ಲೇಖಕ ರವಿ ಬೆಳಗೆರೆ ಹೊಸ ಪುಸ್ತಕ 'ಫ್ರಮ್ ಪುಲ್ವಾಮಾ'; ಪಾಕ್ ಗೆ ಭಾರತ ನೀಡಿದ ಸಾಕ್ಷ್ಯದ ಇಂಚಿಂಚೂ ವಿವರ
ಫೆಬ್ರವರಿ ಹದಿನಾಲ್ಕನೇ ತಾರೀಕು ಪುಲ್ವಾಮಾ ದಾಳಿ ನಡೆದ ನಂತರ ಜಮ್ಮು-ಕಾಶ್ಮೀರಕ್ಕೆ ತೆರಳಿ, ಅಲ್ಲಿಂದಲೇ ವರದಿ ಮಾಡಿದವರು ಪತ್ರಕರ್ತ ರವಿ ಬೆಳಗೆರೆ. ಅಲ್ಲಿರುವಾಗಲೇ ಒಮ್ಮೆ ಒನ್ ಇಂಡಿಯಾ ಕನ್ನಡದ ಜತೆ ಫೋನ್ ನಲ್ಲಿ ಮಾತನಾಡಿದ್ದರು. ಅಲ್ಲಿಂದ ಬಂದ ಮೇಲೂ ಅವರ ಮೊದಲ ಸಂಸರ್ಶನ ನಮ್ಮ ವೆಬ್ ಪೋರ್ಟಲ್ ಗೆ ನೀಡಿದ್ದರು.
ಅಲ್ಲಿಂದ ಬಂದ ದಿನವೇ ಅವರು ವಿಡಿಯೋ ಸಂದರ್ಶನ ನೀಡಿದ್ದರು. 'ಫ್ರಮ್ ಪುಲ್ವಾಮಾ' ಎಂಬ ಪುಸ್ತಕ ಬರೆದು, ಸಂಪೂರ್ಣ ವಿವರವನ್ನು ನೀಡುತ್ತೇನೆ ಎಂದರು. ಸರಿ, ಇನ್ನೊಂದು ವಾರದಲ್ಲಿ ಆ ಪುಸ್ತಕ ಬರೆದು ಬಿಡುತ್ತಾರೆ ಅಂದುಕೊಳ್ಳುವಷ್ಟರಲ್ಲಿ, ಶರವಣ ಭವನ್ ಹೋಟೆಲ್ ಸಮೂಹಗಳ ಮಾಲೀಕ ರಾಜಗೋಪಾಲ್ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡು, ಜೀವಾವಧಿ ಶಿಕ್ಷೆ ಕಾಯಂ ಆದ ಬಗ್ಗೆ 'ಇಡ್ಲಿ ವಡ ಡೆಡ್ಲಿ ಮರ್ಡರ್' ಪುಸ್ತಕ ಬರೆದು, ಬಿಡುಗಡೆಯೂ ಮಾಡಿಬಿಟ್ಟರು.
ಇನ್ನು 'ಫ್ರಮ್ ಪುಲ್ವಾಮಾ' ಮರೆತಂತೆಯೇ ಅಂದುಕೊಳ್ಳುವಷ್ಟರಲ್ಲಿ ಇದೇ ಜೂನ್ ಒಂಬತ್ತನೇ ತಾರೀಕು ತಮ್ಮ ಪತ್ರಿಕೆ ಕಚೇರಿಯಲ್ಲಿ ಸಂಜೆ ಐದು ಗಂಟೆಗೆ 'ಫ್ರಮ್ ಪುಲ್ವಾಮಾ' ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ. ಅದರ ಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ರೋಚಕವಾದ, ಕುತೂಹಲದಿಂದ ಕೂಡಿದ, ಪಾಕಿಸ್ತಾನ ಎಂಬ ಕ್ಷುದ್ರ ದೇಶದ ಬಗ್ಗೆ ಹಾಗೂ ಅಲ್ಲಿನ ಭಯೋತ್ಪಾದಕ ಸಂಘಟನೆಗಳ ಬಗ್ಗೆ, ಜಮ್ಮು-ಕಾಶ್ಮೀರ ಮತ್ತು ಅಲ್ಲಿನ ಜನರ ಬಗ್ಗೆ ಕನ್ನಡದ ಮಟ್ಟಿಗಂತೂ ಇಂಥ ಪುಸ್ತಕ ಇನ್ನೊಂದು ಇಲ್ಲ ಎಂಬಂತಿದೆ.
ಆ ಪುಸ್ತಕದ ಪ್ರಮುಖ ಅಧ್ಯಾಯವೊಂದನ್ನು ಒನ್ ಇಂಡಿಯಾ ಕನ್ನಡ ಓದುಗರಿಗಾಗಿ ನೀಡಲಾಗುತ್ತಿದೆ; ಲೇಖಕರಾದ ರವಿ ಬೆಳಗೆರೆ ಅವರ ಒಪ್ಪಿಗೆ ಪಡೆದು- ಸಂಪಾದಕ

ಅದಿಲ್ ದಾರ್ ನ ವಿಡಿಯೋ ರಾವಳಪಿಂಡಿಯ ಬಳಿ ಅಪ್ ಲೋಡ್ ಆಗಿದೆ
ಲೇತ್ ಪೊರಾ ಬಾಂಬ್ ದಾಳಿಗೆ ನಾವೇ ಕಾರಣ ಎಂದು ಜಗತ್ತಿಗೆ ಘೋಷಿಸಿದ ಉಗ್ರಗಾಮಿ ಯಾವ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಮಾತ್ತು ಅದರ ನಂಬರ್ ಏನು? ಎಂಬುದನ್ನು ಭಾರತವು ಪತ್ತೆ ಹಚ್ಚಿ ಪಾಕಿಸ್ತಾನ್ ಸರ್ಕಾರಕ್ಕೆ ನೀಡಿದ 'ಪುಲ್ವಾಮಾ ಡೋಜಿಯರ್'ನಲ್ಲಿ ವಿವರಿಸಿತು. ಇದು ಪಾಕಿಸ್ತಾನ್ ಬೆಂಬಲಿಸಿದ ಜೈಷ್-ಎ-ಮಹಮ್ಮದ್ ನಡೆಸಿದ ಕೃತ್ಯ. ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಜೈಷ್-ಎ-ಮಹಮ್ಮದ್ ಅದರ ಜವಾಬ್ದಾರಿ ಹೊತ್ತುಕೊಂಡು 'ನಾವೇ ಮಾಡಿದ್ದು' ಎಂದು ಘೋಷಿಸಿತು. ಅದರ ವಾಟ್ಸಾಪ್ ನಂಬರ್ 70062-50771. ಇದನ್ನು ಕೂಡ ಭಾರತದ ಬೇಹುಪಡೆಗಳು ಪತ್ತೆ ಮಾಡಿದವು. ಈ ನಂಬರ್ ಜೈಷ್-ಎ-ಮಹಮ್ಮದ್ ನ ವಕ್ತಾರ ಮಹಮ್ಮದ್ ಹಸನ್ ಗೆ ಸೇರಿದ್ದು. ಇದರ ಐಪಿ ಅಡ್ರೆಸ್ ಸ್ಪಷ್ಟವಾಗಿ ಪತ್ತೆಯಾಗಿದ್ದು, ಅದಿಲ್ ದಾರ್ ನ ವಿಡಿಯೋ ರಾವಳಪಿಂಡಿಯ ಬಳಿ ಅಪ್ ಲೋಡ್ ಆಗಿದೆ ಎಂಬುದನ್ನು ಕೂಡ ಭಾರತದ ಬೇಹುಪಡೆ ಪತ್ತೆ ಹಚ್ಚಿ ಪಾಕಿಸ್ತಾನದ ಮುಖಕ್ಕೆ ಹಿಡಿಯಿತು. ಪುಲ್ವಾಮಾದ ದಾಳಿಯನ್ನು ಜೈಷ್ ನ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಅವನ ತಮ್ಮ ಅಬ್ದುಲ್ ರವೂಫ್ ಅಜರ್ ಸೇರಿಕೊಂಡು ಮಾಡಿದ್ದರು. ಕಾಶ್ಮೀರ ಕಣಿವೆಯಲ್ಲಿ ಭಾರತದ ಸೈನ್ಯ ಆಗಾಗ ಕೊಂದ ಕಟ್ಟರ್ ಉಗ್ರವಾದಿಗಳ ಸಾವಿಗೆ ಪ್ರತೀಕಾರವನ್ನು ಹೇಳಲು ಪುಲ್ವಾಮಾ ವ್ಯಾಪ್ತಿಯ ಲೇತ್ ಪೊರಾದ ಬಳಿ ದಾಳಿ ನಡೆಸಲು ತೀರ್ಮಾನಿಸಿದ್ದರು.

ಅಜರ್ ಅಣ್ಣನ ಮಕ್ಕಳ ಸಾವಿಗೆ ಹೇಳಿದ ಪ್ರತೀಕಾರ
ದಾಳಿಯ ನಂತರ ರೆಕಾರ್ಡ್ ಮಾಡಲಾದ ವಿಡಿಯೋ ಮತ್ತು ಉಗ್ರರ ಮುಖ್ಯಸ್ಥ ಹಸನ್ ನೀಡಿದ ಅಧಿಕೃತ ಹೇಳಿಕೆಗಳೆರಡನ್ನೂ ಪಾಕಿಸ್ತಾನ ಸರ್ಕಾರಕ್ಕೆ ಭಾರತವು ನೀಡಿತು. ಅಜರ್ ನ ಅಣ್ಣನ ಮಗ ತಲ್ಹಾ ರಷೀದ್ ಭಾರತದ ಪಡೆಗಳ ಕೈಗೆ ಸಿಕ್ಕು ಮರಣಿಸಿದ ನಂತರ ಲೇತ್ ಪೊರಾ-ಪುಲ್ವಾಮಾ ದಾಳಿಯನ್ನ ಪ್ಲಾನ್ ಮಾಡಲಾಯಿತು. ನವೆಂಬರ್ 6, 2017ರಂದು ಪುಲ್ವಾಮಾ ಬಳಿ ಅಜರ್ ನ ಅಣ್ಣನ ಮಗ ತಲ್ಹಾ ರಷೀದ್ ನನ್ನು ನಮ್ಮ ಸೈನ್ಯ ಗುಂಡಿಕ್ಕಿ ಕೊಂದಿತ್ತು. ಮುಂದೆ ಅಜರ್ ನ ಅಣ್ಣನ ಇನ್ನೊಬ್ಬ ಮಗ ಉಸ್ಮಾನ್ ಹೈದರನನ್ನು ಭಾರತೀಯ ಸೇನೆ ಟ್ರಾಲ್ ನ ಬಳಿ ಅಕ್ಟೋಬರ್ 2018ರಲ್ಲಿ ಗುಂಡಿಕ್ಕಿ ಕೊಂದಿತ್ತು. ಅಜರ್ ನ ಬಂಧುಗಳ ಸಾವಿನ ನಂತರ ಶ್ರೀನಗರದ, ವಿಶೇಷವಾಗಿ ಪುಲ್ವಾಮಾದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಯುವಕರನ್ನು ಜೈಷ್ ನ ಸೇನೆಗೆ ರಿಕ್ರೂಟ್ ಮಾಡಲಾಯಿತು ಎಂಬುದನ್ನು ಕೂಡ ಭಾರತದ ಬೇಹುಪಡೆಗಳು ಪತ್ತೆ ಹಚ್ಚಿದ್ದವು. ಈ ಎಲ್ಲಾ ಚಟುವಟಿಕೆ ಮತ್ತು ದಾಳಿಯ ಸಿದ್ಧತೆಯನ್ನು ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ಮಾಡಲಾಗಿತ್ತು ಎಂದು ಭಾರತವು ಪಾಕಿಸ್ತಾನಕ್ಕೆ ಸಾಕ್ಷ್ಯಾಧಾರಗಳ ನೆರವಿನಿಂದ ಸಾಬೀತು ಮಾಡಿ ತೋರಿಸಿತು. ಜೈಷ್-ಎ-ಮಹಮ್ಮದ್ ನಲ್ಲಿ ಟೆಲಿಗ್ರಾಂ ಗ್ರೂಪ್ ಎಂಬುದೊಂದಿದ್ದು ಅದಕ್ಕೆ 'ಅಫ್ಜಲ್ ಗುರು ಸ್ಕ್ವಾಡ್ ಅಲ್ ಇಸ್ಲಾಂ' ಎಂದು ಹೆಸರಿಡಲಾಗಿದೆ. ಅದೇ ಗುಂಪು ಅದಿಲ್ ಅಹಮದ್ ದಾರ್ ನ ಮರಣಪೂರ್ವ ವಿಡಿಯೋವನ್ನು ರೂಪಿಸಿತ್ತು.

ದಾಳಿಯ ರೀತಿ-ರಿವಾಜುಗಳನ್ನು ನೋಡಿಕೊಂಡವನು ಅಮ್ರಾನ್
ಪುಲ್ವಾಮಾ ಹಲ್ಲೆ ಸಿದ್ಧತೆಯಾದ ಕೂಡಲೆ ಬಲಿತ ಉಗ್ರಗಾಮಿಯಾದ ಅಬ್ದುಲ್ ರಷೀದ್ ಘಾಜಿಯನ್ನು ಕಾಶ್ಮೀರ ಕಣಿವೆಯೊಳಕ್ಕೆ ಕಳಿಸಲಾಯ್ತು. ಸ್ಥಳೀಯರಿಗೆ, ಉಗ್ರರಾಗಲು ಸಿದ್ಧಗೊಂಡವರಿಗೆ ಸಾದ್ಯಂತವಾಗಿ ತರಬೇತಿ ನೀಡಿದವನು ಇದೇ ಘಾಜಿ. ಬಾಂಬ್ ಉಡಾಯಿಸಿದ ಮರು ಕ್ಷಣ ನಮ್ಮ ಸಂಘಟನೆಯ ರಷೀದ್, ಹೈದರ್ ರ ಸಾವಿಗೆ ಪ್ರತೀಕಾರ ಹೇಳಿದಂತಾಗಿದೆ ಎಂದು ಘಾಜಿ ಹೇಳಿಕೆ ನೀಡಿದ. ಹೀಗೆ ಘಾಜಿ ತರಬೇತಿ ನೀಡುತ್ತಿರುವಾಗ ಕಟ್ಟಕಡೆಯ ನಿಮಿಷದ ವಿವರಗಳನ್ನು, ದಾಳಿಯ ರೀತಿ-ರಿವಾಜುಗಳನ್ನು ನೋಡಿಕೊಂಡವನು ಪಾಕಿಸ್ತಾನದ ಹಿರಿಯ ಉಗ್ರಗಾಮಿ ಅಮ್ರಾನ್. ಅವನನ್ನು ಮುಂದೆ ಎನ್ ಕೌಂಟರ್ ನಲ್ಲಿ ಕೊಲ್ಲಲಾಯಿತು. ಕಾಶ್ಮೀರಿ ಯುವಕರನ್ನೇ ಬಳಸಿ ಲೇತ್ ಪೊರಾ ಬಾಂಬ್ ಸಿಡಿತವನ್ನು ಪೂರ್ಣಗೊಳಿಸಲಾಯಿತು ಎಂದು ಭಾರತವು ಪಾಕಿಸ್ತಾನಕ್ಕೆ ಆಧಾರಪೂರ್ವಕವಾಗಿ ತಿಳಿಸಿತು. ಮೂವತ್ತಾರು ವರ್ಷದ ಒಬ್ಬ ಪಾಕಿಸ್ತಾನಿ ಪ್ರಜೆ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದು, ಅವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದರು. ಅವನು ನವಾಬ್ ಖಾನ್ ಎಂಬುವನಾಗಿದ್ದು, 'ಗಾಂಗ' ಗ್ರಾಮದಲ್ಲಿ ವಾಸಿಸುತ್ತಿದ್ದ. ಅವನನ್ನು ಜೈಸಲ್ಮೇರ್ ನಲ್ಲಿ ಬಂಧಿಸಲಾಗಿತ್ತು. ಭಾರತೀಯ ಸೈನ್ಯದ ಅತಿ ಸೂಕ್ಷ್ಮ ವಿವರಗಳನ್ನು ಅವನು ಪಾಕಿಸ್ತಾನಕ್ಕೆ ಒದಗಿಸುತ್ತಿದ್ದ. ಪುಲ್ವಾಮಾ ಘಟನೆ ನಂತರ ಅವನು ಭಾರತೀಯ ಸೇನೆಯ ಜಾಗರೂಕ ಕ್ರಮಗಳ ಬಗ್ಗೆ ಐಎಸ್ ಐಗೆ ಮಾಹಿತಿ ನೀಡುತ್ತಿದ್ದ.

ವಿಡಿಯೋ ಕಾಲ್ ಮೂಲಕ ಮಾಹಿತಿ ರವಾನೆ
ಕೋಡ್ ಗಳನ್ನು ಬಳಸಿ, ಕೆಲ ಬಾರಿ ವಿಡಿಯೋ ಕಾಲ್ ಗಳ ಮೂಲಕ ಅವನು ತನ್ನ ಹ್ಯಾಂಡ್ಲರ್ ಗಳಿಗೆ ಮಾಹಿತಿ ನೀಡುತ್ತಿದ್ದ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಅವನು ಈ ಹಿಂದೆ ಇಪ್ಪತ್ತೆರಡು ದಿನ ಅಲ್ಲಿ ತರಬೇತಿ ಪಡೆದಿದ್ದ. ಹಿಂತಿರುಗಿದ ನಂತರ ಅವನು ಪಕ್ಕಾ ಬೇಹುಗಾರನಾಗಿ ಐಎಸ್ ಐನೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಎಂದು ಭಾರತೀಯ ಪಡೆಗಳು ಖಚಿತ ಪಡಿಸಿವೆ. ನವಾಬ್ ಖಾನ್ ಭಾರತೀಯ ಸೇನೆಯ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಇಂಟಲಿಜೆನ್ಸ್ ಆದ ಉಮೇಶ್ ಮಿಶ್ರಾ ಅವರ ಜೀಪ್ ಡ್ರೈವರ್ ನಾಗಿ ಕೆಲಸ ಮಾಡುತ್ತಿದ್ದ. ಅವನು ಕೋಡ್ ಭಾಷೆಯಲ್ಲಿ ಜೈಷ್ ನ ತನ್ನ ಹ್ಯಾಂಡ್ಲರ್ ಗಳೊಂದಿಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ ಹಣ ಪಡೆಯುತ್ತಿದ್ದ. ಭಾರತದ ಸೈನ್ಯದ ಚಲನವಲನಗಳ ಬಗ್ಗೆ ಪಾಕಿಸ್ತಾನದ ಐಎಸ್ ಐಗೆ ನೀಡುವ ಒಂದೊಂದು ಮಾಹಿತಿಗೂ ನವಾಬ್ ಖಾನ್ ಹಣ ಪಡೆಯುತ್ತಿದ್ದ.
-
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ












Click it and Unblock the Notifications