7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು 19/11/2022ರ ಸರ್ಕಾರಿ ಆದೇಶದಲ್ಲಿ ಅಧ್ಯಕ್ಷರನ್ನೂ ಒಳಗೊಂಡ ಮೂವರು ಸದಸ್ಯರ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ.
ಈ ಆಯೋಗಕ್ಕೆ ಸಿಬ್ಬಂದಿ, ಕಚೇರಿಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಆಯೋಗ ಮಧ್ಯಂತರ ವರದಿ ನೀಡಲಿ ಎಂದು ಸರ್ಕಾರಿ ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
7ನೇ ರಾಜ್ಯ ವೇತನ ಆಯೋಗ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪ್ರಶ್ನಾವಳಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಪ್ರಶ್ನಾವಳಿಗಳಲ್ಲಿ ವೇತನ ಆಯೋಗವು ಸರ್ಕಾರಿ ನೌಕರರ ವೇತನ ಶ್ರೇಣಿ/ ಹೊಸ ವೇತನ ರಚನೆ ಕುರಿತು ವೇತನ ಆಯೋಗಗಳು ಸಾಮಾನ್ಯವಾಗಿ ಅಳವಡಿಸಿಕೊಂಡಿರುವ ಸಾಮಾನ್ಯ ಮಾನದಂಡಗಳ ಬಗ್ಗೆ ವಿವರಣೆ ನೀಡಿದೆ.
ಪ್ರಶ್ನಾವಳಿಗಳ ಅಂಶಗಳಲ್ಲಿ ವೇತನ, ಹೊಸ ವೇತನ ರಚನೆ, ಭತ್ಯೆಗಳು, ಪಿಂಚಣಿ ಸೇರಿದಂತೆ ವಿವಿಧ ವಿಚಾರಗಳ ನಿಗದಿಗೆ ಅಳವಡಿಕೆ ಮಾಡಿಕೊಂಡಿರುವ ಮಾನದಂಡಗಳು, ಪ್ರಸ್ತುತ ಇರುವ ಅಂಶಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ, ವಿಶೇಷ ಭತ್ಯೆ ಮುಂತಾದವುಗಳ ಮಾನದಂಡಗಳ ಮಾಹಿತಿ ಇಲ್ಲಿದೆ...

ವಾರ್ಷಿಕ ವೇತನ ಬಡ್ತಿ ದರ
7ನೇ ರಾಜ್ಯ ವೇತನ ಆಯೋಗ ತನ್ನ ಪ್ರಶ್ನಾವಳಿಯಲ್ಲಿ ನಿಮ್ಮ ಅಭಿಪ್ರಾಯದಲ್ಲಿ ಸರ್ಕಾರಿ ನೌಕರರಿಗೆ ತಮ್ಮ ಸೇವಾ ಅವಧಿಯಲ್ಲಿ ಎಷ್ಟು ಮುಂಬಡ್ತಿಗೆ ಅವಕಾಶಗಳಿರಬೇಕು (30-35 ವರ್ಷಗಳ ಅವಧಿಯಲ್ಲಿ)? ಎಂದು ಕೇಳಿದೆ.
ನಿಮ್ಮ ಪ್ರಕಾರ ಕನಿಷ್ಟ ವಾರ್ಷಿಕ ವೇತನ ಬಡ್ತಿ ದರವು ಎಷ್ಟಿರಬೇಕು? ಮತ್ತು ಯಾವುದೇ ಒಂದು ವೇತನ ಶ್ರೇಣಿಯಲ್ಲಿ ಅಥವಾ ಬೇರೆ ಬೇರೆ ವೇತನ ಶ್ರೇಣಿಗಳಲ್ಲಿನ ವೇತನ ಬಡ್ತಿಗಳ ನಡುವೆ ಯಾವ ರೀತಿಯ ವ್ಯತ್ಯಾಸ/ ಅಂತರ ಇರಬೇಕು?.
ಪ್ರಸ್ತುತ 8 ವಾರ್ಷಿಕ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಲಾಗುತ್ತಿದೆ. ಇದು ಸಮರ್ಪಕವೆಂದು ನೀವು ಭಾವಿಸುತ್ತಿರಾ?. ಇಲ್ಲದಿದ್ದಲ್ಲಿ, ಈ ಸ್ಥಗಿತ ವೇತನ ಬಡ್ತಿಯ ವಿಷಯದಲ್ಲಿ ಯಾವುದೇ ಬದಲಾವಣೆಯನ್ನು ಸಲಹೆ ಮಾಡುತ್ತೀರಾ? ಎಂದು ಅಭಿಪ್ರಾಯ ಕೇಳಲಾಗಿದೆ.

ಸಮಾನ ಹುದ್ದೆ, ಸಮಾನ ವೇತನ
7ನೇ ವೇತನ ಆಯೋಗವು ಸಚಿವಾಲಯ ಸಿಬ್ಬಂದಿ ಮತ್ತು ಸಚಿವಾಲಯೇತರ ಸಿಬ್ಬಂದಿಗಳಲ್ಲಿ ಹೋಲಿಸಬಹುದಾದ/ ಸಮಾನ ಹುದ್ದೆಗಳಿಗೆ ಸಮಾನ ವೇತನ ಶ್ರೇಣಿ ನೀಡುವ ಕುರಿತಂತೆ ನಿಮ್ಮ ಅನಿಸಿಕೆಯೇನು?.
ವಿಶೇಷ ಭತ್ಯೆ(ಗಳ)ಗೆ ಸಂಬಂಧಿಸಿದಂತೆ ಯಾವುದಾದರೂ ಹುದ್ದೆಗಳ ಭತ್ಯೆಯ ಪ್ರಮಾಣವನ್ನು ಪರಿಷ್ಕರಿಸುವ ಅಗತ್ಯವಿದೆಯೆಂದು ಭಾವಿಸುತ್ತೀರಾ?. ದಯವಿಟ್ಟು ವಿವರಗಳನ್ನು ಸಮರ್ಥನೆಯೊಂದಿಗೆ ನೀಡಿರಿ.
ತುಟ್ಟಿ ಭತ್ಯೆ ಮಂಜೂರಾತಿಯು ಸಂಬಳದ ವಾಸ್ತವಿಕ ವರಮಾನವನ್ನು ಬೆಲೆ ಏರಿಕೆಯಿಂದ ಉಂಟಾಗುವ ಪರಿಣಾಮದಿಂದ ರಕ್ಷಿಸುವ ಪರಿಣಾಮಕಾರಿ ತಂತ್ರವೆಂದು ನೀವು ಭಾವಿಸುತ್ತೀರಾ?. ಗ್ರಾಹಕ ಬೆಲೆ ಸೂಚ್ಯಂಕವು ನಿಗದಿತ ಹಂತವನ್ನು ತಲುಪಿದಾಗ ಸ್ವಯಂ ಚಾಲಿತವಾಗಿ ತುಟ್ಟಿಭತ್ಯೆ ಮಂಜೂರು ಮಾಡಬೇಕೆಂದನ್ನು ಒಪ್ಪುತ್ತೀರಾ?. ಇಲ್ಲವಾದಲ್ಲಿ, ಮಾರ್ಪಾಟುಗಳಿಗೆ ಸಕಾರಣಗಳೊಂದಿಗೆ ಸಲಹೆಯನ್ನು ನೀಡುವುದು ಎಂದು ಹೇಳಿದೆ.

ಮನೆ ಬಾಡಿಗೆ, ನಗರ ಪರಿಹಾರ ಭತ್ಯೆ
ಹಾಲಿ ಜಾರಿಯಲ್ಲಿರುವ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ ದರಗಳು ವಾಸ್ತವಿಕ ಮತ್ತು ಸಮಂಜಸವೆಂದು ನೀವು ಅಭಿಪ್ರಾಯಪಡುವಿರಾ? ಇಲ್ಲದಿದ್ದಲ್ಲಿ, ಕಾರಣಗಳ ಸಹಿತ ನೀವು ಪರಿಗಣಿಸುವ ಸಮಂಜಸ ದರವೇನು ಮತ್ತು ಏಕ ಎಂದು ದಯವಿಟ್ಟು ಸೂಚಿಸಿರಿ ಎಂದು ವೇತನ ಆಯೋಗ ಕೇಳಿದೆ.
ಪ್ರಸ್ತುತ ನೌಕರರ ಸಂಪೂರ್ಣ ಸೇವಾವಧಿಯಲ್ಲಿ ಎರಡು ಬಾರಿ ಮಾತ್ರ ರಜಾ ಪ್ರಯಾಣ ರಿಯಾಯಿತಿಯನ್ನು ನೀಡಲು ಈರುವ ಅವಕಾಶದಲ್ಲಿ ಯಾವುದೇ ಮಾರ್ಪಡಿಸಲು ಸಲಹೆ ಮಾಡುವಿರಾ?. ಹಾಗಿದ್ದಲ್ಲಿ, ದಯವಿಟ್ಟು ಸಲಹೆಗಳನ್ನು ಕಾರಣಗಳೊಂದಿಗೆ ನೀಡುವುದು.
ಪ್ರಸ್ತುತ ಜಾರಿಯಲ್ಲಿರುವ ಸೇವಾ ಪರಿಸ್ಥಿತಿಯು ಮಹಿಳಾ ಉದ್ಯೋಗಿಗಳ ವಿಶೇಷ ಸಮಸ್ಯೆಗಳ ಕುರಿತು ಸಾಕಷ್ಟು ಗಮನ ನೀಡಿದೆ ಎಂದು ಅಭಿಪ್ರಾಯಪಡುವಿರಾ? ಇಲ್ಲವಾದಲ್ಲಿ, ಪರಿಸ್ಥಿತಿಯ ಸುಧಾರಣೆಗೆ ಸಲಹೆಗಳೇನು? ಎಂದು ಪ್ರಶ್ನಾವಳಿಯಲ್ಲಿ ಕೇಳಿದೆ.

ವೈದ್ಯಕೀಯ ವೆಚ್ಚದ ಮರು ಪಾವತಿ
ಖಾಸಗಿ ವೈದ್ಯಕೀಯ ಸಂಸ್ಥೆಗಳು/ ಆಸ್ಪತ್ರೆಗಳನ್ನು ಸರ್ಕಾರವು ಮಾನ್ಯ ಮಾಡುತ್ತಾ ಮತ್ತು ಹಲವು ತರಹದ ಖಾಯಿಲೆಗಳಿಗೆ ತಗಲುವ ವೈದ್ಯಕೀಯ ವೆಚ್ಚದ ಮರುಪಾವತಿಯ ದರವನ್ನು ನಿಗದಿಗೊಳಿಸಿ, ವೈದ್ಯಕೀಯ ವೆಚ್ಚದ ಮರುಪಾವತಿಯ ಸೌಲಭ್ಯವನ್ನು ಸರ್ಕಾರವು ಕಾಲಕಾಲಕ್ಕೆ ಸರಳೀಕರಣಗೊಳಿಸಿದೆ.
ಅಲ್ಲದೇ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಎಂಬ ನಗದು ರಹಿತ ಯೋಜನೆಯನ್ನು ಜಾರಿಗೊಳಿಸಿದೆ. ಅಲ್ಲದೇ ಗ್ರೂಪ್-ಸಿ ಮತ್ತು ಗ್ರೂಪ್-ಡಿ ದರ್ಜೆಯ ನೌಕರರಿಗೆ ಮಾಸಿಕ ರೂ. 200 ಅನ್ನು ವೈದ್ಯಕೀಯ ಭತ್ಯೆಯಾಗಿ ಮಂಜೂರು ಮಾಡಿದೆ. ಈ ನಿಟ್ಟಿನಲ್ಲಿ ಸುಧಾರಣೆ ಮಾಡಲು ಸಲಹೆಗಳು ಏನಾದರೂ ಇದ್ದಲ್ಲಿ ನೀಡುವುದು ಎಂದು ವೇತನ ಆಯೋಗ ಹೇಳಿದೆ.












Click it and Unblock the Notifications