ಬಿಜೆಪಿ -ಜೆಡಿಯು ಮೈತ್ರಿಗೆ ತಲಾಖ್ ತಲಾಖ್ ತಲಾಖ್?
ನವದೆಹಲಿ, ಜೂನ್ 22: ಲೋಕಸಭೆಯ ಮುಂಗಾರು ಅಧಿವೇಶನದ ಐದನೇ ದಿನವಾದ ಶುಕ್ರವಾರ ಮಂಡನೆಯಾದ ತ್ರಿವಳಿ ತಲಾಖ್ ಮಸೂದೆಗೆ ತನ್ನ ಬೆಂಬಲವಿಲ್ಲ ಎಂದು ಜೆಡಿಯು ಸ್ಪಷ್ಟಪಡಿಸಿದೆ.
ಮಸೂದೆಯನ್ನು ಮೈತ್ರಿ ಪಕ್ಷವಾದ ಬಿಜೆಪಿಯೇನೋ ಬೆಂಬಲಿಸಿದೆ. ಆದರೆ ಈ ವಿಷಯದಲ್ಲಿ ತಾನು ಬಿಜೆಪಿಗೆ ಬೆಂಬಲ ನೀಡಲು ಇಷ್ಟಪಡುವುದಿಲ್ಲ ಎಂದು ಅದು ಹೇಳಿದೆ.
ರಾಜ್ಯ ಸಭೆಯಲ್ಲಿ ಈ ಮಸೂದೆ ಮಂಡನೆಯಾಗುವ ಸಮಯದಲ್ಲೂ ತಾನು ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದೆ. ಮುಸ್ಲಿಂ ಪತಿಯರು ತಮ್ಮ ಪತಿಗೆ ನೀಡುವ ಇನ್ ಸ್ಟಾಂಟ್ ತ್ರಿವಳಿ ತಲಾಖ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದು ಮಹಿಳೆಯರ ಹಕ್ಕುಗಳನ್ನು ಕಸಿಯುತ್ತದೆ ಎಂಬ ಕಾರಣಕ್ಕೆ ಅದರ ವಿರುದ್ಧ ಕಾನೂನು ತರಲು ಈ ಮಸೂದೆ ಮುಂದಾಗಿದೆ. ಆದರೆ ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳಲ್ಲಿ ಮೈತ್ರಿಪಕ್ಷ ಬಿಜೆಪಿಯ ನಡೆಗೆ ಜೆಡಿಯು ಬೆಂಬಲವಿಲ್ಲ. ಇವು ಮೈತ್ರಿಯಲ್ಲಿ ಬಿರುಕು ಮೂಡಲು ಕಾರಣವಾಗಬ ಹುದಾ?

ಜೆಡಿಯುನ 16 ಸಂಸದರ ಮತ?
ತ್ರಿವಳಿ ತಲಾಖ್ ಗೆ ಜೆಡಿಯು ಬೆಂಬಲವಿಲ್ಲ ಎಂದಾದರೆ ಆ ಪಕ್ಷದ 16 ಸಂಸದರು ತ್ರಿವಳಿ ತಲಾಖ್ ವಿರುದ್ಧ ಮತ ಹಾಕಿದ್ದಾರೆಯೇ? ಕೆಲವು ಮೂಲಗಳ ಪ್ರಕಾರ ಜೆಡಿಯು ಸಂಸದರು ಅಂದು ಅಧಿವೇಶನಕ್ಕೆ ಹಾಜರಾಗಿಯೇ ಇರಲಿಲ್ಲ. ಈ ಮುಳಕ ಪರ-ವಿರೋಧ ಮತ ಚಲಾಯಿಸಿ ಯಾವುದಾದರೊಂದು ಗುಂಪಿನಲ್ಲಿ ನಿಲ್ಲಬೇಕಾದ ಸಂಕಟದಿಂದ ಮುಕ್ತಿ ಪಡೆದರು ಎನ್ನಲಾಗಿದೆ. ಆದರೆ ಈ ಕುರಿತು ಜೆಡಿಯು ಕಡೆಯಿಂದ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಬಿಜೆಪಿಗೆ ಭಯವೇನಿಲ್ಲ!
ಲೋಕಸಭೆಯಲ್ಲಿ ಸ್ವತಂತ್ರವಾಗಿಯೇ ಬಹುಮತ ಪಡೆದ ಬಿಜೆಪಿಗೆ ಯಾವ ಪಕ್ಷ ಬೆಂಬಲ ನೀಡಿದಿದ್ದರೂ ಭಯವೇನಿಲ್ಲ. ಮತ್ತು ಮಸೂದೆಯನ್ನು ಮಂಡಿಸುವುದೂ ಅದಕ್ಕೆ ಕಷ್ಟದ ಕೆಲಸವಲ್ಲ. ಆದರೆ ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 39(ಬಿಜೆಪಿ 17, ಜೆಡಿಯು 16, ಎಲ್ ಜಿಪಿ 6) ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಕ್ಕೆ ಜೆಡಿಯು ಜೊತೆಗಿನ ಮೈತ್ರಿಯೇ ಕಾರಣ ಎಂಬುದು ಬಿಜೆಪಿಗೂ ಗೊತ್ತಿರುವ ವಿಷಯ. ಬಿಹಾರದಂಥ ಮಹತ್ವದ ರಾಜ್ಯದಲ್ಲಿ ಜೆಡಿಯು ಜೊತೆಗೆ ಮೈತ್ರಿ ಕಳೆದುಕೊಂಡರೆ ಬಿಜೆಪಿಗೇ ನಷ್ಟ. ಅದು ಜೆಡಿಯುಗೆ ಗೊತ್ತಿಲ್ಲದ ವಿಷಯವೇನಲ್ಲ. ಆದ್ದರಿಂದಲೇ ಲೋಕಸಭೆಯಲ್ಲಿ ಸಾಕಷ್ಟು ಬಹುಮತ ಹೊಂದಿದ್ದರೂ ಕೆಲವು ವಿಚಾರಗಳಲ್ಲಿ ಬಿಜೆಪಿ ವಿರುದ್ಧವೇ ನಿಲ್ಲುವ ಧೈರ್ಯವನ್ನು ಜೆಡಿಯು ತೋರಿಸುತ್ತಿದೆ.

ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ
ಕೇವಲ ತ್ರಿವಳಿ ತಲಾಖ್ ಮಾತ್ರವೇ ಅಲ್ಲ, ಜೆಡಿಯು ಮತ್ತು ಬಿಜೆಪಿ ನಡುವೆ ಹಲವು ವಿಷಯಗಳಲ್ಲಿ ಭಿನ್ನಿಪ್ರಾಯವಿದೆ. ಏಕರೂಪ ನಾಗರಿಕ ಸಂಹಿತೆ, ರಾಮಮಂದಿರ, ಸವಿಧಾನದ 370 ನೇ ವಿಧಿ ಸೇರಿದಂತೆ ಬಿಜೆಪಿಯ ಆದ್ಯ ಗುರಿಯಾದ ಈ ಎಲ್ಲ ವಿಷಯಗಳ ಬಗ್ಗೆಯೇ ಜೆಡಿಯುಗೆ ಸಮ್ಮತಿಯಿಲ್ಲ!

ರಾಜ್ಯಸಭೆಯಲ್ಲಿ ಸಂಕಷ್ಟ
ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಮಸೂದೆಯನ್ನು ಮಂಡನೆ ಮಾಡಲು ಮತ್ತು ಅದಕ್ಕೆ ಅಧಿವೇಶನದಲ್ಲಿ ಅಂಗೀಕಾರ ದೊರಕಲು ಕಷ್ಟವಾಗಿರಲಿಲ್ಲ. ಆದರೆ ರಾಜ್ಯ ಸಭೆಯಲ್ಲಿ ಆರು ಜನ ಜೆಡಿಯು ಸಂಸದರು ಬಿಜೆಪಿಗೆ ಬೆಂಬಲ ನೀಡದೆ ಇದ್ದಲ್ಲಿ ಸದ್ಯಕ್ಕೆ ರಾಜ್ಯ ಸಭೆಯಲ್ಲಿ ಎನ್ ಡಿಎ ಬಲಾಬಲ 109(245) ಸಂಸದರು. ಆದರೆ ಅಗತ್ಯವಿರುವ ಮತಗಳು 123(245). ಸಂಸದರ ಗೈರನ್ನು ಪರಿಗಣಿಸಿ ಬಿಜೆಪಿಗೆ ಅರ್ಧಕ್ಕಿಂತ ಹೆಚ್ಚು ತ ಬೇಕೆಂದರೂ ಜೆಡಿಯು ಬೆಂಬಲ ಅಗತ್ಯ. ಅಕಸ್ಮಾತ್ ಬೆಂಬಲ ದೊರಕದೆ ಇದ್ದಲ್ಲಿ ಮತ್ತೆ ತ್ರಿವಳಿ ತಲಾಖ್ ಮಸೂದೆ ಜಾರಿಗೆ ಬರುವುದಕ್ಕೆ ಸಾಧ್ಯವಾಗಲಾರದು.












Click it and Unblock the Notifications