ಮೈಸೂರು ದಸರಾಕ್ಕೆ ಮುನ್ನುಡಿ ಬರೆದದ್ದು ಶ್ರೀರಂಗಪಟ್ಟಣದಲ್ಲಿ...

ಪ್ರತಿಯೊಬ್ಬರಿಗೂ ದಸರಾ ಎಂದಾಕ್ಷಣ ಕಣ್ಣಮುಂದೆ ಹಾದು ಬರುವುದು ವೈಭವದ ಜಂಬೂಸವಾರಿಯ ಮೈಸೂರು ದಸರಾ. ಇದು ಕಳೆದ ನಾನೂರ ಹತ್ತು ವರ್ಷಗಳಿಂದ ಆಚರಣೆಯಾಗುತ್ತಾ ಬರುತ್ತಿದೆ. ಆದರೆ ಇವತ್ತಿನ ಜಗದ್ವಿಖ್ಯಾತ ಮೈಸೂರು ದಸರಾಕ್ಕೆ ಮುನ್ನುಡಿ ಬರೆದಿರುವುದೇ ಶ್ರೀರಂಗಪಟ್ಟಣದಲ್ಲಿ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಹಿಂದೆ ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಶ್ರೀರಂಗರಾಯ ಶ್ರೀರಂಗಪಟ್ಟಣದಲ್ಲಿ ನವರಾತ್ರಿ ಉತ್ಸವವನ್ನು ಆಚರಿಸುತ್ತಿದ್ದರಲ್ಲದೆ, ಇವರು ಶ್ರೀರಂಗನಾಥಸ್ವಾಮಿ ದೇಗುಲದ ಪೂರ್ವ ದಿಕ್ಕಿನಲ್ಲಿ ಮಹಾನವಮಿ ದಿಬ್ಬವನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಮುಂದೆ ಓದಿ...

 ವಿಜಯನಗರ ಅರಸರ ಕಾಲದ ಆಚರಣೆ

ವಿಜಯನಗರ ಅರಸರ ಕಾಲದ ಆಚರಣೆ

ಶ್ರೀರಂಗರಾಯನ ಮೇಲೆ ದಂಡೆತ್ತಿ ಹೋದ ಮೈಸೂರು ರಾಜರಾದ ಯದುವಂಶದ ರಾಜಒಡೆಯರ್ ಶ್ರೀರಂಗಪಟ್ಟಣವನ್ನು ವಶಕ್ಕೆ ಪಡೆದುಕೊಂಡರು. ಆ ನಂತರ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ಇವರು ಮಹಾಯೋಧರೂ, ಅದ್ಭುತ ಆಡಳಿತಗಾರರು, ಅಲ್ಲದೆ ಧರ್ಮ ನಿಷ್ಠೆಯುಳ್ಳವರೂ, ವಿದ್ಯಾತತ್ಪರರೂ, ಕಲಾಪೋಷಕರೂ ಆಗಿದ್ದರು. ಹೀಗಾಗಿ ಇವರು ಶ್ರೀರಂಗಪಟ್ಟಣವನ್ನು ಅಭಿವೃದ್ಧಿಪಡಿಸಿದ್ದಲ್ಲದೆ, ವಿಜಯನಗರ ಅರಸರಂತೆ ತಮ್ಮ ಅರಮನೆಯಲ್ಲಿಯೂ ದಸರಾ ಆಚರಣೆಗೆ ಮುಂದಾದರು.

 ಶ್ರೀರಂಗಪಟ್ಟಣದಲ್ಲಿ ಮೊದಲ ದಸರಾ

ಶ್ರೀರಂಗಪಟ್ಟಣದಲ್ಲಿ ಮೊದಲ ದಸರಾ

ಅದರಂತೆ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸುವ ಮೂಲಕ ದಸರಾ ಆಚರಣೆಗೆ ಮುನ್ನುಡಿ ಬರೆದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಲಾಯಿತಲ್ಲದೆ ಆ ನಂತರದಲ್ಲಿ ಮೈಸೂರಿನಲ್ಲಿ ದಸರವನ್ನು ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿ, ವರ್ಷದಿಂದ ವರ್ಷಕ್ಕೆ ದಸರಾಕ್ಕೆ ಹೊಸರೂಪ ನೀಡುತ್ತಾ ಬರಲಾಯಿತು.

ಮೈಸೂರು ಮಹಾರಾಜರ ಆಡಳಿತದಲ್ಲಿ ಪ್ರಮುಖ ರಾಜಾಡಳಿತ ಪ್ರದೇಶವಾಗಿದ್ದ ಶ್ರೀರಂಗಪಟ್ಟಣ ಆಗ ಮೈಸೂರಿಗೆ ಸೇರಿತ್ತಾದರೂ ಜಿಲ್ಲಾ ವಿಂಗಡಣೆ ವೇಳೆ ಈಗ ಮಂಡ್ಯ ಜಿಲ್ಲೆಗೆ ಸೇರಿದೆ. ದಸರಾ ಆಚರಣೆಯ ಮೂಲ ಸ್ಥಾನವಾದ ಶ್ರೀರಂಗಪಟ್ಟಣದಲ್ಲಿ ಪ್ರತಿವರ್ಷವೂ ಸಂಪ್ರದಾಯಬದ್ಧವಾಗಿ ದಸರಾವನ್ನು ಆಚರಿಸಲಾಗುತ್ತದೆ.

 ಮೂರು ದಿನಗಳ ದಸರಾ ಆಚರಣೆ

ಮೂರು ದಿನಗಳ ದಸರಾ ಆಚರಣೆ

ಐತಿಹಾಸಿಕ ಮೈಸೂರು ದಸರಾದ ಮೂಲ ಸ್ಥಾನವಾದ ಶ್ರೀರಂಗಪಟ್ಟಣದಲ್ಲಿ ಮೂರು ದಿನಗಳ ಕಾಲ ದಸರಾವನ್ನು ಆಚರಿಸಲಾಗುತ್ತದೆ. ಪಟ್ಟಣಕ್ಕೆ ಸಮೀಪವಿರುವ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ವೈದಿಕರ ತಂಡ ಪ್ರಥಮವಾಗಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ, ಹಲವು ಪೂಜಾ ಕೈಂಕರ್ಯಗಳು ನಡೆಸುವ ಮೂಲಕ ದಸರಾ ವಿಧ್ಯುಕ್ತವಾಗಿ ಆರಂಭವಾಗುತ್ತದೆ. ಇದೇ ವೇಳೆ ಗಣಪತಿ ಹೋಮ, ನವಗ್ರಹ ಪೂಜೆ, ಪುಣ್ಯಾಹ, ಶಮಿಪೂಜೆ, ಚಾಮುಂಡಿ ಪೂಜೆ ಹಾಗೂ ಬನ್ನಿಮಂಟಪಕ್ಕೆ ಬನ್ನಿಪೂಜೆ ಕೂಷ್ಮಾಂಡ ಚೇಧನ, ಮಹಾಭಿಷೇಕ, ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ.

 ರಾಜಬೀದಿಯಲ್ಲಿ ಭವ್ಯ ಮೆರವಣಿಗೆ

ರಾಜಬೀದಿಯಲ್ಲಿ ಭವ್ಯ ಮೆರವಣಿಗೆ

ಇದೇ ಸಂದರ್ಭ ಚಾಮುಂಡೇಶ್ವರಿ ಮೂರ್ತಿ ಹೊತ್ತ ರಥದೊಂದಿಗೆ ಆರಂಭಗೊಂಡ ದಸರಾ ಉತ್ಸವದಲ್ಲಿ ಕಳಶಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆ ಕಿರಂಗೂರು ಗ್ರಾಮದ ಮಾರ್ಗವಾಗಿ ಬಾಬುರಾಯನಕೊಪ್ಪಲು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಕೋಟೆಯ ದ್ವಾರದ ಮೂಲಕ ರಾಜಬೀದಿಗಳಲ್ಲಿ ಮುಂದುವರೆಯುತ್ತಾ ಸಾಗಿ ರಂಗನಾಥ ಸನ್ನಿಧಿಯನ್ನು ತಲುಪುತ್ತದೆ. ಕೆಲವೊಮ್ಮೆ ಆನೆ ಮೇಲೆ ಅಂಬಾರಿಯ ಮೆರವಣಿಗೆಯನ್ನು ನಡೆಸಲಾಗಿದೆ.

 ರಾಜವೈಭವತೆ ಮೆರೆದ ಪಟ್ಟಣ

ರಾಜವೈಭವತೆ ಮೆರೆದ ಪಟ್ಟಣ

ಕೆಲವು ವರ್ಷಗಳ ಹಿಂದೆ ಅದ್ಧೂರಿಯಾಗಿ ದಸರಾ ನಡೆಸಲಾಗಿತ್ತಾದರೂ ತದ ನಂತರ ಬರ ಇನ್ನಿತರ ಕಾರಣಗಳಿಂದ ಸರಳಗೊಳಿಸಲಾಗಿದೆ. ಈ ಬಾರಿ ಕೊರೊನಾ ಸೋಂಕಿನಿಂದಾಗಿ ಸಂಪೂರ್ಣ ಸರಳ ಆಚರಣೆ ನಡೆಯಲಿದೆ. ಆದರೆ ಹಿಂದೆ ನಡೆಸಿಕೊಂಡು ಬಂದಂತಹ ಸಂಪ್ರದಾಯದೊಂದಿಗೆ ದಸರಾ ಆಚರಣೆ ನಡೆಯಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಾವು ಇತಿಹಾಸವನ್ನು ಮೆಲುಕು ಹಾಕುತ್ತಾ ಹೋದರೆ ಶ್ರೀರಂಗಪಟ್ಟಣವೂ ರಾಜವೈಭವವನ್ನು ಮೆರೆದ ಪಟ್ಟಣವಾಗಿತ್ತಲ್ಲದೆ ಇವತ್ತಿನ ಮೈಸೂರು ದಸರಾದ ತಾಯಿಬೇರು ಕೂಡ ಅಲ್ಲಿಯೇ ಇದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+