ದೀಪಾವಳಿ ಹಬ್ಬದ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಸೈಟ್ಗಳ ಅಬ್ಬರ; ವ್ಯಾಪಾರವಿಲ್ಲದೆ ಬಡ ಅಂಗಡಿಕಾರರು ಕಂಗಾಲು!
ಕಾರವಾರ, ಅಕ್ಟೋಬರ್ 27: ನವರಾತ್ರಿ- ದಸರಾ ಹಬ್ಬ ಮುಗಿದು, ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ವ್ಯಾಪಾರ- ವ್ಯವಹಾರಗಳು ಹಬ್ಬದ ಹಿನ್ನಲೆಯಲ್ಲಿ ಜೋರಾಗಿಯೇ ನಡೆಯುತ್ತದೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಆನ್ಲೈನ್ ಶಾಪಿಂಗ್ (ಇ- ಕಾಮರ್ಸ್) ಸೈಟ್ಗಳ ಭಾರೀ ಪ್ರಚಾರದ ಅಬ್ಬರದಿಂದಾಗಿ ಬಡ ಅಂಗಡಿಕಾರರು ವ್ಯಾಪಾರವಿಲ್ಲದೆ ಕಂಗಾಲಾಗುವಂತಾಗಿದೆ.
ಕೊರೊನಾ ಮೊದಲನೇ ಅಲೆಯ ಲಾಕ್ಡೌನ್ ಹೊಡೆತದಿಂದ ಹೊರಬರಲು ಅಂಗಡಿಕಾರರು ಸಾಕಷ್ಟು ಪರದಾಡಿದ್ದರು. ಇದರ ಮಧ್ಯೆ ಎರಡನೇ ಅಲೆ ಕಾಲಿಟ್ಟು ಮತ್ತೆ ಲಾಕ್ಡೌನ್ ಆಗಿ ಹಲವು ಅಂಗಡಿಗಳು ವ್ಯವಹಾರ ಇಲ್ಲದೇ ಮುಚ್ಚಿ ಹೋಗಿದ್ದವು. ಇನ್ನು ಅಂಗಡಿಗಳಲ್ಲಿ ಕೆಲಸ ಮಾಡುವವರಿಗೂ ವೇತನ ಕೊಡಲೂ ಹೆಣಗಾಡುವ ಪರಿಸ್ಥಿತಿ ಮಾಲೀಕರಿಗೆ ನಿರ್ಮಾಣವಾಗಿತ್ತು. ಇದರ ನಡುವೆ ಸದ್ಯ ಮಾರುಕಟ್ಟೆಯಲ್ಲಿ ಜನರ ಓಡಾಟ ಯಥಾಸ್ಥಿತಿಗೆ ಬರುತ್ತಿದ್ದು, ಇನ್ನೊಂದೆಡೆ ಆನ್ಲೈನ್ ಶಾಪಿಂಗ್ನಿಂದ ಭೌತಿಕ ಮಾರುಕಟ್ಟೆ ವ್ಯಾಪಾರ- ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬಿದ್ದಿದೆ.
ಸದ್ಯ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಫ್ಲಿಪ್ಕಾರ್ಟ್, ಮಿಂತ್ರಾ, ಅಮೆಜಾನ್, ಸ್ನ್ಯಾಪ್ಡೀಲ್, ಮೀಶೋ, ಅಜಿಯೋ, ಜಿಯೋ ಮಾರ್ಟ್ನಂತಹ ಇ- ಕಾಮರ್ಸ್ ಸೈಟ್ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಕೊರೊನಾದಿಂದ ಮನೆಯಲ್ಲಿಯೇ ಇದ್ದ ಜನರು ಅಂಗಡಿಗಳು ಬಂದ್ ಆಗಿದ್ದರಿಂದ ಆನ್ಲೈನ್ ಶಾಪಿಂಗ್ ಮೊರೆ ಹೋಗಿದ್ದರು. ಇದೀಗ ಅಂಗಡಿಗಳು ಬಾಗಿಲು ತೆರೆದರು ಕೂಡ ಆರಾಮದಾಯಕವಾಗಿರುವ ಆನ್ಲೈನ್ ಸೈಟ್ಗಳಲ್ಲೇ ಖರೀದಿ ಮಾಡುತ್ತಿದ್ದು, ಜನರು ಮಾರುಕಟ್ಟೆಗಳಿಗೆ ವಿರಳವಾಗಿ ಭೇಟಿ ನೀಡುತ್ತಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಮೊಬೈಲ್ ಅಂಗಡಿ, ಬಟ್ಟೆ ವ್ಯಾಪಾರ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿಗಳ ಮೇಲೆ ದೊಡ್ಡ ಪರಿಣಾಮವೇ ಬಿದ್ದಿದೆ. ಬಹುತೇಕರು ಮೊಬೈಲ್ ಖರೀದಿಗೆ ಅಂಗಡಿಗಳ ಬದಲು ಆನ್ಲೈನ್ನ ಮೊರೆ ಹೋಗಿದ್ದಾರೆ. ಅದರಂತೆ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕೂಡ ಆನ್ಲೈನ್ನಲ್ಲಿಯೇ ಖರೀದಿ ಮಾಡುತ್ತಿರುವುದರಿಂದ ಅಂಗಡಿಗಳಿಗೆ ಬಂದು ಖರೀದಿ ಮಾಡುವವರ ಸಂಖ್ಯೆ ಸಂಪೂರ್ಣ ಇಳಿಕೆಯಾಗಿದೆ.
ಕಳೆದ ಐದಾರು ವರ್ಷಗಳಿಂದ ಆನ್ಲೈನ್ ವ್ಯಾಪಾರ ಮೋಹಕ್ಕೆ ಜನರು ಬಿದ್ದಿದ್ದಾದರೂ, ಕೊರೊನಾ ಕಾಲಿಟ್ಟ ನಂತರ ಲಾಕ್ಡೌನ್ ಹಿನ್ನಲೆಯಲ್ಲಿ ಈ ಆನ್ಲೈನ್ ವಹಿವಾಟು ಇನ್ನಷ್ಟು ಹೆಚ್ಚಿದೆ. ಗ್ರಾಮೀಣ ಭಾಗದ ಜನರು ಕೂಡ ಇ- ಕಾಮರ್ಸ್ ಸೈಟ್ಗಳ ಮೂಲಕ ಖರೀದಿ ಮಾಡುವುದನ್ನು ಕಲಿತುಕೊಂಡಿರುವುದರ ಪರಿಣಾಮವಾಗಿ ಸಣ್ಣಪುಟ್ಟ ಅಂಗಡಿಗಳಲ್ಲಿ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ ಎನ್ನುವುದು ಅಂಗಡಿಕಾರರ ಅಭಿಪ್ರಾಯವಾಗಿದೆ.

ವ್ಯಾಪಾರಸ್ಥರು ಬೀದಿಗೆ ಬೀಳುತ್ತಾರೆ
ಮೊಬೈಲ್ ಆನ್ಲೈನ್ ಮಾರ್ಕೆಟ್ ಹೀಗೆ ಮುಂದುವರೆದರೆ ಮುಂದೊಂದು ದಿನ ಅಂಗಡಿಗಳಲ್ಲಿ ವ್ಯಾಪಾರ ಮಾಡಿ ಬದುಕುವ ಅಂಗಡಿಕಾರರು ಬೀದಿಗೆ ಬೀಳಲಿದ್ದೇವೆ ಎನ್ನುತ್ತಾರೆ ಜಿಲ್ಲಾ ಮೊಬೈಲ್ ಡೀಲರ್ ಅಸೋಸಿಯೇಷನ್ ಅಧ್ಯಕ್ಷ ಮಿಥುನ್ ರೇವಣಕರ್.
ಆನ್ಲೈನ್ ವ್ಯಾಪಾರದ ಅಬ್ಬರ ಹೆಚ್ಚಾದ ಮೇಲೆ ಅಂಗಡಿಗಳಲ್ಲಿ ಕೆಲಸದವರನ್ನು ನೇಮಕ ಮಾಡಿಕೊಳ್ಳಲು, ಅಂಗಡಿಗಳನ್ನು ನಡೆಸಲು ಆಗದೇ ನಿರುದ್ಯೋಗ ಎದುರಾಗುವಂತಾಗಿದೆ. ಆತ್ಮನಿರ್ಭರ ಎಂದು ಹೇಳುತ್ತಾರೆ. ಆದರೆ ದೇಶದ ಮೂಲ ಅಂಗಡಿಕಾರರನ್ನು ಬೀದಿಗೆ ತಳ್ಳಿ, ಹೊರ ದೇಶದ ಇ- ಕಾಮರ್ಸ್ ಸೈಟ್ಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ ಮೊಬೈಲ್ ಅಂಗಡಿಗಳು ಇನ್ನು ಕೆಲ ವರ್ಷದಲ್ಲೇ ಬಂದ್ ಆಗಲಿದೆ ಎನಿಸುತ್ತಿದೆ. ಇದರಿಂದ ನಿರುದ್ಯೋಗ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ.
ಇ- ಕಾಮರ್ಸ್ಗೆ ಸರ್ಕಾರಗಳ ಕೃಪಾಕಟಾಕ್ಷ!
ಇ- ಕಾಮರ್ಸ್ ತಾಣಗಳಿಗೆ ಸರ್ಕಾರಗಳ ಕೃಪಾಕಟಾಕ್ಷ ಇರುವುದರಿಂದಲೇ ಈಗ ಆನ್ಲೈನ್ ಮಾರುಕಟ್ಟೆ ದೈತ್ಯವಾಗಿ ಬೆಳೆದು ನಿಂತಿದೆ. ಸರ್ಕಾರದ ಸಚಿವರು, ಸಂಸದರು, ಶಾಸಕರುಗಳು ತಮ್ಮ ಭಾಷಣಗಳಲ್ಲಿ 'ಸ್ಥಳೀಯ ರೈತರಿಂದಲೇ ಖರೀದಿಸಿ' ಎನ್ನುತ್ತಾರೆಯಾದರೂ, ಅವರು, ಅವರ ಕುಟುಂಬಸ್ಥರು ಮೊಬೈಲ್ ಹಿಡಿದುಕೊಂಡು ಆನ್ಲೈನ್ ಶಾಪಿಂಗ್ ಮಾಡಿಬಿಡುತ್ತಾರೆ. ಅಲ್ಲದೇ ಇತ್ತೀಚಿಗೆ ಕೇಂದ್ರ ಸರ್ಕಾರ ಕೂಡ ಕೊರೊನಾದ ನೆಪದಲ್ಲಿ 'ಮನೆಯಲ್ಲೇ ಕೂತು ಸುರಕ್ಷಿತವಾಗಿ ಆನ್ಲೈನ್ ಶಾಪಿಂಗ್ ಮಾಡಿ' ಎಂದು ಪ್ರಚಾರ ಮಾಡುತ್ತಿದ್ದು, ಬಡ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದು ದೈತ್ಯ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದೆ.












Click it and Unblock the Notifications