7th Pay Commission; ಭತ್ಯೆ, ನಿವೃತ್ತಿ ವಯಸ್ಸು, ಪಿಂಚಣಿ ಪರಿಶೀಲನೆ
ಕರ್ನಾಟಕ ಸರ್ಕಾರ ರಚನೆ ಮಾಡಿರುವ 7ನೇ ರಾಜ್ಯ ವೇತನ ಆಯೋಗ ತನ್ನ ಪರಿಶೀಲನಾರ್ಹ ಅಂಶಗಳ ಮೇಲೆ ವರದಿಯನ್ನು ಸಲ್ಲಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಆಯೋಗವು ಮೊದಲ ಹಂತದಲ್ಲಿ ಸಾರ್ವಜನಿಕರು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಮಾನ್ಯತೆ ಪಡೆದ ನೌಕರರ ಸಂಘಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ ಪ್ರಶ್ನಾವಳಿ ಪ್ರಕಟಿಸಿದೆ.
ಸಂಸತ್ ಸದಸ್ಯರು, ವಿಧಾನಸಭೆ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು ಮತ್ತು ಇತರೆ ಪ್ರಮುಖ ಚುನಾಯಿತ ಪ್ರತಿನಿಧಿಗಳಿಂದಲೂ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳಿಂದಲೂ ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ.
7th Pay Commission; ನೀತಿ ಸಂಹಿತೆಗೂ ಮೊದಲೇ ವರದಿ ಕೊಡಲು ಕೋರಿಕೆ
ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಶ್ನಾವಳಿ 'ಎ' ನಮೂನೆಯಲ್ಲಿ ಉತ್ತರಗಳನ್ನು ಒದಗಿಸಬೇಕಾಗುತ್ತದೆ. ಪ್ರಶ್ನಾವಳಿ 'ಬಿ' ಮತ್ತು 'ಸಿ' ನಮೂನೆಗಳು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರುಗಳು ಉತ್ತರಗಳನ್ನು ನೀಡುವ ಉದ್ದೇಶಕ್ಕೆ ಇದೆ. ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಪ್ರಶ್ನಾವಳಿ 'ಡಿ', 'ಇ', 'ಎಫ್' ಗಳಲ್ಲಿ ಕ್ರಮವಾಗಿ ಉತ್ತರಗಳನ್ನು ನೀಡಬೇಕಾಗುತ್ತದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪ್ರಶ್ನಾವಳಿ 'ಜಿ' ನಮೂನೆಯಲ್ಲಿ ಆಹ್ವಾನಿಸಲಾಗಿದೆ.
Karnataka 7th pay commission; ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳು
ವ್ಯಕ್ತಿಗಳು, ಮಾನ್ಯತೆ ಪಡೆದ ನೌಕರರ ಮತ್ತು ಪಿಂಚಣಿದಾರರ ಸಂಘಗಳು, ಸಂಘ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಅಥವಾ ಇನ್ನಿತರ ಆಸಕ್ತಿಯುಳ್ಳ ವ್ಯಕ್ತಿಗಳು ಅಭಿಪ್ರಾಯಗಳನ್ನು ಪ್ರಶ್ನಾವಳಿ 'ಎ' ಮತ್ತು 'ಜಿ' ನಮೂನೆಗಳಲ್ಲಿ ಸಲ್ಲಿಸಬಹುದಾಗಿದೆ. ಪ್ರತಿಕ್ರಿಯೆ ನೀಡುವವರು ಅವರ ಸಂಪೂರ್ಣ ಅಂಚೆ ವಿಳಾಸ, ಇ-ಮೇಲ್ ವಿಳಾಸ ಮತ್ತು ಸಂಪರ್ಕಿಸುವ ದೂರವಾಣಿ ಸಂಖ್ಯೆಯ ವಿವರಗಳನ್ನು ನೀಡಬೇಕು.
7th Pay Commission; ಸರ್ಕಾರದ ಆದೇಶ, ನೌಕರರ ನಿರೀಕ್ಷೆಗಳು
ಪ್ರಶ್ನಾವಳಿಗಳಿಗೆ ಅಭಿಪ್ರಾಯಗಳನ್ನು, ಮನವಿಯನ್ನು ಸದಸ್ಯ ಕಾರ್ಯದರ್ಶಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಔಷಧ ನಿಯಂತ್ರಣ ಇಲಾಖೆಯ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು - 560001 ವಿಳಾಸಕ್ಕೆ 10/02/2023 ಅಥವಾ ಅದಕ್ಕೂ ಮುನ್ನ ತಲುಪುವಂತೆ ಕಳುಹಿಸಲು ಕೋರಲಾಗಿದೆ.
ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅಪಾಯ ಭತ್ಯೆ
ಈಗ ಪ್ರಕಟಿಸಿರುವ ಪ್ರಶ್ನಾವಳಿಗಳಲ್ಲಿ 7ನೇ ರಾಜ್ಯ ವೇತನ ಆಯೋಗವು ಕೆಲವು ನಿಗದಿತ ಪ್ರವರ್ಗದ ಹುದ್ದೆಗಳಿಗೆ ನೀಡುತ್ತಿರುವ ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅಪಾಯ ಭತ್ಯೆ, ನಿಗಧಿತ ಪ್ರಯಾಣ ಭತ್ಯ ಮತ್ತು ವಿಶೇಷ ಭತ್ಯೆಯು ಮಾಸಿಕ ದರವು ರೂ.100 ರಿಂದ ರೂ. 8500ರ ಪ್ರಮಾಣದಲ್ಲಿರುತ್ತದೆ.
ಸರ್ಕಾರಿ ನೌಕರರಿಗೆ ಪ್ರತಿ ವರ್ಷ 15 ದಿನಗಳ ಮತ್ತು ನಿವೃತ್ತಿ ಸಮಯದಲ್ಲಿ ಗರಿಷ್ಟ 300 ದಿನಗಳವರೆಗೆ ಗಳಿಕೆ ರಜೆಯನ್ನು ನಗದೀಕರಿಸಲು ಅವಕಾಶವಿದೆ. ಮಹಿಳಾ ಉದ್ಯೋಗಿಗಳು 180 ದಿನಗಳ ಹೆರಿಗೆ ರಜೆಗೆ ಅರ್ಹರಿರುವರು. ಸರ್ಕಾರಿ ನೌಕರರ ಸೇವಾ ಅವಧಿಯಲ್ಲಿ ಭಾರತದ ಯಾವುದೇ ಸ್ಥಳಕ್ಕೆ 2 ಬಾರಿ ಹೋಗಿ ಬರಲು ರಜಾ ಪ್ರಯಾಣ ಭತ್ಯೆಯ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ.
ಸರ್ಕಾರಿ ನೌಕರರ ಪಿಂಚಣಿ ಪ್ರಶ್ನಾವಳಿಗಳು
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳಾಗಿದ್ದು, ಇದು ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗೆ ಸಮನಾಗಿದೆ. 30 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ನಿವೃತ್ತ ನೌಕರರು ಅವರ ಅಂತಿಮ ಮೂಲ ವೇತನದ ಶೇಕಡ 50 ರಷ್ಟು ಪೂರ್ಣ ಪ್ರಮಾಣದ ಪಿಂಚಣಿಗೆ ಮತ್ತು 30 ವರ್ಷಗಳಿಗಿಂತ ಕಡಿಮೆ ಅರ್ಹತಾ ಸೇವೆಯನ್ನು ಸಲ್ಲಿಸಿದ ಪ್ರಕರಣಗಳಲ್ಲಿ ಅರ್ಹತಾ ಸೇವೆಯ ಪ್ರಮಾಣಾನುಸಾರ ಪಿಂಚಣಿಗೆ ಅರ್ಹರು ಎಂದು ಆಯೋಗ ಹೇಳಿದೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮಾನುಸಾರ 15 ವರ್ಷಗಳ ಅರ್ಹತಾ ಸೇವೆಯನ್ನು ಅಥವಾ 50 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರು ಸ್ವ- ಇಚ್ಛಾ ನಿವೃತ್ತಿಯನ್ನು ಕೋರಬಹುದು. ನಿವೃತ್ತಿಯ ನಂತರ ನೌಕರರು ಗರಿಷ್ಟ 20 ಲಕ್ಷ ರೂ. ಗಳು ಅಥವಾ ಮೂಲ ವೇತನದ 16.5 ರಷ್ಟು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಮರಣ ಹಾಗೂ ನಿವೃತ್ತಿ ಉಪದಾನವನ್ನು ಪಡೆಯುತ್ತಾರೆ.
ಸರ್ಕಾರಿ ನೌಕರನ/ ಪಿಂಚಣಿದಾರನ ಮರಣದ ನಂತರ ದೊರೆಯುವ ಕುಟುಂಬ ವೇತನವು ಕನಿಷ್ಟ ಮಾಸಿಕ ರೂ. 8,500 ಮತ್ತು ಗರಿಷ್ಟ ಮಾಸಿಕ ರೂ. 45,180ರ ಮಿತಿಗೆ ಒಳಪಟ್ಟು ಆತನ ನಿವೃತ್ತಿ/ ಮರಣದ ಸಮಯದಲ್ಲಿ ಪಡೆದ ಮೂಲ ವೇತನದ ಶೇಕಡ 30ರಷ್ಟು ಇದೆ. ನಿವೃತ್ತಿ ಸರ್ಕಾರಿ ನೌಕರರು 1/3 ರಷ್ಟು ಪ್ರಮಾಣದ ಪಿಂಚಣಿಯನ್ನು ಪರಿವರ್ತಿಸಿ ಇಡಿಗಂಟಿನ ಮೊತ್ತವನ್ನು ಪಡೆಯಬಹುದಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯ ವ್ಯಾಪ್ತಿ
ದಿನಾಂಕ 1/4/2006ರ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ನೌಕರರು ವಂತಿಗೆ ಆಧಾರಿತ ಪಿಂಚಣಿ ಯೋಜನೆಯಾದ 'ರಾಷ್ಟ್ರೀಯ ಪಿಂಚಣಿ ಯೋಜನೆ' ಯ ವ್ಯಾಪ್ತಿಗೆ ಕಡ್ಡಾಯವಾಗಿ ಒಳಪಡುತ್ತಾರೆ. ಈ ಯೋಜನೆಯ ಅನ್ವಯ ಸರ್ಕಾರಿ ನೌಕರನ ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇ.10 ರಷ್ಟು ವಂತಿಗೆಯನ್ನು ಸರ್ಕಾರಿ ನೌಕರರು ಭರಿಸಬೇಕಿದ್ದು, ಸರ್ಕಾರವು ಶೇ.14 ರಷ್ಟು ವಂತಿಗೆಯನ್ನು ಸೇರಿಸಿ ಪಿಂಚಣಿ ನಿಧಿಯಲ್ಲಿ ಹೂಡುತ್ತದೆ.
ನಿವೃತ್ತಿ ಹೊಂದುವ ನೌಕರರು ಈ ರೀತಿ ಹೂಡಲಾದ ನಿಧಿಯಿಂದ ಇಡಿಗಂಟಿನ ಮೊತ್ತ ಮತ್ತು ವರ್ಷಾಸನ ಪಡೆಯುತ್ತಾರೆ. ಕಾಲಕಾಲಕ್ಕೆ ತರಲಾದ ಬದಲಾವಣೆಗಳೊಂದಿಗೆ ಕೇಂದ್ರ ಸರ್ಕಾರವು ನೌಕರರಿಗೆ ಜಾರಿಗೊಳಿಸಿರುವ ಯೋಜನೆಯ ಮಾದರಿಯಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
7ನೇ ವೇತನ ಆಯೋಗದ ಪ್ರಶ್ನಾವಳಿಗಳು
ಸರ್ಕಾರದ ಕಾರ್ಯಗಳ ಮೂಲ ಉದ್ದೇಶಗಳಲ್ಲಿ ಇತರ ಕರ್ತವ್ಯಗಳ ಜೊತೆ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಸಾಮಾಜಿಕ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಸಮಾನ ಅವಕಾಶಗಳಿಗೆ ಉತ್ತೇಜನ ನೀಡುವ ಕ್ರಮವು ಒಳಗೊಂಡಿರುತ್ತದೆ.
ಈ ಉದ್ದೇಶಗಳನ್ನು ಸಾಧಿಸಲು ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹಂತಗಳಲ್ಲಿ ಸುಮಾರು 5 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಈ ಉದ್ಯೋಗಿಗಳಲ್ಲಿ, ಸುಮಾರು ಶೇ 80 ರಷ್ಟು ಸಿಬ್ಬಂದಿ ಪೊಲೀಸ್, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ಕೃಷಿ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ನೇಮಿಸಲಾಗಿದೆ.
ರಾಜ್ಯ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು/ ನಿವೃತ್ತ ನೌಕರರ ಕುಟುಂಬಗಳ ಸಂಖ್ಯೆ ಸುಮಾರು 5.11 ಲಕ್ಷ. 2022-23 ರಲ್ಲಿ ವೇತನ ಮತ್ತು ಪಿಂಚಣಿಗಳ ವೆಚ್ಚವನ್ನು ಕ್ರಮವಾಗಿ ರೂ. 41,288 ಕೋಟಿಗಳು ಮತ್ತು ರೂ. 24,016 ಕೋಟಿಗಳೆಂದು ಅಂದಾಜಿಸಲಾಗಿದೆ.
ರಾಜ್ಯದ ಒಟ್ಟು ಆದಾಯದಲ್ಲಿ (ತೆರಿಗೆ + ತೆರಿಗೆಯೇತರ + ಹಂಚಿಕೆ) ವೇತನದ ಮೇಲಿನ ವೆಚ್ಚವು ಶೇ 21.70 ರಷ್ಟು ಮತ್ತು ಪಿಂಚಣಿ ಮೇಲಿನ ವೆಚ್ಚವು ಶೇ 12 ರಷ್ಟಾಗಿದೆ. ಅಲ್ಲದೇ, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ ವೇತನ ವೆಚ್ಚ ಮತ್ತು ಪಿಂಚಣಿ ಪಾವತಿಗಳನ್ನು ಪೂರೈಸಲು ರಾಜ್ಯ ಸರ್ಕಾರವು ಸಹಾಯಧನವನ್ನು ಒದಗಿಸುತ್ತದೆ.