ಹೀಗೊಂದು ಪ್ರಸ್ತಾಪ: ಹಿಂದೂ ರಾಷ್ಟ್ರವಾದರೆ ಭಾರತ, ವಾರಣಾಸಿಯೇ ರಾಜಧಾನಿ!
ನವದೆಹಲಿ, ಆಗಸ್ಟ್ 15: ಭಾರತವು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಮಧ್ಯೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಒತ್ತಾಯಿಸುವ ಕರಡು ಪ್ರತಿಯೊಂದನ್ನು ವಾರಣಾಸಿಯ ಶಂಕರಾಚಾರ್ಯ ಪರಿಷತ್ತಿಗೆ ಸಂಬಂಧಿಸಿದ ದಾರ್ಶನಿಕರ ವಿಭಾಗವೊಂದು ಸಿದ್ಧಪಡಿಸಿದೆ.
ಈ ಕಾನೂನು ತಜ್ಞರು ಮತ್ತು ಸನಾತನ ಧರ್ಮ ತಜ್ಞರ ಸಹಯೋಗದಲ್ಲಿ, 'ಹಿಂದೂ ರಾಷ್ಟ್ರ ಸಂವಿಧಾನ ನಿರ್ಮಾಣ ಸಮಿತಿ',ಯು ಸಿದ್ಧಪಡಿಸಿರುವ ಕರಡಿನ ಬಗ್ಗೆ ಜನರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. 2023ರಲ್ಲಿ ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಾಘಮೇಳದಲ್ಲಿ ಈ ಕರಡನ್ನು ಮಂಡಿಸಲು ನಿರ್ಧರಿಸಲಾಗಿದೆ. ಈ ಕರಡು ಕುರಿತು ಅಭಿಪ್ರಾಯ ಸಂಗ್ರಹಿಸುವ ಕೆಲಸ ಈಗಾಗಲೇ ಶುರುವಾಗಿದೆ.
ಭಾರತವನ್ನು ಭಾರತವಾಗಿರಲು ಬಿಡದೇ ಹಿಂದೂ ರಾಷ್ಟ್ರವಾಗಿ ಮಾಡಲು ಹೊರಟಿರುವ ಈ ಪ್ರಸ್ತಾವನೆ ಉದ್ದೇಶವೇನು? ಕರಡು ಪ್ರತಿ ಸಿದ್ಧಪಡಿಸಿದ್ದು ಯಾರು ಮತ್ತು ಯಾಕೆ? ಈ ಕರಡು ಪ್ರತಿ ಸಿದ್ಧಪಡಿಸಿರುವುದರ ಹಿಂದಿನ ಕಾರಣವೇನು? ಹಿಂದೂ ರಾಷ್ಟ್ರ ಎಂಬ ಲೆಕ್ಕಾಚಾರದ ಸುತ್ತಮುತ್ತಲೂ ಏನೆಲ್ಲಾ ಲೆಕ್ಕಾಚಾರಗಳು ಅಡಗಿವೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಧರ್ಮ ಸಂಸದ್’ನಲ್ಲಿ ನಿರ್ಣಯ ಅಂಗೀಕಾರ
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ 2022ರ ಫೆಬ್ರವರಿಯಲ್ಲಿ ನಡೆದ ಮಾಘಮೇಳದಲ್ಲಿ 'ಧರ್ಮ ಸಂಸದ್' ಅನ್ನು ಆಯೋಜಿಸಲಾಗಿತ್ತು. ಈ ವೇಳೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ನಿರ್ಣಯವನ್ನು 'ಧರ್ಮ ಸಂಸದ್'ನಲ್ಲಿ ಅಂಗೀಕರಿಸಲಾಯಿತು. ರಾಷ್ಟ್ರದ ರಚನೆಯ ಸಂದರ್ಭದಲ್ಲಿ ಅದಕ್ಕಾಗಿಯೇ 'ಸಂವಿಧಾನ' ರೂಪದಲ್ಲಿ 'ಮಾರ್ಗದರ್ಶಿ'ಯಾಗಿ ಕಾರ್ಯನಿರ್ವಹಿಸುವ ಕರಡನ್ನು ಸಂತರು ಮತ್ತು ಧಾರ್ಮಿಕ ಮುಖಂಡರು ರಚಿಸಬೇಕು ಎಂದು ನಿರ್ಧರಿಸಲಾಯಿತು. ಇದೀಗ ಧಾರ್ಮಿಕ ವಿದ್ವಾಂಸರು, ಕಾನೂನು ತಜ್ಞರು ದಾಖಲೆ ಸಿದ್ಧಪಡಿಸಿದ್ದಾರೆ.
ಶಾಂಭವಿ ಪೀಠಾಧೀಶ್ವರ ಆನಂದ ಸ್ವರೂಪ್ ನೇತೃತ್ವದಲ್ಲಿ ವಿವರವಾದ ದಾಖಲೆಯ ಭಾಗವಾಗಿದೆ. ಈ ಮಾರ್ಗದರ್ಶಿ ಪುಸ್ತಕವು 750 ಪುಟಗಳನ್ನು ಹೊಂದಿದೆ. ಇದರ ಜೊತೆಗೆ ಕರಡಿನಲ್ಲಿ ವಿಷಯಗಳನ್ನು ಸೇರಿಸುವ ಕುರಿತು ಸಾರ್ವಜನಿಕರೊಂದಿಗೆ ವಿವಿಧ ಕ್ಷೇತ್ರಗಳ ವಿದ್ವಾಂಸರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹಿಂದೂ ರಾಷ್ಟ್ರದ ಕರಡು ರಚನೆಯಾಗಿದ್ದು ಏಕೆ?
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಜನರಲ್ಲಿ ಒಮ್ಮತ ಮೂಡಿಸುವುದೇ ಹಿಂದೂ ರಾಷ್ಟ್ರ ಸಂವಿಧಾನ ಸಮಿತಿಯ ಉದ್ದೇಶವಾಗಿದೆ. ಪ್ರಯಾಗರಾಜ್ನಲ್ಲಿ ನಡೆದ ಮಾಘಮೇಳದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರಚಿಸುವ ನಿರ್ಣಯವನ್ನು ಧರ್ಮ ಸಂಸದ್ ಅಂಗೀಕರಿಸಿದೆ. ತದನಂತರದಲ್ಲಿಯೇ ಈ ಸಮಿತಿ ರಚಿಸಲಾಗಿದೆ. ಭಾರತದಲ್ಲಿ ಹಿಂದೂ ಹಕ್ಕುಗಳನ್ನು ರಕ್ಷಿಸಲು ಮತ್ತು ಹಿಂದೂ ರಾಷ್ಟ್ರ ನಿರ್ಮಿಸಬೇಕಿದೆ. ಅದಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ಇದು ಸರಿಯಾದ ಸಮಯ ಎಂದು ನಿರ್ಧರಿಸಲಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ ಸ್ವರೂಪ್, "ನಮ್ಮ ಸಂವಿಧಾನ ರಚನೆಕಾರರ ಮೂಲ ಚೇತನ ಮತ್ತು ಅವರು ರೂಪಿಸಿದ ರೀತಿ ಈಗ ಒಂದೇ ಆಗಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದೇ ಸಂವಿಧಾನ ರಚನೆಕಾರರ ಮೂಲ ಆಶಯವಾಗಿತ್ತು. ಈ ಹಿನ್ನೆಲೆ 300ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲಾಗಿದೆ. ಜಾತ್ಯತೀತ ಪದವನ್ನು ಸೇರಿಸಲಾಯಿತು. ಈಗ ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಆದ್ದರಿಂದ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಕ್ಕೆ ಹೊರಟಿರುವುದು ಸರಿಯಾದ ಸಮಯ," ಎಂದಿದ್ದಾರೆ.

ದೇಶದ ಮುಸ್ಲಿಮರಿಗಿಲ್ಲ ಮತದಾನದ ಹಕ್ಕು!
ಸದ್ಯ 32 ಪುಟಗಳ ಕರಡನ್ನು ಸಿದ್ಧಪಡಿಸಲಾಗಿದೆ. ಆದರೆ ಪ್ರಸ್ತಾವಿತ ಮಾರ್ಗದರ್ಶಿ ಪುಸ್ತಕವು 750 ಪುಟಗಳಾಗಿರುತ್ತದೆ. ಪ್ರಸ್ತುತ ಕರಡಿನಲ್ಲಿ ಹಲವು ಆಶ್ಚರ್ಯಕರ ಸಂಗತಿಗಳಿವೆ. ಈ ಪೈಕಿ ದೆಹಲಿಯ ಬದಲಿಗೆ ವಾರಣಾಸಿಯನ್ನು ಭಾರತದ ರಾಜಧಾನಿಯನ್ನಾಗಿ ಮಾಡುವ ಪ್ರಸ್ತಾವನೆಯೂ ಸೇರಿದೆ. ಕರಡು ತಯಾರಕರ ಪ್ರಕಾರ, ವಾರಣಾಸಿಯು ಸರ್ವಜ್ಞನ ಕೇಂದ್ರವಾಗಿದ್ದು, ಅದನ್ನೇ ಹಿಂದೂ ರಾಷ್ಟ್ರದ ರಾಜಧಾನಿಯನ್ನಾಗಿ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಈ ರಾಜಧಾನಿ ಪಟ್ಟಿಯಲ್ಲಿ ಉಜ್ಜಯಿನಿ ಹೆಸರೂ ಕೂಡ ಕೇಳಿ ಬಂದಿದ್ದು, ಇನ್ನೂ ಅಂತಿಮಗೊಂಡಿಲ್ಲ.
ಇನ್ನು ಕರಡಿನಲ್ಲಿ ಮತದಾನದ ಬಗ್ಗೆ ಉಲ್ಲೇಖಿಸಿರುವುದು ಪ್ರಮುಖ ವಿಷಯವಾಗಿದೆ. ಪ್ರಸ್ತುತ ಕರಡು ಪ್ರತಿಯ ಪ್ರಕಾರ, ಹಿಂದೂಗಳಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಇಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಭಾರತದಲ್ಲಿ ಮತದಾನದ ಹಕ್ಕುಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಹಕ್ಕುಗಳನ್ನು ಪಡೆಯುತ್ತಾರೆ. ಶಿಕ್ಷಣ ಪಡೆದ ನಂತರ ಉದ್ಯೋಗ ಮತ್ತು ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ. ಆದರೆ ಅವರಿಗೆ ಮತದಾನದ ಹಕ್ಕು ಮಾತ್ರ ಇರುವುದಿಲ್ಲ. ಅಂದರೆ, ಸಿಖ್, ಬೌದ್ಧ, ಜೈನರು ಸೇರಿದಂತೆ ಹಿಂದೂಗಳಿಗೆ ಮಾತ್ರ ಮತದಾನ ಮಾಡಬಹುದು.
"ಇತರ ದೇಶಗಳಲ್ಲಿಯೂ ಇದೇ ಪದ್ಧತಿಯು ಜಾರಿಯಲ್ಲಿದೆ, ಅಂದ ಮೇಲೆ ಭಾರತದಲ್ಲೆ ಏಕೆ ಆಗಬಾರದು? ಇಸ್ಲಾಮಿಕ್ ದೇಶಗಳು ಅಲ್ಲಿ ವಾಸಿಸುವ ಹಿಂದೂಗಳಿಗೆ ಮತದಾನದ ಹಕ್ಕನ್ನು ನೀಡುತ್ತವೆಯೇ?," ಎಂದು ಸ್ವಾಮಿ ಆನಂದ್ ಸ್ವರೂಪ್ ಪ್ರಶ್ನಿಸಿದ್ದಾರೆ.

ಕರಡು ರಚನಾ ಸಮಿತಿಯಲ್ಲಿ 30 ಸದಸ್ಯರ ತಂಡ
ಶಿಕ್ಷಣ, ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆಯಂತಹ ವಿಷಯಗಳನ್ನು ಕರಡು ಒಳಗೊಂಡಿದೆ. ಕೃಷಿಯನ್ನು ತೆರಿಗೆ ಮುಕ್ತಗೊಳಿಸುವುದು ಹಾಗೂ ಗುರುಕುಲ ಕಡ್ಡಾಯಗೊಳಿಸಲು ಲೆಕ್ಕ ಹಾಕಿಕೊಳ್ಳಲಾಗುತ್ತಿದೆ. ಇದಲ್ಲದೆ, ವಾರಣಾಸಿಯಲ್ಲಿ 'ಧರ್ಮ ಸಂಸದ್' ಮಾಡಲು ಮತ್ತು ಬ್ರಿಟಿಷರ ಕಾಲದ ಎಲ್ಲಾ ಕಾನೂನುಗಳನ್ನು ರದ್ದುಗೊಳಿಸಲು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಯಾಗರಾಜ್ನಲ್ಲಿ ನಡೆದ ಮಾಘಮೇಳದ ನಂತರ ರಚಿಸಲಾದ ಈ ಸಮಿತಿಯಲ್ಲಿನ 30 ಸದಸ್ಯರು ಈ ಕರಡನ್ನು ಸಿದ್ಧಪಡಿಸಿದ್ದಾರೆ. ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್, ಕಾಮೇಶ್ವರ ಉಪಾಧ್ಯಾಯ, ಸುಪ್ರೀಂ ಕೋರ್ಟ್ ವಕೀಲ ಬಿಎನ್ ರೆಡ್ಡಿ, ರಕ್ಷಣಾ ತಜ್ಞ ಆನಂದ್ ವರ್ಧನ್, ವಿಶ್ವ ಹಿಂದೂ ಒಕ್ಕೂಟದ ಅಧ್ಯಕ್ಷ ಅಜಯ್ ಸಿಂಗ್ ಮತ್ತು ಸನಾತನ ಧರ್ಮ ತಜ್ಞ ಚಂದ್ರಮಣಿ ಮಿಶ್ರಾ ಇದ್ದಾರೆ. ಕರಡಿನ ಮುಖಪುಟದಲ್ಲಿ 'ಅಖಂಡ ಭಾರತ'ದ ಚಿತ್ರವಿದ್ದು, ಅದರಲ್ಲಿ ಬಾಂಗ್ಲಾದೇಶ, ಪಾಕಿಸ್ತಾನವನ್ನೂ ಸೇರಿಸಲಾಗಿದೆ.

2023ರ ಹೊತ್ತಿಗೆ 350 ಪುಟಗಳ ಕರಡು ಪ್ರತಿ ಪೂರ್ಣ
ಈಗಾಗಲೇ ರಚನೆಯಾಗಿರುವ ಕರಡನ್ನು ಎಲ್ಲಾ ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು ಅನುಮೋದಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧರವಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಂಭವಿ ಪೀಠಾಧೀಶ್ವರ ಆನಂದ್ ಸ್ವರೂಪ್, "ಸದ್ಯಕ್ಕೆ ಈ ಅಂಶಗಳು ಚರ್ಚೆಗೆ ಗ್ರಾಸವಾಗಿವೆ. ಅದನ್ನು ಜನರಲ್ಲಿ ತೆಗೆದುಕೊಂಡು ಹೋಗುತ್ತೇವೆ. ಸನಾತನ ಧರ್ಮದ ಎಲ್ಲ ಸಂಸ್ಥೆಗಳನ್ನೂ ಸಂಪರ್ಕಿಸುತ್ತಿದ್ದೇವೆ. ಅಖಾರಾ ಪರಿಷತ್ ಮತ್ತು ಅಂತಹ ಸಂಘಟನೆಗಳೊಂದಿಗೂ ಮಾತನಾಡಿ ಚರ್ಚಿಸುತ್ತೇವೆ.
ಇಡೀ ದೇಶದೊಂದಿಗೆ ಚರ್ಚಿಸಿ ಜನರ ಅಭಿಪ್ರಾಯ ತಿಳಿದು ಸರ್ಕಾರದ ಬಳಿ ಹೋಗುತ್ತೇವೆ. 2023ರ ಮಾಘಮೇಳದ ಹೊತ್ತಿಗೆ 300 ಪುಟಗಳ ಕರಡು ಪ್ರತಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ," ಎಂದಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications