International Tiger Day 2022: ಕಾಡಿನ ರಾಜನ ಬೇಟೆ, ಶಕ್ತಿ, ಸೇರಿದಂತೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ
ಚಾಮರಾಜನಗರ: 'ಗ್ಲೋಬಲ್ ಟೈಗರ್ ಡೇ' ಎಂದು ಕರೆಯುವ ಈ ವಿಶೇಷ ದಿನದ ಆಚರಣೆಯನ್ನು 2010ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹುಲಿಗಳ ಸಂಖ್ಯೆಯಲ್ಲಿ ಆಗುತ್ತಿರುವ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವಾಗಿ ಆಚರಣೆ ಮಾಡಬೇಕೆಂದು 2010ರಲ್ಲಿ, ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಹುಲಿ ಸಮ್ಮೇಳನದಲ್ಲಿ ನಿರ್ಧರಿಸಲಾಗಿದ್ದು, ಅಂದಿನಿಂದ ಈ ದಿನದಂದೇ ಹುಲಿದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಸುಸ್ಥಿರ ಪರಿಸರದ ರಾಯಭಾರಿಯಾಗಿರುವ ಹುಲಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಆಗಿದೆ. ಶಕ್ತಿಗೆ, ಗಾಂಭೀರ್ಯಕ್ಕೆ, ನಡಿಗೆಗೆ, ಮೈಮಾಟಕ್ಕೆ ಹುಲಿಗೇ ಹುಲಿಯೇ ಸಾಟಿಯಾಗಿದೆ. ಈ ಕಾಡಿನ ರಾಜನ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಶೀಜ್ ಒನ್ ಇಂಡಿಯಾ ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ, ಮಹತ್ವ ಮತ್ತು ವೈಶಿಷ್ಟ್ಯ ತಿಳಿಯಿರಿ
ರಾಜನಂತೆ ಗಾಂಭಿರ್ಯ, ಬೇಟೆಯಲ್ಲೂ ರಾಜಾರೋಷ ತೋರುವ ಹುಲಿರಾಯ ಸಮತೋಲನದ ಪರಿಸರದ ಸಂಕೇತ. ಹುಲಿಯ ವೇಗ ಗಂಟೆಗೆ 60-65 ಕಿಮೀ. ಆದರೆ ಅದರ ಓಟ 35-45 ಮೀ. ಗೆ ಕೊನೆಗೊಳ್ಳಲಿದೆ. ಅಷ್ಟರಲ್ಲೇ ಬೇಟೆ ಸಿಕ್ಕರಷ್ಟೇ ಸರಿ, ಇಲ್ಲವಾದರೆ ಬೇರೆ ಬೇಟೆಯನ್ನು ಹುಡುಕಿಕೊಂಡು ಹೋಗಲಿದೆ. ಚಿರತೆ ವರ್ತನೆ ಇದರ ವಿರುದ್ಧವಾಗಿರುತ್ತದೆ. ಏಕೆಂದರೆ 1 ಕಿಮೀ ತನಕವೂ ಬೇಟೆಯನ್ನು ಅಟ್ಟಾಡಿಸಿಕೊಂಡು ಹೋಗಲಿದೆ.
ಒಂದೇ ಭೇಟೆಯನ್ನು 2-3 ದಿನ ತಿನ್ನುವ ವ್ಯಾಘ್ರ
ಹುಲಿ 100 ಬೇಟೆಗಳಲ್ಲಿ ಸರಾಸರಿ ಅದು ಯಶಸ್ಸು ಕಾಣುವುದು ಕೇವಲ 5-7 ಮಾತ್ರ. ಹೊಂಚುಹಾಕಿ ಹುಲಿ ಬೇಟೆಯಾಡುವುದಿಲ್ಲ. ಕಾಡೆಮ್ಮೆ, ಜಿಂಕೆ, ಮರಿ ಆನೆಗಳನ್ನು ಹೆಚ್ಚು ಬೇಟೆಯಾಡಲಿವೆ. ಹುಲಿ ಒಂದು ವೇಳೆ ಜಿಂಕೆಗಳನ್ನೇ ತಿಂದರೆ ವರ್ಷಕ್ಕೆ ಸರಾಸರಿ 130-150 ಜಿಂಕೆಗಳು ಬೇಕಾಗಬಹುದು. ಸಾಯಿಸಿದ ಪ್ರಾಣಿಯನ್ನು 300 ಮೀ.ಕ್ಕಿಂತಲೂ ಹೆಚ್ಚಿನ ದೂರ ಎಳೆದೊಯ್ದು ಆಹಾರವನ್ನು ಸುರಕ್ಷಿತ ಮಾಡಿಕೊಳ್ಳಲಿದೆ. 2-3 ದಿನ ಅದೇ ಬೇಟೆಯನ್ನು ತಿನ್ನಲಿದೆ. ವಿಶೇಷವೆಂದರೆ ಹುಲಿ ಪ್ರತಿದಿನ ಬೇಟೆಯಾಡುವುದಿಲ್ಲ.
ಹುಲಿ ಪಂಜಿನ ಹೊಡೆತಕ್ಕೆ ಮನುಷ್ಯನ ಬೆನ್ನು ಮೂಳೆ ಮುರಿಯುವ ಶಕ್ತಿ
ಕಾಡುನಾಯಿಗಳು, ಕಾಡೆಮ್ಮೆಗಳ ಗುಂಪು ಹುಲಿಯನ್ನು ಕೆಲವೊಮ್ಮೆ ಹಿಮ್ಮೆಟ್ಟಿಸುವ ಸಾಮಾರ್ಥ್ಯ ಹೊಂದಿವೆ. ಬಹಳಷ್ಟು ಬಾರಿ ಇದನ್ನು ಸಫಾರಿಗರು ಕಣ್ತುಂಬಿಕೊಂಡಿದ್ದಾರೆ. ಹುಲಿ ಓಡುವಾಗ ಉಗುರುಗಳು ಒಳಕ್ಕಿರಲಿದ್ದು, ಅದು ದಾಳಿ ಮಾಡುವಾಗ ಮಾತ್ರ ಉಗುರುಗಳು ಹೊರಬರಲಿದೆ. ಹುಲಿ ಮೈಮೇಲಿನ ಪಟ್ಟೆಗಳು ಮನುಷ್ಯನ ಬೆರಳಚ್ಚಿನಂತೆ ಇದ್ದು, ಒಂದಕ್ಕೊಂದು ವಿಭಿನ್ನವಾಗಿರುತ್ತವೆ. ಹುಲಿಯ ಪಂಜಿನ ಹೊಡೆತ ಪ್ರಾಣಿ ಅಥವಾ ಮನುಷ್ಯನ ಮೇಲೆ 140-150 ಕೆಜಿ ಒತ್ತಡವವನ್ನು ಸೃಷ್ಟಿಸಲಿದೆ. ಮನುಷ್ಯನಿಗೆ ಹೊಡೆದರೆ ಒಂದೇ ಹೊಡೆತಕ್ಕೆ ಬೆನ್ನುಮೂಳೆ ಮುರಿಯಬಹುದಾಗಿದೆ. ಇಲ್ಲವೆ ತಲೆಯೇ ಕೆಳಕ್ಕೆ ಬೀಳಬಹುದಂತೆ.
ಭಯದಿಂದ ಮನುಷ್ಯನ ಮೇಲೆ ದಾಳಿ
ಮ್ಯಾಂಗ್ರೋವ್ ಕಾಡಿನ ಹುಲಿಗಳು ಮನುಷ್ಯನನ್ನೇ ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿವೆ. ಆದರೆ ಬಹಳಷ್ಟು ಹುಲಿಗಳು ನರಹಂತಕವಲ್ಲ. ತಾಯಿಯಿಂದ ಬೇರ್ಪಟ್ಟ ಹುಲಿಗಳು ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳುವಾಗ ಮನುಷ್ಯನ ಮೇಲೆ ದಾಳಿ ಮಾಡುವ ಸಾಧ್ಯತೆ ಇರಲಿದೆ. ಬೇಟೆಯಾಡುವ ಶಕ್ತಿ ಕಳೆದುಕೊಂಡಾಗ, ವಯಸ್ಸಾದ, ಗಾಯಗೊಂಡ ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡಲಿದೆಯೇ ಹೊರತು, ಇನ್ನುಳಿದ ಪ್ರಕರಣಗಳಲ್ಲಿ ಭಯದಿಂದಲೇ ಮನುಷ್ಯನ ಮೇಲೆ ಎರಗುತ್ತವೆ ಎನ್ನುತ್ತಾರೆ ಅಬ್ದುಲ್ ಶೀಜ್.
ಹುಲಿಯ ವ್ಯಾಪ್ತಿ 60 ಚದರ ಕಿ.ಮೀ
ನೆಲ ಕೆರೆಯುವುದು, ಮರಗಳ ಮೇಲೆ ಗೀಚುವುದು, ಮಲ-ಮೂತ್ರ ವಿಸರ್ಜನೆ ಮೂಲಕ ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳಲಿದೆ. ಒಂದು ಹುಲಿಗೆ ಅಂದಾಜು 60 ಚದರ ಕಿಮೀ ನಷ್ಟು ವಿಸ್ತಾರ ಪ್ರದೇಶ ಅಗತ್ಯವಾಗಿರುತ್ತದೆ. ಗಂಡ ಹುಲಿಗೆ ಹೋಲಿಸಿದರೇ ಹೆಣ್ಣು ಹುಲಿ ಸರಹದ್ದು ಕಡಿಮೆ ಇರಲಿದೆ. ಸರಹದ್ದಿನ ಗುರುತುಗಳನ್ನು ಕಂಡು ಹೆಣ್ಣು ಹುಲಿಗಳು ಸಂತಾನೋತ್ಪತ್ತಿಗೆ ಗಂಡು ಹುಲಿಯರುವ ಕಡೆಗೆ ಬರಲಿದೆ. ಒಂದು ಗಂಡು ಹುಲಿಯ ಸರಹದ್ದಿನ ನಡುವೆ ಎರಡು ಹೆಣ್ಣು ಹುಲಿಗಳ ಸರಹದ್ದಿರುತ್ತದೆ. ಗಂಡು ಹುಲಿಗಳ ಸಂಖ್ಯೆಯೇ ಹೆಚ್ಚಿದ್ದರೆ ಕಾಳಗ ಏರ್ಪಟ್ಟು ಗೆದ್ದ ಹುಲಿ ಅಧಿಪತ್ಯ ಸಾಧಿಸುತ್ತದೆ.
ನರಭಕ್ಷಕ ಅಲ್ಲ, ನರಹಂತಕ
ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಅರಣ್ಯ ವಲಯದಲ್ಲಿ ಹುಲಿಯೊಂದು ರೈತನೊಬ್ಬನನ್ನು ಕೊಂದು ತಿಂದು ಹಾಕಿತ್ತು. ಆ ವರೆಗೂ ಮಾಧ್ಯಮಗಳು ನರಭಕ್ಷಕ ಹುಲಿ ಎಂದೇ ಉಲ್ಲೇಖಿಸುತ್ತಿದ್ದವು. ಆ ಪ್ರಕರಣದ ವೇಳೆ, ಅರಣ್ಯ ಇಲಾಖೆ ತಗಾದೆ ತೆಗೆದು ನರಭಕ್ಷಕ ಎನ್ನುವುದು ಸರಿಯಲ್ಲ- ನರಹಂತಕ ಪದ ಬಳಕೆ ಸೂಕ್ತ ಎಂದು ತಿಳಿಸಿದ್ದರಿಂದ ಹುಂಡಿಪುರದ ಪ್ರಕರಣದ ಬಳಿಕ ನರಭಕ್ಷಕ ಹುಲಿ ಪದಕ್ಕೆ ಕತ್ತರಿ ಬಿದ್ದು ನರಹಂತಕ ಪದ ಚಾಲ್ತಿಗೆ ಬಂದಿದೆ.
" ಹುಲಿ ಇರಬೇಕೆಂದರೆ ಅದಕ್ಕೆ ಬೇಕಾದ ಬೇಟೆ ಪ್ರಾಣಿಗಳು ಅಂದರೆ ಜಿಂಕೆ, ಕಡವೆ, ಕಾಡೆಮ್ಮೆ ಇರಬೇಕು. ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳು ಇರಬೇಕೆಂದರೆ ಹಸಿರು, ನೀರು ಇರಲೇಬೇಕು, ಹಸಿರು- ನೀರು ಇದ್ದರೇ ಕಾಡು ಸಮೃದ್ಧ ಎನ್ನಬಹುದಾಗಿದ್ದು ಈ ಆಹಾರ ಸರಪಳಿಯಲ್ಲಿ ಹುಲಿ ಸುಸ್ಥಿರ ಪರಿಸರದ ಸಂಕೇತವಾಗಿದೆ. ಕಾಡನ್ನು ರಕ್ಷಣೆ ಮಾಡಿದರೇ ಹುಲಿ ರಕ್ಷಣೆಯಾಗಲಿದೆ, ಕಾಡಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳಿಗೆ ಮಾತ್ರವಲ್ಲ ಜನರು ಇದರಲ್ಲಿ ಭಾಗೀದಾರರಾಗಬೇಕು" ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿವೃತ್ತ ನಿರ್ದೇಶಕ ಬಾಲಚಂದ್ರ ಹೇಳುತ್ತಾರೆ.
ಇನ್ನೂ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ
* ಹುಲಿಯ ಕಿವಿಯ ಹಿಂದೆ ಎರಡು ಕಳ್ಳ ಕಣ್ಣು(Falls eyes) ಇರಲಿದೆ. ಬೇಟೆಯಾಡುವ ಸಮಯದಲ್ಲಿ ಆಥವಾ ಬೇರೆ ಸಮಯದಲ್ಲಿ ಎದುರಾಳಿಗೆ ದಿಕ್ಕು ತಪ್ಪಿಸಲು ಕಣ್ಣುಗಳಂತೆ ಕಾಣುವ ಈ ಭಾಗ ಸಹಾಯಕ.
* ಹುಲಿ ಒಂದು ವೇಳೆ ನಿಂತಿರುವಾಗಲೇ ಮೃತಪಟ್ಟರೇ ಎರಡು ದಿನ ಅದರ ಶರೀರ ನಿಂತಂತೇ ಇರಲಿದೆಯಂತೆ. ಇದು ಅದರ ಶಕ್ತಿ ಅಳೆಯಲು ಇರುವ ಅತಿಶಯೋಕ್ತಿ ಪದ.
* ಹುಲಿಗಳ ದೇಹ ಯಾವಾಗಲೂ ಹೆಚ್ಚು ಉಷ್ಣಾಂಶದಿಂದ ಇರಲಿದ್ದು ದೇಹದ ಬಿಸಿ ಸಮತೋಲನ ಮಾಡಿಕೊಳ್ಳಲು ನೀರಿನ ಝರಿ, ಹೊಂಡದ ಆಸರೆ ಪಡೆಯುತ್ತದೆ. ಬೇಟೆಗೆ ಹೋದಾಗ ಅದರ ದೇಹದ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ.
*ಹುಲಿಯ ಬಾಲಕ್ಕೆ ಪೆಟ್ಟಾದರೇ ಓಡಿ ಬೇಟೆಯಾಗುವ ಶಕ್ತಿ ಕಡಿಮೆಯಾಗಲಿದೆ.
* ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು ಹುಲಿಯ ಅವಾಸ ಸ್ಥಾನ ಕಿರಿದಾಗುತ್ತಿದೆ.
* ಹುಲಿಯ ಮೈ ಮೇಲಿನ ಪಟ್ಟೆಗಳ ಮೂಲಕ ಹುಲಿಗಳನ್ನು ಗುರುತಿಸಿ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ.
*ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಇವೆ. ಇಲ್ಲಿನ ಸೋಲಿಗರ ಹುಲಿಯನ್ನು ದೊಡ್ಡರಾಯ ಎಂದು ಪೂಜಿಸುತ್ತಾರೆ. ಹುಲಿವಾಹನ ಎಂಬ ದೇವರ ವಾಹನವೂ ಇದೆ.