ಚುನಾವಣೆ ಫಲಿತಾಂಶ; ಶಿವಮೊಗ್ಗದಲ್ಲಿ ಗೆದ್ದವರು, ಸೋತವರು
ಮಡಿಕೇರಿ, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರ ಲೆಕ್ಕಾಚಾರಗಳು ಬುಡಮೇಲಾಗಿದೆ. ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ. ಬಿ. ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಪಕ್ಷದ ಮೇಲೆ ಪರಿಣಾಮ ಬೀರಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ತೀರ್ಥಹಳ್ಳಿ, ಶಿವಮೊಗ್ಗ ನಗರ ಮತ್ತು ಶಿಕಾರಿಪುರದಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪಕ್ಷ ಸಾಗರ, ಸೊರಬ, ಭದ್ರಾವತಿಯನ್ನು ವಶಕ್ಕೆ ಪಡೆದಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ಗೆಲುವು ದಾಖಲಿಸಿದೆ.

ಬಿ. ವೈ. ವಿಜಯೇಂದ್ರ ಗೆಲುವು; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಬಳಿಕ ಶಿವಮೊಗ್ಗ ಮೊದಲ ಚುನಾವಣೆ ಎದುರಿಸಿತ್ತು. ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರಗೆ ಟಿಕೆಟ್ ಕೊಡಿಸಿದ್ದರು. ಅವರು ಮೊದಲ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದಾರೆ.
ಹಾಲಿ ಶಾಸಕ, ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಗೆದ್ದಿದ್ದಾರೆ. ಆದರೆ ಸಾಗರ (ಹರತಾಳು ಹಾಲಪ್ಪ), ಸೊರಬ (ಕುಮಾರ್ ಬಂಗಾರಪ್ಪ) ಹಾಲಿ ಶಾಸಕರಾಗಿದ್ದರೂ ಸೋಲು ಕಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಕೆ. ಎಸ್. ಈಶ್ವರಪ್ಪ ಆಪ್ತ ಚನ್ನಬಸಪ್ಪ ಮೊದಲ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಅಶೋಕ ನಾಯಕ್ ಸೋಲು ಕಂಡಿದ್ದಾರೆ. 2013ರಲ್ಲಿ ಗೆದ್ದಿದ್ದ ಜೆಡಿಎಸ್ನ ಶಾರದಾ ಪೂರ್ಯನಾಯ್ಕ್ ಈ ಬಾರಿಯು ಜಯ ದಾಖಲು ಮಾಡಿದ್ದಾರೆ. ಈ ಮೂಲಕ ಬಿಜೆಪಿ ಕ್ಷೇತ್ರವನ್ನು ಕಳೆದುಕೊಂಡಿದೆ.
ಭದ್ರಾವತಿ ಕ್ಷೇತ್ರದಲ್ಲಿ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನದ ನಂತರ ಜೆಡಿಎಸ್ ಮೊದಲ ಚುನಾವಣೆ ಎದುರಿಸಿತು. ಅಪ್ಪಾಜಿ ಗೌಡ ಪತ್ನಿ ಶಾರದಾ ಅಪ್ಪಾಜಿ ಗೌಡ 63503 ಮತಗಳನ್ನು ಪಡೆದು ಪೈಪೋಟಿ ನೀಡಿಯೇ ಕಾಂಗ್ರೆಸ್ನ ಬಿ. ಕೆ. ಸಂಗಮೇಶ್ವರ ವಿರುದ್ಧ ಸೋಲು ಕಂಡಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಸಹೋದರರ ಸವಾಲಿನಲ್ಲಿ ಹಾಲಿ ಶಾಸಕ, ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪಗೆ ಸೋಲಾಗಿದೆ. 2013ರಲ್ಲಿ ಜೆಡಿಎಸ್ನಿಂದ ಗೆದ್ದು, 2018ರಲ್ಲಿ ಸೋಲು ಕಂಡಿದ್ದ ಮಧು ಬಂಗಾರಪ್ಪ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸಹೋದರನನ್ನು ಸೋಲಿಸಿದ್ದಾರೆ.
ಸಾಗರ ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿ ನಾಯಕ ಹರತಾಳು ಹಾಲಪ್ಪಗೆ ಸೋಲಾಗಿದೆ. 2018ರ ಚುನಾವಣೆಯಲ್ಲಿ ಸೊರಬದಿಂದ ಸಾಗರಕ್ಕೆ ಬಂದು ಅವರು ಗೆಲುವು ಕಂಡಿದ್ದರು. ಈ ಬಾರಿ ಕಾಂಗ್ರೆಸ್ನ ಬೇಳೂರು ಗೋಪಾಲಕೃಷ್ಣ ವಿರುದ್ಧ 72966 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂಬ ಅಂಶ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.
ಶಿವಮೊಗ್ಗ ನಗರದಲ್ಲಿ ಕೆ. ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಬಳಿಕ ಅವರ ಪುತ್ರ ಕೆ. ಈ. ಕಾಂತೇಶ್ಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಸಹ ಜೆಡಿಎಸ್ ಸೇರಿದರು. ಆದರೆ ಕಾಂತೇಶ್ಗೆ ಟಿಕೆಟ್ ಸಿಗಲಿಲ್ಲ. ಆಯನೂರು ಮಂಜುನಾಥ್ ಸಹ ಪ್ರಬಲ ಪೈಪೋಟಿ ನೀಡಲು ವಿಫಲರಾದರು.
ಶಿವಮೊಗ್ಗ ಚುನಾವಣಾ ಫಲಿತಾಂಶ
| ಕ್ಷೇತ್ರ | ಗೆಲುವು | ಮತಗಳು | ಸೋತವರು | ಮತಗಳು |
| ಶಿವಮೊಗ್ಗ ನಗರ | ಎಸ್. ಎನ್. ಚನ್ನಬಸಪ್ಪ (ಬಿಜೆಪಿ) | 96490 | ಹೆಚ್. ಸಿ. ಯೋಗೇಶ್ (ಕಾಂಗ್ರೆಸ್) | 68816 |
| ಶಿವಮೊಗ್ಗ ಗ್ರಾಮಾಂತರ | ಶಾರದಾ ಪೂರ್ಯನಾಯ್ಕ್ (ಜೆಡಿಎಸ್) | 86340 | ಕೆ. ಬಿ. ಅಶೋಕ್ ಕುಮಾರ್ (ಬಿಜೆಪಿ) | 71198 |
| ಭದ್ರಾವತಿ | ಬಿ. ಕೆ. ಸಂಗಮೇಶ್ವರ (ಕಾಂಗ್ರೆಸ್) | 66208 | ಶಾರದಾ ಅಪ್ಪಾಜಿ ಗೌಡ (ಜೆಡಿಎಸ್) | 63503 |
| ಸೊರಬ | ಮಧು ಬಂಗಾರಪ್ಪ (ಕಾಂಗ್ರೆಸ್) | 98912 | ಕುಮಾರ್ ಬಂಗಾರಪ್ಪ (ಬಿಜೆಪಿ) | 54650 |
| ತೀರ್ಥಹಳ್ಳಿ | ಆರಗ ಜ್ಞಾನೇಂದ್ರ (ಬಿಜೆಪಿ) | 84563 | ಕಿಮ್ಮನೆ ರತ್ನಾಕರ (ಕಾಂಗ್ರೆಸ್) | 72322 |
| ಸಾಗರ | ಬೇಳೂರು ಗೋಪಾಲಕೃಷ್ಣ (ಕಾಂಗ್ರೆಸ್) | 88988 | ಹಾರತಾಳು ಹಾಲಪ್ಪ (ಬಿಜೆಪಿ) | 72966 |
| ಶಿಕಾರಿಪುರ | ಬಿ. ವೈ. ವಿಜಯೇಂದ್ರ (ಬಿಜೆಪಿ) | 81810 | ಬಿ. ಆರ್. ನಾಗರಾಜ್ ಗೌಡ (ಪಕ್ಷೇತರ) | 70802 |












Click it and Unblock the Notifications