Hanuma Fala: ಕ್ಯಾನ್ಸರ್ ಪೀಡಿತರಿಗೆ ರಾಮಬಾಣ ಹನುಮಫಲ
ನಮ್ಮನ್ನು ಕಾಡುವ ಬಹುತೇಕ ಕಾಯಿಲೆಗಳಿಗೆ ಪ್ರಕೃತಿಯಲ್ಲಿಯೇ ಮದ್ದಿದೆ. ನಾವು ತಿನ್ನುವ ಸೊಪ್ಪು, ಗೆಡ್ಡೆ, ಹಣ್ಣು ತರಕಾರಿಗಳಲ್ಲಿಯೇ ರೋಗವನ್ನು ತಡೆಗಟ್ಟುವ ಔಷಧೀಯ ಗುಣವಿದೆ. ಹೀಗಾಗಿ ಯಾವ ಹಣ್ಣು ತರಕಾರಿಗಳನ್ನು ಸೇವಿಸಿದರೆ ಯಾವ ರೋಗಕ್ಕೆ ಮದ್ದಾಗುತ್ತದೆ ಎಂಬುದನ್ನು ಅರಿತು ಅಂತಹವುಗಳನ್ನು ಸೇವಿಸುವುದು ಜಾಣತನವಾಗುತ್ತದೆ. ಈಗೀಗ ಹೆಚ್ಚಿನವರನ್ನು ಕಾನ್ಸರ್ ಬಲಿತೆಗೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣವಾಗುತ್ತಿರುವುದು ಕಲಬೆರಕೆಯ ಆಹಾರ ಪದಾರ್ಥಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
ಕ್ಯಾನ್ಸರ್ ಕಾರಕವನ್ನು ನಮ್ಮ ದೇಹದಿಂದ ತೊಡೆಯ ಬೇಕಾದರೆ ಗುಣಮಟ್ಟದ ಆಹಾರ ಪದಾರ್ಥಗಳ ಸೇವನೆ ಬಹುಮುಖ್ಯವಾಗಿದೆ. ಆದ್ದರಿಂದ ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಇರುವ ಮಾರ್ಗವೆಂದರೆ ಹನುಮಫಲ ಹಣ್ಣಿನ ಸೇವನೆಯಾಗಿದೆ. ಬಹುಶಃ ಈ ಹಣ್ಣು ಎಲ್ಲ ಹಣ್ಣುಗಳಂತೆ ಮಾರುಕಟ್ಟೆಯಲ್ಲಿ ಸಿಗುವುದು ಕಷ್ಟವಾಗಿದೆ. ಹೀಗಾಗಿ ಎಲ್ಲರಿಗೂ ಎಟಕುವಂತೆ ಮಾಡುವುದು ಬಹು ಮುಖ್ಯವಾಗಿದೆ. ಇದರ ಕೃಷಿಗೆ ಉತ್ತೇಜನ ನೀಡುವ ಪ್ರಯತ್ನಗಳು ಸಮರೋಪಾದಿಯಲ್ಲಿ ಆಗಬೇಕಾಗಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ರಾಮಫಲ, ಸೀತಾಫಲಗಳು ಸಿಗುತ್ತವೆ. ಆದರೆ ಹನುಮಫಲ ಸಿಗುವುದು ವಿರಳವಾಗಿದೆ. ಇದರಲ್ಲಿ ಔಷಧೀಯ ಗುಣಗಳು ಹೆಚ್ಚು ಇರುವ ಕಾರಣದಿಂದಾಗಿ ಬೇಡಿಕೆಗಳು ಕೂಡ ಜಾಸ್ತಿಯೇ... ಬರೀ ಹಣ್ಣಿನಲ್ಲಿ ಮಾತ್ರವಲ್ಲದೆ, ಎಲೆಗಳು ಕೂಡ ಉಪಯೋಗಕ್ಕೆ ಬರುವುದರಿಂದ ಇದು ಬಹುಪಯೋಗಿ ಆಗಿರುವುದಂತು ನಿಜ.
ಕ್ಯಾನ್ಸರ್ ರೋಗಕ್ಕೂ ರಾಮಬಾಣ ಎನ್ನುವುದು ಜನಜನಿತವಾಗಿದ್ದು, ಇದನ್ನು ಬೆಳೆಯುವ ಪ್ರಯತ್ನವನ್ನು ಹಲವರು ಮಾಡುತ್ತಿದ್ದಾರೆ. ಈಗಾಗಲೇ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಬಳಿ ಹೆಗ್ಗವಾಡಿಪುರ ಗ್ರಾಮದಲ್ಲಿ ವಾಸವಾಗಿರುವ ಪ್ರಗತಿ ಪರ ರೈತ ಮಹೇಶ್ ಕುಮಾರ್ ಅವರು ಆ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.

ಹಣ್ಣಿನಲ್ಲಿದೆ ರೋಗ ನಿರೋಧ ಶಕ್ತಿ
ಈಗಾಗಲೇ ಇವರ ಜಮೀನಿನಲ್ಲಿರುವ ಗಿಡದ ಎಲೆ ಹಣ್ಣನ್ನು ಸ್ಥಳೀಯರಲ್ಲದೆ, ದೂರದ ರಾಜ್ಯದಿಂದಲೂ ಬಂದು ತೆಗೆದುಕೊಂಡು ಹೋಗಿರುವುದು ವಿಶೇಷವಾಗಿದೆ. ಈ ಹಣ್ಣು ಸೀತಾಫಲ ಮತ್ತು ರಾಮಫಲಕ್ಕಿಂತಲೂ ಗಾತ್ರದಲ್ಲಿ ಇದು ಹಿರಿದಾಗಿರುತ್ತದೆ. ಮೂಲತಃ ದಕ್ಷಿಣ ಅಮೇರಿಕಾದ ಹಣ್ಣು ಎಂದು ಹೇಳಲಾಗುತ್ತಿದೆ. ಇದರಲ್ಲಿ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಔಷಧೀಯ ಗುಣವಲ್ಲದೆ, ಆರೋಗ್ಯಕಾರಿ ಗುಣಗಳಿದ್ದು ಹಲವು ರೋಗಗಳಿಗೂ ಇದು ಉಪಯುಕ್ತವಾಗಿದೆ. ಈ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆಯಂತೆ.
ಹಣ್ಣನ್ನು ಸೇವಿಸುವುದರಿಂದ ಅದರಲ್ಲಿರುವ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್, ಪ್ರತಿಜೀವಕ ಗುಣಗಳಲ್ಲದೆ, ವಿಟಮಿನ್ ಸಿ, ಪೊಟ್ಯಾಷಿಯಮ್, ಪ್ರೋಟೀನ್, ಮೆಗ್ನೀಷಿಯಮ್, ಕಬ್ಬಿಣ, ಫೋಲೇಟ್, ಫೈಬರ್ ಮೊದಲಾದ ಜೀವಸತ್ವಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಇದರಲ್ಲಿ ವಿಟಮಿನ್-ಸಿ ಹೇರಳವಾಗಿರುವುದರಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಾರಣವಾಗಿದೆ. ಅಷ್ಟೇ ಅಲ್ಲದೆ ದೇಹಕ್ಕೆ ತಗಲುವ ಸೋಂಕಿನ ತಡೆಗೂ ಸಹಕಾರಿಯಾಗಿದೆ.

ಹನುಮಫಲ ಎಲ್ಲೆಡೆ ಬೆಳೆಯುವಂತಾಗಬೇಕು
ಹಣ್ಣು ಎಲೆ ಎಲ್ಲವೂ ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿದ್ದು ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇನ್ನು ಹೆಣ್ಣು ಮಕ್ಕಳನ್ನು ಕಾಡುವ ಮೂತ್ರ ಸೋಂಕಿನ ಸಮಸ್ಯೆ ನಿವಾರಣೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಮೂತ್ರ ಸೋಂಕು ಹೆಣ್ಣು ಮಕ್ಕಳನ್ನು ಕಾಡುತ್ತಿರುತ್ತದೆ. ಇದನ್ನು ಸೇವಿಸುವುದರಿಂದ ಮೂತ್ರ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸೋಂಕು ತಗುಲದಂತೆ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಹಣ್ಣನ್ನು ಸೇವಿಸುತ್ತಾ ಬಂದಿದ್ದೇ ಆದರೆ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವುದರೊಂದಿಗೆ ಮಲಬದ್ಧತೆ ಮತ್ತು ಅಜೀರ್ಣವನ್ನು ತಡೆಯುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಹನುಮಫಲವು ರೀತಿಯಲ್ಲಿ ಮನುಷ್ಯರಿಗೆ ಸಹಕಾರಿಯಾಗಿದ್ದು, ಇದರ ಸೇವನೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಮುಂದಾಗಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ ಇದನ್ನು ಬೆಳೆಯಲು ರೈತರಿಗೆ ಉತ್ತೇಜನ ನೀಡಬೇಕಿದೆ. ಆಗ ಮಾತ್ರ ಎಲ್ಲರ ಕೈಗೂ ಸಿಗುವುದಲ್ಲದೆ, ಇದನ್ನು ಸೇವಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.












Click it and Unblock the Notifications