Karnataka Assembly Election 2023: ಮೈಸೂರು ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ವಿಧಾನಸಭೆ ಚುನಾವಣೆ ಹಿನ್ನೆಲೆ, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಈ ಮೂರು ಪಕ್ಷಗಳಿಂದಲೂ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಹಾಗೆಯೇ ಮೈಸೂರು ಜಿಲ್ಲೆಯಲ್ಲಿ ಮೂರು ಪಕ್ಷಗಳಲ್ಲಿ ಟಿಕೆಟ್ಗಾಗಿ ಯಾರೆಲ್ಲ ಪೈಪೋಟಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತ
ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿಯೇ ಇದೆ. ರಾಜ್ಯದ ಅತಿ ದೊಡ್ಡ ಹಾಗೂ ಎರಡನೇ ಅಧಿಕಾರ ಶಕ್ತಿ ಕೇಂದ್ರವಾಗಿರುವ ಹಳೆಯ ಮೈಸೂರಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಕೆಸೆರೆರಚಾಟಗಳು ಶುರುವಾಗಿವೆ. ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದರು.
ಇದೀಗ ಅವರ ಮುಂದೆ ಜೆಡಿಎಸ್ - ಬಿಜೆಪಿ ತಮ್ಮ ಪ್ರಾಬಲ್ಯ ಸಾಬೀತುಪಡಿಸಲು ತೊಡೆ ತಟ್ಟಿ ನಿಂತಿವೆ. ಒಟ್ಟು ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 2018ರ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನದಲ್ಲಿ ಜಯ ಸಾಧಿಸಿದ್ದರೆ, ಜೆಡಿಎಸ್ ಕೂಡ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಬಿಜೆಪಿ ಮೂರು ಸ್ಥಾನವನ್ನು ಗೆದ್ದಿತ್ತು.
Karnataka Assembly Election 2023: ರಾಮನಗರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಹಾಗೆಯೇ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಗೆಲುವು ಸಾಧಿಸಿದ್ದರು. ಇದೀಗ ಇಲ್ಲಿನ ರಾಜಕೀಯ ವಾತಾವರಣ ಕಾವೇರುತ್ತಲೇ ಇದೆ. ಜಿಲ್ಲೆಯ ಕ್ಷೇತ್ರವಾರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಅಭ್ಯರ್ಥಿಯಾಗಲು ದೊಡ್ಡ ಪಟ್ಟಿಯೇ ಇದೆ. ಇದರೊಂದಿಗೆ AAP ಹಾಗೂ ಬಿಎಸ್ಪಿ ಕೂಡ ತೆರೆಮರೆಯಲ್ಲಿ ಕಸರತ್ತು ಶುರು ಮಾಡಿದೆ. ಮತದಾರ ಯಾರನ್ನು ಗೆಲ್ಲಿಸುತ್ತಾನೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.
ಮೈಸೂರು ಲೋಕಸಭೆ ವ್ಯಾಪ್ತಿಯಲ್ಲಿ ಒಕ್ಕಲಿಗ, ಕುರುಬ, ಲಿಂಗಾಯತ, ದಲಿತ ವರ್ಗದ ಮತದಾರರು ಹೆಚ್ಚಾಗಿದ್ದಾರೆ. ಉಳಿದಂತೆ ನಾಯಕ, ಉಪ್ಪಾರ, ಅಲ್ಪಸಂಖ್ಯಾತ ಮತಗಳು ಸೋಲು - ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಇಲ್ಲಿದೆ ಒಟ್ಟಾರೆ 11 ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Karnataka Assembly Election 2023: ಮಂಡ್ಯ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಚಾಮರಾಜ ಕ್ಷೇತ್ರದಲ್ಲಿ "ಟಿಕೆಟ್" ಪೈಪೋಟಿ
ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಾರ್ಮಿಕರು ಹಾಗೂ ವಿದ್ಯಾವಂತರೇ ಹೆಚ್ಚು. ಸದ್ಯ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಂಕರಲಿಂಗೇಗೌಡ ಸತತ ಮೂರು ಬಾರಿ ಆಯ್ಕೆಯಾಗಿದ್ದವರಾಗಿದ್ದಾರೆ. ನಂತರ ಜೆಡಿಎಸ್ ಸೇರ್ಪಡೆಗೊಂಡಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲುಂಡಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಸು ಎದುರು ಬಿಜೆಪಿ ಪಕ್ಷದ ಎಲ್.ನಾಗೇಂದ್ರ ಜಯಶೀಲರಾಗಿದ್ದರು. ಈ ಬಾರಿ ನಾಗೇಂದ್ರ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಜೊತೆಗೆ ದಿ.ಶಂಕರಲಿಂಗೇಗೌಡ ಅವರ ಪುತ್ರ ನಗರ ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಜೆಡಿಎಸ್ನಿಂದ ಈ ಬಾರಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ಪರ್ಧಿಸುವುದು ಬಹುತೇಕ ಅನುಮಾನವಾಗಿದೆ. ಹಾಗಾಗಿ ನಗರಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಹರೀಶ್ ಗೌಡ ಅವರಿಗೆ ಟಿಕೆಟ್ ಸಿಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನರಸಿಂಹರಾಜ ಕ್ಷೇತ್ರದಲ್ಲಿ "ಕೈ" ದರ್ಬಾರ್
ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ನರಸಿಂಹರಾಜ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್ಗೆ ಮನ್ನಣೆ ನೀಡುತ್ತಲೇ ಬಂದಿದೆ. ಸಚಿವ ತನ್ವೀರ್ ಸೇಠ್ ಅವರ ಕುಟುಂಬವು ಕ್ಷೇತ್ರ ರಚನೆಯಾದಾಗಿನಿಂದ ಜಯ ಗಳಿಸುತ್ತಾ ಬಂದಿದೆ. ಒಂದು ಬಾರಿ ಮಾತ್ರ ಬಿಜೆಪಿಯ ಮಾರುತಿರಾವ್ ಪವಾರ್ ಚುನಾಯಿತರಾಗಿದ್ದರು.
ಇದೀಗ ಬಿಜೆಪಿಯಿಂದ ಸಂದೇಶ್ ಸ್ವಾಮಿ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಜೊತೆಗೆ ಮಾರುತಿರಾವ್ ಪವಾರ್, ರಾಜೇಂದ್ರ, ಗಿರಿಧರ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಎಸ್ಡಿಪಿಐನಿಂದ ಅಬ್ದುಲ್ ಅವರು ಕಣಕ್ಕಿಳಿಯಲಿದ್ದಾರೆ. ಕ್ಷೇತ್ರದಲ್ಲಿ ಎಸ್ಡಿಪಿಐ ನಿಧಾನವಾಗಿ ಪ್ರಾಬಲ್ಯ ಸಾಧಿಸುವತ್ತಾ ಹೆಜ್ಜೆಯಿಟ್ಟಿರುವುದು ಭವಿಷ್ಯದಲ್ಲಿ ಕಾಂಗ್ರೆಸ್ಗೆ ಮುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಎಸ್ಡಿಪಿಐ ಅಭ್ಯರ್ಥಿ ಸೋತಿದ್ದನ್ನು ಗಮನಿಸಬಹುದಾಗಿದೆ. ಈ ಬಾರಿ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದೆ.
ಕೃಷ್ಣ "ರಾಜ" ಪಟ್ಟ ಯಾರಿಗೆ ?
ಸಿದ್ದರಾಮಯ್ಯ ಅವರ ಆಪ್ತ ಶಾಸಕರಾಗಿರುವ ಎಂ. ಕೆ. ಸೋಮಶೇಖರ್ ಕಳೆದ ಚುನಾವಣೆಯಲ್ಲಿ ಇಲ್ಲಿ ಸೋಲು ಕಂಡಿದ್ದರು. ಈ ಬಾರಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಪ್ರದೀಪ್ ಕುಮಾರ್ ಹಾಗೂ ನವೀನ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿರುವ ರಾಮದಾಸ್ ಅವರಿಗೆ ಈ ಬಾರಿಯೂ ಟಿಕೆಟ್ ಸಿಗುವ ವಿಶ್ವಾಸವಿದೆ.
ಅವರಿಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಒಂದು ಗುಂಪು ಪ್ರಬಲ ಪೈಪೋಟಿ ನಡೆಸಿದೆ. ಹಾಗೆಯೇ ಬಿಜೆಪಿ ಟಿಕೆಟ್ಗಾಗಿ ಮುಡಾ ಮಾಜಿ ಅಧ್ಯಕ್ಷ ಎಚ್. ವಿ ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೈಲಾಕ್ ಮಾಜಿ ಅಧ್ಯಕ್ಷ ಫಣೀಶ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್ನಿಂದ ನಗರ ಪಾಲಿಕೆ ಸದಸ್ಯ ಕೆ. ವಿ. ಮಲ್ಲೇಶ್ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ.
ವರುಣಾ ಕ್ಷೇತ್ರದಲ್ಲಿ ಗೆಲುವಿಗಾಗಿ ಕಾಳಗ
ಈ ಹಿಂದೆ ವರುಣಾದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಎರಡು ಬಾರಿಯೂ ಗೆಲುವು ಸಾಧಿಸಿ ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಸದ್ಯ ಈ ಕ್ಷೇತ್ರವನ್ನು ಅವರ ಪುತ್ರ ಡಾ.ಯತೀಂದ್ರ ಅವರು 2018ರಲ್ಲಿ ಪ್ರತಿನಿಧಿಸಿದ್ದರು. ಅಲ್ಲದೆ, ಮೊದಲ ಬಾರಿಗೆ ಗೆದ್ದು ಬಂದಿದ್ದರು. ಅಲ್ಲದೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವರುಣಾದಿಂದ ಸ್ಫರ್ಧಿಸುತ್ತಾರೆ ಎಂಬ ಮಾತು ಕಳೆದ ಬಾರಿ ಕೊನೇ ಕ್ಷಣದಲ್ಲಿ ಇಲ್ಲವಾಯಿತು.
ಈ ಬಾರಿಯೂ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಮತ್ತು ಬಿ.ಎಸ್.ವೈ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ಹೆಸರು ಕೂಡ ಕೇಳಿ ಬರುತ್ತಿದೆ. ಇನ್ನು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಮಹದೇವ ಬಿದರಿ, ಬಿ.ಎಸ್.ಯಡಿಯೂರಪ್ಪ ನವರ ಅಕ್ಕನ ಮಗ ಅಶೋಕ್ ಹೆಸರು ಕೂಡ ಮುನ್ನಲೆಗೆ ಬಂದಿದೆ. ಜೆಡಿಎಸ್ನಿಂದ ಈಗಾಗಲೇ ಅಭಿಷೇಕ್ಗೆ ಟಿಕೆಟ್ ನೀಡಲಾಗಿದ್ದು, ತಳಮಟ್ಟದ ರಾಜ್ಯಕಾರಣ ತಿಳಿಯದ ಅಭಿಷೇಕ್ ಕುರಿತು ಕ್ಷೇತ್ರದಲ್ಲಿ ಅಷ್ಟೊಂದು ವರ್ಚಸ್ಸು ಇಲ್ಲ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಪಿರಿಯಾಪಟ್ಟಣದಲ್ಲಿ "ಟಿಕೆಟ್" ಜಟಾಪಟಿ
ದಾಯಾದಿ ಕಲಹಕ್ಕೆ ಹೆಸರುವಾಸಿಯಾಗಿದ್ದ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳ ತಿರುಗಾಟ ಜೋರಾಗಿದೆ. ಅದರಲ್ಲೂ ವಿಶೇಷವಾಗಿ, ಈ ಬಾರಿಯೂ ಜೆಡಿಎಸ್ನಿಂದ ಶಾಸಕ ಕೆ.ಮಹದೇವ್, ಕಾಂಗ್ರೆಸ್ನಿಂದ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಆಕಾಂಕ್ಷಿಗಳು
ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ "ಹೈ" ವೋಲ್ಟೇಜ್ ಕ್ಷೇತ್ರವಾಗಿತ್ತು. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಜಿ.ಟಿ.ದೇವೇಗೌಡ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಟಿಕೆಟ್ ಘೋಷಣೆಯೂ ಆಗಿದೆ. ಇನ್ನು ಕಾಂಗ್ರೆಸ್ನಿಂದ ಮರಿಗೌಡ ಹೆಸರು ಕೇಳಿ ಬರುತ್ತಿದ್ದು, ಬಿಜೆಪಿಯಿಂದ ಅರುಣ್ ಕುಮಾರ್ ಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆ.ಆರ್.ನಗರದಲ್ಲಿ ಹೇಗಿದೆ ಚುನವಾಣೆ ಕಾವು?
ಮೈಸೂರು ಹೊರತುಪಡಿಸಿ, ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ.ಆರ್.ನಗರ ಕ್ಷೇತ್ರದಲ್ಲಿಯೂ ಹಿಂದುಳಿದ ವರ್ಗಗಳ ಮತಗಳದ್ದೇ ಹೆಚ್ಚಿನ ಪ್ರಾಬಲ್ಯವಿದೆ. ಒಕ್ಕಲಿಗ, ಕುರುಬರು ಪ್ರಬಲವಾಗಿರುವ ಇಲ್ಲಿ ಒಂದು ಬಾರಿ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲುವು ಸಾಧಿಸಿದೆ. ಆದ್ದರಿಂದ ಇಲ್ಲಿ ಜೆಡಿಎಸ್ನಿಂದ ಶಾಸಕ ಸಾ.ರಾ. ಮಹೇಶ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ.
ಆದರೆ ಕಾಂಗ್ರೆಸ್ನಿಂದ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದರೂ ತಾಲೂಕಿನ ಪ್ರಭಾವಿ ಮುಖಂಡ ದೊಡ್ಡಸ್ವಾಮಿಗೌಡರ ಮಗ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ಮಾಜಿ ನಾಯಕ ಡಿ.ರವಿಶಂಕರ್ ಮುನ್ನೆಲೆಯಲ್ಲಿದ್ದಾರೆ. ಈ ಮೂಲಕ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಬೇಕು ಎನ್ನುವ ಪಣ ತೊಟ್ಟಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಈಗಾಗಲೇ ಮನೆಮನೆ ಯಾತ್ರೆಯನ್ನೂ ಕೈಗೊಂಡಿದ್ದಾರೆ.
ಅನುಕಂಪದ ಅಲೆ ಈ ಬಾರಿಯಾದರೂ ಅವರನ್ನು ಕೈ ಹಿಡಿಯುತ್ತದೆಯೇ ಅನ್ನವುದನ್ನು ಕಾದುನೋಡಬೇಕಾಗಿದೆ. ಹಾಗೆಯೇ ಕಾಂಗ್ರೆಸ್ನಿಂದ ಐಶ್ವರ್ಯ ಮಹದೇವ್ ಕೂಡ ಟಿಕೆಟ್ಗೆ ಅರ್ಜಿ ಹಾಕಿದ್ದಾರೆ. ಇನ್ನು ಬಿಜೆಪಿಯಿಂದ ಹೊಸಳ್ಳಿ ವೆಂಕಟೇಶ್, ಮಿರ್ಲೆ ಶ್ರೀನಿವಾಸಗೌಡ, ವರದರಾಜು ಪೈಪೋಟಿಯಲ್ಲಿದ್ದಾರೆ.
ತಿ.ನರಸೀಪುರದಲ್ಲಿನ "ಟಿಕೆಟ್" ಆಕಾಂಕ್ಷಿಗಳು
2023ರ ಚುನಾವಣೆಯಲ್ಲಿ ಶತಾಯಗತಾಯ ತಿ.ನರಸೀಪುರ ಕ್ಷೇತ್ರದ ಟಿಕೆಟ್ ಪಡೆಯಲು ಕಾಂಗ್ರೆಸ್ನ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಪ್ರಯತ್ನ ಮಾಡುತ್ತಿದ್ದಾರೆ.
ಜೆಡಿಎಸ್ನಿಂದ ಹಾಲಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಈಗಾಗಲೇ ವರಿಷ್ಠರು ಟಿಕೆಟ್ ಘೋಷಣೆ ಮಾಡಿದ್ದಾರೆ. ಮತ್ತೊಂದೆಡೆ ಬಿಜೆಪಿಯಿಂದ ಮಾಜಿ ಶಾಸಕ ಭಾರತೀಶಂಕರ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಸುಂದರೇಶ್ ಸಾಮ್ರಾಟ್ ಕೂಡ ರೇಸ್ನಲ್ಲಿ ಇದ್ದಾರೆ ಎನ್ನಲಾಗಿದೆ.
ನಂಜನಗೂಡಿನಲ್ಲಿ "ಟಿಕೆಟ್" ಜಿದ್ದಾಜಿದ್ದಿ
ಸಾಮಾನ್ಯ ಕ್ಷೇತ್ರವಾಗಿದ್ದ ನಂಜನಗೂಡು, 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಸಂದರ್ಭದಲ್ಲಿ ಮೀಸಲು ಕ್ಷೇತ್ರವಾಯಿತು. ಈ ಬಾರಿ ಕ್ಷೇತ್ರದಲ್ಲಿ ಹಾಲಿ ಬಿಜೆಪಿಯಿಂದ ಶಾಸಕ ಹರ್ಷವರ್ಧನ್ಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಕಾಂಗ್ರೆಸ್ನಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಉಳಿದಂತೆ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅಡ್ಡಿಯಾಗುವರೇ ಎಂದು ಕಾದು ನೋಡಬೇಕಿದೆ. ಇನ್ನು ಜೆಡಿಎಸ್ನಿಂದ ಮಾದೇಶ್ ಟಿಕೆಟ್ ಆಕಾಂಕ್ಷಿ ಆಗಿದ್ದು, ಬಿಎಸ್ಪಿ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ರೂಪಿಸಿದೆ.
ಎಚ್.ಡಿ.ಕೋಟೆಯಲ್ಲಿನ ಆಕಾಂಕ್ಷಿಗಳ ಪಟ್ಟಿ
ಎಚ್.ಡಿ.ಕೋಟೆಯಲ್ಲಿ ನಾಯಕ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಇಲ್ಲಿ ಜೆಡಿಎಸ್ನ ಚಿಕ್ಕಮಾದು ಪ್ರಥಮ ಪ್ರಯತ್ನದಲ್ಲಿಯೇ ಗೆದ್ದಿದ್ದರು. ಇನ್ನು ತಂದೆ ಅಕಾಲಿಕ ನಿಧನದ ನಂತರ ಕಳೆದ ಬಾರಿ ಅನಿಲ್ ಚಿಕ್ಕಮಾಧು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.
ಜೊತೆಗೆ ಗೆಲುವು ಕೂಡ ಸಾಧಿಸಿದ್ದರು. ಕಾಂಗ್ರೆಸ್ನಿಂದ ಗೆದ್ದು ಬಿಜೆಪಿಗೆ ಹೋಗಿದ್ದ ಚಿಕ್ಕಣ್ಣ ಇದೀಗ ಜೆಡಿಎಸ್ನಲ್ಲಿದ್ದಾರೆ. ಹಾಗೆಯೇ ಮಗ ಜಯಪ್ರಕಾಶ್ಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಮತ್ತೊಂದೆಡೆ ಬಿಜೆಪಿಯಿಂದ ಅಪ್ಪಣ್ಣ, ಡಾ.ಎಚ್.ವಿ.ಕೃಷ್ಣಸ್ವಾಮಿ ಇಲ್ಲಿನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಹುಣಸೂರು ರಾಜಕೀಯ ಕದನಕ್ಕೆ ಪ್ರಸಿದ್ಧಿ
ಡಿ. ದೇವರಾಜು ಅರಸು ಅವರ ಕಾಲದಿಂಲೂ ರಾಜಕೀಯ ಕದನಕ್ಕೆ ಈ ಕ್ಷೇತ್ರ ಹೆಸರುವಾಸಿಯಾಗಿದೆ. ಹಿಂದುಳಿದ ವರ್ಗದ ಎಚ್. ಪ್ರೇಮಕುಮಾರ್ ಅವರ ಪುತ್ರ ಎಚ್. ಪಿ. ಮಂಜುನಾಥ್ ಕಾಂಗ್ರೆಸ್ನಿಂದ ಮೂರು ಬಾರಿ ಆಯ್ಕೆಯಾಗಿದ್ದು, ಈಗ ಮತ್ತೆ ನಾಲ್ಕನೇ ಬಾರಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಇನ್ನು ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್ ಗೌಡ ಜೆಡಿಎಸ್ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಯೋಗಾನಂದ ಕುಮಾರ್, ವಸಂತ್ ಕುಮಾರ್ ಗೌಡ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.