ಸ್ನೇಹವೇ ಅಮೂಲ್ಯ ಕೊಡುಗೆ....: ಶ್ರೀರಾಮುಲು ತಬ್ಬಿದ ಗಾಲಿ ರೆಡ್ಡಿ
ಇಂದು ಸ್ನೇಹಿತರ ದಿನ. ನಮ್ಮ ಬದುಕಿಗೊಂದು ಅರ್ಥ ನೀಡುವ ಸ್ನೇಹಿತರು, ಅವರ ಪ್ರೀತಿಯನ್ನು ನೆನೆಯುವ ಸುದಿನ. ಸ್ನೇಹಕ್ಕೆ ವಿಶಾಲ ಅರ್ಥವಿದೆ. ಅನಂತ ಶಕ್ತಿ ಇದೆ. ಆತ್ಮೀಯ ಸ್ನೇಹಿತರಿಲ್ಲದ ಬದುಕೇ ಅಪೂರ್ಣ ಎನ್ನಬಹುದು- ಸ್ನೇಹಿತರ ದಿನಾಚರಣೆಯ ಅಂಗವಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಪರಮಾಪ್ತ ಗೆಳೆಯ ಶಾಸಕ ಬಿ ಶ್ರೀರಾಮುಲು ಅವರನ್ನು ತಬ್ಬಿಕೊಂಡ ಚಿತ್ರವೊಂದನ್ನು ಫೇಸ್ ಬುಕ್ ನಲ್ಲಿ ಹಾಕಿ, ಸ್ನೇಹಿತರ ದಿನಾಚರಣೆ ಬಗ್ಗೆ ಬರೆದುಕೊಂಡಿದ್ದಾರೆ...
ಪ್ರತಿ ಕ್ಷೇತ್ರದಲ್ಲೂ ಅನ್ಯೋನ್ಯ ಸ್ನೇಹಿತರು ಇರುತ್ತಾರೆ. ಭಾರತೀಯ ಕ್ರಿಕೆಟ್ ರಂಗದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳೆ ಅವರ ನಡುವಿನ ಸ್ನೇಹ, ರಾಜಕೀಯ ಕ್ಷೇತ್ರದಲ್ಲಿ ದಿಗ್ಗಜರಾದ ಅಟಲ್ಬಿಹಾರಿ ವಾಜಪೇಯಿ ಹಾಗೂ ಲಾಲ್ಕೃಷ್ಣ ಆಡ್ವಾಣಿ ಅವರ ದೋಸ್ತಿ, ರಾಜ್ಯ ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ ಅವರ ನಡುವಿನ ಸ್ನೇಹ ಹೀಗೆ ಸ್ನೇಹದ ಬಗ್ಗೆ ಮಾತನಾಡುವಾಗ ಅನೇಕ ಮಹನೀಯರು ಕಣ್ಮುಂದೆ ಬಂದು ನಿಲ್ಲುತ್ತಾರೆ. ಹೆಗಡೆ ಹಾಗೂ ಪಾಟೀಲರಂತೂ ಜನಮಾನಸದಲ್ಲಿ ಲವಕುಶ ಎಂದೇ ಗುರುತಿಸಿಕೊಂಡಿದ್ದಾರೆ.
ಸ್ನೇಹಿತ, ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು!
ಇನ್ನು ಚಿತ್ರರಂಗದಲ್ಲೂ ಸ್ನೇಹದ ಘನತೆ ಸಾರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನಾದ ಡಾ.ರಾಜಕುಮಾರ್ ಮತ್ತು ಭೋಜರಾಜನಾದ ಶ್ರೀನಿವಾಸ್ಮೂರ್ತಿ ಅವರ ಸ್ನೇಹ, ಕಳ್ಳ ಕುಳ್ಳ ಚಿತ್ರದ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವರ ಸ್ನೇಹ, ದಿಗ್ಗಜರು ಚಿತ್ರದ ಡಾ.ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಸ್ನೇಹ, ಹೀಗೆ ಬೆಳ್ಳಿ ಪರದೆ ಮೇಲೆ ಸ್ನೇಹದ ಮಹತ್ವ ಸಾರಿದ ನಾಯಕರನ್ನು ಹೆಸರಿಸುತ್ತ ಹೋದಂತೆ ಸಾಲು ಬೆಳೆಯುತ್ತದೆ.
ಕಾಲವನ್ನು ತಡೆಯೋರು ಯಾರು ಇಲ್ಲ, ಗಾಳಿಯನ್ನು ಹಿಡಿಯೋರು ಇಲ್ಲವೆ ಇಲ್ಲ, ನನ್ನಿಂದ ನಿನ್ನ, ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗೊಲ್ಲ....
ಕುಚ್ಚಿಕು ಕುಚ್ಚಿಕು ಕುಚ್ಚಿಕು, ನೀನು ಚಡ್ಡಿ ದೋಸ್ತು ಕಣೋ ಕುಚ್ಚಿಕು, ಜೀವಕ್ಕಿನ್ನ ಜಾಸ್ತಿ ಕಣೋ ಕುಚ್ಚಿಕು....ಎಂದು ಸ್ನೇಹವನ್ನು ವರ್ಣಿಸುವ ಹಾಡುಗಳು ಕೋಟಿ ಕೋಟಿ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

ಇನ್ನು ಅಪಾರ ಜನಮೆಚ್ಚುಗೆ ಗಳಿಸಿದ ಶೋಲೆ ಚಿತ್ರದ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಸ್ನೇಹದ ಸನ್ನಿವೇಶಗಳು, ಏ ದೋಸತಿ ಹಮ್ ನಹಿ ಛೋಡೆಂಗೆ.... ಎನ್ನುವ ಅದ್ಭುತ ಹಾಡು ಸ್ನೇಹದ ಪಾವಿತ್ರ್ಯವನ್ನು ಅದ್ವಿತೀಯವಾಗಿ ಚಿತ್ರಿಸಿವೆ.
ಬಾಲ್ಯದಿಂದ ಬೆಳೆದು ದೊಡ್ಡವರಾಗುವವರೆಗೆ ಪ್ರತಿಯೊಬ್ಬರ ಬದುಕಿನಲ್ಲೂ ಆತ್ಮೀಯ ಸ್ನೇಹಿತರು ಇರುವಂತೆ ನನ್ನ ಬಾಳ ಪಯಣಕ್ಕೂ ಅನೇಕ ಸ್ನೇಹಿತರು ಸುಂದರ ಅರ್ಥ ಕಲ್ಪಿಸಿದ್ದಾರೆ.
ಕುಚ್ಚಿಕು ಗೆಳೆಯ ರೆಡ್ಡಿ ಬಗ್ಗೆ ಶ್ರೀರಾಮಲು ಹೇಳಿದ್ದೇನು?
ಬಳ್ಳಾರಿಯಲ್ಲಿ ಬಾಲ್ಯದ ಸ್ನೇಹಿತ ಪ್ರೇಮ್ಬಾಬು,ತಿಮ್ಮಾರೆಡ್ಡಿ ಹಾಗೂ ಇತರರೊಂದಿಗೆ ಕಳೆದ ದಿನಗಳನ್ನು ಮೆಲಕು ಹಾಕಿದಾಗ ಬದುಕು ಧನ್ಯ ಎನಿಸುತ್ತದೆ. ಇನ್ನು ನನ್ನ ಬದುಕಿನ ಕಷ್ಟ, ಸುಖ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನೊಂದಿಗೆ ಇರುವ ಶಾಸಕ ಶ್ರೀರಾಮುಲು ಅವರಂಥ ಅಪರೂಪದ ಸ್ನೇಹಿತ ಸಿಕ್ಕಿದ್ದು ನನ್ನ ಭಾಗ್ಯವೇ ಎನ್ನಬಹುದು. ಅವರ ಸ್ನೇಹವನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ.
ಹೀಗೆ ನೆನೆಯುತ್ತ ಹೋದಂತೆ ಕನ್ನಡದ ನೆಲದಲ್ಲಿರುವ ಕುಲಕೋಟಿ ಬಾಂಧವರೆಲ್ಲ ನನ್ನ ಕಣ್ಮುಂದೆ ಸ್ನೇಹಿತರಾಗಿ ಬಂದು ನಿಲ್ಲುತ್ತಾರೆ.
ನನ್ನ ಬದುಕಿಗೊಂದು ಅರ್ಥ ನೀಡಿದ ಎಲ್ಲ ಗೆಳೆಯರಿಗೂ ಸ್ನೇಹಿತರ ದಿನದ ಶುಭಾಶಯಗಳು....
-ಗಾಲಿ ಜನಾರ್ದನ ರೆಡ್ಡಿ












Click it and Unblock the Notifications