Karnataka Assembly Election:3 ಪಕ್ಷಗಳಲ್ಲಿನ ಯುವ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
2023 ಮೇ ತಿಂಗಳೊಳಗೆ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಮೂರು ಪಕ್ಷಗಳ ಜೊತೆಗೆ ಆಮ್ ಆದ್ಮಿ ಪಕ್ಷವೂ ಪೂರ್ವತಯಾರಿಯನ್ನು ಮಾಡಿಕೊಳ್ಳುತ್ತಿದೆ. ಕುಮಾರಸ್ವಾಮಿ ಮತ್ತು ಬಿಜೆಪಿ ಮುಖಂಡರು ರಾಜ್ಯಾದ್ಯಂತ ಪ್ರವಾಸವನ್ನು ನಡೆಸುತ್ತಿದ್ದಾರೆ.
ಮುಂದಿನ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ರಾಜ್ಯ ಪ್ರವಾಸವೂ ಆರಂಭಗೊಳ್ಳಲಿದೆ. ಅಲ್ಲಿಗೆ, ಪೂರ್ಣ ಪ್ರಮಾಣದಲ್ಲಿ ಮೂರೂ ಪಕ್ಷಗಳು ಚುನಾವಣೆಯ ಆಖಾಡಕ್ಕೆ ಇಳಿಯಲಿದೆ.
ಬಿಜೆಪಿಯಂತೂ ಪ್ರಧಾನಿ ಮೋದಿಯವರ ಪ್ರಚಾರವನ್ನೇ ನಂಬಿಕೊಂಡಂತಿದೆ. ಜೊತೆಗೆ, ರಾಜ್ಯದಲ್ಲೂ ಜನಪ್ರಿಯತೆಯನ್ನು ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಚಾರದ ಮೇಲೂ ಸ್ವಲ್ಪಮಟ್ಟಿಗೆ ಅವಲಂಬಿತವಾಗಿದೆ.
ಈ ಬಾರಿಯೂ ಚುನಾವಣೆಯಲ್ಲಿ ಯುವ ಸಮುದಾಯದ ದೊಡ್ಡ ದಂಡೇ ಅಸೆಂಬ್ಲಿ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹಾಲೀ ಶಾಸಕರಲ್ಲದ, ಮೂರು ಪಕ್ಷಗಳಲ್ಲಿನ ಈ ವರೆಗಿನ ಆಕಾಂಕ್ಷಿಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಬಿ.ವೈ.ವಿಜಯೇಂದ್ರ, ಸುನೀಲ್ ಭೋಸ್
1. ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದ ಮಾಸ್ ಲೀಡರ್ ಗಳಲ್ಲಿ ಒಬ್ಬರಾದ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಈಗಾಗಲೇ ಬಿಎಸ್ವೈ ಪ್ರಕಟಿಸಿದ್ದಾಗಿದೆ. ವಿಜಯೇಂದ್ರ ಅವರು ಹೆಸರು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದಲೂ (ಬಿಜೆಪಿ ಟಿಕೆಟ್) ಕೇಳಿ ಬರುತ್ತಿದೆ.
2. ಮಾಜಿ ಲೋಕೋಪಯೋಗಿ ಇಲಾಖೆಯ ಸಚಿವ ಮತ್ತು ಸಿದ್ದರಾಮಯ್ಯನವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಡಾ.ಎಚ್.ಸಿ.ಮಹದೇವಪ್ಪನವರ ಪುತ್ರ ಸುನೀಲ್ ಭೋಸ್ ಅವರು ಟಿ.ನರಸೀಪುರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕುಸುಮಾ ಹನುಮಂತರಾಯಪ್ಪ, ಭವ್ಯಾ ನರಸಿಂಹಮೂರ್ತಿ
3. ಕಳೆದ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಿದ್ದ ಕುಸುಮಾ ಎಚ್, ಬಿಜೆಪಿಯ ಮುನಿರತ್ನ ಅವರ ವಿರುದ್ದ 58,000 ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿಯೂ ಕುಸುಮಾ ಅವರು ಅದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
4. ಕೆಪಿಸಿಸಿ ವಕ್ತಾರೆ, ಕೊಲೊಂಬಿಯಾ ವಿವಿಯ ಪದವೀಧರೆ ಭವ್ಯಾ ನರಸಿಂಹಮೂರ್ತಿಯವರು ಬೆಂಗಳೂರು ನಗರ ವ್ಯಾಪ್ತಿಯ ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅಲ್ಲಿಂದ ವಿಜೇತರಾಗಿದ್ದರು.

ಡಾ. ಸಂದೀಪ್ ಕುಮಾರ್, ಮಿಥುನ್ ರೈ
5. ಬಿಜೆಪಿ ಯುವಮೋರ್ಚಾದ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್ ಅವರು ಆನೇಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ.ಶಿವಣ್ಣ ಅವರು ಈ ಕ್ಷೇತ್ರದಿಂದ ವಿಜೇತರಾಗಿದ್ದರು. ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಂ ಕೂಡಾ ಈ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದಾರೆ.
6. ಯುವ ಕಾಂಗ್ರೆಸ್ ಮುಖಂಡ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಕ್ಷೇತ್ರದಲ್ಲಿ ನಳಿನ್ ಕಟೀಲ್ ವಿರುದ್ದ ಸೋಲುಂಡಿದ್ದ ಮಿಥುನ್ ರೈ ಈ ಬಾರಿ ಜಿಲ್ಲೆಯ ಮೂಡಬಿದರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಇಲ್ಲಿಂದ ಗೆದ್ದಿದ್ದರು.

ಎಚ್.ಸಿ.ತಮ್ಮೇಶ್ ಗೌಡ, ಡಾ.ಮಲ್ಲಿಕಾರ್ಜುನ ಬಾಳಿಕಾಯಿ
7. ಬೆಂಗಳೂರು ನಗರ ವ್ಯಾಪ್ತಿಯ ಬ್ಯಾಟರಾಯನಪುರ ಕ್ಷೇತ್ರದಿಂದ ಬಿಜೆಪಿ ನಾಯಕ, ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷರಾಗಿರುವ ಎಚ್.ಸಿ.ತಮ್ಮೇಶ್ ಗೌಡ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ಸಿನ ಕೃಷ್ಣ ಭೈರೇಗೌಡ ಜಯಶೀಲರಾಗಿದ್ದರು.
8. ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಕುಂದಗೋಳ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿ ಜಯಶೀಲರಾಗಿದ್ದರು.

ರಘುವೀರ್ ಎಸ್ ಗೌಡ, ಐಶ್ವರ್ಯ ಮಹಾದೇವ
9. ಬೆಂಗಳೂರು ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಘುವೀರ್ ಎಸ್ ಗೌಡ ಅವರು ಬೆಂಗಳೂರು ನಗರ ವ್ಯಾಪ್ತಿಯ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಜಯಭೇರಿ ಬಾರಿಸಿದ್ದರು.
10. ಮಾಜಿ ಶಾಸಕ ಮಂಚನಹಳ್ಳಿ ಮಹಾದೇವ್ ಅವರ ಪುತ್ರಿ ಐಶ್ವರ್ಯ ಮಂಚನಹಳ್ಳಿ ಮಹಾದೇವ ಅವರು ಕೆ.ಆರ್.ನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ಸಿನಿಂದ ಸಾ.ರಾ.ಮಹೇಶ್ ವಿಜೇತರಾಗಿದ್ದರು.

ನಯನ ಮೋಟಮ್ಮ, ಪ್ರಿಯಾಂಕ ಜಾರಕಿಹೊಳಿ
11. ಕಾಂಗ್ರೆಸ್ಸಿನ ಹಿರಿಯ ನಾಯಕಿ, ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನ ಅವರು ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮೂಡಿಗೆರೆಯಿಂದ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ವಿಜೇತರಾಗಿದ್ದರು.
12. ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿರುವ, ಬೆಳಗಾವಿಯ ಪ್ರಭಾವೀ ನಾಯಕ ಸತೀಶ್ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕ ಅವರು ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದ ಸತೀಶ್ ಜಾರಕಿಹೊಳಿ ಮಗಳಿಗಾಗಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ ಎನ್ನುವ ಮಾಹಿತಿಯಿದೆ.

ಸಂಯುಕ್ತ ಪಾಟೀಲ್, ನಿಖಿಲ್ ಕುಮಾರಸ್ವಾಮಿ
13. ಮಾಜಿ ಸಚಿವ, ಹಾಲೀ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರು ಈ ಬಾರಿ ತಾವು ಸ್ಪರ್ಧಿಸುತ್ತಿದ್ದ ಬಸವನಬಾಗೇವಾಡಿ ಕ್ಷೇತ್ರವನ್ನು ಮಗಳು ಸಂಯುಕ್ತ ಪಾಟೀಲ್ ಅವರಿಗೆ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಕಳೆದ ಬಾರಿ ಪಾಟೀಲ್ (ಕಾಂಗ್ರೆಸ್) ಅವರು ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದರು.
14. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ರಾಮನಗರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಅನಿತಾ ಕುಮಾರಸ್ವಾಮಿಯವರು ಘೋಷಿಸಿದ್ದಾಗಿದೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಇಲ್ಲಿಂದ ಗೆದ್ದಿದ್ದರು.

ಜಿ.ಟಿ.ಹರೀಶ್ ಗೌಡ, ರಕ್ಷಿತ್ ಶಿವರಾಂ
15. ಹಾಲೀ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಟಿ.ಹರೀಶ್ ಗೌಡ ಅವರು ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟಿನಿಂದ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹುಣಸೂರಿನಲ್ಲಿ ಕಾಂಗ್ರೆಸ್ಸಿನ ಎಚ್.ವಿಶ್ವನಾಥ್ ಗೆಲುವು ಸಾಧಿಸಿದ್ದರು.
16. ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರ ಸಹೋದರ, ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರ ರಕ್ಷಿತ್ ಶಿವರಾಂ ಅವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹರೀಶ್ ಪೂಂಜಾ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದರು.












Click it and Unblock the Notifications