರುವಿಕೆಗೆ ರಕ್ಷಣೆಯಾಗಿ ನಾವು ನಡೆದುಕೊಳ್ಳಬೇಕು.












Click it and Unblock the Notifications