Get Updates
Get notified of breaking news, exclusive insights, and must-see stories!

ಸ್ನೇಹಿತ, ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು!

ಅವನೊಬ್ಬನಿರ್ತಾನೆ... ಎಂಥ ಸಮಯದಲ್ಲೂ 'ನಾನಿದ್ದೀನಿ ನಿಂಜೊತೆ' ಅನ್ನೋಕೆ, ಅತ್ತಾಗ ಸಂತೈಸೋಕೆ, ನಕ್ಕಾಗ ಜೊತೆಯಾಗೋಕೆ. ಈ 'ಸ್ನೇಹಿತ' ಅನ್ನೋ ಮೂರಕ್ಷರವನ್ನು ಒಂದು ವ್ಯಕ್ತಿಯಲ್ಲಿ ಕಟ್ಟಿಹಾಕೋದು ಕಷ್ಟವೇ. ಆಗಸ್ಟ್ ತಿಂಗಳ ಮೊದಲ ಭಾನುವಾರ(ಈ ಬಾರಿ ಆಗಸ್ಟ್ 05) ಬರುತ್ತಿದ್ದಂತೆಯೇ 'ಹ್ಯಾಪಿ ಫ್ರೆಂಡ್ಶಿಪ್ ಡೇ' ಎಂದು ಕೈಕುಲುಕಿದ ಮಾತ್ರಕ್ಕೆ ಅವನ ಋಣ ತೀರಿಹೋಗೋಲ್ಲ!

ಪ್ರತಿ ವ್ಯಕ್ತಿಯ ಬದುಕಿನಲ್ಲೂ ಈ ಸ್ನೇಹ ಪ್ರಪಂಚ ಎಷ್ಟು ವಿಶಾಲ! ಆಗಷ್ಟೇ ಭೂಮಿ ಎಂಬ ಸುಂದರ ಪ್ರಪಂಚಕ್ಕೆ ಬಂದು ಕಣ್ಬಿಟ್ಟ ಕ್ಷಣ... ಪುಟ್ಟ ಕೈಮೇಲೆ ಅಮ್ಮನ ಅಕ್ಕರೆಯ ಬೆರಳು ಆಡಿದರೆ ಈ ಅಮ್ಮಂಗಿಂತ ಬೇರೆ ಸ್ನೇಹಿತೆ ಇಲ್ಲ! ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೂ ಬೀಳದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಈ ಅಪ್ಪನ ಅಕ್ಕರೆಗಿಂತ ಮಿಗಿಲಾದ ಸ್ನೇಹವಿಲ್ಲ! ಯಾರೋ ಕೊಟ್ಟ ಮಿಠಾಯಿಯಲ್ಲಿ, ಅರ್ಧ ಭಾಗವನ್ನು ಗುಬ್ಬಿ ಎಂಜಲು ಮಾಡಿ ತನ್ನ ಪುಟ್ಟ ಕೈಯಲ್ಲಿಟ್ಟುಕೊಂಡು ತಿನ್ನಿಸುವಾಗ ಈ ಅಕ್ಕಂಗಿಂತ ಬೇರೆ ಸ್ನೇಹಿತರಿಲ್ಲ! ತುಂಟಾಟವಾಡುವ ತಂಗಿ, ಸಲಹೆ ನೀಡುವ ಅಣ್ಣ, ಕತೆ ಹೇಳುವ ಅಜ್ಜ-ಅಜ್ಜಿ... ಎಲ್ಲರೂ ಒಂದಿಲ್ಲೊಂದು ರೀತಿಯಲ್ಲೇ ಈ ಸ್ನೇಹ ಪ್ರಪಂಚದ ಆಜೀವ ಸದಸ್ಯರೇ! ಕಾಯಾ ವಾಚಾ ಮನಸಾ ಜೊತೆಯಲ್ಲಿರುತ್ತೇನೆಂದು ಸಪ್ತಪದಿ ತುಳಿದ ಸಂಗಾತಿಯೂ ಆತ್ಮಸ್ನೇಹಿತನೇ!

Friendship day special: Importance of Friendship in everyones life

ಹಾಗೆ ಹೇಳುವುದಕ್ಕೆ ಹೋದರೆ ಈ ಬದುಕಿಗೆ ಎಷ್ಟೆಲ್ಲ ಸ್ನೇಹಿತರು..!

"ಎನಿತು ಜೀವದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ಅರಿತು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ"

ಎಂಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಅವರ ಸಾಲಿನಂತೆ, ಈ ಪ್ರಪಂಚದಲ್ಲಿ ಪ್ರತಿ ಹೆಜ್ಜೆಯಲ್ಲೂ ಸಿಕ್ಕ ಅದೆಷ್ಟು ಜನರಿಗೆ ನಾವು ಋಣಿಯಾಗಬೇಕೋ. ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಸ್ನೇಹಿತರೇ!

ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರವನ್ನು 'ಸ್ನೇಹಿತರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಬದುಕಿನಲ್ಲಿ 'ಸ್ನೇಹ'ದ ಮಹತ್ವವನ್ನು ಅರಿಯುವುದಕ್ಕೆ, ಬದುಕನ್ನು ಸಾರ್ಥಕಗೊಳಿಸಿದ ಎಷ್ಟೋ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಈ ದಿನ. ಹುಟ್ಟಿದಾಗಿನಿಂದ ಇಲ್ಲಿಯವರೆಗೆ ನಮ್ಮ ಸ್ನೇಹಪ್ರಪಂಚವನ್ನು ದಿನೇ ದಿನೇ ಶ್ರೀಮಂತಗೊಳಿಸುತ್ತಿರುವ, ಬದುಕಿಗೊಂಡು ಅರ್ಥ ನೀಡುತ್ತಿರುವ, ಕೆಲವೊಮ್ಮೆ ಹಳಿ ತಪ್ಪಿದ ಬದುಕನ್ನು ಸರಿದಾರಿಗೆ ತರುತ್ತಿರುವ 'ಸ್ನೇಹಿತ'ನಿಗೆ ಸಾವಿರ ವಂದನೆ!

ಸ್ನೇಹವೊಂದಿದ್ದರೆ ಹಿಡಿ ಅವಲಕ್ಕಿಯೂ ಮೃಷ್ಟಾನ್ನ...

ಬಡ ಕುಚೇಲ ತಂದ ಹಿಡಿ ಅವಲಕ್ಕಿಯನ್ನೇ ಮೃಷ್ಟಾನ್ನ ಎಂಬಂತೆ ತಿಂದನಂತೆ ಕೃಷ್ಣ! ಜಗದೊಡೆಯ ಎಂದು ವಿಶ್ವವೇ ಪೂಜಿಸುವ ಕೃಷ್ಣ, ಅವತಾರ ಪುರುಷ ಮುರಾರಿ ಕರಗಿ ಹೋಗಿದ್ದು ಆ ಹಿಡಿ ಅವಲಕ್ಕಿಗೆ, ಅದರೊಳಗೆ ಹೂತಿದ್ದ ನಿಸ್ವಾರ್ಥ ಸ್ನೇಹಕ್ಕೆ!

ಕರ್ಣನ ಕೈ ತಾಕಿ ಭಾನುಮತಿಯ ಮುತ್ತಿನ ಹಾರ ಹರಿದುಬಿದ್ದಾಗ, 'ಪೋಣಿಸಿಕೊಡಲಾ, ಆರಿಸಿಕೊಡಲಾ?' ಎಂದು ಕೇಳಿದನಂತೆ ದುರ್ಯೋಧನ! ದುರ್ಯೋಧನ ಎಂಥ ದುಷ್ಟನೇ ಇದ್ದಿರಬಹುದು. ಕರ್ಣನ ಬಗೆಗೆ ಅವನಲ್ಲಿದ್ದ ಸ್ನೇಹತ್ವ ಮಾತ್ರ ಎಂದಿಗೂ ಮಾದರಿಯೇ.

ನಿಜ, ಈ ಸ್ನೇಹಿತ ಅಂದ್ರೆ ಹಾಗೇ. ನಮ್ಮ ಎದೆಯಲ್ಲಿ ಹುದುಗಿದ ಸುಪ್ತ ಗೀತೆಯನ್ನೂ ಹಾಡುವವನು... ಕಣ್ಣೆವೆಯಲ್ಲೇ ಬತ್ತಿಹೋದ ಕಣ್ಣೀರನ್ನೂ ಕಾಣುವವನು... ಬಡ ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು! ಇಂಥ ಎಲ್ಲ ಸ್ನೇಹಿತರಿಗೂ, ಸ್ನೇಹಿತರ ದಿನದ ಶುಭಾಶಯಗಳು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+