ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ: ನಾಯ್ಡು ತ್ಯಾಗಕ್ಕೆ ಸಿದ್ಧರಾದರೆ?
ಅಮರಾವತಿ, ಮೇ 02: "ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ" ಎಂದು ಕಟ್ಟರ್ ರಾಜಕಾರಣಿಯೊಬ್ಬರು ಹೇಳಿದರೆ ಆ ಮಾತಿಗೆ ಬೇರೆಯದೇ ಅರ್ಥವಿರುತ್ತದೆ! ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೂ ಇದೇ ಮಾತನ್ನು ಹೇಳಿದ್ದಾರೆ. ಹೀಗೆ ತ್ಯಾಗಕ್ಕೆ ಸಿದ್ಧರಾಗುವ ಮೂಲಕ ಸಾಕಷ್ಟು ಅನುಮಾನಗಳಿಗೆ ಅವರೇ ಎಡೆ ಮಾಡಿಕೊಟ್ಟಿದ್ದಾರೆ.
ಹಾಗೆ ನೋಡುವುದಕ್ಕೆ ಹೋದರೆ ಮಹಾಘಟಬಂಧವನ್ನು ಸೃಷ್ಟಿ ಮಾಡುವಲ್ಲಿ ಅತೀ ಹೆಚ್ಚು ಉತ್ಸುಕತೆ ತೋರಿದ್ದು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು. ಹಾಗೆ ಮಹಾಘಟಬಂಧನಕ್ಕಾಗಿ ಪಕ್ಷಗಳನ್ನು ಒಗ್ಗೂಡಿಸುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ತಾವೂ ಪ್ರಧಾನಿಯಾಗಿಬಿಡುವ ಕನಸು ಚಿಗುರೊಡೆಯದೆ ಇರಲಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರು 'ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದಿದ್ದಾರೆ. ಹಾಗೆಯೇ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆಯೂ ಅವರು ಯಾವುದೇ ಅಭಿಪ್ರಾಯ ತಿಳಿಸಿಲ್ಲ.
ಚುನಾವಣೆಯ ನಂತರ ಎಲ್ಲಾ ವಿಪಕ್ಷಗಳೂ ಕೂತು ಆ ಬಗ್ಗೆ ಚಿಂತನೆ ನಡೆಸಿ, ನಿರ್ಧರಿಸುತ್ತೇವೆ ಎಂದಿದ್ದಾರೆ.

ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ!
"ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದನ್ನು ಚುನಾವಣೆಯ ನಂತರ ವಿರೋಧ ಪಕ್ಷಗಳೆಲ್ಲವೂ ಕೂತು ನಿರ್ಧರಿಸಲಿವೆ. ಲೋಕಸಭಾ ಚುನಾವಣೆಗೆ ಇನ್ನೂ ಮೂರು ಹಂತದ ಮತದಾನ ಬಾಕಿ ಇದೆ. ನಂತರ ನಾವು ನಿರ್ಧರಿಸುತ್ತೇವೆ. ನಾನಂತೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ"- ಎನ್ ಚಂದ್ರಬಾಬು ನಾಯ್ಡು

ವಿಧಾನಸಭೆ ಚುನಾವಣೆ
ಕಳೆದ ಏಪ್ರಿಲ್ 11 ರಂದು ಅಂದರೆ ದೇಶದಲ್ಲಿ ಮೊದಲ ಹಂತದ ಚುನಾವಣೆ ನಡೆದಾಗ ಆಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಮತದಾನ ನಡೆದಿತ್ತು. ಆದರೆ ಆಂಧ್ರದಲ್ಲಿ ಟಿಡಿಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ನಾಯ್ಡು ಪಕ್ಷದ ಗೆಲುವು ಸುಲಭವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು.

ಕಾಂಗ್ರೆಸ್ ಜೊತೆಗೂ ಅಷ್ಟಕ್ಕಷ್ಟೆ!
ಕಳೆದ ವರ್ಷ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಟಿಡಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡೀಕೊಂಡು ಚುನಾವಣೆಯನ್ನು ಎದುರಿಸಿದ್ದವು. ಆದರೆ ಟಿಆರ್ ಎಸ್ ನ ಅಲೆಯ ಮುಂದೆ ಆ ಮೈತ್ರಿ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ನಂತರ ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿಯ ಬಗ್ಗೆ ಕಾಂಗ್ರೆಸ್ ಉತ್ಸುಕತೆ ತೋರಿದ್ದರೂ ಟಿಡಿಪಿ ಅದಕ್ಕೆ ಒಲ್ಲೆ ಎಂದಿತ್ತು. ಇದರಿಂದಾಗಿ ಈ ಎರಡು ಪಕ್ಷಗಳ ನಡುವಿನ ಸಂಬಂಧ ಅಷ್ಟಕ್ಕಷ್ಟೆ ಎಂಬಂತಾಗಿದೆ.

ಮಹಾಘಟಬಂಧನದಲ್ಲಿ ಬಿರುಕು ತರುವಂಥ ಪವಾರ್ ಹೇಳಿಕೆ!
ಇತ್ತೀಚೆಗಷ್ಟೆ ಪತ್ರಕರ್ತರೊಂದಿಗೆ ಮಾತನಾಡಿತ್ತಿದ್ದ ಎನ್ ಸಿಪಿ ನಾಯಕ ಶರದ್ ಪವಾರ್, ರಾಹುಲ್ ಗಾಂಧಿ ಅವರಿಗಿಂತ ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು ಉತ್ತಮ ಪ್ರಧಾನಿಯಾಗಬಲ್ಲರು ಎಂಬ ಹೇಳಿಕೆ ನೀಡಿದ್ದರು. ಇದರಿಂದಾಗಿ ಮಹಾಘಟಬಂಧನದ ಪಕ್ಷ-ಪಕ್ಶಃಗಳ ನಡುವಲ್ಲೇ ಬಿರುಕುಂಟಾಗುವ ಲಕ್ಷಣಗಳು ಕಂಡುಬಂದಿದ್ದವು. ಈ ಎಲ್ಲಾ ಬೆಳವಣಿಗೆಗಳಿಗೂ ತೇಪೆ ಹಚ್ಚುವ ಸಲುವಾಗಿ 'ತಾವು ಪ್ರಧಾನಿ ಅಭ್ಯರ್ಥಿಯಲ್ಲ' ಎಂಬ ಹೇಳಿಕೆಯನ್ನು ನಾಯ್ಡು ನೀಡಿದಂತಿದೆ.












Click it and Unblock the Notifications