ದಲಿತ ಜೀವಗಳೂ ಮುಖ್ಯವೇ? ಬಿಹಾರ ಚುನಾವಣೆ ಮೇಲೆ ಹತ್ರಾಸ್ ಘಟನೆ ಪ್ರಭಾವ ಹೇಗಿರಲಿದೆ?

ಪಟ್ನಾ, ಅಕ್ಟೋಬರ್ 3: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶವನ್ನು ತಲ್ಲಣಗೊಳಿಸಿದೆ. ಅತ್ಯಾಚಾರ ಘಟನೆಗಿಂತಲೂ ಪೊಲೀಸರು ಹಾಗೂ ಅಧಿಕಾರಿಗಳು ಆ ಕುಟುಂಬದೊಂದಿಗೆ ನಡೆದುಕೊಂಡಿರುವ ರೀತಿ ಮತ್ತಷ್ಟು ಅಮಾನುಷವಾಗಿತ್ತು. ಈ ಘಟನೆ ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು 'ಇಂಡಿಯಾ ಟುಡೆ' ವರದಿ ಹೇಳಿದೆ.

1977ರಲ್ಲಿ ಬಿಹಾರದ ಬೆಲ್ಚಿ ಗ್ರಾಮದಲ್ಲಿ ಮೇಲ್ವರ್ಗದ ಜಮೀನ್ದಾರರು ಅನೇಕ ದಲಿತರನ್ನು ಹತ್ಯೆ ಮಾಡಿದ್ದರು. ತುರ್ತು ಪರಿಸ್ಥಿತಿ ಬಳಿಕ ಅಧಿಕಾರ ಕಳೆದುಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇದರಲ್ಲಿ ರಾಜಕೀಯ ನಡೆಯನ್ನು ಗ್ರಹಿಸಿದರು. ರೈಲು, ಜೀಪ್ ಮತ್ತು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸಿದರು. ಕೊನೆಗೆ ಭಾರಿ ಮಳೆಯ ನಡುವೆ ನೀರು ಕೆಸರಿನಿಂದ ತುಂಬಿದ್ದ ರಸ್ತೆಯಲ್ಲಿ ಸಾಗಲು ಆನೆಯನ್ನೇರಿ ಕುಳಿತರು. ಸಮುದಾಯವನ್ನು ಉದ್ದೇಶಿಸಿ ಅವರು ಆ ಸಂದರ್ಭದಲ್ಲಿ ಮಾಡಿದ ಭಾಷಣ ಇಡೀ ಚಿತ್ರಣವನ್ನೇ ಬದಲಿಸಿತು.

ಸುಮಾರು ನಾಲ್ಕು ದಶಕದ ಬಳಿಕ ಇಂದಿರಾ ಗಾಂಧಿ ಅವರ ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಹತ್ರಾಸ್ ಜಿಲ್ಲೆಯ ಗ್ರಾಮದಲ್ಲಿ ನಾಲ್ವರು ಮೇಲ್ಜಾತಿಯ ವ್ಯಕ್ತಿಗಳಿಂದ ಅತ್ಯಾಚಾರಕ್ಕೆ ಒಳಗಾಗಿ ಬಲಿಯಾದ ದಲಿತ ಹೆಣ್ಣುಮಗಳ ಕುಟುಂಬವನ್ನು ಭೇಟಿ ಮಾಡಲು ಮುಂದಾದಾಗ ಉತ್ತರ ಪ್ರದೇಶದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.

ಪೊಲೀಸರ ತಳ್ಳಾಟದಲ್ಲಿ ರಾಹುಲ್ ಗಾಂಧಿ ನೆಲಕ್ಕೆ ಬಿದ್ದದ್ದು ದೊಡ್ಡ ಸುದ್ದಿಯಾಯಿತು. ಮರುದಿನ ಪ್ರಿಯಾಂಕಾ ಗಾಂಧಿ ದೆಹಲಿಯ ವಾಲ್ಮೀಕಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇಶದ ಪ್ರತಿಯೊಬ್ಬ ಮಹಿಳೆಯೂ ಹತ್ರಾಸ್ ಮಗಳ ಸಾವಿಗೆ ಸರ್ಕಾರವನ್ನು ಪ್ರಶ್ನಿಸಬೇಕು ಮತ್ತು ನ್ಯಾಯ ಕೇಳಬೇಕೆಂದು ಕರೆ ನೀಡಿದರು. ಮುಂದೆ ಓದಿ.

ವಿಭಿನ್ನ ಘಟ್ಟ, ಘಟನೆ

ವಿಭಿನ್ನ ಘಟ್ಟ, ಘಟನೆ

ಈ ಎರಡೂ ವಿಭಿನ್ನ ಕಾಲಘಟ್ಟದಲ್ಲಿ ನಡೆದ ಘಟನೆಗಳು. ಈಗ ಸಾಮಾಜಿಕ ಜಾಲತಾಣ ಹಾಗೂ ಇತರೆ ವಿವಿಧ ಸುದ್ದಿ ಪ್ರಕಾರಗಳು ಪ್ರಭಾವಶಾಲಿಯಾಗಿವೆ. ಗಾಂಧಿ ಕುಡಿಗಳನ್ನು ಅವರ ಅಜ್ಜಿಯೊಂದಿಗೆ ಹೋಲಿಸುವುದು ತರವಲ್ಲ. ಹಾಗೆಯೇ ಹತ್ರಾಸ್ ಇರುವುದು ಬಿಹಾರದಲ್ಲಿ ಅಲ್ಲ. ಆದರೆ ಬಿಹಾರ, ಉತ್ತರ ಪ್ರದೇಶದ ನೆರೆಯ ರಾಜ್ಯ. ಅಕ್ಟೋಬರ್-ನವೆಂಬರ್‌ನಲ್ಲಿ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2014ರಲ್ಲಿ ದೆಹಲಿಯಲ್ಲಿ ನರೇಂದ್ರ ಮೋದಿ ಗದ್ದುಗೆಗೆ ಏರಿದಾಗಿನಿಂದಲೂ ವಿರೋಧ ಪಕ್ಷಗಳು ತಮ್ಮ ರಾಜಕೀಯ ಗಳಿಗೆಗಾಗಿ ನಿರಂತರವಾಗಿ ಹುಡುಕಾಡುತ್ತಿದ್ದವು.

ಕಿಡಿ ಹಚ್ಚಿಸಿದ ಹತ್ರಾಸ್ ಘಟನೆ

ಕಿಡಿ ಹಚ್ಚಿಸಿದ ಹತ್ರಾಸ್ ಘಟನೆ

ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ವರ್ಷದ ದಲಿತ ಮಹಿಳೆ ಸೆ. 29ರಂದು ಮೃತಪಟ್ಟಿದ್ದು ಮತ್ತು ಪೊಲೀಸರು ಮಧ್ಯರಾತ್ರಿ ತರಾತುರಿಯಲ್ಲಿ ಆಕೆಯ ಅಂತ್ಯಸಂಸ್ಕಾರ ನಡೆಸಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಎಡೆಮಾಡಿಕೊಟ್ಟಿದೆ.

ಹತ್ರಾಸ್ ಘಟನೆ ಅತ್ಯಾಚಾರ ಮತ್ತು ಸಾವಿಗಷ್ಟೇ ಸೀಮಿತವಾಗಿಲ್ಲ. ಅಧಿಕಾರಶಾಹಿಯ ದರ್ಪ, ದೌರ್ಜನ್ಯದ ಮತ್ತಷ್ಟು ಮುಖಗಳನ್ನು ಅನಾವರಣಗೊಳಿಸಿದೆ. ಹತ್ರಾಸ್ ಘಟನೆ ಆಕ್ರೋಶ, ಕುದಿ ಉತ್ತರ ಪ್ರದೇಶದ ಗಡಿಯಾಚೆಗೆ ದಾಟುವುದಿಲ್ಲವೇ? ಖಂಡಿತಾ ಅದರ ಪರಿಣಾಮ ಕಾಣಿಸಲಿದೆ. ಮುಖ್ಯವಾಗಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ.

ಎನ್‌ಡಿಎ ವರ್ಚಸ್ಸಿಗೆ ಧಕ್ಕೆ

ಎನ್‌ಡಿಎ ವರ್ಚಸ್ಸಿಗೆ ಧಕ್ಕೆ

ಬಿಹಾರ ವಿಧಾನಸಭೆ ಚುನಾವಣೆಯ ಒಟ್ಟಾರೆ ಫಲಿತಾಂಶವನ್ನು ಹತ್ರಾಸ್ ಘಟನೆ ಬದಲಿಸುವಷ್ಟು ಶಕ್ತವಾಗದೆ ಹೋಗಬಹುದು. ಆದರೆ, ಚುನಾವಣೆಯ ಕಾರ್ಯಸೂಚಿಯನ್ನು ಖಂಡಿತವಾಗಿ ಬದಲಿಸಲಿದೆ. ಹತ್ರಾಸ್ ಹೀನ ಘಟನೆಯನ್ನು ಅಲ್ಲಿನ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ನಿಭಾಯಿಸಿದ ಬಗೆಯು, ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಬಿಜೆಪಿಯನ್ನು ಒಳಗೊಂಡ ಆಡಳಿತಾರೂಢ ಎನ್‌ಡಿಎಯ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲಿದೆ. ಬಿಹಾರದಲ್ಲಿ ಒಟ್ಟು ಮತಗಳಲ್ಲಿ ದಲಿತ ಓಟುಗಳ ಸಂಖ್ಯೆ ಶೇ 17ರಷ್ಟಿದೆ. ಹತ್ರಾಸ್ ಘಟನೆಯ ವಿರುದ್ಧ ಬಿಹಾರದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ.

'ಹತ್ರಾಸ್ ವಿವಾದ ಬಿಹಾರ ವಿಧಾನಸಭೆ ಚುನಾವಣೆ ಮೇಲೆ ಕೆಲವು ಬಗೆಯ ಪ್ರಭಾವ ಬೀರುತ್ತದೆ. ಇದು ಎನ್‌ಡಿಎಯ ವರ್ಚಸ್ಸಿಗೆ ಹಾನಿ ಮಾಡಬಹುದು. ಉತ್ತಮ ಆಡಳಿತ ಮತ್ತು ವಿಭಿನ್ನ ಆಡಳಿತದ ಕುರಿತಾದ ಎನ್‌ಡಿಎ ಹೇಳಿಕೆಗಳನ್ನು ಒರೆಗೆ ಹಚ್ಚುವಂತೆ ಮಾಡಲಿದೆ ಎಂದು ಬಿಹಾರದ ರಾಜಕೀಯ ವಿಶ್ಲೇಷಕ ಎನ್‌ಕೆ ಚೌಧರಿ ಹೇಳಿದ್ದಾರೆ.

ಮಹಾ ಮೈತ್ರಿಕೂಟಕ್ಕೆ ಅಸ್ತ್ರ

ಮಹಾ ಮೈತ್ರಿಕೂಟಕ್ಕೆ ಅಸ್ತ್ರ

ಅಷ್ಟೇ ಅಲ್ಲ, ಹತ್ರಾಸ್ ಘಟನೆಯು ಎನ್‌ಡಿಎ ವಿರುದ್ಧದ ತಂತ್ರಗಳನ್ನು ಹೆಣಿಯುತ್ತಿರುವ ಮಹಾಘಟಬಂಧನ ಮೈತ್ರಿ ಕೂಟಕ್ಕೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಬಿಜೆಪಿಯು ದಲಿತ ವಿರೋಧಿ, ಮಹಿಳಾ ವಿರೋಧಿ ಮತ್ತು ಮೇಲ್ಜಾತಿಯ ಜನರ ಪರ ಎಂದು ಬಿಂಬಿಸಲು ಅವಕಾಶ ಸಿಕ್ಕಂತಾಗಿದೆ. ಇದುವರೆಗಿನ ನಿತೀಶ್ ಕುಮಾರ್ ಅವರ ಚುನಾವಣಾ ಗೆಲುವುಗಳಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎನ್ನುವುದನ್ನು ಮರೆಯುವಂತಿಲ್ಲ.

ದಲಿತ ಮತಗಳ ಓಲೈಕೆ

ದಲಿತ ಮತಗಳ ಓಲೈಕೆ

ಉತ್ತರ ಪ್ರದೇಶದಲ್ಲಿರುವಂತೆ ಬಿಹಾರದಲ್ಲಿ ದಲಿತರು ಗುಂಪುಗಳಲ್ಲಿ ಸೇರಿಕೊಂಡಿಲ್ಲ. ಅವರು ಬ್ಲಾಕ್‌ಗಳಲ್ಲಿ ಹಂಚಿಹೋಗಿದ್ದಾರೆ. ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ಎಚ್‌ಎಎಂ ನಾಯಕ ಜಿತನ್ ರಾಮ್ ಮಾಂಝಿ, ಕಾಂಗ್ರೆಸ್‌ನ ಅಶೋಕ್ ಚೌಧರಿ ಮತ್ತು ಆರ್‌ಜೆಡಿಯ ಶ್ಯಾಮ್ ರಜಾಕ್ ನೇತೃತ್ವದಲ್ಲಿ ಬಿಹಾರದ ದಲಿತ ಮತಗಳು ಹಂಚಿಹೋಗುತ್ತಿವೆ. ಆದರೆ ಚುನಾವಣೆ ದಿಕ್ಕನ್ನು ಇದು ಬದಲಿಸಬಹುದು.

ದಲಿತರು ಮತ್ತು ಮಹಿಳೆಯ ಸುರಕ್ಷತೆಯ ವಿಚಾರಗಳನ್ನು ವಿರೋಧ ಪಕ್ಷಗಳು ಪ್ರಮುಖವಾಗಿ ಬಿಂಬಿಸುವ ಸಾಧ್ಯತೆ ಇದೆ. ಹಾಗೆಯೇ ದಲಿತ ಅಭ್ಯರ್ಥಿಗಳನ್ನು ಹೆಚ್ಚು ಕಣಕ್ಕಿಳಿಸುವ ಬಗ್ಗೆಯೂ ಗಮನ ಹರಿಸಬಹುದು. ಆದರೆ ಎನ್‌ಡಿಎಗೆ ದಲಿತ ನಾಯಕರಾದ ಚಿರಾಗ್ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಝಿ ಇಲ್ಲಿ ದಲಿತ ಮತಗಳನ್ನು ಉಳಿಸಿಕೊಳ್ಳಲು ನೆರವಾಗಬಹುದು.

ಬಿಜೆಪಿ ವಿರುದ್ಧ ಅಭಿಪ್ರಾಯ

ಬಿಜೆಪಿ ವಿರುದ್ಧ ಅಭಿಪ್ರಾಯ

ಹತ್ರಾಸ್ ಒಂದು ಸೂಕ್ಷ್ಮ ಸಂಗತಿ. ಅದು ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಹಾರದ ಜನತೆಯ ಮೇಲೆ ಪರಿಣಾಮ ಬೀರಿದೆ. ಎಫ್‌ಐಆರ್ ದಾಖಲಿಸುವುದರಲ್ಲಿನ ವಿಳಂಬ, ಆತುರದಲ್ಲಿ ಮೃತದೇಹ ಸುಟ್ಟಿದ್ದು ಮತ್ತು ರಾಜಕೀಯ ಪ್ರತಿಭಟನೆಗಳನ್ನು ಹತ್ತಿಕ್ಕಲು ಬಲ ಪ್ರಯೋಗ ಮಾಡಿದ್ದು ಬಿಜೆಪಿ ವಿರುದ್ಧ ನಕಾರಾತ್ಮಕ ಅಲೆ ಮೂಡಿಸಿದೆ. ಇದರಿಂದ ಜೆಡಿಯು ಕೂಡ ಅಪವಾದ ಅಂಟಿಸಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಖಾಸಗೀಕರಣವೂ ಬಿಹಾರದಲ್ಲಿನ ದಲಿತರಿಗೆ ದೊಡ್ಡ ಸಂಗತಿಯಾಗಿದೆ' ಎಂದು ಬಿಜೆಪಿಯ ಮಾಜಿ ಸಂಸದ, ಹಾಲಿ ಕಾಂಗ್ರೆಸ್ ವಕ್ತಾರ ಉದಿತ್ ರಾಜ್ ಹೇಳಿದ್ದಾರೆ.

ದಲಿತರ ಬಗ್ಗೆ ಪಕ್ಷಗಳಿಗೆ ಆಸಕ್ತಿ ಇಲ್ಲ

ದಲಿತರ ಬಗ್ಗೆ ಪಕ್ಷಗಳಿಗೆ ಆಸಕ್ತಿ ಇಲ್ಲ

ಆದರೆ, ಪಟ್ನಾದ ಎಕೆ ಸಿನ್ಹಾ ಸಾಮಾಜಿಕ ಅಧ್ಯಯನ ಸಂಸ್ಥೆಯ ಡಿಎಂ ದಿವಾಕರ್ ಇದನ್ನು ಅಲ್ಲಗಳೆಯುತ್ತಾರೆ. ಬಿಹಾರದಲ್ಲಿನ ರಾಜಕೀಯ ಪಕ್ಷಗಳು ಅಧಿಕಾರ ಹಂಚಿಕೊಳ್ಳುವುದರ ಬಗ್ಗೆ ಮಾತ್ರ ಆಸಕ್ತಿ ಹೊಂದಿವೆ. ದಲಿತರ ಸಮಸ್ಯೆಗಳ ಬಗ್ಗೆ ಯಾರಿಗೂ ಯೋಚನೆ ಇಲ್ಲ. ದಲಿತರಿಗೆ ನ್ಯಾಯ ಸಿಕ್ಕಿರಬಹುದು. ವಿವಿಧ ಆಯೋಗಗಳ ಶಿಫಾರಸುಗಳನ್ನು ಜಾರಿ ಮಾಡಲಾಗಿದೆ. ಭೂ ಸುಧಾರಣೆಗಳಾಗಿವೆ ಅವರಿಗೆ ಮನೆಗಳನ್ನು ಕಟ್ಟಿಕೊಡಲಾಗಿದೆ ಎನ್ನುತ್ತಾರೆ ಅವರು.

'ಶಿಕ್ಷಣ, ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕತೆ ವಿಚಾರಗಳಲ್ಲಿ ದಲಿತರು ಈಗಲೂ ತಳಮಟ್ಟದಲ್ಲಿದ್ದಾರೆ. ಏಕೆಂದರೆ ಅವರಿಗೆ ನೀಡುತ್ತಿರುವುದು ಬಾಯಿ ಮಾತಿನ ಘೋಷಣೆಯಷ್ಟೇ. ಪ್ರತಿ ರಾಜಕೀಯ ಪಕ್ಷವೂ ದಲಿತ ಮೋರ್ಚಾ ಘಟಕ ಹೊಂದಿದೆ. ಆದರೆ ಬಿಜೆಪಿ ಮತ್ತು ಇತರೆ ಪಕ್ಷಗಳು ದಲಿತರನ್ನು ಹಿಂದೂ ಮತಗಳಾಗಿ ಶೋಷಿಸುತ್ತಿವೆ. ಅವರಿಗೆ ದಲಿತ ಮುಖಗಳು ಬೇಕೇ ವಿನಾ, ದಲಿತ ನಾಯಕರಲ್ಲ' ಎಂದು ದಿವಾಕರ್ ಹೇಳಿದ್ದಾರೆ.

ಹಾದಿ ತಪ್ಪಿದ ಚಳವಳಿ

ಹಾದಿ ತಪ್ಪಿದ ಚಳವಳಿ

ಬಿಹಾರದಲ್ಲಿ ದಲಿತ ಚಳವಳಿಗಳನ್ನು ಕಂಡ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ 1991ರ ನಂತರ ಎಡ ಚಳವಳಿಗಳು ದುರ್ಬಲಗೊಂಡಂತೆ ಅವರ ಸ್ಥಿತಿ ಮತ್ತಷ್ಟು ಹೀನಾಯವಾಗುತ್ತಾ ಹೋಗಿದೆ. ಉದಾರೀಕರಣದ ಪ್ರಭಾವದಡಿ ಸಾರ್ವಜನಿಕ ನೀತಿಗಳು ಬಡವರ ವಿರೋಧಿಯಾಗಿದೆ. ಬಡಜನರಲ್ಲಿ ಹೆಚ್ಚಿನವರು ದಲಿತರು. ಅವರಿಗೆ ಹೆಚ್ಚು ಹಾನಿಯಾಗಿದೆ. ಖಾಸಗಿ ಸಾರ್ವಜನಿಕ ವಲಯಗಳ ಸಾವಿನಿಂದಾಗಿ ಉದ್ಯೋಗ ಮತ್ತು ಮೀಸಲಾತಿಗಳೇ ಇಲ್ಲದಂತಾಗಿದೆ. ಹೀಗಾಗಿ ಇಲ್ಲಿ ಹತ್ರಾಸ್ ಪ್ರಕರಣ ಹಾಗೂ ದಲಿತರ ಇತರೆ ಸಮಸ್ಯೆಗಳು ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದು ಆಸಕ್ತಿ ಮೂಡಿಸಿದೆ ಎಂದು ಇಂಡಿಯಾ ಟುಡೆ ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+