ಯಡಿಯೂರಪ್ಪ ಸಂಪುಟ ಸೇರಿ ಬಿ. ಡಿ. ಜತ್ತಿ ದಾಖಲೆ ಮುರಿದ ಶೆಟ್ಟರ್!
ಬೆಂಗಳೂರು, ಆಗಸ್ಟ್ 21 : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಗ ಯಡಿಯೂರಪ್ಪ ಸಂಪುಟದಲ್ಲಿ ಸಚಿವರು. ಮಾಜಿ ಸಿಎಂ ಸಚಿವರಾದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ಆರಂಭವಾಗಿದೆ.
"ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಿದರೆ ಯಡಿಯೂರಪ್ಪ ಸಂಪುಟದಲ್ಲಿ ಕೆಲಸ ಮಾಡಲು ನನಗೆ ಯಾವುದೇ ಮುಜುಗರವಿಲ್ಲ" ಎಂದು ಜಗದೀಶ್ ಶೆಟ್ಟರ್ ಹೇಳಿದ್ದರು. ಸಚಿವ ಸ್ಥಾನ ಒಲಿದು ಬಂದಿದ್ದು, ಪ್ರಭಾವಿ ಖಾತೆಯ ಹೊಣೆ ಶೆಟ್ಟರ್ ಹೆಗೆಲೇರುವ ನಿರೀಕ್ಷೆ ಇದೆ.
ಜಗದೀಶ್ ಶೆಟ್ಟರ್ ಯುವಕರಿಗೆ ಸ್ಥಾನ ಬಿಟ್ಟುಕೊಡಬಹುದಿತ್ತು, ಲೋಕಸಭಾ ಚುನಾವಣಾ ಕಣಕ್ಕಿಳಿದು ಸಂಸದರಾಗಬಹುದಿತ್ತು, ಅಧಿಕಾರದಲ್ಲಿ ಇರಲೇಬೇಕು ಎಂಬ ಹಠ ಒಳ್ಳೆಯದಲ್ಲ ಮುಂತಾದ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ರಾಜ್ಯದ ಮುಖ್ಯಮಂತ್ರಿಯಾಗಿ ಸುಮಾರು 10 ತಿಂಗಳ ಕಾಲ ಆಡಳಿತ ನಡೆದಿ ಜಗದೀಶ್ ಶೆಟ್ಟರ್ ಹಿಂಬಡ್ತಿ ಪಡೆದಿದ್ದಾರೆ. ಮುಖ್ಯಮಂತ್ರಿಯಾದವರು ಹಿಂಬಡ್ತಿ ಪಡೆದು ಸಚಿವರಾದ ಒಂದು ಉದಾಹರಣೆ ಮಾತ್ರ ಕರ್ನಾಟಕದ ರಾಜಕೀಯದಲ್ಲಿ ಸಿಗುತ್ತದೆ.

ಬಿ. ಡಿ. ಜತ್ತಿ ಅವರ ದಾಖಲೆ
ಕರ್ನಾಟಕದ ರಾಜಕೀಯದಲ್ಲಿ 1958ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ. ಡಿ. ಜತ್ತಿ ಬಳಿಕ 1965ರಲ್ಲಿ ಸಚಿವರಾಗಿದ್ದರು. ಇವರನ್ನು ಬಿಟ್ಟರೆ ಮುಖ್ಯಮಂತ್ರಿಯಾದವರು ಹಿಂಬಡ್ತಿ ಪಡೆದು ಸಚಿವರಾದ ಯಾವುದೇ ಉದಾಹರಣೆ ಇಲ್ಲ. ಬಿ. ಡಿ. ಜತ್ತಿ ದಾಖಲೆಯನ್ನು ಜಗದೀಶ್ ಶೆಟ್ಟರ್ ಮುರಿದಿದ್ದಾರೆ.

ಎಲ್ಲರ ನೆಚ್ಚಿನ ನಾಯಕ
ಜಗದೀಶ್ ಶೆಟ್ಟರ್ ಎಲ್ಲರ ನೆಚ್ಚಿನ ನಾಯಕರು. ಪಕ್ಷದಲ್ಲಿ ಅವರನ್ನು ವಿರೋಧಿಸುವವರು ಯಾರೂ ಇಲ್ಲ. ಸಚಿವರಾಗಿ, ಸ್ಪೀಕರ್ ಆಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಜಗದೀಶ್ ಶೆಟ್ಟರ್ ಈಗ ಪುನಃ ಸಚಿವರಾಗುವ ಮೂಲಕ ಹಲವರ ಹಬ್ಬೇರುವಂತೆ ಮಾಡಿದ್ದಾರೆ.

ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ
ಜಗದೀಶ್ ಶೆಟ್ಟರ್ 6 ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ಮಾಡಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ ಅವರು, 1999ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 2005ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.

ಸಚಿವ ಸ್ಥಾನ ಕೊಟ್ಟಿರಲಿಲ್ಲ
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಸ್ಪೀಕರ್ ಆಗಿ ಮಾಡಲಾಯಿತು. ಯಡಿಯೂರಪ್ಪ ರಾಜೀನಾಮೆ ಕೊಟ್ಟು ಸದಾನಂದ ಗೌಡರು ಸಿಎಂ ಆದಾಗ ಶೆಟ್ಟರ್ ಸಚಿವ ಸ್ಥಾನ ಪಡೆದರು. 2012ರಲ್ಲಿ ಯಡಿಯೂರಪ್ಪ ಸದಾನಂದ ಗೌಡರ ವಿರುದ್ಧ ಮುನಿಸಿಕೊಂಡು ರಾಜೀನಾಮೆ ಕೊಡಿಸಿದಾಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು.












Click it and Unblock the Notifications