ಮಕ್ಕಳಿಗೆ ಲಸಿಕೆ ಸುರಕ್ಷಿತವೇ ಅಥವಾ ಅಪಾಯವೇ? ಮಕ್ಕಳ ತಜ್ಞೆ ಡಾ. ಆಶಾ ಬೆನಕಪ್ಪ ನೀಡಿದ ಸಲಹೆಗಳು

ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಕೋವಿಡ್ 19 ಎರಡನೇ ಅಲೆ ರುದ್ರತಾಂಡವ ಆಡುತ್ತಿದೆ. ಹೆಜ್ಜೆ ಹೆಜ್ಜೆಗೂ ಸರ್ಕಾರದ ವೈಫಲ್ಯಗಳಿಂದ ಎಷ್ಟೋ ಮಂದಿಯನ್ನು ಕಳೆದುಕೊಂಡಿದ್ದೇವೆ. ರಾಜ್ಯದಲ್ಲಿ ಈಗಾಗಲೇ 9 ವರ್ಷದೊಳಗಿನ 74,898 ಮಕ್ಕಳು ಕೊರೊನಾ ಸೊಂಕಿಗೆ ಒಳಗಾಗಿದ್ದಾರೆ. 10 ರಿಂದ 18 ವರ್ಷ ವಯಸ್ಸಿನ 1.88,439 ಮಕ್ಕಳಗೆ ಕೊರೊನಾ ಪಾಸಿಟಿವ್ ಇರುವುದು ರಾಜ್ಯದ ಅಂಕಿ ಅಂಶಗಳಲ್ಲಿ ಬೆಳಕಿಗೆ ಬಂದಿದೆ. ಎಲ್ಲರಿಗಿಂತಲೂ ಮಕ್ಕಳನ್ನು ಕೋವಿಡ್ 19 ಸೋಂಕಿನಿಂದ ರಕ್ಷಣೆ ಮಾಡುವುದು ಪೋಷಕರ ಹಾಗೂ ಸರ್ಕಾರದ ಕರ್ತವ್ಯ.

ಜನ ಸಾಮಾನ್ಯರನ್ನೇ ರಕ್ಷಣೆ ಮಾಡದ ಸರ್ಕಾರ ಇನ್ನು ಮಕ್ಕಳ ವಿಚಾರದಲ್ಲಿ ಈವರೆಗೂ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿರುವುದು ಕಾಣುತ್ತಿಲ್ಲ. ಹೀಗಾಗಿ ಮಕ್ಕಳನ್ನು ಪೆಡಂಭೂತದಿಂದ ರಕ್ಷಣೆ ಮಾಡಿಕೊಳ್ಳವುದು ಮುಖ್ಯ. ರಾಜ್ಯದಲ್ಲಿ ಪುಟಾಣಿ ಮಕ್ಕಳನ್ನು ಕೊರೊನಾ ಸೋಂಕಿನಿಂದ ಯಾವ ರೀತಿ ರಕ್ಷಣೆ ಮಾಡಿಕೊಳ್ಳುವ ಕುರಿತು ಮಕ್ಕಳ ತಜ್ಞೆ, ಚಂದ್ರಮ್ಮ ದಯಾನಂದ ಸಾಗರ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಯ ಮಕ್ಕಳ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅಶಾ ಬೆನಕಪ್ಪ ಅವರು ಮಹತ್ವದ ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಕೊರೊನಾ ಪಾಸಿಟಿವ್ ವಿವರ

ಮಕ್ಕಳಿಗೆ ಕೊರೊನಾ ಪಾಸಿಟಿವ್ ವಿವರ

ರಾಜ್ಯದಲ್ಲಿ ಎರಡನೇ ಅಲೆಯೇ ಬಹುದೊಡ್ಡ ಅವಾಂತರ ಸೃಷ್ಟಿ ಮಾಡಿದೆ. ಮೂರನೇ ಅಲೆ ಮಕ್ಕಳಿಗೆ ಟಾರ್ಗೆಟ್ ಮಾಡುತ್ತದೆ ಎಂದು ಸುಮ್ಮನೆ ಕೂತರೆ ಪ್ರಯೋಜನವಿಲ್ಲ. ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಮಕ್ಕಳ ಪಾಲಕರು ಕೂಡ ಜಾಗೃತಿ ವಹಿಸಬೇಕು. ರಾಜ್ಯದದಲ್ಲಿ 9 ವರ್ಷದೊಳಗಿನ 74,898 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. 10 ರಿಂದ 18 ವರ್ಷದೊಳಗಿನ 1,88,439 ನವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ದೇಶದಲ್ಲಿ ಕೊರೊನಾ ಮೊದಲನೇ ಅಲೆಗೆ ಪಾಸಿಟಿವ್‌ಗೆ ಒಳಗಾದ ಮಕ್ಕಳ (14 ವರ್ಷ ವಯಸ್ಸಿನ ಒಳಗಿನವರು) ಸಂಖ್ಯೆ ಶೇ. 4 ರಷ್ಟು ಇತ್ತು. ಎರಡನೇ ಅಲೆ ವೇಳೆಗೆ ಮಕ್ಕಳಲ್ಲಿನ ಕೊರೊನಾ ಸೋಂಕು ಪ್ರಮಾಣ 10 ರಿಂದ 14 ರಷ್ಟು ಆಗಿದೆ. ಇದು ಅಪಾಯಕಾರಿ ಬೆಳವಣಿಗೆ ಈಗ ಸರ್ಕಾರ ಮತ್ತು ಮಕ್ಕಳ ಪೋಷಕರು ಎಚ್ಚೆತ್ತುಕೊಳ್ಳಬೇಕು. ಪುಟಾಣಿ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಣೆ ಮಾಡಬೇಕು.

ಸೂಪರ್ ಸ್ಪ್ರೆಡರ್ಸ್ಗೆ ಕಡಿವಾಣ ಅಗತ್ಯ

ಸೂಪರ್ ಸ್ಪ್ರೆಡರ್ಸ್ಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗುತ್ತಿರುವ ಮಕ್ಕಳ ವಿವರ ಲಭ್ಯವಾಗುತ್ತಿಲ್ಲ. ಪ್ರತಿ ದಿನ ಕೊರೊನಾ ಅಂಕಿ ಅಂಶಗಳು ಯಾವ ರೀತಿಯಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೋ ಮಕ್ಕಳ ವಿಚಾರದಲ್ಲೂ ಪ್ರಕಟವಾಗಬೇಕು. ಆರು ವರ್ಷದ ಒಳಗಿನ ಮಕ್ಕಳಿಗೆ ಒಂದು ರೀತಿಯ ಚಿಕಿತ್ಸೆ ನೀಡಬೇಕಾಗುತ್ತದೆ. ಆರು ವರ್ಷದಿಂದ ಮೇಲ್ಪಟ್ಟ ಮಕ್ಕಳಿಗೆ ಬೇರೆ ರೀತಿಯ ಚಿಕಿತ್ಸೆ ನೀಡಬೇಕಾಗುತ್ತದೆ. ಹದಿನೆಂಟು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಪೂರ್ಣ ಅಂಕಿ ಅಂಶಗಳು ಪ್ರಕಟಿಸಬೇಕು. ಗಂಡು ಮಕ್ಕಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದರಿಂದ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ಪಾಸಿಟಿವಿಟಿ ರೇಟ್ ಅಂಕಿ ಅಂಶಗಳು ಸಿಗಬೇಕು. ಅದಕ್ಕೆ ನಾವು ಸಿದ್ಧತೆ ಮಾಡಬೇಕು. ಮೂರನೇ ವೇವ್ ಅಲ್ಲ, ಎರಡನೇ ಅಲೆಯಲ್ಲಿಯೇ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಡಾ. ಅಶಾ ಬೆನಕಪ್ಪ ಎಚ್ಚರಿಸಿದ್ದಾರೆ.

ಮಕ್ಕಳಿಗೆ ಕೊರೊನಾ ಸೋಂಕಿನ ಅಸಲಿ ಲಕ್ಷಣ

ಮಕ್ಕಳಿಗೆ ಕೊರೊನಾ ಸೋಂಕಿನ ಅಸಲಿ ಲಕ್ಷಣ

ಬೆಂಗಳೂರಿನ ಸಿಎಂಆರ್ ಆಸ್ಟರ್ ಆಸ್ಪತ್ರೆಯ ರೋಗ ನಿರೋಧಕ ಶಕ್ತಿ ವಿಭಾಗದ ತಜ್ಞ ಸಾಗರ್ ಬೆಟ್ಟದ್ ಅವರು ನಡೆಸಿರುವ ಅನ್ವೇಷಣೆಯಲ್ಲಿ ಹನ್ನೆರಡು ಮಕ್ಕಳಲ್ಲಿ ಎಂಐಎಸ್ - ಸಿ ವೈರಸ್ ಇರುವುದು ಬೆಳಕಿಗೆ ಬಂದಿದೆ. ಇದರ ಪ್ರಕಾರ ಮಕ್ಕಳಲ್ಲಿ ಮೂರು ದಿನ ಅತಿ ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣು ಕೆಂಪಾಗುವುದು, ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ಮಕ್ಕಳಿಗೆ ಬಹು ಅಂಗಾಂಗ ವಿಫಲವಾಗುವ ಲಕ್ಷಣ ಕಾಣಿಸಿಕೊಂಡಿದೆ. ನೋವಲ್ ಕೊರೊನಾ ಸೋಂಕಿಗೆ ಒಳಗಾಗುವ ಮಕ್ಕಳಲ್ಲಿ ಶೇ. 1 ರಷ್ಟು ಈ ರೀತಿಯ ಅಪಾಯಕಾರಿ ಕೊರೊನಾ ಸೋಂಕು ಬರುವ ಅಪಾಯವಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

ಈ ಕುರಿತು ಸಾಗರ್ ಬೆಟ್ಟದ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸೌಮ್ಯ ಸ್ವರೂಪದ, ಸಹಜ ಸ್ವರೂಪದ್ದು, ತೀರಾ ಅಪಾಯಕಾರಿ ಸ್ವರೂಪದಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ. ಹೀಗಾಗಿ ಅದಕ್ಕೆ ತಕ್ಕ ಹಾಗೆ ರಾಜ್ಯದಲ್ಲಿ ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಸೌಮ್ಯ ಸ್ವರೂಪದ ಕೊರೊನಾ ಸೋಂಕಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ , ಸಹಜ ಸ್ವರೂಪದ ಪ್ರಕರಣಗಳಿಗೆ ಜಿಲ್ಲಾ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳಲ್ಲಿ, ತೀವ್ರ ಸ್ವರೂಪದ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮಕ್ಕಳಿಗೆ ಐಸಿಯು ಎನ್ಐಸಿಯು, ವೆಂಟಿಲೇಟರ್, ಚಿಕಿತ್ಸೆಗೆ ನಾವು ಸಿದ್ದರಾಗಬೇಕಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಸರ್ಕಾರದ ಬಳಿ ಮಕ್ಕಳಿಗೆ ಕೊರೊನಾ ಸೋಂಕಿನ ಬಗ್ಗೆ ಅಂಕಿ ಅಂಶಗಳು ಇಟ್ಟುಕೊಳ್ಳದೇ ಇರುವುದು ಬೇಸರ ಮೂಡಿಸುತ್ತದೆ.

ಮಕ್ಕಳ ಪೋಷಕರಿಗೆ ಮೊದಲು ಲಸಿಕೆ

ಮಕ್ಕಳ ಪೋಷಕರಿಗೆ ಮೊದಲು ಲಸಿಕೆ

ಮಕ್ಕಳಲ್ಲಿ ಸಹಜವಾಗಿ ಕೊರೊನಾ ಸೋಂಕು ಇರುವ ಲಕ್ಷಣ ಕಾಣುತ್ತಿಲ್ಲ. ಆದರೆ ಮಕ್ಕಳೇ ಎ ಸಿಂಪ್ಟಮ್ಯಾಟಿಕ್ ಕ್ಯಾರಿಯರ್ಸ್ ಆಗಿದ್ದಾರೆ. ಹೀಗಾಗಿ ಮಕ್ಕಳಿಂದ ಕೊರೊನಾ ಸೋಂಕು ಹರಡುತ್ತದೆ. ಮಕ್ಕಳಿಗೆ ಕೊರೊನಾ ಹರಡುವಿಕೆಯ ಮೂಲ ಪೋಷಕರು. ಮಕ್ಕಳ ಪೋಷಕರು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಇದರ ಜತೆಗೆ ಮನೆಯಲ್ಲಿ ಅಕ್ಕ ಪಕ್ಕದಲ್ಲಿ ಮಕ್ಕಳನ್ನು ಮಲಗಿಸಿಕೊಳ್ಳಬಾರದು. ಗಂಟೆಗಟ್ಟಲೇ ಪಕ್ಕದಲ್ಲಿ ಕೂತು ಊಟ ಮಾಡಲು ಅವಕಾಶ ಕೊಡಬಾರದು. ಮನೆಯಲ್ಲಿ ಕೂಡ ಮಕ್ಕಳು ದೂರ ಇರುವ ಹಾಗೆ ಪೋಷಕರು ಎಚ್ಚೆತ್ತುಕೊಳ್ಳಬೇಕು. ಹಾಗೂ ಮೊದಲ ಆದ್ಯತೆಯಾಗಿ ಮಕ್ಕಳ ಪೋಷಕರಿಗೆ ಕೊರೊನಾ ಸೋಂಕು ನಿಯಂತ್ರಣ ಲಸಿಕೆಯನ್ನು ನೀಡಬೇಕು ಎಂದು ಡಾ. ಆಶಾ ಬೆನಕಪ್ಪ ಸಲಹೆ ನೀಡಿದ್ದಾರೆ.

ಚಿಕ್ಕಮಕ್ಕಳಿಗೆ ಲಸಿಕೆ ಬೇಡ ಯಾಕೆ?

ಚಿಕ್ಕಮಕ್ಕಳಿಗೆ ಲಸಿಕೆ ಬೇಡ ಯಾಕೆ?

ದೇಶದಲ್ಲಿ 12 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಕೊಡುವ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಕಡೆ ಪ್ರಯೋಗಗಳು ನಡೆಯುತ್ತಿವೆ. ಆದರೆ, ಒಂದು ವರ್ಷದಿಂದ 12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಕೊಡುವುದಕ್ಕೆ ವೈಯಕ್ತಿಕವಾಗಿ ನಾನು ವಿರೋಧ. ಕೊರೊನಾ ವ್ಯಾಕ್ಸಿನ್ ಕೇವಲ ಎಂಟು ತಿಂಗಳ ಕಾಲ ಅಷ್ಟೇ ರಕ್ಷಣೆ ಮಾಡುತ್ತದೆ. ಆದರೆ, ಈ ನೋವೆಲ್ ಕೊರೊನಾ ಪೆಡಂಭೂತ ಸಂಪೂರ್ಣವಾಗಿ ನಾಶವಾಗಲೂ ಇನ್ನೂ ನಾಲ್ಕು ವರ್ಷ ಬೇಕು. ಎಪಿಡಮಿಕ್ ಎಂಡಮಿಕ್ ಆಗಲು ವರ್ಷಗಳೇ ಬೇಕು. ಚಿಕ್ಕಮಕ್ಕಳು ಶಾಲೆಗೆ ಹೋಗುವ ವೇಳೆ ಅಕ್ಕ ಪಕ್ಕದ ಮಕ್ಕಳಿಂದ ವರ್ಷದಲ್ಲಿ ಐದಾರು ಸಲ ವೈರಲ್ ಇನ್‌ಫೆಕ್ಷನ್‌ಗೆ ಒಳಗಾಗುತ್ತಿದ್ದರು.

ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿತ್ತು. ಶಾಲೆಗಳಿಗೆ ಮಕ್ಕಳು ಹೋಗದೇ ನಮ್ಮ ದುರಾದಷ್ಟ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯಂತ್ರಗಳು ಸೋಮಾರಿತನಕ್ಕೆ ಒಳಗಾಗಿವೆ. ಇನ್ನೊಂದು ಮಹತ್ವದ ವಿಚಾರ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊಡುತ್ತಿದ್ದ ನಾನಾ ಲಸಿಕೆಗಳನ್ನು ಕೊಡುತ್ತಿಲ್ಲ. ಮಕ್ಕಳು ಎ ಸಿಮ್ಟಮ್ಯಾಟಿಕ್ ಇರುವ ಕಾರಣ ಎಲ್ಲಾ ಮಕ್ಕಳ ತಜ್ಞರ ಕ್ಲಿನಿಕ್‌ಗಳು ಬಾಗಿಲು ಹಾಕಿಕೊಂಡಿವೆ. ಲಸಿಕೆ ಅಭಿಯಾನ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚುಚ್ಚುಮದ್ಧುಗಳು ನೀಡಲಾಗುತ್ತಿಲ್ಲ. ಹೀಗಾಗಿ ಮಕ್ಕಳು ತುಂಬಾ ಅಪಾಯದಲ್ಲಿದ್ದಾರೆ. ಇಂಥ ಸಂಕಷ್ಟದಲ್ಲಿ ಪೋಷಕರೇ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಡಾ. ಆಶಾ ಬೆನಕಪ್ಪ ತಿಳಿಸಿದ್ದಾರೆ.

 ರಿಂಗ್ ಇಮ್ಯುನೈಜೇಷನ್‌ಗೆ ಸಲಹೆ

ರಿಂಗ್ ಇಮ್ಯುನೈಜೇಷನ್‌ಗೆ ಸಲಹೆ

ದೇಶದಲ್ಲಿ ಕೊರೊನಾ ಲಸಿಕೆ ಸಮಸ್ಯೆ ಎಲ್ಲಾ ಕಡೆ ತಲೆದೋರಿದೆ. ಇಂಥ ಸಂದರ್ಭದಲ್ಲಿ ಕೊರೊನಾ ಹಾಟ್ ಸ್ಪಾಟ್‌ಗಳನ್ನು ಗುರುತಿಸಿ ಆದ್ಯತೆ ಮೇಲೆ ಅಲ್ಲಿ ಮೊದಲು ವ್ಯಾಕ್ಸಿನೇಷನ್ ಮಾಡಬೇಕು. ಆನಂತರ ರಿಂಗ್ ಇಮ್ಯುನೈಜೇಷನ್ ಮಾಡಬೇಕು. ಇದರ ಜತೆಗೆ ಮನೆ ಮನೆಗೂ ತೆರಳಿ ಲಸಿಕೆ ಅಭಿಯಾನ ಕೈಗೊಳ್ಳಬೇಕು. ಈ ಹಿಂದೆ ಪೋಲಿಯೋ ದಂಥ ವೈರಸ್‌ಗಳನ್ನು ನಿಯಂತ್ರಣ ಮಾಡಲಾಗಿದೆ. ಹೀಗಾಗಿ ಪ್ಯಾಪುಲೇಷನ್ ಮ್ಯಾಪಿಂಗ್ ಮಾಡಿಕೊಂಡು ಲಸಿಕೆ ಯೋಜನೆ ರೂಪಿಸದಿದ್ದರೆ ರಾಜ್ಯದಲ್ಲಿ ಮಕ್ಕಳನ್ನು ರಕ್ಷಣೆ ಮಾಡುವುದು ತುಂಬಾ ಕಷ್ಟ. ಈ ಬಗ್ಗೆ ನನಗೆ ದೊಡ್ಡ ಆತಂಕ ಎದುರಾಗಿದೆ. ಮೊದಲು ಮಕ್ಕಳ ಪೋಷಕರಿಗೆ ಕೊರೊನಾ ಬಾರದಂತೆ ಎರಡು ರೀತಿಯಲ್ಲೂ ಲಸಿಕೆ ಅಭಿಯಾನ ಕೈಗೊಳ್ಳಬೇಕು ಎಂದು ಡಾ.ಆಶಾ ಬೆನಕಪ್ಪ ಸಲಹೆ ನೀಡಿದ್ದಾರೆ. ಆದರೆ ಇವರ ಸಲಹೆಯನ್ನು ಸರ್ಕಾರ ಎಷ್ಟರ ಮಟ್ಟಿಗೆ ಪರಿಗಣಿಸುತ್ತೋ ಕಾದು ನೋಡಬೇಕು.

Recommended Video

    ಪ್ರಪಂಚದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಕಾಣಿಸಿಕೊಂಡ H10N3 ವೈರಸ್ | Oneindia Kannada
    ಸರ್ಕಾರ ನಂಬಿದ್ರೆ ಮಕ್ಕಳು ಉಳಿಯಲ್ಲ

    ಸರ್ಕಾರ ನಂಬಿದ್ರೆ ಮಕ್ಕಳು ಉಳಿಯಲ್ಲ

    ಸದ್ಯದ ಸರ್ಕಾರದ ಪರಿಸ್ಥಿತಿ ನೋಡಿದರೆ, ನಮ್ಮ ಮಕ್ಕಳನ್ನು ನಾವು ಕಳೆದುಕೊಳ್ಳುತ್ತೇವೆ ಎಂಬ ಭಯ ಎದುರಾಗುತ್ತಿದೆ. ಯಾಕೆಂದರೆ ಮಕ್ಕಳ ವಿಚಾರದಲ್ಲಿ ಸರ್ಕಾರ ಈವರೆಗೂ ಸಣ್ಣ ಪ್ರಯತ್ನವೂ ಮಾಡಿಲ್ಲ. ಬೆಳೆಯುವ ಚಿಕ್ಕ ಮಕ್ಕಳಿಗೆ ಲಸಿಕೆ ಕೊಡುವುದರಿಂದ ಭವಿಷ್ಯದಲ್ಲಿ ಏನು ಆಗುತ್ತದೆ ಎಂಬುದು ಗೊತ್ತಿಲ್ಲ. ಹೀಗಾಗಿ ಮಕ್ಕಳಿಗೆ ಲಸಿಕೆ ಬಾರದಂತೆ ಎಚ್ಚರಿಕೆ ವಹಿಸುವುದೇ ಸೂಕ್ತ. ಪೋಷಕರು ತಮ್ಮ ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ಕೊಡಿ. ಮೂರನೇ ಅಲೆ ಮಕ್ಕಳಿಗೆ ಅಪ್ಪಳಿಸುತ್ತದೆ ಎಂದು ಕಾದು ಕುಳಿತುಕೊಳ್ಳವುದರಲ್ಲಿ ಪ್ರಯೋಜನವಿಲ್ಲ. ಈಗಲೇ ಎಚ್ಚೆತ್ತುಕೊಂಡು ಮಕ್ಕಳನ್ನು ಕಾಪಾಡಿಕೊಳ್ಳಲು ಪೋಷಕರು ಮತ್ತು ಸರ್ಕಾರ ಮೊದಲ ಆದ್ಯತೆ ನೀಡಬೇಕಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+